ಭಾರತವೆಂದರೆ ಕೇವಲ 21 ಮಂದಿಯೇ?
-

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೊರೋನದ ಬಳಿಕ ಜಗತ್ತು ಬಡತನದ ಆಳಕ್ಕೆ ತಳ್ಳಲ್ಪಟ್ಟಿದೆ ಎಂದು ಕಳೆದ ವರ್ಷ ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. 2019ರಲ್ಲಿ ಶೇ. 8.4ರಷ್ಟಿದ್ದ ಬಡತನ ಬರೇ ಒಂದು ವರ್ಷದಲ್ಲಿ ಅಂದರೆ 2020ರಲ್ಲಿ 9.3ಕ್ಕೆ ಹೆಚ್ಚಿತ್ತು. 2020ರ ಅಂತ್ಯದ ವೇಳೆಗೆ ಜಗತ್ತಿನ 70 ದಶಲಕ್ಷದಷ್ಟು ಜನರು ಹೆಚ್ಚುವರಿಯಾಗಿ ಕಡುಬಡತನದ ವ್ಯಾಪ್ತಿಗೆ ಸೇರಿದ್ದರು. ಜಾಗತಿಕ ಅಸಮಾನತೆಯೂ ಇದೇ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಿತ್ತು. ಶ್ರೀಮಂತರ ‘ಆದಾಯ ನಷ್ಟ’ಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಬಡವರ ಆದಾಯ ನಷ್ಟವಾಗಿತ್ತು. ಇದು ಬಡವರು-ಶ್ರೀಮಂತರ ನಡುವಿನ ಅಂತರ ಹೆಚ್ಚುವುದಕ್ಕೆ ಬಹುಮುಖ್ಯ ಕಾರಣ ಎಂದು ವಿಶ್ವ ಬ್ಯಾಂಕ್ ವಿಶ್ಲೇಷಿಸಿತ್ತು. ಕೊರೋನ ಮತ್ತು ಲಾಕ್ಡೌನ್ನಿಂದಾಗಿ ವಿಶ್ವದ ಲಕ್ಷಾಂತರ ಬಡವರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು. ಹಸಿವು ದುಪ್ಪಟ್ಟಾಯಿತು. ಅಪೌಷ್ಟಿಕತೆ ಹೆಚ್ಚಿ ತ್ತು. ಜಗತ್ತು ಈ ಪರಿಯಲ್ಲಿ ತತ್ತರಿಸಿದ್ದರೂ, ಈ ಜಗತ್ತಿನ ಬಿಲಿಯಾಧಿಪತಿಗಳ ಸನಿಹವೂ ಕೂಡ ಕೊರೋನ ಸಂಕಟಗಳು ಸುಳಿದಿಲ್ಲ. ಸ್ವಿಟ್ಸರ್ ಲ್ಯಾಂಡ್ನ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಮಾನವಹಕ್ಕುಗಳ ಸಂಸ್ಥೆ ‘ಆಕ್ಸ್ಫಾಮ್’ ಬಿಡುಗಡೆ ಮಾಡಿದ ವರದಿ, ಹೇಗೆ ಕೊರೋನ ಬಿಲಿಯಾಧಿಪತಿಗಳ ಪಾಲಿಗೆ ವರವಾಗಿ ಪರಿಣಮಿಸಿತು ಎನ್ನುವುದನ್ನು ಹೇಳಿದೆ. ಈ ವರದಿಯ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಶೇ. 1ರಷ್ಟು ಶ್ರೀಮಂತರು ವಿಶ್ವದ ಇತರ ಜನಸಂಖ್ಯೆಯ ಒಟ್ಟು ಸಂಪತ್ತಿಗಿಂತ ಎರಡು ಪಟ್ಟು ಹೆಚ್ಚು ಸಂಪತ್ತನ್ನು ಗಳಿಸಿದ್ದಾರೆ. ಕೋಟ್ಯಧೀಶರ ಸಂಪತ್ತು ದಿನಕ್ಕೆ 2.7 ಶತಕೋಟಿ ಡಾಲರ್ನಂತೆ ಹೆಚ್ಟಿದೆ ಎನ್ನುವ ಅಂಶದ ಕಡೆಗೆ ವರದಿ ಬೆಳಕು ಚೆಲ್ಲಿದೆ. ಲಾಕ್ಡೌನ್ನಿಂದಾಗಿ ಜಗತ್ತಿನ ಎಲ್ಲ ಉದ್ಯಮಗಳೂ ಮಕಾಡೆ ಮಲಗಿದ್ದರೂ, ಈ ಕೋಟ್ಯಧಿಪತಿಗಳ ಸಂಪತ್ತು ಮಾತ್ರ ಇಳಿಕೆಯಾಗಿಲ್ಲ. ಶೇ. 1ರಷ್ಟಿದ್ದ ಈ ಶ್ರೀಮಂತರು ಹೊಸ ಸಂಪತ್ತಿನಲ್ಲಿ ಶೇ. 50ರಷ್ಟು ಪಾಲನ್ನು ತಮ್ಮದಾಗಿಸಿಕೊಂಡಿದ್ದಾರೆ. 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತೀವ್ರ ಸಂಪತ್ತು ಮತ್ತು ತೀವ್ರ ಬಡತನ ಏಕಕಾಲದಲ್ಲಿ ಹೆಚ್ಚಿದೆ ಎನ್ನುವ ಅಂಶ ವರದಿಯಿಂದ ಬಹಿರಂಗವಾಗಿದೆ.
ಭಾರತದ ಸ್ಥಿತಿಯಂತೂ ಇನ್ನಷ್ಟು ಭೀಕರವಾಗಿದೆ. 2022ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 107ನೇ ಸ್ಥಾನಕ್ಕೆ ಕುಸಿದಿದೆ. 2021ರಲ್ಲಿ ದೇಶದ ಹಸಿವು ಸೂಚ್ಯಂಕ 101ನೇ ಸ್ಥಾನದಲ್ಲಿತ್ತು. ಭಾರತದಲ್ಲಿ ಅಪೌಷ್ಟಿಕತೆಯ ಪ್ರಮಾಣವು 2018-20ರಲ್ಲಿ ಶೇ. 14.6 ಇದ್ದಿದ್ದರೆ, 2019-21ಕ್ಕೆ ಅದು ಶೇ. 16.3ಕ್ಕೆ ಏರಿಕೆಯಾಗಿದೆ. ಜಗತ್ತಿನಲ್ಲಿ 82.8 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದರೆ ಅವರಲ್ಲಿ, 22.43 ಕೋಟಿ ಜನರು ಭಾರತಕ್ಕೆ ಸೇರಿದವರಾಗಿದ್ದಾರೆ ಎನ್ನುವುದನ್ನು ಜಾಗತಿಕ ವರದಿ ತಿಳಿಸುತ್ತದೆ. ಇಂತಹ ಭಾರತದಲ್ಲೂ ಬಿಲಿಯಾಧಿಪತಿಗಳು ಮಾತ್ರ ಯಾವ ಕೊರೋನ, ಲಾಕ್ಡೌನ್ಗಳ ಬೆದರಿಕೆಯಿಲ್ಲದೆ ಬೆಳೆಯುತ್ತಲೇ ಇದ್ದಾರೆ. ಒಂದೆಡೆ ಬಡವರು ಇನ್ನಷ್ಟು ಬಡವರಾಗುತ್ತಿದ್ದರೆ, ಅತಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ ಎನ್ನುವ ಅಂಶವನ್ನು ಆಕ್ಸ್ಫಾಮ್ ವರದಿ ಹೇಳಿದೆ. 70 ಕೋಟಿ ಭಾರತೀಯರ ಒಟ್ಟು ಸಂಪತ್ತು ಈ ದೇಶದ ಕೇವಲ 21 ಮಂದಿಯ ಕೈಯಲ್ಲಿದೆ ಎನ್ನುವುದೇ ಇಲ್ಲಿನ ಆರ್ಥಿಕ ಅಸಮತೋಲನದ ಅಗಾಧತೆಯನ್ನು ತಿಳಿಸುತ್ತದೆ. ಕೊರೋನ ಅವಧಿಯಲ್ಲಿ ಈ ದೇಶದ ಬಡವರು, ಮಧ್ಯಮ, ಮೇಲ್ಮಧ್ಯಮ ವರ್ಗದ ಜನರ ಸಂಪತ್ತು ನೇರವಾಗಿ ಬಿಲಿಯಾಧೀಶರಿಗೆ ವರ್ಗಾವಣೆಯಾಗಿದೆ. ಆದುದರಿಂದಲೇ ಸಣ್ಣ ಪುಟ್ಟ ಉದ್ಯಮಿಗಳು ಆತ್ಮಹತ್ಯೆಯ ಹಾದಿಯಲ್ಲಿದ್ದರೆ, ಈ ದೇಶದ ಅಂಬಾನಿ, ಅದಾನಿಗಳು ವಿಶ್ವದ ಮೊದಲ ಸಾಲಿನ ಶ್ರೀಮಂತರ ಪಟ್ಟಿಯಲ್ಲಿ ಕಂಗೊಳಿಸುತ್ತಿದ್ದಾರೆ. ದೇಶ ಆರ್ಥಿಕವಾಗಿ ನೆಲಕಚ್ಚಿ ಕೂತಿದ್ದರೆ, ಅಂಬಾನಿ, ಅದಾನಿಗಳು ವಿಶ್ವದ ಅತಿ ಶ್ರೀಮಂತರ ಸಾಲಿನಲ್ಲಿ ಏರಿ ಕೂತಿದ್ದಾರೆ.
ಇಂದಿಗೂ ಬಹುದೊಡ್ಡ ತಪ್ಪು ಕಲ್ಪನೆ ಭಾರತೀಯರಲ್ಲಿದೆ. ಈ ದೇಶದಲ್ಲಿ ಬೃಹತ್ ಉದ್ಯಮಿಗಳು ಅತಿ ಹೆಚ್ಚು ತೆರಿಗೆಗಳನ್ನು ಪಾವತಿಸುತ್ತಿದ್ದು, ದೇಶದ ಆರ್ಥಿಕತೆ ಉಳಿದಿರುವುದೇ ಅವರಿಂದ ಎನ್ನುವುದು. ಆದರೆ ಆಕ್ಸ್ಫಾಮ್ ವರದಿ ಬೇರೆಯೇ ಹೇಳುತ್ತದೆ. ‘‘ಶ್ರೀಮಂತರಿಗೆ ಹೋಲಿಸಿದರೆ ದೇಶದ ಒಟ್ಟು ಬಡಜನಸಂಖ್ಯೆ ಹೆಚ್ಚು ತೆರಿಗೆಗಳನ್ನು ಪಾವತಿಸುತ್ತಿವೆ. ಅಗತ್ಯ ವಸ್ತುಗಳು ಮತ್ತು ಸೇವೆಗಳಿಗಾಗಿ ಅಧಿಕ ಹಣವನ್ನು ಖರ್ಚು ಮಾಡುತ್ತಿವೆ. ಅಷ್ಟೇ ಅಲ್ಲ, ಕೇಂದ್ರ ಸರಕಾರವು ಬಡವರಿಗೆ ಹಾಗೂ ಮಧ್ಯಮ ವರ್ಗಕ್ಕೆ ವಿಧಿಸುವ ಒಟ್ಟು ತೆರಿಗೆಯು ಶ್ರೀಮಂತರಿಗೆ ವಿಧಿಸಲಾಗುವ ಒಟ್ಟು ತೆರಿಗೆಗಿಂ ತ ಅಧಿಕವಾಗಿದೆ. 2021-22ರ ಸಾಲಿನಲ್ಲಿ ಸರಕು ಹಾಗೂ ಸೇವಾ ತೆರಿಗೆಯಿಂದ ಸಂಗ್ರಹವಾಗುವ ಒಟ್ಟು 14.83 ಲಕ್ಷ ಕೋಟಿ ರೂ. ಶೇ. 64ರಷ್ಟು ತಳಸ್ತರದಲ್ಲಿರುವ ಶೇ. 50ರಷ್ಟು ಜನಸಂಖ್ಯೆಯಿಂದ ಬರುತ್ತದೆ. ಇದೇ ಸಂದರ್ಭದಲ್ಲಿ ಅತಿ ಶ್ರೀಮಂತರಿಗೆ ಸರಕಾರ ಬೃಹತ್ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ಬೃಹತ್ ಕಾರ್ಪೊರೇಟ್ ಕಂಪೆನಿಗಳು ಬಳಸುತ್ತಿರುವ ಭಾರತದ ಸಂಪನ್ಮೂಲಕ್ಕೆ ಹೋಲಿಸಿದರೆ, ಅದು ಈ ದೇಶದ ಆರ್ಥಿಕತೆಗೆ ಪ್ರತಿಯಾಗಿ ನೀಡುತ್ತಿರುವುದು ತೀರಾ ಕಡಿಮೆ. ಅದು ತನ್ನದಾಗಿಸಿಕೊಂಡಿರುವ ಸಂಪತ್ತನ್ನು ಪ್ರತಿಯಾಗಿ ಹಂಚುವ ಉದಾರ ಮನಸ್ಸನ್ನು ಹೊಂದಿದ್ದರೆ, ಈ ದೇಶ ಬಡದೇಶವಾಗಿ ಹಿಂದಕ್ಕೆ ಚಲಿಸುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.
ಕಳೆದ ಕೊರೋನ ಸಂದರ್ಭದಲ್ಲಿ ಎಲ್ಲ ಅಂಗಡಿಗಳು ಬಾಗಿಲು ಹಾಕಿದ್ದರೂ, ಲಸಿಕೆಯ ಅಂಗಡಿ ಮಾತ್ರ ಭರ್ಜರಿ ವ್ಯಾಪಾರ ಮಾಡುತ್ತಿತ್ತು. ಭಾರತ ಅವಸರವಸರದಲ್ಲಿ ‘ಸ್ವದೇಶಿ ಲಸಿಕೆ’ಯನ್ನು ಘೋಷಿಸಿ ವಿಶ್ವಕ್ಕೆ ದೊಡ್ಡಣ್ಣನಾಗುವ ಪ್ರಯತ್ನ ನಡೆಸಿತು. ದೇಶದ ಜನರ ಮೇಲೆ ಈ ಲಸಿಕೆಯನ್ನು ಲಾಕ್ಡೌನ್ನಂತಹ ಬ್ಲಾಕ್ಮೇಲ್ಗಳ ಮೂಲಕ ಹೇರಲಾಯಿತು. ಜನರು ‘ಉದ್ಯೋಗ ಮಾಡಲು ಅವಕಾಶ ನೀಡಿ, ಲಾಕ್ಡೌನ್ ಹಿಂದಕ್ಕೆ ತೆಗೆಯಿರಿ’ ಎಂದು ಆರ್ತನಾದ ಮಾಡುತ್ತಿದ್ದರೆ, ಅದು ಸರಕಾರದ ಕಿವಿಗೆ ‘‘ಲಸಿಕೆ ಕೊಡಿ, ಲಸಿಕೆ ಕೊಡಿ’’ ಎಂದು ಕೇಳಿಸುತ್ತಿತ್ತು. ಕೋಟ್ಯಂತರ ರೂಪಾಯಿಯನ್ನು ಈ ಲಸಿಕೆಗಾಗಿ ಸರಕಾರ ಸುರಿಯಿತು. ಆರಂಭದಲ್ಲಿ ಇದರ ಹಣವನ್ನೂ ರಾಜ್ಯ ಸರಕಾರದಿಂದ ನೇರವಾಗಿ ವಸೂಲಿ ಮಾಡುವ ಪ್ರಯತ್ನ ನಡೆಸಿತಾದರೂ, ಅದಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆಯೇ ನಿರ್ಧಾರದಿಂದ ಹಿಂದೆ ಸರಿಯಿತು. ಇಂದಿಗೂ ಈ ಲಸಿಕೆಯ ವಿಶ್ವಾಸಾರ್ಹತೆಯ ಕುರಿತಂತೆ ಜನರು ಪೂರ್ಣ ಪ್ರಮಾಣದ ನಂಬಿಕೆಯನ್ನು ಹೊಂದಿಲ್ಲ. ಇಷ್ಟಾದರೂ ಸರಕಾರದ ಒತ್ತಡಕ್ಕೆ ಮಣಿದು ಒಂದಿಷ್ಟು ಜನರು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಬಹುತೇಕ ಜನರು ಲಸಿಕೆ ಪಡೆದ ಪ್ರಮಾಣ ಪತ್ರವನ್ನಷ್ಟೇ ಪಡೆದುಕೊಂಡಿದ್ದಾರೆ. ಲಸಿಕೆಯ ಹೆಸರಿನಲ್ಲಿ ದೇಶದೊಳಗೆ ಬಹುದೊಡ್ಡ ಅಕ್ರಮ ನಡೆದಿರುವ ಬಗ್ಗೆ ಹಲವರು ಧ್ವನಿಯೆತ್ತಿದ್ದಾರೆ. ಲಸಿಕೆಯಿಂದ ಭಾರತದ ಕಾರ್ಪೊರೇಟ್ ಕಂಪೆನಿಗಳೂ ಸೇರಿದಂತೆ ವಿಶ್ವದ ಬಿಲಿಯಾಧೀಶರು ತಮ್ಮ ಸಂಪತ್ತನ್ನು ಇನ್ನಷ್ಟು ಹೆಚ್ಚಿ ಸಿಕೊಂಡರು. ಈಗಲೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಲೇ, ಮಧ್ಯಮ, ಮೇಲ್ಮಧ್ಯಮ ವರ್ಗದ ಜನರು ಕೊರೋನ ಕಾಲದಲ್ಲಿ ಬಡತನಕ್ಕೆ ತಳ್ಳಲ್ಪಟ್ಟರೆ, ಬಿಲಿಯಾಧೀಶರು ಇನ್ನಷ್ಟು ಶ್ರೀಮಂತರಾದರು. ಕೊರೋನ ಕಾಲದಲ್ಲಿ ಬಡವರಿಗೆ ಸರಕಾರ ಸವಲತ್ತನ್ನು ಕೊಟ್ಟಂತೆ ನಟಿಸಿದರೆ, ಸರಕಾರದ ಖಜಾನೆಯನ್ನು ಅಕ್ಷರಶಃ ದೋಚಿರುವುದು ಕಾರ್ಪೊರೇಟ್ ಕಂಪೆನಿಗಳು. ಆ ವಾಸ್ತವವನ್ನು ಆಕ್ಸ್ಫಾಮ್ ವರದಿ ಜಗತ್ತಿನ ಮುಂದೆ ತೆರೆದಿಟ್ಟಿದೆ.
ದೇಶದಲ್ಲಿ ಬಡತನ ಹೆಚ್ಚುತ್ತಿರುವುದಕ್ಕೆ ಸರಕಾರ ಈಗಲೂ ಹೆಚ್ಚುತ್ತಿರುವ ಜನಸಂಖ್ಯೆಯ ಕಡೆಗೆ ಕೈ ತೋರಿಸುತ್ತಿದೆ. ದೇಶದ ಸಂಪನ್ಮೂಲದ ಹಂಚಿಕೆಯಲ್ಲಿ ಆಗಿರುವ ಅಸಮತೋಲನದ ಬಗ್ಗೆ ಕುರುಡಾಗಿದೆ. ಬಿಲಿಯಾಧೀಶರ ಕೈಯಲ್ಲಿ ಶೇಖರಣೆಯಾಗಿರುವ ಸಂಪತ್ತನ್ನು ಹಂಚಿಕೆ ಮಾಡುವುದೇ ದೇಶದ ಹಸಿವು, ಅಪೌಷ್ಟಿಕತೆಯನ್ನು ನಿವಾರಿಸುವುದಕ್ಕಿರುವ ದಾರಿಯಾಗಿದೆ. ಆಕ್ಸ್ಫಾಮ್ ಕೂಡ ಇದೇ ಸಲಹೆಯನ್ನು ನೀಡಿದೆ. ವಿಶ್ವದ ಎಲ್ಲ ಶತಕೋಟ್ಯಧಿಪತಿಗಳ ಮೇಲೆ ಶೇ. 5ರಷ್ಟು ವೈಯಕ್ತಿಕ ಮತ್ತು ಬಂಡವಾಳ ತೆರಿಗೆ ವಿಧಿಸಿದ್ದೇ ಆದರೆ, ಈ ಮೊತ್ತದಿಂದ ಎರಡು ಶತಕೋಟಿ ಜನರನ್ನು ಬಡತನದಿಂದ ಮೇಲೆತ್ತಬಹುದು ಎಂದು ವರದಿ ತಿಳಿಸಿದೆ. ಜಗತ್ತಿನಲ್ಲಿ ಅತಿ ಶ್ರೀಮಂತರು ಮತ್ತು ಉಳಿದವರ ನಡುವಿನ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವುದಕ್ಕೆ ಇರುವ ಮಾರ್ಗವಿದು. ಆದರೆ ಈ ದೇಶದ ಸರಕಾರದ ನಿಯಂತ್ರಣವೇ ಈ ಬಿಲಿಯಾಧೀಶರ ಕೈಯಲ್ಲಿರುವಾಗ, ಅವರ ಮೇಲೆ ತೆರಿಗೆ ವಿಧಿಸುವುದು ಸಾಧ್ಯವಾಗುವ ಮಾತೆ?
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.