ವಿದ್ಯಾರ್ಥಿಗಳ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಜೆಎನ್ಯು ವಿವಾದ
ಹೊಸದಿಲ್ಲಿ, ಫೆ.23: ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪಿಗಳಾಗಿರುವ ಜೆಎನ್ಯುನ ಐವರು ವಿದ್ಯಾರ್ಥಿಗಳನ್ನು ತಕ್ಷಣ ಬಂಧಿಸುವಂತೆ ಕೋರಿರುವ ಮನವಿಯೊಂದರ ತುರ್ತು ವಿಚಾರಣೆ ದಿಲ್ಲಿ ಹೈಕೋರ್ಟ್ ಇಂದು ಒಪ್ಪಿದೆ.
ಇಂದು ಆಲಿಸಲಾಗುವ ಮನವಿಯನ್ನು ನ್ಯಾಯಮೂರ್ತಿಗಳಾದ ಬಿ.ಡಿ.ಅಹ್ಮದ್ ಹಾಗೂ ಆರ್.ಕೆ.ಗಾವೂಬಾರಿರುವ ಪೀಠವೊಂದರ ಮುಂದೆ ದಾಖಲಿಸಲಾಗಿದೆ. ಉಮರ್ ಖಾಲಿದ್, ಅನಂತ ಪ್ರಕಾಶ್ ನಾರಾಯಣ್, ಆಶುತೋಷ್ ಕುಮಾರ್, ರಾಮನಾಗ ಹಾಗೂ ಅನಿರ್ವಾರ್ಣ ಭಟ್ಟಾಚಾರ್ಯರೆಂಬ ಈ ಐವರು ವಿದ್ಯಾರ್ಥಿಗಳನ್ನು ಬಂಧಿಸಲು ದಿಲ್ಲಿ ಪೊಲೀಸರಿಗೆ ತನ್ನ ಆವರಣದೊಳಗೆ ಪ್ರವೇಶಿಸಲು ಅನುಮತಿ ನೀಡುವಂತೆ ಜೆಎನ್ಯುಗೆ ನಿರ್ದೇಶನ ನೀಡುವಂತೆಯೂ ಅದರಲ್ಲಿ ಕೋರಲಾಗಿದೆ.
ಪ್ರತಿಪಕ್ಷ 4ರ (ಜೆಎನ್ಯು) ಆವರಣ ಪ್ರವೇಶಿಸುವುದಕ್ಕೆ ಹಾಗೂ 5ರಿಂದ 10ನೆ ಪ್ರತಿಪಕ್ಷಗಳನ್ನು ಹಾಗೂ ಪ್ರಕರಣದ ಇತರ ಆರೋಪಿಗಳನ್ನು ಬಂಧಿಸುವುದಕ್ಕೆ ಪ್ರತಿಪಕ್ಷ 3ಕ್ಕೆ (ದಿಲ್ಲಿ ಪೊಲೀಸ್ ಆಯುಕ್ತ) ಅನುಮತಿ ನೀಡುವಂತೆ ಪ್ರತಿಪಕ್ಷ 4ಕ್ಕೆ ಆದೇಶಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಪ್ರಕ್ರಿಯೆ ನಡೆಸಲು ತಡೆಯುಂಟು ಮಾಡಿದ ಹಾಗೂ ನೆಲದ ಕಾನೂನು ಉಲ್ಲಂಘನೆಗೆ ಸಹಕಾರ ನೀಡಿದ ಆರೋಪದಲ್ಲಿ ವಿವಿಯ ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಹಿರಿಯ ವಕೀಲರಾದ ಆದಿಶ್.ಸಿ.ಅಗರ್ವಾಲ್ ಹಾಗೂ ವಿ.ಕೆ.ಆನಂದ್ರ ಮುಖಾಂತರ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.