ಮೀಸಲಾತಿ ಆಧರಿಸಿ ಭಡ್ತಿ ನೀಡುವ ಕರ್ನಾಟಕದ ಕಾನೂನು ಅಸಿಂಧು: ಸುಪ್ರೀಂ
ಬೆಂಗಳೂರು,ಫೆ.10: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಉದ್ಯೋಗಿಗಳಿಗೆ ಭಡ್ತಿಯನ್ನು ನೀಡುವ ಮುನ್ನ ಪ್ರಾತಿನಿಧ್ಯ ಕೊರತೆ,ಹಿಂದುಳಿದಿರುವಿಕೆ ಮತ್ತು ಒಟ್ಟಾರೆ ಕ್ಷಮತೆಯನ್ನು ನಿರ್ಧರಿಸುವ ಪ್ರಕ್ರಿಯೆ ಕಡ್ಡಾಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಈ ಮಹತ್ವದ ತೀರ್ಪಿನಿಂದಾಗಿ ರಾಜ್ಯ ಸರಕಾರದ 63 ಇಲಾಖೆಗಳಲ್ಲಿ ಮೀಸಲಾತಿ ಆಧಾರದಲ್ಲಿ ಭಡ್ತಿ ಪಡೆದಿದ್ದ ನೂರಾರು ನೌಕರರು ಹಿಂಭಡ್ತಿಯ ಸುಳಿಯಲ್ಲಿ ಸಿಲುಕಲಿದ್ದಾರೆ.
ಬಿ.ಕೆ.ಪವಿತ್ರಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಆದರ್ಶಕುಮಾರ ಗೋಯೆಲ್ ಅವರನ್ನೊಳಗೊಂಡ ಪೀಠವು, ಅಗತ್ಯ ಪ್ರಕ್ರಿಯೆಯನ್ನು ಕೈಗೊಳ್ಳದೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯಲ್ಲಿ ಭಡ್ತಿಯನ್ನು ನೀಡುವ ನಿರಂಕುಶಾಧಿಕಾರ ರಾಜ್ಯ ಸರಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ ಮತ್ತು ರಾಜ್ಯ ಸರಕಾರವು 1978ರಿಂದ ಎಸ್ಸಿ/ಎಸ್ಟಿ ಉದ್ಯೋಗಿಗಳಿಗೆ ನೀಡಿರುವ ಭಡ್ತಿಗಳಲ್ಲಿನ ಜ್ಯೇಷ್ಠತೆ ಅಸಿಂಧುವಾಗಿವೆ ಎಂದು ತೀರ್ಪು ನೀಡಿದೆ.
ಮೀಸಲಾತಿ ವರ್ಗದಡಿ ಭಡ್ತಿ ಪಡೆದಿರುವವರನ್ನು ಹಿಂಭಡ್ತಿಗೊಳಿಸಲು ಮೂರು ತಿಂಗಳ ಗಡುವನ್ನು ನ್ಯಾಯಾಲಯವು ವಿಧಿಸಿದ್ದು, ಇದರೊಂದಿಗೆ ವರ್ಷಗಳಿಂದಲೂ ಭಡ್ತಿಗಾಗಿ ಕಾಯುತ್ತಿರುವ ಸಾಮಾನ್ಯ ವರ್ಗಗಳು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದ ಉದ್ಯೋಗಿಗಳು ತಮ್ಮ ಪಾಲನ್ನು ಪಡೆಯಬಹುದು.
ಈಗಾಗಲೇ ನಿವೃತ್ತರಾಗಿರುವವವರಿಗೆ ಈ ತೀರ್ಪು ಅನ್ವಯವಾಗುವುದಿಲ್ಲ ಮತ್ತು ಅವರು ಈಗಾಗಲೇ ಪಡೆದಿರುವ ಆರ್ಥಿಕ ಲಾಭಗಳ ಮೇಲೆ ಪರಿಣಾಮವನ್ನುಂಟು ಮಾಡುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.