ಕೋವಿಡ್-19 ಲಸಿಕೆ: ವಿಶ್ವಾಸ ಬಿತ್ತುವಲ್ಲಿ ವಿಫಲವಾದ ಸರಕಾರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೋವಿಡ್ ಸಾಂಕ್ರಾಮಿಕದ ವಿರುದ್ಧ ಬಹುನಿರೀಕ್ಷಿತ ಲಸಿಕೆ ಅಭಿಯಾನವನ್ನು ಕೇಂದ್ರ ಸರಕಾರ ಆರಂಭಿಸಿದೆಯಾದರೂ, ಸುಳ್ಳುಮಾಹಿತಿ ಹಾಗೂ ಭೀತಿಯ ಕಾರಣದಿಂದಾಗಿ ಅನೇಕ ಫಲಾನುಭವಿಗಳು ಲಸಿಕೆಯನ್ನು ಪಡೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಭಾರತದ ಹಲವು ರಾಜ್ಯಗಳಲ್ಲಿ ಆರೋಗ್ಯ ಪಾಲನಾ ಕಾರ್ಯಕರ್ತರು ತೀರಾ ಕಡಿಮೆ ಸಂಖ್ಯೆಯಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಸಂವಹನದ ಕೊರತೆ ಹಾಗೂ ಕೋವಿನ್ ಆ್ಯಪ್ನಲ್ಲಿರುವ ನ್ಯೂನತೆಗಳು ಕೂಡಾ ದೊಡ್ಡ ಸಂಖ್ಯೆಯ ಜನರಿಗೆ ಲಸಿಕೆಯ ಮೇಲೆ ಭರವಸೆ ಮೂಡದೆ ಇರಲು ಪ್ರಮುಖ ಕಾರಣವಾಗಿವೆ. ಪರಿಣಾಮವಾಗಿ ಭಾರೀ ಪ್ರಮಾಣದ ಲಸಿಕೆಗಳು ಕೆಡುತ್ತಿರುವ ವರದಿಗಳು ಬರುತ್ತಿವೆ.
ಕೊರೋನ ಲಸಿಕೆಯ ಕುರಿತ ಅಪನಂಬಿಕೆ ವೈದ್ಯಕೀಯ ಸಮೂಹದಲ್ಲೇ ಪ್ರಚಲಿತದಲ್ಲಿರುವುದರಿಂದ ಜನಸಾಮಾನ್ಯರೂ ಅದರ ಬಗ್ಗೆ ಸಂಶಯಪಡುವಂತಾಗಿದೆ. ಲಸಿಕೆ ಕುರಿತ ಮಾಹಿತಿ, ಸಾಮೂಹಿಕ ರೋಗನಿರೋಧಕತೆ ಕುರಿತಾದ ಸಾರ್ವಜನಿಕರ ನಂಬಿಕೆ ಹಾಗೂ ಹೊಸದಾದುದನ್ನು ಪರೀಕ್ಷಿಸುವುದಕ್ಕೆ ಅವರ ಹಿಂಜರಿಕೆ ಇವೆಲ್ಲ ಕಾರಣಗಳೂ ಅನುಮಾನದ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿವೆ. ಮುಖ್ಯವಾಗಿ, ಲಸಿಕೆಯನ್ನು ಅವಸರವಸರವಾಗಿ ಬಿಡುಗಡೆಗೊಳಿಸಿರುವುದು ಅದರ ಸುರಕ್ಷತೆ ಬಗ್ಗೆ ಸಾರ್ವಜನಿಕರ ಆತಂಕವನ್ನು ಇಮ್ಮಡಿಗೊಳಿಸಿದೆ. ಸೀಮಿತ ಕಾಲಮಿತಿಯ ಕಾರಣದಿಂದಾಗಿ ಪ್ರಾಯೋಗಿಕ ಪರೀಕ್ಷೆಯ ನಿಗದಿತ ಹಂತಗಳಲ್ಲಿ ಲಸಿಕೆಯು ಉತ್ತೀರ್ಣವಾಗಿಲ್ಲವೆಂದು ಸಾರ್ವಜನಿಕರ ಒಂದು ದೊಡ್ಡ ಭಾಗವು ಭಾವಿಸುತ್ತಿದೆ. ಇದಕ್ಕೆ ಪೂರಕವಾಗಿ, ರಾಜಕಾರಣಿಗಳು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಜನರಲ್ಲಿ ಅನುಮಾನಗಳನ್ನು ಸೃಷ್ಟಿಸಿದೆ. ಕೋವಿಡ್-19 ಲಸಿಕೆಗಳ ಕುರಿತಾಗಿ ಅಪಪ್ರಚಾರ ಹರಡುವಲ್ಲಿ ಸಾಮಾಜಿಕ ಜಾಲತಾಣಗಳೂ ತಮ್ಮದೇ ಆದ ಕೊಡುಗೆ ನೀಡಿವೆ.
ಲಸಿಕೆಯ ಸುರಕ್ಷತೆಯ ಕುರಿತಂತೆ ಜನರನ್ನು ತಪ್ಪುದಾರಿಗೆಳೆಯುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಕೊರೋನ ಲಸಿಕೆಗಳ ಕುರಿತಾದ ಸುಳ್ಳುವದಂತಿಗಳು ಜನರ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಿವೆಯೆಂದರೆ, ಕೆಲವರು ಫೇಸ್ಬುಕ್ ಪೋಸ್ಟ್ನಲ್ಲಿ ಲಸಿಕೆಯ ಉತ್ಪಾದನೆಯನ್ನು ತರಾತುರಿಯಲ್ಲಿ ನಡೆಸುವುದಕ್ಕಾಗಿ ಜನರನ್ನು ಪ್ರಯೋಗದ ಬಲಿಪಶುಗಳನ್ನಾಗಿ ಮಾಡಕೂಡದು ಎಂದು ಸಾರುತ್ತಿದ್ದಾರೆ. ಭಾರತದಲ್ಲಿ ಈ ಹಿಂದೆ ಇತರ ರೋಗನಿರೋಧಕ ಲಸಿಕೆಗಳು ಹೊಸತಾಗಿ ಬಂದಾಗಲೂ ಜನರಲ್ಲಿ ಅವುಗಳ ಬಗ್ಗೆ ಅಂಜಿಕೆ, ಸಂದೇಹವಿದ್ದುದು ಸಾಮಾನ್ಯವಾಗಿತ್ತು.
ಭಾರತೀಯರು ಹೆಚ್ಚಿನ ಸಂದರ್ಭಗಳಲ್ಲಿ ಕಾದುನೋಡುವ ನೀತಿಯನ್ನು ಅನುಸರಿಸಲು ಇಷ್ಟಪಡುತ್ತಾರೆ. ಹೊಸತೇನಾದರೂ ಬಂದಲ್ಲಿ ಅದು ವಿಶ್ವಾಸಾರ್ಹವೆಂದು ದೃಢಪಟ್ಟಲ್ಲಿ ಮಾತ್ರವೇ ಅವರದನ್ನು ಒಪ್ಪಿಕೊಳ್ಳುತ್ತಾರೆ. ಅದೇ ರೀತಿ ನೂತನ ಕೊರೋನ ಲಸಿಕೆಯನ್ನು ಪಡೆದುಕೊಳ್ಳುವುದರಿಂದ ಅಡ್ಡಪರಿಣಾಮಗಳು ಹಾಗೂ ಪ್ರತಿಕೂಲ ಪರಿಣಾಮಗಳು ಉಂಟಾಗುವ ಬಗ್ಗೆ ಅವರು ಆತಂಕ ಹೊಂದಿದ್ದಾರೆ. ಇತ್ತೀಚೆಗೆ ಕೋವಿಡ್-19 ಸೋಂಕಿನ ಪ್ರಕರಣಗಳು ತೀವ್ರವಾಗಿ ಕುಸಿದಿರುವುದು ಕಂಡು ಬಂದಿದೆ. ಭಾರತೀಯರಲ್ಲಿ ಕೊರೋನ ವಿರುದ್ಧ ಸಾಮೂಹಿಕ ರೋಗನಿರೋಧಕ ಸಾಮರ್ಥ್ಯ ಬೆಳೆಯುತ್ತಿದೆ. ಹೀಗಾಗಿ ಅವರಿಗೆ ಲಸಿಕೆಯ ಅಗತ್ಯವಿರುವುದಿಲ್ಲವೆಂದು ಕೆಲವರ ವಾದವಾಗಿದೆ.
ಕೋವಿಡ್-19 ಸೋಂಕು, ಲಸಿಕೆಯ ಪರಿಣಾಮಕಾರಿತ್ವ ಹಾಗೂ ಅದರ ಸಂಭಾವ್ಯ ಅಡ್ಡಪರಿಣಾಮಗಳ ಕುರಿತಂತೆ ಸೀಮಿತವಾದ ಮಾಹಿತಿಯು ಲಸಿಕೆಯನ್ನು ಪಡೆಯುವುದಕ್ಕೆ ಜನರು ಹಿಂದೇಟು ಹಾಕುತ್ತಿರುವುದಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಈ ಸಂದೇಹ, ಭೀತಿಯನ್ನು ಹೋಗಲಾಡಿಸಲು ಜನರಲ್ಲಿ ಹೆಚ್ಚು ಜಾಗೃತಿಯನ್ನು ಸೃಷ್ಟಿಸುವ ಹಾಗೂ ಅವರಲ್ಲಿ ವಿಶ್ವಾಸವನ್ನು ಮೂಡಿಸುವ ಅಗತ್ಯವಿದೆ. ಕೋವಿಡ್ ಸಾಂಕ್ರಾಮಿಕದ ಹಾವಳಿಯುದ್ದಕ್ಕೂ ತಪ್ಪುಮಾಹಿತಿಗಳು ಕಾಡ್ಗಿಚ್ಚಿನಂತೆ ಹರಡುತ್ತಿರುವುದು ಆತಂಕಕಾರಿಯಾಗಿದೆ ಹಾಗೂ ಇದೀಗ ಲಸಿಕೆಯ ಕುರಿತ ವ್ಯಾಪಕ ಅಪಪ್ರಚಾರ ಅದನ್ನು ಪಡೆದುಕೊಳ್ಳಲು ಬಯಸುವವರ ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸಿದೆ.
ಕೋವಿಡ್-19 ಲಸಿಕೆಯ ಕುರಿತಾದ ಸುಳ್ಳು ಹಾಗೂ ತಪ್ಪುದಾರಿಗೆಳೆಯುವಂತಹ ಹೇಳಿಕೆಗಳನ್ನು, ವಾಸ್ತವ ಸಂಗತಿಗಳನ್ನು ಸಮರ್ಥವಾಗಿ ಜನರ ಮುಂದಿಡುವ ಮೂಲಕ ಅಲ್ಲಗಳೆಯಬಹುದಾಗಿದೆ. ಉದಾಹರಣೆಗೆ ಲಸಿಕೆಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಿರುವುದರ ಕುರಿತಾಗಿ ಇರುವ ತಪ್ಪುಗ್ರಹಿಕೆಗಳನ್ನು ಆಕ್ಸ್ಫರ್ಡ್ ಲಸಿಕೆ ತಯಾರಿಕಾ ವಿಜ್ಞಾನಿಗಳ ತಂಡದ ವರಿಷ್ಠ ಪ್ರೊ. ಆ್ಯಂಡ್ರೂ ಪೊಲ್ಲಾರ್ಡ್ ತಳ್ಳಿಹಾಕುತ್ತಾರೆ. ಕೋವಿಶೀಲ್ಡ್ ಲಸಿಕೆಯ ಎಲ್ಲಾ ಕ್ಲಿನಿಕಲ್ ಪ್ರಯೋಗಗಳಲ್ಲಿ ಅತ್ಯಂತ ಕಟ್ಟುನಿಟ್ಟಿನ ಸುರಕ್ಷತಾ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲಾಗಿತ್ತು ಎಂದವರು ಹೇಳುತ್ತಾರೆ. ಆಡಳಿತಾತ್ಮಕ ಹಾಗೂ ಆರ್ಥಿಕ ನಿಧಿ ಪೂರೈಕೆಯ ಪ್ರಕ್ರಿಯೆಗಳಿಗೆ ತ್ವರಿತಗೊಳಿಸಿರುವುದು ಹಾಗೂ ಪ್ರಾಯೋಗಿಕ ಪರೀಕ್ಷೆಗಳನ್ನು ಅಗಾಧವಾದ ಆಸಕ್ತಿಯೊಂದಿಗೆ ನಡೆಸಿರುವುದು, ಪರೀಕ್ಷೆಗೆ ಬೇಕಾಗುವ ಸ್ವಯಂಸೇವಕರ ಹುಡುಕಾಟದ ಸಮಯವನ್ನು ಕಡಿಮೆಗೊಳಿಸಿದೆಯೆಂದು ಪೊಲ್ಲಾರ್ಡ್ ತಿಳಿಸುತ್ತಾರೆ.
ಲಸಿಕೆ ತಯಾರಕರು, ಸಾರ್ವಜನಿಕ ಆರೋಗ್ಯ ಪಾಲನೆ ಪೂರೈಕೆದಾರರು ಹಾಗೂ ಶ್ರೀಸಾಮಾನ್ಯರ ನಡುವೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದರಿಂದ ಮತ್ತು ಲಸಿಕೆಯನ್ನು ತುರ್ತಾಗಿ ಬಿಡುಗಡೆಗೊಳಿಸಲು ಇರುವ ತುರ್ತು ಅಗತ್ಯದ ಕಾರಣಗಳನ್ನು ಮನದಟ್ಟು ಮಾಡುವುದರಿಂದ ಮಾಹಿತಿಯ ಅಂತರವನ್ನು ನಿವಾರಿಸುವಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಲು ಸಾಧ್ಯವಿದೆ. ಲಸಿಕೆಯನ್ನು ಪಡೆದುಕೊಳ್ಳುವುದಕ್ಕೆ ಕೆಲವು ವ್ಯಕ್ತಿಗಳಲ್ಲಿ ವಿಶ್ವಾಸದ ಕೊರತೆಯು, ಇತರ ವ್ಯಕ್ತಿಗಳಲ್ಲಿಯೂ ಲಸಿಕೆಯನ್ನು ಪಡೆಯುವುದಕ್ಕೆ ಹಿಂಜರಿಯುವಂತೆ ಮಾಡುತ್ತದೆ. ಸರಿಯಾದ ಮಾಹಿತಿಯನ್ನು ಜನಸಾಮಾನ್ಯರಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಮೂಲಕ ಜನರನ್ನು ಲಸಿಕಾ ಸಾಕ್ಷರರನ್ನಾಗಿ ಮಾಡಬೇಕಾಗಿದೆ.
ಹೀಗಾಗಿ ಸರಕಾರವು ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಜನರನ್ನು ಮನವೊಲಿಸಲು ವ್ಯೆಹಾತ್ಮಕ ಕಾರ್ಯತಂತ್ರಗಳನ್ನು ಅನುಸರಿಸಬೇಕಾಗಿದೆ. ಲಸಿಕೆಗಳ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಜನರಿಗೆ ಮನದಟ್ಟು ಮಾಡಲು ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದಾಗಿದೆ. ಭರವಸೆಯನ್ನು ಮೂಡಿಸುವುದು ಉದ್ವೇಗ ಹಾಗೂ ಭೀತಿಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜನರಿಗೆ ತುಂಬಾ ಚೆನ್ನಾಗಿ ಮನವರಿಕೆಯಾಗುವಂತಹ ರೀತಿಯಲ್ಲಿ ಲಸಿಕೆಯ ಪರಿಣಾಮವನ್ನು ದೊಡ್ಡ ಪ್ರಮಾಣದಲ್ಲಿ ಸಾಬೀತುಪಡಿಸಬೇಕಾಗಿದೆ. ಸಂವಹನ ಹಾಗೂ ಮಾರ್ಕೆಟಿಂಗ್ ಧೋರಣೆಯಿಂದ ಮಾತ್ರವೇ ಲಸಿಕೆ ನೀಡಿಕೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಕೋವಿಡ್ ಲಸಿಕೆಯ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಸ್ವೀಕಾರಾರ್ಹತೆ ಲಭ್ಯವಾಗಬೇಕಿದ್ದರೆ ಲಸಿಕೆಗಳ ಸುರಕ್ಷತೆಯನ್ನು ಖಾತರಿಪಡಿಸುವುದು ಹಾಗೂ ಲಸಿಕಾ ಕಾರ್ಯಕ್ರಮವನ್ನು ಜವಾಬ್ದಾರಿಯುತವಾಗಿ ಅನುಷ್ಠಾನಗೊಳಿಸುವುದು ಅತ್ಯಗತ್ಯವಾಗಿದೆ.