ಚುನಾವಣೆ ಗೆಲ್ಲಲು ಅಗ್ಗದ ಪ್ರಹಸನ
-

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕರ್ನಾಟಕ ವಿಧಾನ ಸಭಾ ಚುನಾವಣೆ ಇನ್ನೆರಡು ತಿಂಗಳಲ್ಲಿ ನಡೆದು ಹೊಸ ಸರಕಾರ ಅಸ್ತಿತ್ವಕ್ಕೆ ಬರುವುದೋ ಇಲ್ಲ ಹಿಂದಿನಂತೆ ಯಾರಿಗೂ ನಿಚ್ಚಳ ಬಹುಮತ ಸಿಗದ ಅತಂತ್ರ ಸ್ಥಿತಿ ನಿರ್ಮಾಣವಾಗುವುದೋ ಕಾದು ನೋಡಬೇಕಾಗಿದೆ. ಆದರೆ ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲುವು ಸಾಧಿಸಬೇಕೆಂದು ಹಠ ತೊಟ್ಟಿರುವ ಬಿಜೆಪಿ ಅದರಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಹಾಗೂ ಅವರ ಹಿಂದಿರುವ ನಾಗಪುರದ ಸೂತ್ರಧಾರರು ತಮ್ಮ ಗುರಿ ಸಾಧನೆಗಾಗಿ ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ನೆರೆ ಬಂದಾಗ, ಬರ ಬಂದಾಗ ಕರ್ನಾಟಕದತ್ತ ಕಣ್ಣೆತ್ತಿ ನೋಡದವರು ಈಗ ಪ್ರತಿವಾರ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅಪೂರ್ಣ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಾ ಜನರ ಒಲವು ಗಳಿಸಲು ಯತ್ನಿಸುತ್ತಾರೆ.
ತಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಬೇಕೆಂಬ ಆಸೆ ಎಲ್ಲ ಪಕ್ಷಗಳಿಗಿರುವಂತೆ ಬಿಜೆಪಿಗೂ ಇರುವುದು ಸಹಜ. ಕೇಂದ್ರ ಮತ್ತು ರಾಜ್ಯದಲ್ಲಿ ಅವರದೇ ಸರಕಾರವಿದೆ. ತಮ್ಮ ಸರಕಾರದ ಸಾಧನೆಗಳನ್ನು ಜನತೆಯ ಮುಂದಿಟ್ಟು,ಮುಂದೆ ಅಧಿಕಾರಕ್ಕೆ ಬಂದರೆ ಕೈಗೊಳ್ಳಲಿರುವ ಜನೋಪಯೋಗಿ ಯೋಜನೆಗಳ ಬಗ್ಗೆ ಜನರಿಗೆ ವಿವರಿಸಿ, ತಮ್ಮ ಪ್ರಣಾಳಿಕೆಯನ್ನು ನೀಡಿದರೆ ಯಾರ ಅಭ್ಯಂತರವೂ ಇಲ್ಲ. ಆದರೆ ಇವರು ಮಾಡುವ ಭಾಷಣಗಳಲ್ಲಿ ತಮ್ಮ ಸರಕಾರದ ಸಾಧನೆಗಳನ್ನು ಹೇಳುವುದನ್ನು ಕೈ ಬಿಟ್ಟು ಪ್ರತಿಪಕ್ಷಗಳನ್ನು ಅದರಲ್ಲೂ ಮುಖ್ಯ ವಾಗಿ ಕಾಂಗ್ರೆಸನ್ನು ಟೀಕಿಸುವುದೇ ಇವರ ಚುನಾವಣಾ ಪ್ರಚಾರದ ಪ್ರಧಾನ ಅಂಶವಾಗಿದೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರದಲ್ಲಿ ಇವರೇ ಅಧಿಕಾರದಲ್ಲಿ ಇದ್ದಾರೆ. ಕಾಂಗ್ರೆಸ್ ಸೇರಿದಂತೆ ಉಳಿದ ಪ್ರತಿಪಕ್ಷಗಳು ನಿರಂತರವಾಗಿ ಸೋಲುತ್ತಾ, ಇವರ ಸಿಬಿಐ, ಐಟಿ ದಾಳಿಗಳನ್ನು ಎದುರಿಸುತ್ತಾ ಸುಸ್ತಾಗಿವೆ. ಅಧಿಕಾರದಲ್ಲಿ ಇಲ್ಲದ ಪಕ್ಷಗಳ ಬಗ್ಗೆ ನೀವು ಹತ್ತು ವರ್ಷಗಳ ಹಿಂದೆ ಅಧಿಕಾರದಲ್ಲಿದ್ದಾಗ ಹಾಗೆ ಮಾಡಿದಿರಿ, ಹೀಗೆ ಮಾಡಿದಿರಿ ಎಂದು ಅರಚಾಡುತ್ತ ಜನರನ್ನು ಮತ್ತೆ ತಮ್ಮ ಖೆಡ್ಡಾಕ್ಕೆ ಕೆಡವಲು ಇವರು ನಡೆಸಿರುವ ಮಸಲತ್ತು ಅಸಹ್ಯಕರವಾಗಿ ಕಾಣುತ್ತಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತೀ ಬಿಲ್ ಮಂಜೂರಾಗಲು ಶೇ. ೪೦ರಷ್ಟು ಕಮಿಷನ್ ಕೊಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಹಲವಾರು ತಿಂಗಳುಗಳು ಗತಿಸಿದವು. ಆನಂತರ ಪಿಎಸ್ಸೈ ನೇಮಕಾತಿ ಹಗರಣ, ತೀರ ಈಚೆಗೆ ಮೋದಿಯವರು ಬರುವ ಮುನ್ನ ಬಿಜೆಪಿ ಶಾಸಕ ಲೋಕಾಯುಕ್ತರ ಬಲೆಗೆ ಸಿಕ್ಕ ಹಗರಣ, ಅವರು ನಾಪತ್ತೆಯಾಗಿ ದಿಢೀರ್ ಪ್ರತ್ಯಕ್ಷರಾಗಿದ್ದು ಇವೆಲ್ಲ ವಿಷಯಗಳ ಜನರಲ್ಲಿ ಮೂಡಿರುವ ಸಂದೇಹವನ್ನು ಪ್ರಧಾನಿ ನಿವಾರಿಸಬಹುದಿತ್ತು. ಆರೋಪ ಸಾಬೀತು ಮಾಡುವಂತೆ ಸವಾಲು ಹಾಕಬಹುದಿತ್ತು. ಆದರೆ ಜನರ ನಿರೀಕ್ಷೆಯನ್ನು ಹುಸಿಗೊಳಿದ ಮೋದಿಯವರು ಪ್ರತಿಪಕ್ಷಗಳು ತನ್ನ ಸಾವನ್ನು ಬಯಸುತ್ತಿವೆ ಎಂದು ಚಿಲ್ಲರೆ ಗಿಮಿಕ್ ಮಾಡಿದರು. ಮಂಡ್ಯ ಮತ್ತು ಕರ್ನಾಟಕಕ್ಕೆ ಸಂಬಂಧವೇ ಇರದ ರಾಹುಲ್ ಗಾಂಧಿಯವರ ಭಾಷಣವನ್ನು ಲೇವಡಿ ಮಾಡಿ ಅನಗತ್ಯವಾಗಿ ಬಸವೇಶ್ವರರ ಹೆಸರನ್ನು ಎಳೆದು ತಂದರು. ಬಸವಣ್ಣನವರನ್ನು ಬಲಿ ತೆಗೆದುಕೊಂಡ ಸಿದ್ಧಾಂತ ಈಗ ರಾಜ್ಯ ಮತ್ತು ದೇಶದಲ್ಲಿ ವಿಜೃಂಭಿಸುತ್ತಿರುವಾಗ ಮೋದಿಯವರ ಮಾತು ಹತಾಶೆಯ ರೋದನದಂತೆ ಭಾಸವಾಯಿತು.
ಜನಸಾಮಾನ್ಯರ ಸಮಸ್ಯೆಗಳು ಮತ್ತು ನೋವು ಸಂಕಟಗಳಿಗೆ ಸ್ಪಂದಿಸದೇ ಚುನಾವಣೆ ಬಂದಾಗ ನಕಲಿ ವ್ಯಕ್ತಿಗಳಾದ ಉರಿ ಗೌಡ, ದೊಡ್ಡ ನಂಜೇಗೌಡರನ್ನು ಸೃಷ್ಟಿಸುತ್ತಾ, ಮುಸ್ಲಿಮ್ ದ್ವೇಷದ ದಳ್ಳುರಿಯಲ್ಲಿ ವೋಟಿನ ಬೆಳೆ ತೆಗೆಯುವ ರಾಷ್ಟ್ರ ಘಾತುಕ ಮಾರ್ಗವನ್ನು ಹಿಡಿದ ಬಿಜೆಪಿಯ ಅಧ್ಯಕ್ಷರು ಗ್ಯಾಸ್, ಬೆಲೆಏರಿಕೆ ಬಗ್ಗೆ ಮಾತಾಡದೇ ಲವ್ ಜಿಹಾದ್, ಮತಾಂತರದಂತಹ ವಿಷಯಗಳ ಬಗ್ಗೆ ಪ್ರಚಾರ ಮಾಡುವಂತೆ ತಮ್ಮ ಕಾರ್ಯಕರ್ತರಿಗೆ ಈಗಾಗಲೇ ಅಪ್ಪಣೆ ಕೊಡಿಸಿದ್ದಾರೆ. ಪ್ರಜೆಗಳನ್ನು ಕೋಮು ಆಧಾರದಲ್ಲಿ, ಜಾತಿ ಆಧಾರದಲ್ಲಿ ಒಡೆದು ಗೆಲುವಿನ ಬಾವುಟ ಹಾರಿಸಲು ಹೊರಟವರಿಗೆ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಪಶ್ಚಾತ್ತಾಪವೂ ಇಲ್ಲ
ಕರ್ನಾಟಕದ ಬಿಜೆಪಿ ಸರಕಾರ ಇತ್ತೀಚೆಗೆ ಎರಡು ಸಾವಿರಕ್ಕೂ ಹೆಚ್ಚು ರೌಡಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿತು. ಬಿಡುಗಡೆಯಾಗಿ ಬಂದ ಮತ್ತು ಹೊರಗಿರುವ ರೌಡಿಗಳಲ್ಲಿ ಬಹುತೇಕ ಮಂದಿ ಈಗ ಬಿಜೆಪಿ ಸೇರಿದ್ದಾರೆ. ಪ್ರಧಾನ ಮಂತ್ರಿ ಮೋದಿಯವರು ರವಿವಾರ ಮಂಡ್ಯಕ್ಕೆ ಬಂದಾಗ ಕುಖ್ಯಾತ ರೌಡಿಶೀಟರ್ ಆರೋಪ ಹೊತ್ತ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪಕ್ಕದಲ್ಲಿ ನಿಂತು ಪ್ರಧಾನಿ ಅವರನ್ನು ಸ್ವಾಗತಿಸಿದ್ದು, ಮೋದಿಯವರೂ ಆತನಿಗೆ ಕೈ ಮುಗಿದು ಮುಗುಳ್ನಗೆ ಬೀರಿದರು. ಈತ ನಾಗಮಂಗಲದ ಬಿಜೆಪಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಭಾರತದ ಪ್ರಧಾನಿಗೆ ಅತ್ಯಂತ ಭದ್ರವಾದ ಸುರಕ್ಷತಾ ವ್ಯವಸ್ಥೆ ಇರುತ್ತದೆ. ಮುಖ್ಯಮಂತ್ರಿ ಮತ್ತು ಪಕ್ಷದ ನಾಯಕರು ಕೂಡ ಅವರ ಹತ್ತಿರ ಹೋಗುವುದು ಸುಲಭವಲ್ಲ. ಹೀಗಿರುವಾಗ ರೌಡಿಶೀಟರ್ ಒಬ್ಬ ಅವರ ಎದುರಿಗೆ ಹೋಗಿ ನಿಲ್ಲಲು ಹೇಗೆ ಸಾಧ್ಯವಾಯಿತು? ಹೇಗಾದರೂ ಮಾಡಿ ಚುನಾವಣೆ ಗೆಲ್ಲುವ ಹತಾಶ ಪ್ರಯತ್ನದ ಭಾಗವಾಗಿ ‘ಚಾರಿತ್ರ್ಯವಂತರ ಪಕ್ಷ’ವೆಂದು ತನ್ನನ್ನು ತಾನು ಕರೆದುಕೊಳ್ಳುವ ಬಿಜೆಪಿ ರೌಡಿಗಳ ಮೊರೆ ಹೋಗಿದೆಯೇ, ಭಾರತದ ಪ್ರಧಾನಿ ತನ್ನ ಸ್ಥಾನದ ಘನತೆಯನ್ನು, ಗೌರವವನ್ನು ಬದಿಗಿಟ್ಟು ಕೆಳಗೆ ಇಳಿಯಬಹುದು. ಇದು ಆರೆಸ್ಸೆಸ್ ಆಶೀರ್ವಾದ ಇಲ್ಲದೆ ಹೇಗೆ ಸಾಧ್ಯವಾಗುತ್ತದೆ?
ಕರ್ನಾಟಕದ ಅಪೂರ್ಣ ಯೋಜನೆಗಳನ್ನು ಚುನಾವಣಾ ಸ್ವಾರ್ಥಕ್ಕಾಗಿ ಉದ್ಘಾಟನೆ ಮಾಡುತ್ತಿರುವುದು ಸರಿಯಲ್ಲ. ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ವಾಸ್ತವವಾಗಿ ಇನ್ನೂ ಪೂರ್ಣಗೊಂಡಿಲ್ಲ. ಆದರೂ ಬಿಜೆಪಿ ಇದು ತನ್ನ ಸಾಧನೆ ಎಂದು ಹೇಳಿಕೊಳ್ಳುತ್ತಿರುವುದು ಅಗ್ಗದ ಪ್ರಚಾರವಲ್ಲದೆ ಬೇರೇನೂ ಅಲ್ಲ. ಇದರಿಂದ ಬೆಂಗಳೂರಿನಿಂದ ಮೈಸೂರಿಗೆ ತೊಂಭತ್ತು ನಿಮಿಷಗಳಲ್ಲಿ ಹೋಗಬಹುದಷ್ಟೆ. ಆದರೆ ಇದಕ್ಕಾಗಿ ಇಲ್ಲಿ ಸಂಚರಿಸುವ ಜನ ಮೂವತ್ತು ವರ್ಷಗಳವರೆಗೆ ಟೋಲ್ ಕಟ್ಟಬೇಕಾಗುತ್ತದೆ. ಮಂಡ್ಯ ಜಿಲ್ಲೆಯ ಜನರಿಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ವಾಸ್ತವವಾಗಿ ಮಂಡ್ಯ ಮತ್ತು ರಾಮನಗರ ಜಿಲ್ಲೆಯ ಸಾವಿರಾರು ಜನರ ಜೀವನ ಈ ಯೋಜನೆಯಿಂದ ಅತಂತ್ರವಾಗಲಿದೆ.
ಪ್ರಧಾನ ಮಂತ್ರಿಯಾದವರು ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಪದೇ ಪದೇ ಬರುವುದು ಅವರ ಘನತೆಗೆ ತಕ್ಕುದಲ್ಲ. ಬಂದರೂ ಅವರ ಭಾಷಣ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸುವಂತಿರಬೇಕು. ರಾಷ್ಟ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡಬೇಕು. ರಾಷ್ಟ್ರೀಯ ಸಮಗ್ರತೆಗೆ ಒತ್ತು ಕೊಟ್ಟು ಮಾತಾಡಬೇಕು.
ರಾಹುಲ್ ಗಾಂಧಿಯವರು ಬ್ರಿಟನ್ನಲ್ಲಿ ಮಾತಾಡುವಾಗ ಭಾರತವನ್ನು ಟೀಕಿಸಿದರೆಂದು ಬಿಜೆಪಿ ಹೇಳುತ್ತಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ ಎಂದು ಹೇಳಿದರೆ ಅದು ಭಾರತದ ಟೀಕೆಯೇ?. ದೇಶದಲ್ಲಿ ಪ್ರತಿಪಕ್ಷ ನಾಯಕರ ಮೇಲೆ ನಡೆಯುತ್ತಿರುವ ಐಟಿ, ಸಿಬಿಐ ದಾಳಿಗಳು ಹಾಗೂ ಜನಪರ, ದಲಿತ ಪರ ಚಿಂತಕರನ್ನು ಜೈಲಿಗೆ ತಳ್ಳುತ್ತಿರುವುದು, ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನ ಮಾಡುತ್ತಿರುವುದು ನಿಜವಲ್ಲವೇ? ಇದಕ್ಕಾಗಿ ಯಾರೂ ತಮ್ಮ ಹೆಗಲು ಮುಟ್ಟಿಕೊಂಡು ನೋಡ ಬಾರದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.