ಸಂಸ್ಕೃತವೆನ್ನುವ ಅನುಪಯುಕ್ತ ಗೋವಿಗೆ ಕನ್ನಡದ ದುಡ್ಡಿನಲ್ಲಿ ಗೋಶಾಲೆ!
-

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಹೊಣೆಗಾರಿಕೆಯನ್ನು ಹೊರಬೇಕಾಗಿರುವ ರಾಜ್ಯ ಸರಕಾರವೇ ಕನ್ನಡವನ್ನು ನಾಶಮಾಡಲು ಪಣತೊಟ್ಟಿದೆಯೇ? ಹಿಂದಿ, ಮರಾಠಿ ಮತ್ತು ಆರೆಸ್ಸೆಸ್ ಹಿತಾಸಕ್ತಿಗೆ ತಲೆ ಬಾಗಿ, ಕನ್ನಡದ ಸ್ಥಾನದಲ್ಲಿ ಸಂಸ್ಕೃತ, ಹಿಂದಿ, ಮರಾಠಿಗಳನ್ನು ಸ್ಥಾಪಿಸುವುದಕ್ಕೆ ಸರಕಾರವೇ ಹುನ್ನಾರ ನಡೆಸುತ್ತಿದೆಯೇ? ಕನ್ನಡದ ಕುರಿತಂತೆ ಸರಕಾರದ ಮಲತಾಯಿ ಧೋರಣೆ, ಇಂತಹದೊಂದು ಆತಂಕವನ್ನು ಎಲ್ಲರಲ್ಲೂ ಹುಟ್ಟಿಸಿ ಹಾಕಿದೆ. ಪ್ರಾದೇಶಿಕ ಭಾಷೆಗಳನ್ನೆಲ್ಲ ಅಳಿಸಿ, ಆ ಜಾಗದಲ್ಲಿ ಏಕ ಭಾಷೆಯೊಂದನ್ನು ಸ್ಥಾಪಿಸುವ ಉತ್ತರ ಭಾರತೀಯ ರಾಜಕಾರಣದ ಅಜೆಂಡಾಕ್ಕೆ, ಕರ್ನಾಟಕದ ಸಂಸದರು ದುಡಿಯುತ್ತಿದ್ದಾರೆ ಎನ್ನುವ ಆರೋಪಗಳನ್ನು ನಾಡಿನ ಕನ್ನಡ ಪ್ರೇಮಿಗಳು ಮಾಡುತ್ತಿದ್ದಾರೆ. ಈಗಾಗಲೇ ಸರಕಾರದ ನಿರ್ಲಕ್ಷದಿಂದ ಕನ್ನಡ ಮೂಲೆಗುಂಪಾಗುತ್ತಿದೆ. ಇದರ ಬೆನ್ನಿಗೇ, ಕನ್ನಡವನ್ನು ಬದಿಗೊತ್ತಿ ಇತರ ಭಾಷೆಗಳಿಗೆ ಸರಕಾರ ನೀಡುತ್ತಿರುವ ಆದ್ಯತೆ, ಜನರ ಆರೋಪಗಳಿಗೆ ಪುಷ್ಟಿ ನೀಡುವಂತಿದೆ. ಎರಡು ದಿನಗಳ ಹಿಂದೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ನಾಗಾಭರಣ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದರು. ‘‘ಸಂಸ್ಕೃತ ವಿವಿಗಾಗಿ ರಾಜ್ಯ ಸರಕಾರ ಸುಮಾರು 359 ಕೋಟಿ ರೂಪಾಯಿ ನೀಡಿದೆ. ಇದೇ ಸಂದರ್ಭದಲ್ಲಿ, ಕನ್ನಡದ ಅಸ್ಮಿತೆಯ ಭಾಗವಾಗಿರುವ ಕನ್ನಡ ವಿವಿಗೆ ಎರಡು ಕೋಟಿ ರೂಪಾಯಿ ನೀಡಲು ಹಿಂದೆ ಮುಂದೆ ನೋಡುತ್ತಿದೆ. ಸರಕಾರವೇ ಕನ್ನಡದ ಅಸ್ಮಿತೆಯನ್ನು ಅಳಿಸಿ ಹಾಕಲು ಯತ್ನಿಸುತ್ತಿದೆ’’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ನಾಲ್ಕು ಕೋಟಿಗೂ ಅಧಿಕ ಮಂದಿ ಮಾತನಾಡುವ ಕನ್ನಡ ಭಾಷೆಗೆ ಎರಡು ಕೋಟಿ ರೂಪಾಯಿಯನ್ನು ಕರ್ನಾಟಕ ರಾಜ್ಯ ಸರಕಾರವೇ ನೀಡಲು ಹಿಂದೆ ಮುಂದೆ ನೋಡುತ್ತಿದೆ ಎನ್ನುವ ಆರೋಪ ನಿಜವೇ ಆಗಿದ್ದರೆ ಅದು ಕಳವಳಕಾರಿ. ಈ ಮೂಲಕ, ಹೆಸರಿಗಷ್ಟೇ ಇದು ಕನ್ನಡಿಗರ ಸರಕಾರವಾಗಿದ್ದು, ನಮ್ಮ ಮುಖ್ಯಮಂತ್ರಿಯನ್ನು ಹಿಂದಿ ಮತ್ತು ಸಂಸ್ಕೃತ ಲಾಬಿಗಳು ಪರೋಕ್ಷವಾಗಿ ನಿಯಂತ್ರಿಸುತ್ತಿವೆ ಎಂದು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಇಡೀ ದೇಶದಲ್ಲಿ ಕೇವಲ 24 ಸಾವಿರ ಜನರು ಮಾತನಾಡುವ ಸಂಸ್ಕೃತಕ್ಕೆ ಇನ್ನೊಂದು ವಿಶ್ವವಿದ್ಯಾನಿಲಯವನ್ನು ಕರ್ನಾಟಕದಲ್ಲಿ ಸ್ಥಾಪಿಸುವ ಅಗತ್ಯವಿದೆಯೇ? ಈ 24 ಸಾವಿರ ಜನರಲ್ಲಿ ಯಾರೂ ಸಂಸ್ಕೃತ ಮಾತೃಭಾಷೆಯನ್ನು ಹೊಂದಿಲ್ಲ. ಇಂದು ಸಂಸ್ಕೃತ ಅಧ್ಯಯನಕ್ಕಾಗಿ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ವಿಭಾಗಗಳೇ ಇವೆ. ಈ 24 ಸಾವಿರ ಸಂಸ್ಕೃತದಲ್ಲಿ ಅಧ್ಯಯನ ನಡೆಸುವುದಕ್ಕೆ ಆ ವಿಭಾಗಗಳು ಧಾರಾಳವಾಗಿ ಸಾಕಾಗುತ್ತವೆ. ನಮ್ಮ ದೈನಂದಿನ ಬದುಕಿನಲ್ಲಾಗಲಿ, ವೈಜ್ಞಾನಿಕ ಮತ್ತು ಆಧುನಿಕ ತಂತ್ರಜ್ಞಾನಗಳಲ್ಲಾಗಲಿ ಯಾವುದೇ ರೀತಿಯಲ್ಲಿ ಪಾತ್ರವಹಿಸದ ಸಂಸ್ಕೃತ ಭಾಷೆಗೆ ಕರ್ನಾಟಕದಲ್ಲಿ ಇನ್ನೊಂದು ವಿಶ್ವವಿದ್ಯಾನಿಲಯ ಸ್ಥಾಪಿಸುವುದರ ಅರ್ಥವೇ, ಇಲ್ಲಿರುವ ಅಳಿದುಳಿದ ಕನ್ನಡವನ್ನು ಸಾಯಿಸಿ, ಅದರ ಗೋರಿ ಕಟ್ಟುವುದಾಗಿದೆ.
ರೈತರ ಹೈನೋದ್ಯಮದಲ್ಲಿ ಅನುಪಯುಕ್ತ ಗೋವುಗಳನ್ನು ಅವರು ಮಾಂಸಾಹಾರಿಗಳಿಗೆ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದರು. ಇಂದು ಸರಕಾರ, ಈ ಅನುಪಯುಕ್ತ ಗೋವುಗಳನ್ನು ಸಾಕುವ ಹೊಣೆ ಹೊತ್ತು ದೊಡ್ಡ ಮಟ್ಟದ ಆರ್ಥಿಕ ಸಂಕಷ್ಟವನ್ನು ಕುತ್ತಿಗೆಗೆ ಸುತ್ತಿಕೊಂಡಿದೆ. ಇದೀಗ ಸಂಸ್ಕೃತ ಎನ್ನುವ ಅನುಪಯುಕ್ತ ಗೋವನ್ನು ಸಾಕುವ ಅನಗತ್ಯ ಹೊರೆಯೊಂದನ್ನು ಹೊತ್ತುಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಈಗಾಗಲೇ ದೇಶಾದ್ಯಂತ ಸಂಸ್ಕೃತ ಅಧ್ಯಯನಕ್ಕೆ ಸಂಬಂಧಿಸಿ ವಿಶ್ವವಿದ್ಯಾನಿಲಯಗಳು, ವಿವಿಧ ಪೀಠಗಳು ಇರುವಾಗ ತುರ್ತಾಗಿ ಇನ್ನೊಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ತುರ್ತಾದರೂ ಏನು? ಭಾರತದ ಇತಿಹಾಸ, ವಿಜ್ಞಾನವನ್ನು ಇನ್ನಷ್ಟು ರಾಡಿ ಎಬ್ಬಿಸುವುದನ್ನು ಹೊರತು ಪಡಿಸಿದರೆ ಈ ವಿಶ್ವವಿದ್ಯಾಲಯದಿಂದ ಇನ್ನೇನಾದರೂ ಲಾಭವಿದೆಯೇ? ಅನುಪಯುಕ್ತ ಗೋವುಗಳಿಗಾಗಿ ಗೋಶಾಲೆಗಳನ್ನು ತೆರೆದ ಪರಿಣಾಮವಾಗಿ, ಹೈನೋದ್ಯಮ ಬಡವಾದಂತೆ, ಈ ಅನಗತ್ಯ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಕನ್ನಡ ಇನ್ನಷ್ಟು ಬಡವಾಗಲಿದೆ. ಮುಂದೊಂದು ದಿನ ಕನ್ನಡದ ಜಾಗವನ್ನೇ ಈ ಸಂಸ್ಕೃತ ಆಕ್ರಮಿಸಲು ಪ್ರಯತ್ನಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.
ಕನ್ನಡ ದಿನದಿಂದ ದಿನಕ್ಕೆ ಮೂಲೆಗುಂಪಾಗುತ್ತಿರುವ ಹೊತ್ತಿನಲ್ಲೇ, ಸರಕಾರ ಮರಾಠಿ ಭಾಷೆಗಾಗಿ 50 ಕೋಟಿ ರೂಪಾಯಿಯನ್ನು ಮೀಸಲಿಡುತ್ತದೆ. ಮರಾಠಿಗರನ್ನು ಓಲೈಸುವುದಕ್ಕಾಗೆ ಬೆಳಗಾವಿಯಲ್ಲಿ ಕನ್ನಡಿಗರನ್ನು ಬಲಿಕೊಡುತ್ತಿದೆ. ಇನ್ನೊಂದೆಡೆ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರುವ ಕೇಂದ್ರ ಪ್ರಯತ್ನಕ್ಕೆ ರಾಜ್ಯ ಸರಕಾರ ಸಾಥ್ ನೀಡುತ್ತಿದೆ. ರಾಷ್ಟ್ರೀಯ ನಾಯಕರು ಭಾಗವಹಿಸುವ ಬಿಜೆಪಿ ಸಮಾವೇಶದಲ್ಲಿ ಕನ್ನಡದ ಬದಲಿಗೆ ಹಿಂದಿಯನ್ನು ಬಳಸಿ, ವರಿಷ್ಠರನ್ನು ಮೆಚ್ಚಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳನ್ನು ಹಿಂದಿ ಲಿಪಿಗಳು ಆಕ್ರಮಿಸುತ್ತಿವೆ. ಇದೀಗ ಕನ್ನಡದ ಸಮಗ್ರ ಅಭಿವೃದ್ಧಿಗೆ ತನ್ನದೇ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಹಂಪಿ ವಿಶ್ವವಿದ್ಯಾನಿಲಯಕ್ಕೆ ಸೂಕ್ತ ಆರ್ಥಿಕ ನೆರವು ನೀಡಿ ಕನ್ನಡವನ್ನು ಉಳಿಸಿ ಬೆಳೆಸುವ ಬದಲಿಗೆ, ಯಾರಿಗೂ ಯಾವ ರೀತಿಯಲ್ಲೂ ಪ್ರಯೋಜನವಿಲ್ಲದ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ 350 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ, ಹಲವು ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಕೊಡುವುದಕ್ಕೆ ತೀರ್ಮಾನಿಸಿದೆ. ಈ ಹಣವನ್ನು ಕನ್ನಡ ಮಾಧ್ಯಮವಾಗಿಸಿಕೊಂಡಿರುವ ಸರಕಾರಿ ಶಾಲೆಗಳನ್ನು ಮೇಲೆತ್ತುವುದಕ್ಕೆ ಬಳಸಿದ್ದೇ ಆದರೆ, ಭವಿಷ್ಯದಲ್ಲಿ ನಮ್ಮ ನಾಡು, ನುಡಿ ಉಳಿದು ಬೆಳೆಸಿದ ಹೆಮ್ಮೆ ರಾಜ್ಯ ಸರಕಾರದ್ದಾಗುತ್ತಿತ್ತು. ಇಂದು ಸಂಸ್ಕೃತ ವಿಶ್ವವಿದ್ಯಾನಿಲಯದ ಹೆಸರಿನಲ್ಲಿ, ಕನ್ನಡಿಗರ ಹಣ ಕಂಡವರ ಪಾಲಾಗುತ್ತಿದೆ. ‘...ಅದ್ಯಾರದೋ ಮದುವೆಯಲ್ಲಿ ಉಂಡವನೇ ಜಾಣ’ ಎನ್ನುವ ಗಾದೆಯಂತೆ, ಸಂಸ್ಕೃತ ವಿಶ್ವವಿದ್ಯಾನಿಲಯದ ಹೆಸರಿನಲ್ಲಿ, ಕರ್ನಾಟಕವನ್ನು ಬಾಳೆಯೆಲೆಯಾಗಿ ಬಳಸಿ ಭೂರಿಭೋಜನ ಉಣ್ಣುವುದಕ್ಕೆ ಆರೆಸ್ಸೆಸ್ನ ಮೇಲ್ಜಾತಿಯ ತಂಡ ಸಿದ್ಧತೆ ನಡೆಸುತ್ತಿದೆ. ಕನ್ನಡವನ್ನು ಆರೆಸ್ಸೆಸ್ನ ಬಾಳೆಯೆಲೆಯಾಗಿಸದಂತೆ ತಡೆಯುವುದು ಸಕಲ ಕನ್ನಡಮ್ಮನ ಮಕ್ಕಳ ಹೊಣೆಗಾರಿಕೆಯಾಗಿದೆ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.