=
-

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
''ರಸ್ತೆ, ಮೋರಿ, ಸೇತುವೆ ಮೊದಲಾದ ಸಣ್ಣ ವಿಷಯಗಳಿಗೆ ಗಮನ ಕೊಡಬೇಡಿ. ಲವ್ ಜಿಹಾದ್ ನಮ್ಮ ಮುಂದಿರುವ ಗಂಭೀರ ವಿಷಯ. ಅದಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಿ'' ಎಂದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲು ಅವರು ಬಿಜೆಪಿ ಕಾರ್ಯಕರ್ತರ ಸಮಾವೇಶವೊಂದರಲ್ಲಿ ಕರೆ ನೀಡಿದ್ದಾರೆ. ಈ ಹೇಳಿಕೆಯನ್ನು ನೀಡಿರುವುದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವುದರಿಂದ ಮತ್ತು ಈ ಹೇಳಿಕೆಯ ಬಗ್ಗೆ ಬಿಜೆಪಿಯ ಇತರ ನಾಯಕರು ಯಾವುದೇ ಸ್ಪಷ್ಟೀಕರಣ ನೀಡಿಲ್ಲದೇ ಇರುವುದರಿಂದ, ''ಮುಂದಿನ ಚುನಾವಣೆಯ ಬಿಜೆಪಿಯ ಅಧಿಕೃತ ಪ್ರಣಾಳಿಕೆಯಾಗಿ'' ಇದನ್ನು ಪರಿಗಣಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಯಲ್ಲಾಗಿರುವ ಹಿನ್ನಡೆಗೆ ಈ ಮೂಲಕ ಅವರು ಸ್ಪಷ್ಟನೆ ನೀಡಿದ್ದಾರೆ. 'ಲವ್ ಜಿಹಾದ್'ನ್ನು ತಡೆಯಬೇಕಾದರೆ ಮೋದಿ ಮತ್ತು ಅಮಿತ್ ಶಾ ಅವರು ಅನಿವಾರ್ಯ. ಆದುದರಿಂದ, ಜನರು ಲವ್ಜಿಹಾದ್ ಬಗ್ಗೆ ಯೋಚಿಸಿ ಎಂದು ಕಟೀಲು ಜನರಿಗೆ ತಿಳಿ ಹೇಳಿದ್ದಾರೆ. ಈಗಾಗಲೇ ಈಶ್ವರಪ್ಪ ಅವರು ''ಮುಂದಿನ ಚುನಾವಣೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಮತ ಯಾಚಿಸುತ್ತೇವೆ'' ಎಂಬ ಹೇಳಿಕೆಯನ್ನು ನೀಡಿದ್ದರು. ಆದರೆ ರಾಜ್ಯದ ಜನರು ಈಶ್ವರಪ್ಪ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷರೇ ''ಅಭಿವೃದ್ಧಿ ಸಣ್ಣ ವಿಷಯ. ಅದರ ಬಗ್ಗೆ ಗಮನ ನೀಡಬೇಡಿ. ಲವ್ ಜಿಹಾದ್ ಗಂಭೀರ ವಿಷಯ. ಅದನ್ನು ನೆನಪಲ್ಲಿಟ್ಟುಕೊಂಡು ಓಟು ಕೊಡಿ'' ಎಂಬ ಅರ್ಥದಲ್ಲಿ ಜನರಿಗೆ ಕರೆ ನೀಡಿದ್ದಾರೆ. ಜೊತೆಗೆ, ಅಭಿವೃದ್ಧಿಯಲ್ಲಾಗಿರುವ ಹಿನ್ನಡೆಯನ್ನು ಮುಂದಿಟ್ಟು ಜನರು ತರಾಟೆಗೆ ತೆಗೆದುಕೊಂಡರೆ ಲವ್ಜಿಹಾದ್ ಗುಮ್ಮನನ್ನು ತೋರಿಸಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದಂತೆಯೂ ಆಗಿದೆ.
ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ''ಅಚ್ಛೇದಿನ್ ಬರಲಿದೆ'' ಎಂದು ಘೋಷಿಸಿದ್ದರು. ಆದರೆ ಐದು ವರ್ಷದ ಆಳ್ವಿಕೆಯಲ್ಲಿ ದೇಶದ ಸ್ಥಿತಿ ಇನ್ನಷ್ಟು ಚಿಂತಾಜನಕವಾದಾಗ ''ಅಚ್ಛೇದಿನ್ಗೆ ಐದು ವರ್ಷ ಸಾಕಾಗುವುದಿಲ್ಲ. ಇನ್ನೊಂದು ಅವಧಿ ಬೇಕು'' ಎಂದು ಮನವಿ ಮಾಡಿದ್ದರು. ಅದನ್ನು ನಂಬಿದ ಜನರು ಪ್ರಧಾನಿಯವರಿಗೆ ಇನ್ನೊಂದು ಅವಧಿಯನ್ನು ನೀಡಿದರು. ಆದರೆ ಇದೀಗ ಅವರು 'ಅಮೃತ್ ಕಾಲ್' ಬಗ್ಗೆ ಮಾತನಾಡುತ್ತಿದ್ದಾರೆ. ದೇಶ ವಿಶ್ವಗುರುವಾಗಬೇಕಾದರೆ ಇನ್ನೂ 25 ವರ್ಷ ಬೇಕು ಎಂದು ಅವಕಾಶ ಕೇಳಿದ್ದಾರೆ. ಅಷ್ಟೇ ಅಲ್ಲ, ನಿಧಾನಕ್ಕೆ 'ಅಚ್ಛೇದಿನ್' ವ್ಯಾಖ್ಯಾನ ಕೂಡ ಬದಲಾಗುತ್ತಾ ಬಂದಿದೆ. ಜನರು ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿದಾಗಲೆಲ್ಲ 'ರಾಮಮಂದಿರ' 'ಕಾಶ್ಮೀರ' 'ಮತಾಂತರ ಕಾಯ್ದೆ'ಯ ಕಡೆಗೆ ಕೇಂದ್ರ ಸರಕಾರ ಕೈ ತೋರಿಸತೊಡಗಿದೆ. ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 'ಸಮಾನ ನಾಗರಿಕ ಕಾಯ್ದೆ'ಯನ್ನೇ 'ಅಚ್ಛೇದಿನ್' ಎಂದು ಬಿಂಬಿಸಿತು. ಒಟ್ಟಿನಲ್ಲಿ ದೇಶದ ಅಭಿವೃದ್ಧಿ ತಮ್ಮಿಂದ ಸಾಧ್ಯವಿಲ್ಲ ಎನ್ನುವುದನ್ನು ಪರೋಕ್ಷವಾಗಿ ಕೇಂದ್ರ ಸರಕಾರ ಒಪ್ಪಿಕೊಳ್ಳುವ ಹಂತಕ್ಕೆ ಬಂದಿದೆ. ಅದರ ಭಾಗವಾಗಿಯೇ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಜನರನ್ನು ಭಾವನಾತ್ಮಕವಾಗಿ ಮರುಳು ಗೊಳಿಸಬಲ್ಲ 'ಲವ್ ಜಿಹಾದ್'ನಂತಹ ವಿಷಯಗಳನ್ನು ಮುನ್ನೆಲೆಗೆ ತಂದಿದೆ.
'ಪಂಪ್ವೆಲ್ ಮೇಲ್ಸೇತುವೆ'ಗಾಗಿ ರಾಜ್ಯಮಟ್ಟದಲ್ಲಿ ಅತೀ ಹೆಚ್ಚು ಟ್ರೋಲ್ಗೊಳಗಾದವರು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು. ಪಂಪ್ವೆಲ್ ಮೇಲ್ಸೇತುವೆ ಉದ್ಘಾಟನೆಗೊಂಡಿದೆಯಾದರೂ, ಅದರ ಕಳಪೆ ಕಾಮಗಾರಿ ಈಗಲೂ ಟೀಕೆಗೊಳಗಾಗುತ್ತಲೇ ಇದೆ. ಇದರ ಬೆನ್ನಿಗೇ ಮಂಗಳೂರಿನ ರಸ್ತೆಗಳು ಬಗ್ಗೆ ಜನರಲ್ಲಿ ವ್ಯಾಪಕ ಅಸಮಾನಾಧಗಳಿವೆ. ಕಳೆದ ಮಳೆಗಾಲದಲ್ಲಿ ಈ ರಸ್ತೆಗಳ ಹೊಂಡಗಳಲ್ಲಿ ನೀರು ತುಂಬಿ ಹಲವು ಅಪಘಾತಗಳು ಸಂಭವಿಸಿ, ಹಲವರು ಪ್ರಾಣ ಕಳೆದುಕೊಂಡಿದ್ದರು. ಜನರು ಅವುಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಮಂಗಳೂರು ಸ್ಮಾರ್ಟ್ ಸಿಟಿಯಾಗುವ ಬದಲು 'ಮೃತ್ಯು ಸಿಟಿ'ಯಾಗಿ ಮಾರ್ಪಟ್ಟಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನನೆಗುದಿಯಲ್ಲಿರುವ ಕಾಮಗಾರಿಗಳ ಬಗ್ಗೆ ಜನಸಾಮಾನ್ಯರು ಪದೇ ಪದೇ ಧ್ವನಿಯೆತ್ತುತ್ತಾ ಬರುತ್ತಿದ್ದಾರೆ. ಇದರ ಬೆನ್ನಿಗೇ ಸುರತ್ಕಲ್ನ ಅನಧಿಕೃತ ಟೋಲ್ಗೇಟ್ ಕೂಡ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು. ಈ ಟೋಲ್ಗೇಟ್ನ ವಿರುದ್ಧ ಪಕ್ಷಭೇದ ಮರೆತು ಜನರು ಒಂದಾಗಿ ಹೋರಾಟ ನಡೆಸಿ ಕೊನೆಗೂ ಅದನ್ನು ಕಿತ್ತು ಹಾಕುವಲ್ಲಿ ಯಶಸ್ವಿಯಾದರು. ಆದರೆ ಈ ಟೋಲ್ಗೇಟ್ನ ಹಣವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡುತ್ತಿರುವುದರ ವಿರುದ್ಧವೂ ಜನರು ಸಿಟ್ಟಿಗೆದ್ದಿದ್ದಾರೆ. ಜನರು ಅಭಿವೃದ್ಧಿಯ ಹೆಸರಿನಲ್ಲಿ ಒಂದಾಗುತ್ತಿರುವುದು, ಅಕ್ರಮಗಳ ವಿರುದ್ಧ ಸಂಘಟಿತರಾಗಿ ಪ್ರತಿಭಟನೆಗಿಳಿಯುತ್ತಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜನರು ಧರ್ಮ, ಕೋಮು ಹೆಸರಿನಲ್ಲಿ ಬಡಿದಾಡುತ್ತಾ ಇರಬೇಕು ಎನ್ನುವ ಅದರ ಉದ್ದೇಶಕ್ಕೆ ಹಿನ್ನಡೆಯಾಗಿರುವುದು ಬಿಜೆಪಿಯ ಗಮನಕ್ಕೆ ಬಂದಿದೆ. ಆದುದರಿಂದಲೇ, ಇದೀಗ ತನ್ನ ಕಾರ್ಯಕರ್ತರ ಸಮಾವೇಶದಲ್ಲಿ ಕಟೀಲು ಅವರು ''ಮೋರಿ, ರಸ್ತೆಗಳ ಬಗ್ಗೆ ಗಮನ ಕೊಡಬೇಡಿ. ಅವೆಲ್ಲ ಸಣ್ಣ ವಿಷಯ'' ಎಂದು ಕರೆ ನೀಡಿದ್ದಾರೆ. ಹಾಗಾದರೆ ಜನ ಸಾಮಾನ್ಯರು ಮೋರಿ, ರಸ್ತೆ, ಸೇತುವೆಗಳಿಗಾಗಿ ಯಾರನ್ನು ಮೊರೆ ಹೋಗಬೇಕು? ಎನ್ನುವ ಪ್ರಶ್ನೆ ಮಾತ್ರ ಉತ್ತರವಿಲ್ಲದೆ ಬಿದ್ದುಕೊಂಡಿದೆ.
ಇದು ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ''ನಿಮ್ಮ ಮಕ್ಕಳಿಗೆ ಲೇಖನಿ, ಪುಸ್ತಕಗಳನ್ನು ಕೊಡಬೇಡಿ, ಲವ್ ಜಿಹಾದ್ನ ವಿರುದ್ಧ ಹೋರಾಡಲು ತ್ರಿಶೂಲ, ಚಾಕು ಚೂರಿಗಳನ್ನು ನೀಡಿ'' ಎಂದು ಹೇಳಿಕೆ ನೀಡಿದರೂ ಅಚ್ಚರಿಯೇನಿಲ್ಲ. ಇತ್ತೀಚೆಗಷ್ಟೇ ಶಿವಮೊಗ್ಗಕ್ಕೆ ಆಗಮಿಸಿದ್ದ ಪ್ರಜ್ಞಾ ಸಿಂಗ್ ಠಾಕೂರ್ ತಮ್ಮ ಭಾಷಣದಲ್ಲಿ ''ನಿಮ್ಮ ಮಕ್ಕಳಿಗೆ ಚಾಕು ಚೂರಿಗಳನ್ನು ಕೊಡಿ'' ಎಂದು ಕರೆ ನೀಡಿದ್ದರು. ಅದರ ವಿರುದ್ಧ ಈಗಾಗಲೇ ಪ್ರಕರಣವನ್ನೂ ದಾಖಲಿಸಲಾಗಿದೆ. ಪ್ರಜ್ಞಾಸಿಂಗ್ ಠಾಕೂರ್ ಶಂಕಿತ ಭಯೋತ್ಪಾದಕಿಯಾಗಿ ಗುರುತಿಸಿಕೊಂಡಾಕೆ. ಆಕೆಯಿಂದ ಅಂತಹ ಕರೆ ಬರುವುದು ಸಹಜ. ಆದರೆ ರಾಜ್ಯದ ಬಿಜೆಪಿಯೇ ಇದೀಗ ಪ್ರಜ್ಞಾ ಸಿಂಗ್ ಠಾಕೂರ್ ಭಾಷೆಯಲ್ಲಿ ಮಾತನಾಡಲು ಮುಂದಾಗಿರುವುದು ಮಾತ್ರ ಆತಂಕಕಾರಿಯಾಗಿದೆ. ಇದೇ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲು ಅವರು ''ಯಕ್ಷಗಾನದಲ್ಲಿ ಬಿಜೆಪಿಯ ಪರವಾಗಿ ಪ್ರಚಾರ ಮಾಡಿ'' ಎಂದು ಕರೆ ನೀಡಿದ್ದಾರೆ. ಕರಾವಳಿಯ ಗಂಡುಕಲೆ ಎಂದೇ ಗುರುತಿಸಲ್ಪಟ್ಟಿರು, ಅವಿಭಜಿತ ದಕ್ಷಿಣ ಕನ್ನಡದ ಹೆಮ್ಮೆಯಾಗಿರುವ ಯಕ್ಷಗಾನವನ್ನು ರಾಜಕೀಯಕ್ಕಾಗಿ ದುರುಪಯೋಗ ಪಡಿಸಲು ಬಹಿರಂಗವಾಗಿ ಕರೆ ನೀಡಿರುವುದು ಯಕ್ಷಗಾನಕ್ಕೆ , ಯಕ್ಷ ಕಲಾವಿದರಿಗೆ ಮಾಡಿರುವ ಅವಮಾನವಾಗಿದೆ. ಇದರ ವಿರುದ್ಧ ಯಕ್ಷಗಾನ ಕಲಾವಿದರು, ಜಾನಪದ ವಿದ್ವಾಂಸರು ಸ್ಪಷ್ಟ ಧ್ವನಿಯಲ್ಲಿ ಮಾತನಾಡಬೇಕು. ಕರಾವಳಿಯ ಸಾಂಸ್ಕೃತಿಕ, ಸಾಮಾಜಿಕ ಬದುಕಿನಲ್ಲಿ ಅವಿನಾಭಾವವಾಗಿ ಬೆಸೆದುಕೊಂಡಿರುವ ಯಕ್ಷಗಾನವನ್ನು ತಮ್ಮ ರಾಜಕೀಯಕ್ಕಾಗಿ ದುರ್ಬಳಕೆ ಮಾಡಲು ಹೊರಟಿರುವುದು ಈ ನೆಲದ ಸಂಸ್ಕೃತಿಗೆ ಮಾಡುತ್ತಿರುವ ಅವಮಾನವಾಗಿದೆ. ಕಳೆದ ಕೊರೋನ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರು ಅತಂತ್ರ ಸ್ಥಿತಿಯಲ್ಲಿದ್ದಾಗ ಅವರಿಗೆ ಯಾವ ರೀತಿಯಲ್ಲೂ ನೆರವಿಗೆ ಬರದೇ ಇದ್ದ ಸರಕಾರ, ಇದೀಗ ಯಕ್ಷಗಾನದ ಕಲಾವಿದರನ್ನು ತನ್ನ ಪಕ್ಷದ 'ಬ್ಯಾನರ್ ಕಟ್ಟುವ' ಮಟ್ಟಕ್ಕೆ ಇಳಿಸಲು ಮುಂದಾಗಿರುವುದು ವಿಷಾದನೀಯ. ಇದರ ವಿರುದ್ಧ ಯಕ್ಷಗಾನಾಭಿಮಾನಿಗಳು ಒಂದಾಗದೇ ಇದ್ದರೆ, ಈಗಾಗಲೇ ಅವಸಾನದಂಚಿಗೆ ತಲುಪಿರುವ ಕಲೆಯನ್ನು ಈ ರಾಜಕೀಯ ನಾಯಕರೇ ಅಧಿಕೃತವಾಗಿ ಕೊಲೆಗೈಯಲ್ಲಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.