ಸಮಸ್ಯೆಗಳನ್ನು ಸೃಷ್ಟಿಸುವುದಕ್ಕಾಗಿಯೇ ಕೋಟ್ಯಂತರ ವೆಚ್ಚ ಮಾಡುತ್ತಿರುವ ಸರಕಾರ
-

ಇದೀಗ ಚುನಾವಣೆಯ ಕಾರಣಕ್ಕಾಗಿ ಸುದ್ದಿಯಲ್ಲಿರುವ ಉತ್ತರ ಪ್ರದೇಶ ಹತ್ತು ಹಲವು ಸಮಸ್ಯೆಗಳಿಗಾಗಿ ಕುಖ್ಯಾತಿ. ಅನಕ್ಷರತೆ, ಬಡತನ ಎರಡರಲ್ಲೂ ಮುಂಚೂಣಿಯಲ್ಲಿರುವ ರಾಜ್ಯ ಇದು. ಕೆಟ್ಟ ಆರೋಗ್ಯ ವ್ಯವಸ್ಥೆಯ ಮೂಲಕ ನೂರಾರು ಮಕ್ಕಳನ್ನು ಬಲಿ ಪಡೆದ ಹೆಮ್ಮೆ ಈ ರಾಜ್ಯಕ್ಕೆ ಸೇರಿದೆ. ಅಪರಾಧ, ಅತ್ಯಾಚಾರಕ್ಕಾಗಿ ಸದಾ ಮುಖಪುಟದಲ್ಲಿ ಸುದ್ದಿಯಾಗುತ್ತಾ ಬಂದಿದೆ. ಹಿಂಸಾ ರಾಜಕೀಯದಿಂದ ಉತ್ತರ ಪ್ರದೇಶ ದಿನದಿಂದ ದಿನಕ್ಕೆ ಸೊರಗುತ್ತಿದೆ. ಇಂತಹ ರಾಜ್ಯ ಇದೀಗ ಇನ್ನೊಂದು ಸಮಸ್ಯೆಯಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿದೆ. ವಿಪರ್ಯಾಸವೆಂದರೆ, ಈ ಸಮಸ್ಯೆಗಳನ್ನು ಹುಟ್ಟಿಸಿ ಹಾಕಿದ್ದೇ ಇಲ್ಲಿನ ಸರಕಾರ ಮತ್ತು ಈ ಸಮಸ್ಯೆಯನ್ನು ಹುಟ್ಟಿಸಲೋಸುಗವೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ ಮಾತ್ರವಲ್ಲ, ಈಗಲೂ ಮಾಡುತ್ತಿದೆ. ಮತ್ತು ಇದೀಗ ಆ ಸಮಸ್ಯೆಗೆ ಪರಿಹಾರ ಹುಡುಕಲು ಇನ್ನಷ್ಟು ದುಡ್ಡು ವೆಚ್ಚ ಮಾಡುವ ಸ್ಥಿತಿಗೆ ಬಂದು ನಿಂತಿದೆ. ಉತ್ತರಪ್ರದೇಶದಲ್ಲಿ ಬೀಡಾಡಿ ದನಗಳ ಸಮಸ್ಯೆ ಎಷ್ಟು ತೀವ್ರವಾಗಿದೆಯೆಂದರೆ, ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ ತನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಬೀಡಾಡಿ ದನಗಳನ್ನು ಹಿಡಿಯಲು ಜನವರಿ 1ರಿಂದ 10ರವರೆಗೆ ವಿಶೇಷ ಅಭಿಯಾನವೊಂದನ್ನು ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಉದ್ದೇಶಕ್ಕೆ 10 ದಿನಗಳು ಸಾಕಾಗುವುದಿಲ್ಲ ಎನ್ನುವುದನ್ನು ಮನಗಂಡ ಅವರು ಅವಧಿಯನ್ನು ಇನ್ನೂ ಒಂದು ವಾರ ವಿಸ್ತರಿಸಿದ್ದಾರೆ.
ಹಳ್ಳಿಗಳಲ್ಲಿರುವ ದನಗಳನ್ನು ಲಕ್ನೊಗೆ ಕೊಂಡೊಯ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ ನಿವಾಸದಲ್ಲಿ ಕಟ್ಟಿಹಾಕುವಂತೆ ಒತ್ತಾಯಿಸಿ, ಸೋಶಿಯಲಿಸ್ಟ್ ಕಿಸಾನ್ ಸಭಾ ಎನ್ನುವ ರೈತ ಸಂಘಟನೆಯೊಂದು ಒಂದು ವರ್ಷದಿಂದ ಹರ್ದೋಯಿ, ಉನ್ನಾವೊ ಮತ್ತು ಬಾರಾಬಂಕಿ ಜಿಲ್ಲೆಗಳಲ್ಲಿ ಅಭಿಯಾನವೊಂದನ್ನು ನಡೆಸುತ್ತಿದೆ. ಪ್ರತಿ ಬಾರಿ ಗ್ರಾಮಸ್ಥರು ಈ ಜಿಲ್ಲೆಗಳಿಂದ ಲಕ್ನೊಗೆ ಮೆರವಣಿಗೆ ಆರಂಭಿಸಿದಾಗ ಪೊಲೀಸರು ಮತ್ತು ಜಿಲ್ಲಾಡಳಿತ ಮಧ್ಯ ಪ್ರವೇಶಿಸುತ್ತದೆ. ಅಧಿಕಾರಿಗಳು ವಾಹನಗಳನ್ನು ತರಿಸಿ ಅದರಲ್ಲಿ ದನಗಳನ್ನು ಸಮೀಪದ ಗೋಶಾಲೆಗಳಿಗೆ ಸಾಗಿಸುತ್ತಾರೆ. ಈ ಅಭಿಯಾನವು ಕಳೆದ ವರ್ಷದ ಡಿಸೆಂಬರ್ ಕೊನೆಯ ವೇಳೆಗೆ ತೀವ್ರಗೊಂಡಿತು. ಹರ್ದೋಯಿ ಜಿಲ್ಲೆಯ ಭಾರವಾನ್ ವಿಭಾಗದ ಹಲವು ಗ್ರಾಮಗಳ ಗ್ರಾಮಸ್ಥರು 250-300 ದನಗಳೊಂದಿಗೆ ಒಟ್ಟು ಸೇರಿದ್ದರು. ಅವುಗಳನ್ನು ಜಿಲ್ಲಾಡಳಿತವು ತೆಗೆದುಕೊಂಡು ಹೋಗುತ್ತದೆ ಎನ್ನುವುದು ಅವರ ನಿರೀಕ್ಷೆಯಾಗಿತ್ತು. ಜನವರಿ 1, 4 ಮತ್ತು 5ರಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಮುಖ್ಯಮಂತ್ರಿ ನಿವಾಸದತ್ತ ನಡೆಯಲು ಆರಂಭಿಸಿದರು.
2021ರಲ್ಲಿ, ಸೋಶಿಯಲಿಸ್ಟ್ ಕಿಸಾನ್ ಸಭಾ ಬೀಡಾಡಿ ದನಗಳ ಕುರಿತ ಅಭಿಯಾನ ಆರಂಭಿಸಿದ ಬಳಿಕ, ಏಳು ಗ್ರಾಮ ಪಂಚಾಯತ್ಗಳಲ್ಲಿ ಖಾಯಂ ಗೋಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಸಂದಿಲ ತಾಲೂಕಿನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತೆಗೆದುಕೊಂಡರು. ಆ ಗ್ರಾಮಗಳೆಂದರೆ ಸಯ್ಯಾಪುರ್, ಮಹುವದಂಡ, ದಂಡ, ಜಾಜುಪುರ್, ಬಹೇರಿಯ, ಸಾಗರ್ ಗದಿ ಮತ್ತು ಜಗ್ಸಾರ. ಆದರೆ, ಈ ವಿಷಯದಲ್ಲಿ ಆ ಗ್ರಾಮಗಳ ಗ್ರಾಮ ಪ್ರಧಾನರು ಉತ್ಸುಕರಾಗಿರಲಿಲ್ಲ. ಹಾಗಾಗಿ, ಇದಕ್ಕೆ ಸಂಬಂಧಿಸಿದ ನಿರ್ಣಯವನ್ನು ಅನುಮೋದಿಸಲು ಈ ಗ್ರಾಮಗಳ ಜಮೀನು ನಿರ್ವಹಣಾ ಸಮಿತಿಗಳು ನಿರಾಕರಿಸಿದವು. ಯಾಕೆಂದರೆ, ತಮ್ಮ ಗ್ರಾಮಗಳಲ್ಲಿ ಖಾಯಂ ಗೋಶಾಲೆಗಳನ್ನು ಸ್ಥಾಪಿಸಿದರೂ, ಅವುಗಳ ನಿರ್ವಹಣೆಗೆ ಜಿಲ್ಲಾಡಳಿತದಿಂದ ಹಣ ಬರುವ ಬಗ್ಗೆ ಈ ಗ್ರಾಮ ಪಂಚಾಯತ್ಗಳಿಗೆ ವಿಶ್ವಾಸವಿಲ್ಲ.
ವಾಸ್ತವ ಸಂಗತಿಯೆಂದರೆ, ರೈತನೊಬ್ಬ ತನ್ನ ನಿರುಪಯುಕ್ತ ದನವನ್ನು ಗೋಶಾಲೆಯೊಂದಕ್ಕೆ ತೆಗೆದುಕೊಂಡು ಹೋದರೆ ಅಲ್ಲಿ ಅದನ್ನು ಸೇರ್ಪಡೆ ಮಾಡಿಕೊಳ್ಳಲು 200ರಿಂದ 500 ರೂಪಾಯಿ ಲಂಚ ನೀಡಬೇಕಾದ ಪರಿಸ್ಥಿತಿಯಿದೆ. ಈ ಗೋಶಾಲೆಗಳಲ್ಲಿ ಉಸ್ತುವಾರಿಗಳಾಗಿ ನೇಮಕಗೊಂಡವರಿಗೆ ಅವರ ಗೌರವ ಧನವನ್ನು ನಿಯಮಿತವಾಗಿ ನೀಡಲಾಗುತ್ತಿಲ್ಲ. ಹಾಗಾಗಿ, ತಾವು ಬದುಕಲು ಬೇಕಾದ ವರಮಾನವನ್ನು ಸಂಪಾದಿಸಲು ಸ್ವಲ್ಪ ಸಮಯದ ಬಳಿಕ ದನಗಳನ್ನು ಬಿಟ್ಟು ಬಿಡುವುದಲ್ಲದೆ ಬೇರೆ ಆಯ್ಕೆ ಅವರಿಗಿಲ್ಲ. ಈ ಗೋವುಗಳು ಬಳಿಕ ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ತಿನ್ನುತ್ತವೆ. ಇಲ್ಲಿ ರೈತರು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ತಮ್ಮ ಬೆಳೆಗಳನ್ನು ರಕ್ಷಿಸಲು ಅವರು ಇಡೀ ರಾತ್ರಿ ಎಚ್ಚರದಿಂದಿರಬೇಕಾಗುತ್ತದೆ. ಕೆಲವು ರೈತರು ತಮ್ಮ ಹೊಲಗಳ ಸುತ್ತ ಬ್ಲೇಡ್ಗಳನ್ನೊಳಗೊಂಡ ತಂತಿಯ ಬೇಲಿ ಹಾಕಿದ್ದಾರೆ. ಆದರೆ, ಇದನ್ನು ಉತ್ತರಪ್ರದೇಶ ರಾಜ್ಯ ಸರಕಾರ ನಿಷೇಧಿಸಿದೆ. ಯೋಗಿ ಸರಕಾರವು ಪ್ರತೀಕಾರಾತ್ಮಕ ನೀತಿಗಳಿಗೆ ಪ್ರಸಿದ್ಧವಾಗಿದೆ. ಬೀಡಾಡಿ ದನಗಳ ಸಮಸ್ಯೆಯನ್ನು ಪರಿಹರಿಸುವ ಬದಲು ಅವರು ಬ್ಲೇಡ್ಯುಕ್ತ ತಂತಿ ಬೇಲಿ ಹಾಕಿರುವುದಕ್ಕಾಗಿ ರೈತರನ್ನು ಶಿಕ್ಷಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ರೈತರಿಗೆ ದಂಡ ವಿಧಿಸಲಾಗುತ್ತದೆ.
ಯೋಗಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ, ದನಗಳನ್ನು ರಕ್ಷಿಸುವ ತನ್ನ ಉದ್ದೇಶವನ್ನು ಘೋಷಿಸಿತು. ಇದರಿಂದ ಉತ್ತೇಜನಗೊಂಡ ‘ಗೋರಕ್ಷಕರು’ ದನಗಳೊಂದಿಗೆ ಹೋಗುವ ಎಲ್ಲರಿಗೂ ಥಳಿಸಲಾರಂಭಿಸಿದರು. ಅವರೆಲ್ಲರೂ ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆನ್ನುವುದು ಅವರ ಭಾವನೆಯಾಗಿತ್ತು. ಇದರಿಂದಾಗಿ ಜಾನುವಾರು ವ್ಯಾಪಾರ ಒಮ್ಮೆಲೆ ಕೊನೆಗೊಂಡಿತು ಹಾಗೂ ಬೀಡಾಡಿ ದನಗಳು 2017ರಲ್ಲೇ ರೈತರಿಗೆ ಹೊರೆಯಾದವು. ಇದು ಹಲವು ರೀತಿಯಲ್ಲಿ ಗ್ರಾಮೀಣ ಹೈನೋದ್ಯಮಗಳ ಮೇಲೆ ಪರಿಣಾಮಗಳನ್ನು ಬೀರಿದೆ. ಇದರಿಂದಾಗಿ ಅನುಪಯುಕ್ತ ಗೋವುಗಳನ್ನು ಮಾರುವ ಹಕ್ಕುಗಳನ್ನು ರೈತರು ಕಳೆದುಕೊಂಡರು. ಅವರಿಗೆ ಸಿಗುವ ಆದಾಯದ ಮೂಲವೊಂದಕ್ಕೆ ಸಂಚಾಕಾರವಾಯಿತು. ಜೊತೆಗೆ ಆ ಗೋವುಗಳನ್ನು ಸಾಕುವ ಅಧಿಕ ವೆಚ್ಚವೂ ಅವರದಾಯಿತು. ಗೋವುಗಳನ್ನು ಜನರು ಪೂಜಿಸುವುದಕ್ಕೆ ಸಾಕುವುದಿಲ್ಲ, ಗೋ ಸಾಕಣೆ ಅರ್ಥಶಾಸ್ತ್ರದ ಭಾಗ ಎನ್ನುವುದನ್ನು ಅರಿಯದ ಸರಕಾರವೊಂದರ ಎಡಬಿಡಂಗಿ ನೀತಿಯಿಂದಾಗಿ ಗೋಸಾಕಣೆ ಆಪತ್ತಿನಲ್ಲಿದೆ ಮಾತ್ರವಲ್ಲ, ಅನುಪಯುಕ್ತ ಗೋವುಗಳು ಬೀಡಾಡಿಗಳಾಗಿ ಜನರಿಗೆ ಸಮಸ್ಯೆ ತಂದೊಡ್ಡುತ್ತಿದೆ. ಅಥವಾ ಅದನ್ನು ಕಂಡವರು ಅಕ್ರಮವಾಗಿ ಮಾಂಸ ಸಂಸ್ಕರಣಾ ಘಟಕಗಳಿಗೆ ಸಾಗಿಸಿ ದುಡ್ಡು ಮಾಡುತ್ತಿದ್ದಾರೆ. ಇದು ಕೇವಲ ಉತ್ತರ ಪ್ರದೇಶದ ಸಮಸ್ಯೆ ಮಾತ್ರವಲ್ಲ. ಈಗಾಗಲೇ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು, ಗೋವುಗಳನ್ನು ಮಾರುವ ರೈತರ ಹಕ್ಕನ್ನು ಕಿತ್ತುಕೊಂಡು, ಗೋಶಾಲೆಗಳಿಗಾಗಿ ಹಣವನ್ನು ದುಂದು ವೆಚ್ಚ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಈ ಗೋಶಾಲೆಗಳೇ ಸರಕಾರದ ಪಾಲಿಗೆ ಬಹುದೊಡ್ಡ ಹೊರೆಯಾಗಲಿದೆ ಮತ್ತು ಗ್ರಾಮೀಣ ಹೈನೋದ್ಯಮ ಸಂಪೂರ್ಣ ನಾಶವಾಗಿ, ಆ ಜಾಗದಲ್ಲಿ ಕಾರ್ಪೊರೇಟ್ ಬೃಹತ್ ಡೈರಿಗಳು ಸ್ಥಾಪನೆಯಾದರೆ ಅದರಲ್ಲಿ ಅಚ್ಚರಿಯಿಲ್ಲ. ಅನುಪಯುಕ್ತ ಗೋವುಗಳನ್ನು ಈ ಕಾರ್ಪೊರೇಟ್ ಸಂಸ್ಥೆಗಳು, ಮಾಂಸವಾಗಿಸಿ ನೇರವಾಗಿ ವಿದೇಶಕ್ಕೆ ರವಾನಿಸುವುದರಿಂದ, ಅವು ಎರಡೂ ಕೈಗಳಲ್ಲಿ ಲಾಭಗಳನ್ನು ಬಾಚಲಿವೆ. ಗ್ರಾಮೀಣ ರೈತರು ತಮ್ಮ ಹಟ್ಟಿಗಳನ್ನು ಮುಚ್ಚಿ ಈ ಕಾರ್ಪೊರೇಟ್ ಹಟ್ಟಿಗಳಲ್ಲಿ ಸೆಗಣಿ ಬಾಚುವ ಸ್ಥಿತಿ ನಿರ್ಮಾಣವಾಗಲಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.