ನನ್ನ ನಿರ್ಧಾರ ಅಚಲ : ಎಸ್ .ಎಂ. ಕೃಷ್ಣ
ಹೊಸದಿಲ್ಲಿ, ಜ.30: " ನನ್ನ ನಿರ್ಧಾರ ಅಚಲ. ಯೋಚನೆ ಮಾಡಿಯೇ ನಿರ್ಧಾರ ಕೈಗೊಂಡಿದ್ದೇನೆ. ರಾಜೀನಾಮೆ ಹಿಂಪಡೆಯುವ ಪ್ರಶ್ನೆ ಇಲ್ಲ. ನನ್ನ ಹಾಗೂ ಸೋನಿಯಾ ಗಾಂಧಿ ನಡುವೆ ಅವಿನಾಭವ ಸಂಬಂಧ. ಅವರನ್ನು ಯಾವಾಗ ಬೇಕಾದರೂ ನಾನು ಭೇಟಿಯಾಗಬಹುದು ಹಾಗೂ ಮಾತನಾಡಬಹುದು. ಇದಕ್ಕೆ ಯಾರ ಮಧ್ಯಸ್ಥಿಕೆಯ ಅವಶ್ಯಕತೆ ಇಲ್ಲ "ಎಂದು ಮಾಜಿ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಸ್ಪಷ್ಟಪಡಿಸಿದ್ದಾರೆ
"ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಎಸ್.ಎಂ. ಕೃಷ್ಣ ಅವರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಇಂದು ದೂರವಾಣಿ ಮೂಲಕ ಮನವೊಲಿಕೆಗೆ ಯತ್ನ ನಡೆಸಿದ್ದರೂ, ಅದಕ್ಕೆ ಕೃಷ್ಣ ಸೊಪ್ಪು ಹಾಕಿಲ್ಲ.
ಅಹ್ಮದ್ ಪಟೇಲ್ ಅವರು ಏನೇ ನಡೆದರೂ ಸರಿಪಡಿಸಿಕೊಳ್ಳೋಣ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ. ಈ ಹಂತದಲ್ಲಿ ನೀವು ಪಕ್ಷ ಬಿಡುವುದು ಸರಿಯಲ್ಲ. ಕಾಂಗ್ರೆಸ್ ಹೈಕಮಾಂಡ್ ನಿಮ್ಮ ಜೊತೆ ಮಾತನಾಡಲು ಬಯಸಿದೆ. ನಾವು ನಿಮ್ಮಲ್ಲಿ ಮಾತನಾಡಲು ಬೆಂಗಳೂರಿಗೆ ಬರುತ್ತೇವೆ ಮೇಡಮ್ ಅವರು ನಿಮ್ಮ ರಾಜೀನಾಮೆ ನಿರ್ಧಾರನ್ನು ಹಿಂಪಡೆಯಲು ಮನವಿ ಮಾಡಿದ್ದಾರೆ" ಎಂದು ಅಹ್ಮದ್ ಪಟೇಲ್ ಹೇಳಿದಾಗ ಕೃಷ್ಣ ಅವರು ತಾನು ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.
" ಸೋನಿಯಾ ಗಾಂಧಿ ದೂರವಾಣಿಯಲ್ಲಿ ಮಾತನಾಡುವುದು ಬೇಡ. ಅವರು ಮಾತನಾಡುವುದಕ್ಕೆ ನನಗೆ ಮುಜುಗರವಾಗುತ್ತದೆ. ನನ್ನ ನಿರ್ಧಾರವನ್ನು ಸೋನಿಯಾ ಮೇಡಮ್ಗೆ ತಿಳಿಸಿ "ಎಂದು ಕೃಷ್ಣ ಹೇಳಿದ್ದಾರೆ.
ಕೃಷ್ಣ ಅವರ ನಡೆ ಕುತೂಹಲ ಕೆರಳಿಸಿದೆ. ತಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ನನ್ನ ಅನುಭವಕ್ಕೆ ಗೌರವ ನೀಡಿಲ್ಲ. ಈ ಕಾರಣದಿಂದಾಗಿ ಕಾಂಗ್ರೆಸ್ ನಿಂದ ಹೊರಹೋಗಿರುವುದಾಗಿ ಹೇಳಿದ್ಧಾರೆ.
ಬಿಜೆಪಿ ಗಾಳ: ಕಾಂಗ್ರೆಸ್ ತೊರೆದಿರುವ ಎಸ್.ಎಂ. ಕೃಷ್ಣ ಅವರನ್ನು ತನ್ನತ್ತ ಸೆಳೆಯಲು ಬಿಜೆಪಿ ಮುಂದಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೃಷ್ಣ ಭೇಟಿಗೆ ಅವಕಾಶ ಕೋರಿದ್ದರೂ, ಭೇಟಿಗೆ ಸಮಯ ನಿಗದಿಯಾಗಿಲ್ಲ. ಕೃಷ್ಣ ತನ್ನ ಊರು ಮದ್ತೆದೂರಿಗೆ ತೆರಳಿದ್ದಾರೆ. ಐದು ಗಂಟೆ ಮೊದಲು ಬೆಂಗಳೂರಿಗೆ ಅವರು ಬಂದರೆ ತಾನು ಅವರನ್ನು ಭೇಟಿಯಾಗುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.