ವಿಸ್ಮೃತಿ ಕಾಲದ ಬಜೆಟ್
-

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸೂತಕದ ಮನೆಯಲ್ಲಿ ಕುಳಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟನ್ನು ಮಂಡಿಸಿದ್ದಾರೆ. ಸರಕಾರದ ಮುಖಬೆಲೆಯೆಂದೇ ವ್ಯಾಖ್ಯಾನಿಸಲ್ಪಡುತ್ತಿದ್ದ ಅದಾನಿ ಗುಂಪುಗಳ ನೆಲಕಚ್ಚುತ್ತಿರುವ ಶೇರುಗಳು ಭಾರತದ ಆರ್ಥಿಕತೆಯ ಭವಿಷ್ಯದ ಕತೆಯನ್ನು ಹೇಳುತ್ತಿವೆ. ಮೋದಿ ನೇತೃತ್ವದ ಸರಕಾರ ಹಂತ ಹಂತವಾಗಿ ಈ ದೇಶದ ಸಾರ್ವಜನಿಕ ಸೊತ್ತುಗಳನ್ನು ಅದಾನಿ, ಅಂಬಾನಿಗಳಿಗೆ ಒಪ್ಪಿಸುತ್ತಾ, ದೇಶದ ಆರ್ಥಿಕತೆಯನ್ನು ಮೇಲೆತ್ತುತ್ತಿದ್ದೇವೆ ಎಂಬ ಭ್ರಮೆಯನ್ನು ಜನರೊಳಗೆ ಬಿತ್ತುತ್ತಿರುವ ಹೊತ್ತಿನಲ್ಲೇ, ಆ ಭ್ರಮೆಯ ಬಲೂನು ಒಡೆದಿದೆ. ಭಾರತ ವಿಶ್ವದ ಗಮನ ಸೆಳೆಯುತ್ತಿದೆಯೇನೋ ನಿಜ. ಆದರೆ ಇಂದು ವಿಶ್ವದಲ್ಲಿ ಭಾರತ ಸುದ್ದಿಯಲ್ಲಿರುವುದು ಬಿಬಿಸಿ ಸಾಕ್ಷ ಚಿತ್ರ ಮತ್ತು ಅದಾನಿಯ ಆರ್ಥಿಕ ಮೋಸಗಳಿಗಾಗಿ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದ ಹೊತ್ತಿನಲ್ಲೇ ಇತ್ತ, ಅದಾನಿ ಅವರು ಒತ್ತಡಗಳಿಗೆ ಮಣಿದು ತನ್ನ ಹೆಚ್ಚುವರಿ ಶೇರುಗಳ ಮಾರಾಟದಿಂದ ಹಿಂದೆ ಸರಿದಿದ್ದಾರೆ. ಹೂಡಿಕೆದಾರರಿಗೆ ಹಣ ವಾಪಸ್ ನೀಡುವ ಭರವಸೆಯನ್ನು ನೀಡಿದ್ದಾರೆ. ಆದರೂ ಆದ ಹಾನಿಯನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಇದು ಹೀಗೆ ಮುಂದುವರಿದರೆ, ಭಾರತದ ಬ್ಯಾಂಕುಗಳ ಮೇಲೆ, ಎಲ್ಐಸಿಯಂತಹ ಸಂಸ್ಥೆಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಅದಾನಿ, ಅಂಬಾನಿಗಳನ್ನೇ ಭಾರತದ ಆರ್ಥಿಕತೆಯ ಅಧಿಕೃತ ಪ್ರತಿನಿಧಿಯಾಗಿ ಬಿಂಬಿಸುತ್ತಿರುವ ಸರಕಾರದ ಪಾಲಿಗೆ ಇದು ಸೂತಕದ ದಿನವೇ ಸರಿ. ಆದುದರಿಂದಲೇ, ಸೀತಾರಾಮನ್ ಬಜೆಟ್ನಲ್ಲಿ ಎಂದಿನ ಸಂಭ್ರಮಗಳು ಇರಲಿಲ್ಲ. ತನ್ನ ಬಜೆಟನ್ನು ಸಮರ್ಥಿಸಿಕೊಳ್ಳುವುದಕ್ಕೆ ಸ್ವತಃ ವಿತ್ತ ಸಚಿವರಿಗೇ ಕಷ್ಟವಾಗಿದೆ. ಮಾಧ್ಯಮಗಳ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡದೆ ನುಣುಚಿಕೊಂಡಿದ್ದಾರೆ. ಬಜೆಟ್ ಕುರಿತಂತೆ ಒಂದಿಷ್ಟು ಸತ್ಯವನ್ನು ಹೇಳಿದವರು ಪ್ರಧಾನಿ ಮೋದಿ ಮಾತ್ರ. ಅವರು ಸ್ಪಷ್ಟ ಮಾತಿನಲ್ಲಿ 'ಇದು ಅಮೃತ ಕಾಲದ ಬಜೆಟ್' ಎಂದು ದೇಶದ ಮೂಗಿಗೆ ಬೆಣ್ಣೆ ಸವರಿದ್ದಾರೆ. ಅಮೃತ ಕಾಲ ಮುಂದಿನ ಐದು ಹತ್ತು ವರ್ಷಗಳಲ್ಲಿ ಬರುವಂತಹದ್ದಲ್ಲ. ಮುಂದಿನ 25 ವರ್ಷಗಳ ಸುದೀರ್ಘ ಕಾಲವನ್ನು ಅವರು ಅಮೃತ ಕಾಲ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಐದು ಅಥವಾ ಹತ್ತು ವರ್ಷಗಳಲ್ಲಿ ದೇಶಕ್ಕೆ ಅಚ್ಛೇದಿನ್ ಆಗಮನವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜನರು, ಇನ್ನೂ 25 ವರ್ಷ ಕಾಯಬೇಕು. ಸದ್ಯಕ್ಕೆ ಬಜೆಟ್ ಕೂಡ ತಕ್ಷಣದ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ಈ ಬಜೆಟ್ನ ಫಲವನ್ನು ದೇಶ ಅನುಭವಿಸಬೇಕಾದರೆ 25 ವರ್ಷಗಳನ್ನು ನಾವು ಮೋದಿ ಸರಕಾರಕ್ಕೆ ನೀಡಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಈ ದೇಶದ ದುರ್ಬಲವರ್ಗವನ್ನು ಬಜೆಟ್ ಸಂಪೂರ್ಣವಾಗಿ ಮರೆತಿದೆ.
ಅಮೃತ ಕಾಲದಲ್ಲಿ ಈ ದುರ್ಬಲ ವರ್ಗಕ್ಕೆ ಪ್ರವೇಶ ಇಲ್ಲವೆ? ಎನ್ನುವ ಪ್ರಶ್ನೆಯನ್ನು ಶ್ರೀಸಾಮಾನ್ಯರು ಕೇಳುವಂತಾಗಿದೆ. ಬಜೆಟ್ನಲ್ಲಿ 'ಉದ್ಯೋಗ' ಎನ್ನುವ ಪದದ ಪ್ರಸ್ತಾಪವೇ ಇಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆ, ಬಡತನಕ್ಕೆ ಸಣ್ಣದೊಂದು ತಡೆ ಹಾಕಿದ 'ನರೇಗಾ ಯೋಜನೆ'ಗೆ ಭಾರೀ ಕಡಿಮೆ ಹಣವನ್ನು ಹಂಚಿಕೆ ಮಾಡಿದೆ. ನರೇಗಾ ಯೋಜನೆಯನ್ನು ಹಂತ ಹಂತವಾಗಿ ಸರಕಾರ ಇಲ್ಲವಾಗಿಸಲು ಹೊರಟಿದೆಯೇ ಎನ್ನುವ ಅನುಮಾನ ಜನರನ್ನು ಕಾಡತೊಡಗಿದೆ. ಯುಪಿಎ ಅಧಿಕಾರದಲ್ಲಿರುವಾಗ ನರೇಗಾ ಯೋಜನೆಯನ್ನು ಟೀಕಿಸಿದ್ದ ಸರಕಾರ, ತಾನು ಅಧಿಕಾರಕ್ಕೆ ಬಂದಾಗ ಆರಂಭದ ಹಂತದಲ್ಲಿ ಈ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ಕೊಂಡಾಡಿ ಪ್ರೋತ್ಸಾಹಿಸಿತ್ತು. ಕೊರೋನ ಲಾಕ್ಡೌನ್ ಕಾಲದಲ್ಲಿ ನರೇಗಾ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗವನ್ನು ತಡೆಯಲು ದೊಡ್ಡ ಮಟ್ಟದಲ್ಲಿ ನೆರವಾಗಿತ್ತು. ಲಾಕ್ಡೌನ್ನಿಂದ ಉದ್ಯೋಗಗಳನ್ನು ಕಳೆದುಕೊಂಡು ಮತ್ತೆ ಗ್ರಾಮಕ್ಕೆ ಮರಳಿದ ಸಾವಿರಾರು ಕಾರ್ಮಿಕರನ್ನು ಪೊರೆದಿದ್ದು ನರೇಗಾ ಯೋಜನೆ. ಆದರೆ ಸರಕಾರ ಇದೀಗ ನರೇಗಾ ಯೋಜನೆಯಲ್ಲಿ ಉದ್ಯೋಗ ಕೇಳುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಹೇಳಿ ಅದಕ್ಕೆ ನೀಡಬೇಕಾದ ಅನುದಾನದಲ್ಲಿ ಇಳಿಕೆ ಮಾಡಲು ಮುಂದಾಗಿದೆ.
ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡುತ್ತಾ ವಿತ್ತ ಸಚಿವರು ''ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಗೆ ಉದ್ಯೋಗಿಗಳ ಬೇಡಿಕೆ ಇಳಿಮುಖವಾಗುತ್ತಿದೆ'' ಎಂದು ಹೇಳಿದ್ದರು. ಆದರೆ ಸರಕಾರದ ನರೇಗಾ ವೆಬ್ಸೈಟ್ನಲ್ಲಿ ತೋರಿಸುತ್ತಿರುವ ಅಂಕಿಅಂಶಗಳು ಬೇಡಿಕೆ ಹೆಚ್ಚುತ್ತಿರುವುದನ್ನು ಬಹಿರಂಗ ಪಡಿಸಿವೆ. 2018ರಲ್ಲಿ 9.11 ಕೋಟಿ ಜನರು ಉದ್ಯೋಗಗಳಿಗೆ ಬೇಡಿಕೆ ಸಲ್ಲಿಸಿದ್ದರೆ, 2019-20ರಲ್ಲಿ 9.33 ಕೋಟಿ ಜನರಿಗೆ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಸರಕಾರ ನರೇಗಾ ಯೋಜನೆಗಾಗಿ ನೀಡಬೇಕಾಗಿರುವ ಸುಮಾರು 8,305 ಕೋಟಿ ರೂ.ಯನ್ನು ಬಾಕಿಯಿರಿಸಿಕೊಂಡಿದೆ. ದುಡಿದವರಿಗೆ ಕೂಲಿ ನೀಡುವಲ್ಲಿ ಸರಕಾರ ವಿಫಲವಾಗುತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿ ಹಾಕಿ, ಜನರು ಉದ್ಯೋಗಗಳಿಗೆ ಆಸಕ್ತಿ ತೋರಿಸುತ್ತಿಲ್ಲ ಎಂದು ಸರಕಾರ ಮುಖ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಇದೀಗ ಈ ಬಾರಿಯ ಬಜೆಟ್ನಲ್ಲಿ ಅನುದಾನವನ್ನು 60,000 ಕೋಟಿ ರೂ.ಗಳಿಗೆ ಗಣನೀಯವಾಗಿ ತಗ್ಗಿಸಲಾಗಿದೆ. ಭವಿಷ್ಯದಲ್ಲಿ ನರೇಗಾ ಯೋಜನೆ ಇನ್ನಷ್ಟು ಅಧ್ವಾನಗೊಳ್ಳಲಿದೆ. ತಳಸ್ತರದಲ್ಲಿ ನಿರುದ್ಯೋಗ ಹೆಚ್ಚುತ್ತಿದ್ದಂತೆಯೇ, ಜನರಲ್ಲಿ ಅಪೌಷ್ಟಿಕತೆ, ಬಡತನ ಕೂಡ ಹೆಚ್ಚಲಿದೆ. ಇಂತಹ ಸಂದರ್ಭದಲ್ಲಿ ಪಡಿತರ ಹಂಚುವಿಕೆಗೆ ಸರಕಾರ ಆದ್ಯತೆಯನ್ನು ನೀಡಬೇಕು. ಆದರೆ ಆಹಾರಕ್ಕೆ ನೀಡುವ ಸಬ್ಸಿಡಿ ಪ್ರಮಾಣ 90,000 ಕೋಟಿಯಷ್ಟು ಇಳಿಮುಖವಾಗಿದೆ. ರಸಗೊಬ್ಬರಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನೂ ಕಡಿತಗೊಳಿಸಲಾಗಿದೆ. ಪೋಷಣ್ ಅಭಿಯಾನದ ಅನುದಾನದಲ್ಲಿ ಸುಮಾರು ಒಂದು ಸಾವಿರ ಕೋಟಿಯಷ್ಟು ಕಡಿತವಾಗಿದೆ. ಲಾಕ್ಡೌನ್ ಬಳಿಕ ದೇಶದಲ್ಲಿ ಸಣ್ಣ ಪುಟ್ಟ ಕೈಗಾರಿಕೆಗಳು ತೀವ್ರ ಅತಂತ್ರದಲ್ಲಿವೆ.
ಮೋದಿಯವರೇ ಹೇಳುವಂತೆ ದೂರದೃಷ್ಟಿಯ ಬಜೆಟ್ ಇದಾಗಿದ್ದರೆ ಕೈಗಾರಿಕಾ ಅಭಿವೃದ್ಧಿಗೆ ಹಣವನ್ನು ಹೆಚ್ಚಿಸಬೇಕಾಗಿತ್ತು. ಆದರೆ 53,000 ಕೋಟಿ ಇದ್ದ ಅನುದಾನ 48,000 ಕೋಟಿ ರೂ.ಗೆ ಇಳಿಕೆಯಾಗಿದೆ. ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯಕ್ಕೆ ನೀಡುತ್ತಿರುವ ಅನುದಾನದಲ್ಲಿ ಭಾರೀ ಪ್ರಮಾಣದ ಅಂದರೆ, ಶೇ. 38ರಷ್ಟು ಇಳಿಕೆಯಾಗಿದೆ. ಮೋದಿಯ ಭವಿಷ್ಯದ ಅಮೃತ ಕಾಲಕ್ಕೆ ಯಾರಿಗೆಲ್ಲ ಪ್ರವೇಶವಿಲ್ಲ ಎನ್ನುವುದನ್ನು ಪರೋಕ್ಷವಾಗಿ ಈ ಬಜೆಟ್ನಲ್ಲಿ ಘೋಷಿಸಲಾಗಿದೆ. ರೈತರು, ತಳಸ್ತರದ ಕಾರ್ಮಿಕರು, ಅಲ್ಪಸಂಖ್ಯಾತರು, ದಲಿತರು, ಮಧ್ಯಮ ವರ್ಗ ಸಂಪೂರ್ಣ ಬಜೆಟ್ನಲ್ಲಿ ನಿರ್ಲಕ್ಷಿಸಲ್ಪಟ್ಟಿದ್ದಾರೆ. ಉದ್ಯೋಗ ಸೃಷ್ಟಿಗೆ ಯಾವುದೇ ರೀತಿಯ ಕೊಡುಗೆಯನ್ನು ನೀಡುವ ಉದ್ದೇಶ ಬಜೆಟ್ಗೆ ಇದ್ದಂತಿಲ್ಲ. ಚುನಾವಣೆಯ ಹತ್ತಿರದಲ್ಲಿರುವಾಗ, ತನ್ನ ಕೊನೆಯ ಬಜೆಟನ್ನು ಇಷ್ಟೊಂದು ಅಧ್ವಾನವಾಗಿ ಸರಕಾರ ಮಂಡಿಸಬೇಕಾಗಿದ್ದರೆ ಅದಕ್ಕೆ ಜನರ ಮೂರ್ಖತನದ ಮೇಲೆ ಭಾರೀ ಭರವಸೆ ಇದ್ದಂತಿದೆ. ಬಜೆಟ್ನ ಅಂಕಿಸಂಕಿಗಳ ಮೂಲಕ ಜನರನ್ನು ದಾರಿ ತಪ್ಪಿಸಬಹುದು ಎಂದು ಅದು ಭಾವಿಸಿದಂತಿದೆ ಅಥವಾ ರಾಮಜನ್ಮಭೂಮಿ, ಕಾಶ್ಮೀರ, ಹಿಂದುತ್ವದ ಹೆಸರಿನಲ್ಲಿ ಚುನಾವಣೆಯನ್ನು ಸುಲಭವಾಗಿ ಗೆಲ್ಲುವುದು ಸಾಧ್ಯವಿರುವಾಗ ಅನಗತ್ಯವಾಗಿ ಬಡವರು, ಆರೋಗ್ಯ, ಶಿಕ್ಷಣ, ಕೃಷಿ ಮೊದಲಾದ ವಲಯಗಳಿಗೆ ಹಣವನ್ನು 'ದುರ್ಬಳಕೆ' ಮಾಡುವುದು ಯಾಕೆ ಎಂದು ಯೋಚಿಸಿರಬಹುದು. ಸರಕಾರದ ಬಜೆಟ್ಗೆ ಜನರ ಮೂರ್ಖತನವೇ ಪ್ರಮುಖ ಸಂಪನ್ಮೂಲವಾಗಿದೆ. ಇದನ್ನು ವಿಸ್ಮತಿ ಕಾಲದ ಬಜೆಟ್ ಎಂದು ಕರೆಯುವುದು ಹೆಚ್ಚು ಅರ್ಥಪೂರ್ಣ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.