ನರೇಗಾ ಯೋಜನೆ: ನಿರ್ಲಕ್ಷ್ಯ ಸಲ್ಲ
-

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೇಂದ್ರ ಸರಕಾರ ಇತ್ತೀಚೆಗೆ ಮಂಡಿಸಿದ ತನ್ನ ಬಜೆಟ್ನಲ್ಲಿ ಸಾಮಾಜಿಕ ವಲಯಗಳಿಗೆ ಅನುದಾನಗಳನ್ನು ಕಡಿತ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗಿತ್ತು. ಅದರಲ್ಲೂ ಮುಖ್ಯವಾಗಿ ನರೇಗಾ ಯೋಜನೆಗೆ ಹಣ ಹಂಚಿಕೆ ಕಡಿತವಾಗಿರುವುದು ಗ್ರಾಮೀಣ ಅಭಿವೃದ್ಧಿಯ ಮೇಲೆ ಭಾರೀ ಆಘಾತವನ್ನು ಸೃಷ್ಟಿಸಲಿದೆ ಎಂದು ಆರ್ಥಿಕತಜ್ಞರು ಕಳವಳ ವ್ಯಕ್ತಪಡಿಸಿದ್ದರು. ಇದೀಗ ಕೇಂದ್ರದ ನಿರ್ಧಾರವನ್ನು, ಗ್ರಾಮೀಣಾಭಿವೃದ್ಧಿ ಕುರಿತ ಸಂಸಂದೀಯ ಸ್ಥಾಯಿ ಸಮಿತಿ ಪ್ರಶ್ನಿಸಿದೆ. 2022-23ರ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ 2023-24ನೇ ವಿತ್ತ ವರ್ಷಕ್ಕೆ ನರೇಗಾ ಯೋಜನೆಯಲ್ಲಿ ಬಜೆಟ್ ಅಂದಾಜನ್ನು 29,400 ಕೋಟಿ ರೂ. ಗಳಿಗೆ ಸರಕಾರ ತಗ್ಗಿಸಿತ್ತು. ನರೇಗಾ ಯೋಜನೆಯಡಿ ಹಣದ ಕಡಿಮೆ ಹಂಚಿಕೆಯ ತಾರ್ಕಿಕತೆಯನ್ನು ಅರ್ಥ ಮಾಡಿಕೊಳ್ಳಲು ಸಮಿತಿಗೆ ಸಾಧ್ಯವಾಗಿಲ್ಲ ಎಂದು ಹೇಳಿರುವ ವರದಿಯು, ರಾಜ್ಯ ಸರಕಾರಗಳಿಗೆ ವೇತನ ಪಾವತಿ ಮತ್ತು ಸಾಮಗ್ರಿ ನಿಧಿ ಬಿಡುಗಡೆಯಲ್ಲಿ ಆಗಿರುವ ವಿಳಂಬದ ಕುರಿತಂತೆಯೂ ತನ್ನ ಕಳವಳವನ್ನು ವ್ಯಕ್ತಪಡಿಸಿದೆ.
ನರೇಗಾ ಯೋಜನೆಯನ್ನು ಒಂದು ಕಾಲದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವೇ ಶ್ಲಾಘಿಸಿತ್ತು. ಅಷ್ಟೇ ಅಲ್ಲ, ಆರಂಭದಲ್ಲಿ ಆ ಯೋಜನೆಗಾಗಿ ಹೆಚ್ಚಿನ ಅನುದಾನಗಳನ್ನು ಒದಗಿಸಿತ್ತ್ತು. ಆದರೆ ನೋಟು ನಿಷೇಧದ ಆನಂತರ ಎದುರಾದ ಆರ್ಥಿಕ ಬಿಕ್ಕಟ್ಟುಗಳ ಪರಿಣಾಮದಿಂದಾಗಿ ಸರಕಾರ ಸೇವಾ ವಲಯಗಳಿಗೆ ನೀಡುವ ಅನುದಾನದಲ್ಲಿ ಕಡಿತ ಮಾಡುತ್ತಾ ಬಂತು. ಗ್ರಾಮೀಣ ಭಾಗದ ಜನರ ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಿ, ಸಣ್ಣ ಪ್ರಮಾಣದಲ್ಲಾದರೂ ಅವರನ್ನು ಅಪೌಷ್ಟಿಕತೆಯಿಂದ ಮೇಲೆತ್ತಿದ ನರೇಗಾ ಯೋಜನೆಯ ಬಗ್ಗೆಯೂ ಸರಕಾರ ನಿರಾಸಕ್ತಿಯನ್ನು ತಾಳಿತು. ಸರಕಾರ ಈ ಯೋಜನೆಗೆ ನೀಡುತ್ತಿದ್ದ ನೆರವು ವರ್ಷದಿಂದ ವರ್ಷಕ್ಕೆ ಇಳಿಮುಖವಾಗತೊಡಗಿತು.
ಸರಕಾರದ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರಕಾರವು ನರೇಗಾ ಯೋಜನೆಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 8,302 ಕೋಟಿ ರೂ.ಗೂ ಹೆಚ್ಚಿನ ಮೊತ್ತಗಳನ್ನು ಬಾಕಿಯಿರಿಸಿದೆ. ಕಾರ್ಮಿಕರೇ ಹೆಚ್ಚಿರುವ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚಿನ ಮೊತ್ತವನ್ನು ಅಂದರೆ, 1,711 ಕೋಟಿ ರೂ. ಯನ್ನು ಬಾಕಿಯಿರಿಸಿದೆ. ಆಂಧ್ರ ಪ್ರದೇಶ ಮತ್ತು ಪಶ್ಚಿಮಬಂಗಾಳ ಆನಂತರದ ಸ್ಥಾನದಲ್ಲಿದೆ. ಆಂಧ್ರಪ್ರದೇಶಕ್ಕೆ 1,005 ಕೋಟಿ ರೂ. ಬಾಕಿ ಉಳಿಸಿದ್ದರೆ, ಪಶ್ಚಿಮ ಬಂಗಾಳಕ್ಕೆ 664 ಕೋಟಿ ರೂ.ಯನ್ನು ಬಾಕಿಯಿರಿಸಿದೆ. 2022 ಡಿಸೆಂಬರ್ ತಿಂಗಳಿನಿಂದ ಕಾರ್ಮಿಕರಿಗೆ 2,744 ಕೋಟಿ ರೂ. ಬಾಕಿಯಿದೆ ಎಂದು ಸರಕಾರೇತರ ಸಂಸ್ಥೆಯೊಂದರ ಸಮೀಕ್ಷೆಯಿಂದ ಬಹಿರಂಗವಾಗಿದೆ. ನರೇಗಾ ಕಾಮಗಾರಿಗಳ ಸ್ಥಗಿತದಿಂದಾಗಿ ಕಾರ್ಮಿಕರು 2022ರಲ್ಲಿ ವೇತನಗಳ ರೂಪದಲ್ಲಿ ಸುಮಾರು 3,891 ಕೋಟಿ ರೂ.ಯಿಂದ 6,046 ಕೋಟಿ ರೂ.ವರೆಗೆ ಕಳೆದುಕೊಂಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಅಂದರೆ, ಕೇಂದ್ರ ಸರಕಾರ ಹಣವನ್ನು ಬಾಕಿಯಿರಿಸಿರುವುದರಿಂದಾಗಿ ಕಾರ್ಮಿಕರಿಗೆ ನೀಡಬೇಕಾದ 100 ದಿನಗಳ ಕೆಲಸದ ಭರವಸೆಯನ್ನು ಈಡೇರಿಸುವುದಕ್ಕೆ ಯೋಜನೆಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ, ನರೇಗಾವನ್ನು ಯಶಸ್ವಿಗೊಳಿಸಲು ಸರಕಾರ ಬಜೆಟ್ನಲ್ಲಿ ಹೆಚ್ಚಿನ ಅನುದಾನವನ್ನು ಒದಗಿಸುವುದು ಅತ್ಯಗತ್ಯವಾಗಿತ್ತು. ಆದರೆ ಬಜೆಟ್ನಲ್ಲಿ ಹಣ ಒದಗಿಸುವ ಯಾವ ಇಂಗಿತವೂ ಸರಕಾರಕ್ಕೆ ಇದ್ದಿರಲಿಲ್ಲ. ಅದಕ್ಕೆ ಪೂರಕವಾಗಿ, ಬಜೆಟ್ಗೆ ಮೂರು ತಿಂಗಳ ಮೊದಲೇ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನರೇಗಾ ಯೋಜನೆಗೆ ಬೇಡಿಕೆಯೇ ಇಲ್ಲ ಎನ್ನುವುದನ್ನು ಪ್ರತಿಪಾದಿಸಲು ಮುಂದಾಗಿದ್ದರು.
ಲೋಕಸಭೆಯಲ್ಲಿ ನಿರ್ಮಲಾ ಸೀತಾರಮನ್ ಮಾತನಾಡುತ್ತಾ, ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಯೋಜನೆಯಡಿ ಕೆಲಸಕ್ಕೆ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ಹೇಳಿದ್ದರು. ಆದರೆ ಈ ಹೇಳಿಕೆಯನ್ನು ನೀಡಿದ ಕೆಲವೇ ದಿನಗಳಲ್ಲಿ, ಅದರ ಸತ್ಯಾಸತ್ಯಾತೆಯನ್ನು ‘ಫ್ಯಾಕ್ಟ್ಚೆಕ್ ಡಾಟ್ ಇನ್’ ವೆಬ್ ಸೈಟೊಂದು ಪರಿಶೀಲಿಸಿದಾಗ ಸುಳ್ಳುಗಳು ಬಯಲಾದವು. 2018-2022ರ ನಡುವೆ ಯೋಜನೆಯಡಿ ಉದ್ಯೋಗಗಳಿಗೆ ಇರುವ ಬೇಡಿಕೆಯ ಕುರಿತು ನರೇಗಾ ವೆಬ್ಸೈಟ್ನಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಪರಿಶೀಲಿಸಿದಾಗ ಬೇರೆಯೇ ಮಾಹಿತಿಗಳು ದೊರಕಿದವು. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಕ್ಕೆ ಬೇಡಿಕೆ ಸ್ಥಿರವಾಗಿ ಏರಿಕೆಯಾಗಿರುವುದು ಇದರಿಂದ ಬೆಳಕಿಗೆ ಬಂತು. 2018ರಲ್ಲಿ 5.78 ಕೋಟಿ ಕುಟುಂಬಗಳಿಂದ ಅಂದರೆ ಸುಮಾರು 9.11 ಕೋಟಿ ಜನರು ಕೆಲಸಕ್ಕೆ ಬೇಡಿಕೆ ಸಲ್ಲಿಸಿದ್ದರು. ಈ ಬೇಡಿಕೆಯು 2019-20ರಲ್ಲಿ 6.16 ಕೋಟಿ ಕುಟುಂಬಗಳಿಗೆ ಅಂದರೆ ಸುಮಾರು 9.33 ಕೋಟಿ ಜನರಿಗೆ ಏರಿಕೆಯಾಗಿದೆ. ಕೋವಿಡ್ ಕಾಲದಲ್ಲಿ ಈ ಬೇಡಿಕೆ ಸಹಜವಾಗಿಯೇ ಇನ್ನಷ್ಟು ಏರಿಕೆಯಾಯಿತು. ಯಾಕೆಂದರೆ ಅದಾಗಲೇ ನಗರಗಳಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದ ಕಾರ್ಮಿಕರು ಅನಿವಾರ್ಯವಾಗಿ ಗ್ರಾಮೀಣ ಪ್ರದೇಶಗಳಿಗೆ ಮರಳಿದರು. 2020-21ರಲ್ಲಿ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ನರೇಗಾದಡಿ ಕೆಲಸಕ್ಕೆ ಬೇಡಿಕೆ 38.7ರಷ್ಟು ಏರಿಕೆಯಾಗಿತ್ತು ಎನ್ನುವ ಅಂಶವನ್ನು ಸರಕಾರಿ ವೆಬ್ಸೈಟ್ ಹೇಳುತ್ತದೆ.
ಕೊರೋನ ಮತ್ತು ಲಾಕ್ಡೌನ್ ಕಾಲದಲ್ಲಿ ಯಾವ ರೀತಿಯಲ್ಲೂ ಉದ್ಯೋಗದ ಬೇಡಿಕೆ ಇಳಿಕೆಯಾಗಲು ಸಾಧ್ಯವಿಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಸರಕಾರಕ್ಕೆ ಇದ್ದಂತಿರಲಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡು ಗ್ರಾಮಕ್ಕೆ ಮರಳಿದ್ದ ಸಾವಿರಾರು ಕಾರ್ಮಿಕರಿಗೆ ನರೇಗಾ ಯೋಜನೆ ಆಶ್ರಯ ನೀಡಿತ್ತು. ದೊಡ್ಡ ಮಟ್ಟದ ಹಸಿವಿನಿಂದ ಗ್ರಾಮೀಣ ಪ್ರದೇಶವನ್ನು ರಕ್ಷಿಸಿದ್ದು ಈ ಯೋಜನೆ. ಸಣ್ಣ ಉದ್ದಿಮೆಗಳು ನಾಶವಾಗಿ ನಿರುದ್ಯೋಗಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ನರೇಗಾ ಯೋಜನೆಗೆ ಹೆಚ್ಚಿನ ಅನುದಾನವನ್ನು ಒದಗಿಸಿ, ಗ್ರಾಮೀಣ ಪ್ರದೇಶವನ್ನು ಮೇಲೆತ್ತುವ ಕೆಲಸವನ್ನು ಸರಕಾರ ಮಾಡಬೇಕು. ನರೇಗಾ ಯೋಜನೆಯನ್ನು ವಿಫಲಗೊಳಿಸುವುದು ಎಂದರೆ, ಗ್ರಾಮೀಣ ಪ್ರದೇಶದ ಜನರ ಅಳಿದುಳಿದ ಭರವಸೆಗಳನ್ನೂ ಅಳಿಸಿ ಹಾಕುವುದು ಎಂದರ್ಥ. ಈ ನಿಟ್ಟಿನಲ್ಲಿ, ಸಂಸದೀಯ ಸಮಿತಿಯ ಕಳವಳವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಯೋಜನೆಗೆ ಹೆಚ್ಚಿನ ಅನುದಾನಗಳನ್ನು ನೀಡುವುದು ಮಾತ್ರವಲ್ಲ, ಬಾಕಿ ಉಳಿಸಿರುವ ಹಣವನ್ನು ತಕ್ಷಣ ಪಾವತಿ ಮಾಡಬೇಕು. ಗ್ರಾಮೀಣ ಪ್ರದೇಶದ ಜನರನ್ನು ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಹಣದುಬ್ಬರಕ್ಕೆ ಪೂರಕವಾಗಿ ಕಾರ್ಮಿಕರ ವೇತನವನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಬೇಕು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.