ಅನುಕಂಪದ ಅಲೆ ಸೃಷ್ಟಿಸಲು ಒಡಹುಟ್ಟಿದ ಸೋದರನನ್ನೇ ಕೊಲ್ಲಿಸಿದ ಅಭ್ಯರ್ಥಿ!
ಮೀರಠ್, ಫೆ.9: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸುವ ಸಲುವಾಗಿ ರಾಷ್ಟ್ರೀಯ ಲೋಕದಳ ಅಭ್ಯರ್ಥಿ ಮನೋಜ್ ಕುಮಾರ್ ಗೌತಮ್ ಎಂಬಾತ ತನ್ನ ಸಹೋದರನನ್ನೇ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಶ್ಚಿಮ ಉತ್ತರ ಪ್ರದೇಶದ ಖುರ್ಜಾ ಕ್ಷೇತ್ರದಲ್ಲಿ ಚುನಾವಣೆ ಈಗಾಗಲೇ ಮುಕ್ತಾಯವಾಗಿದ್ದು, ಗೌತಮ್, ಕಾಂಗ್ರೆಸ್ನ ಹಾಲಿ ಶಾಸಕ ಬನ್ಷಿ ಸಿಂಗ್, ಬಿಎಸ್ಪಿಯ ಅರ್ಜುನ್ ಸಿಂಗ್ ಹಾಗೂ ಬಿಜೆಪಿಯ ವಿಜೇಂದ್ರ ಸಿಂಗ್ ಅವರಿಂದ ಸ್ಪರ್ಧೆ ಎದುರಿಸುತ್ತಿದ್ದರು. ಚುನಾವಣಾ ಪ್ರಚಾರ ಸಮರ ತಾರಕಕ್ಕೇರುತ್ತಿದ್ದಂತೆ ಯಾವ ಕಸರತ್ತೂ ನಡೆಯದೇ ಕೊನೆಗೆ ತನ್ನ ಸಹೋದರ ವಿನೋದ್ ಹಾಗೂ ಆತನ ಆಪ್ತ ಸ್ನೇಹಿತ ಸಚಿನ್ ಎಂಬಾತನನ್ನು ಹತ್ಯೆ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಪ್ರಚಾರಕ್ಕೆ ಎಲ್ಲ ಕಸರತ್ತು ಮಾಡಿ, ಸಂಪನ್ಮೂಲಗಳನ್ನು ವೆಚ್ಚ ಮಾಡಿದರೂ, ಬಿಎಸ್ಪಿ ಟಿಕೆಟ್ ಗಿಟ್ಟಿಸಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಅಜಿತ್ ಸಿಂಗ್ ಟಿಕೆಟ್ ನೀಡಿದರು. ಬಳಿಕ ಚುನಾವಣೆ ಗೆಲ್ಲಲು ಸುಲಭ ತಂತ್ರ ಎಂದರೆ ಸಹೋದರನನ್ನು ಹತ್ಯೆ ಮಾಡಿ, ಅನುಕಂಪ ಗಿಟ್ಟಿಸಲು ನಿರ್ಧರಿಸಿದ್ದ ಆತ ಬಾಡಿಗೆ ಹಂತಕರಿಂದ ಹತ್ಯೆ ಮಾಡಿಸಿದ, ಅಜಿತ್ ಸಿಂಗ್ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಜಯಂತ್ ಚೌಧರಿ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಬಳಿಕ ಸಚಿನ್ ಹಾಗೂ ವಿನೋದ್ನನ್ನು ಬಾಡಿಗೆ ಹಂತಕರು ಹತ್ಯೆ ಮಾಡಿದ್ದರು.
ಶಂಕಿತರ ಫೋನ್ ಕರೆಗಳನ್ನು ಅನುಸರಿಸಿ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು ಎಂದು ವಿಶೇಷ ಎಸ್ಪಿ ಸೋನಿಯಾ ಸಿಂಗ್ ವಿವರಿಸಿದರು.