ಎಚ್ಚರ! ಇದು ವದಂತಿಯಲ್ಲ, ಸತ್ಯ
ಚಲಾವಣೆಗೆ ಬಂದ ಪ್ರತಿಯೊಂದು ಹೊಸ ನೋಟಿನ ಮೇಲಿದೆ ಆರ್ಬಿಐ ಕಣ್ಣು
ಹೊಸದಿಲ್ಲಿ, ಡಿ.14: ನವೆಂಬರ್ 8ರ ನೋಟು ಅಮಾನ್ಯ ನಿರ್ಧಾರದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಅಕ್ರಮ ನೋಟು ಜಾಲ ಹಾಗೂ ಕಪ್ಪು- ಬಿಳಿ ದಂಧೆಯ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು, ದೇಶಾದ್ಯಂತ ವಿವಿಧೆಡೆ ದಾಳಿಗಳನ್ನು ನಡೆಸಿ ಹಲವರನ್ನು ಬಂಧಿಸಿದೆ. ಇದೀಗ ಕರೆನ್ಸಿ ಚೆಸ್ಟ್ನಿಂದ ಹೊಸ ನೋಟುಗಳು ಎಲ್ಲೆಲ್ಲಿಗೆ ಹಂಚಿಕೆಯಾಗುತ್ತವೆ ಎಂಬ ಬಗ್ಗೆ ನಿಗಾ ಇಡುವಂತೆ ಎಲ್ಲ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಇದರ ಜತೆಗೆ ಬ್ಯಾಂಕುಗಳಿಗೆ ಹಲವು ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ.
ಅವುಗಳೆಂದರೆ
1. ಕರೆನ್ಸಿ ಚೆಸ್ಟ್ನಿಂದ ಹೊರಹೋಗುವ ನೋಟುಗಳ ಮೇಲೆ ನಿಗಾ ಇಡಬೇಕು.
2. ಸಂಪರ್ಕ ಶಾಖೆ ಮಟ್ಟದಲ್ಲಿ ಬ್ಯಾಂಕುಗಳು ಕರೆನ್ಸಿ ಚೆಸ್ಟ್ ಮಟ್ಟವನ್ನು ನಿರ್ವಹಿಸಬೇಕು. 500 ಹಾಗೂ ಅಧಿಕ ಮೌಲ್ಯದ ನೋಟುಗಳನ್ನು ಬಿಡುಗಡೆ ಮಾಡುವ ಮುನ್ನ ಅವುಗಳ ಅನುಕ್ರಮ ಸಂಖ್ಯೆಯನ್ನು ನಮೂದಿಸಿ ಇಟ್ಟುಕೊಳ್ಳಬೇಕು. ಯಾವ ಸಂಖ್ಯೆಯ ನೋಟುಗಳು ಯಾವ ಬ್ಯಾಂಕ್, ಅಂಚೆ ಕಚೇರಿಗಳಿಗೆ ಹೋಗಿದೆ ಎಂಬ ಬಗ್ಗೆ ದೈನಿಕ ವರದಿ ಸಿದ್ಧಪಡಿಸಬೇಕು.
3. ನಕಲಿ ನೋಟುಗಳನ್ನು ಚಲಾವಣೆಗೆ ಬಿಡುವವರ ಮೇಲೆ ಕಣ್ಣಿಡಲು ಬ್ಯಾಂಕಿಂಗ್ ಹಾಲ್ಗೆ ಬರುವ ಗ್ರಾಹಕರ ಮೇಲೆ ಸಿಸಿಟಿವಿ ಕಣ್ಗಾವಲು ಇಡಬೇಕು.
4. ನವೆಂಬರ್ 8ರಿಂದ ಡಿಸೆಂಬರ್ 8ರವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಮುಂದಿನ ಸೂಚನೆ ಬರುವವರೆಗೂ ಸಂಗ್ರಹಿಸಿ ಇಡಬೇಕು. ಹೊಸ ನೋಟುಗಳನ್ನು ಕಾನೂನುಬಾಹಿರವಾಗಿ ದಾಸ್ತಾನು ಮಾಡುವುದನ್ನು ತಡೆಯಲು ಏಜೆನ್ಸಿಗಳಿಗೆ ನೆರವಾಗಬೇಕು.