ಕೋತಿ ತುಪ್ಪ ತಿಂದು ಮೇಕೆ ಮೂತಿಗೆ ಒರೆಸಿದಂತೆ!
-

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕರ್ನಾಟಕದಲ್ಲಿ ಮುಸ್ಲಿಮರನ್ನು ಮೇಲೆತ್ತುವ ತನ್ನ ಭರವಸೆಯನ್ನು ಕೊನೆಗೂ ಬೊಮ್ಮಾಯಿ ನೇತೃತ್ವದ ಸರಕಾರ ಈಡೇರಿಸಿದೆ. ಮುಸ್ಲಿಮರಿಗೆ ಈ ದೇಶದ ಮೇಲ್ಜಾತಿಯ ಜನರ ಸ್ಥಾನಮಾನವನ್ನು ನೀಡಿ ಗೌರವಿಸಿದೆ. ಬ್ರಾಹ್ಮಣರ ಜೊತೆಗೆ ಸಮಾನ ಪಂಕ್ತಿಯ ಭೋಜನ ಈ ದೇಶದ ಶೂದ್ರರು ಮತ್ತು ದಲಿತರ ಶತಮಾನಗಳ ಬೇಡಿಕೆಯಾಗಿತ್ತು. ಮೀಸಲಾತಿ ಪಂಕ್ತಿಗಳ ವಿರುದ್ಧ ಧ್ವನಿಯೆತ್ತುವ ಮಂದಿ ಈ ಊಟ ಪಂಕ್ತಿಯ ಚರ್ಚೆ ಬಂದಾಗ ಕಿವುಡರಂತೆ ವರ್ತಿಸುತ್ತಾ ಬಂದಿದ್ದಾರೆ. ಇದೀಗ, ಬ್ರಾಹ್ಮಣರ ಪಂಕ್ತಿಯಲ್ಲಿ ಈ ನಾಡಿನ ಮುಸ್ಲಿಮರನ್ನು ಕುಳ್ಳಿರಿಸುವ ಹೃದಯವೈಶಾಲ್ಯವನ್ನು ಬೊಮ್ಮಾಯಿ ನೇತೃತ್ವದ ಸರಕಾರ ಪ್ರದರ್ಶಿಸಿದೆ. ಅದರ ಭಾಗವಾಗಿ, ಮೀಸಲಾತಿಯಲ್ಲಿ ಮುಸ್ಲಿಮರಿಗಿದ್ದ ಪ್ರತ್ಯೇಕ ಪಂಕ್ತಿಯನ್ನು ಕಿತ್ತು, ಅವರನ್ನು ಬ್ರಾಹ್ಮಣರ ಪಂಕ್ತಿಯಲ್ಲಿ ಕುಳ್ಳಿರಿಸಿ 'ನೀವಿಬ್ಬರೂ ಸರಿ ಸಮಾನರು' ಎಂದು ಘೋಷಿಸಿದೆ.
'ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿ' ಎನ್ನುವುದೇ ಸಂವಿಧಾನಕ್ಕೆ ಮಾಡಿರುವ ಬಹುದೊಡ್ಡ ವಂಚನೆ ಎಂದು ಸಂವಿಧಾನತಜ್ಞರು ಪ್ರತಿಪಾದಿಸುತ್ತಿದ್ದಾರೆ. ಮೇಲ್ಜಾತಿಯ ಜನರು 'ಬಡತನದ' ಹೆಸರಿನಲ್ಲಿ ಶೋಷಿತರ ಹಕ್ಕನ್ನು ಕಬಳಿಸಲು ಮುಂದಾಗಿದ್ದಾರೆ ಎಂದು ಇದರ ವಿರುದ್ಧ ಈಗಾಗಲೇ ಹಲವರು ನ್ಯಾಯಾಲಯದ ಮೊರೆಹೋಗಿದ್ದಾರೆ. ದಲಿತರಿಗೆ, ಹಿಂದುಳಿದ ಜಾತಿ, ವರ್ಗದ ಜನರಿಗೆ ನೀಡುತ್ತಿರುವ ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿರುವ ಮೇಲ್ಜಾತಿಯ ನಾಯಕರು, ತಮಗೆ ವಾಮಮಾರ್ಗದಲ್ಲಿ ದಕ್ಕಿರುವ 'ಆರ್ಥಿಕ ಮೀಸಲಾತಿ'ಯನ್ನು ಯಾವ ವಿರೋಧವೂ ಇಲ್ಲದೆ ಈಗಾಗಲೇ ಒಪ್ಪಿಕೊಂಡಿದ್ದಾರೆ. ಇತರರಿಗೆ ಮೀಸಲಾತಿ ನೀಡಬಾರದು ಎಂದು ಬೀದಿಗಿಳಿದವರು, ತಮಗೆ ದಕ್ಕಿದ ಈ ಮೀಸಲಾತಿಯನ್ನು ಸಾರಾಸಗಟಾಗಿ ವಿರೋಧಿಸಬೇಕಾಗಿತ್ತು. 'ನಮಗೆ ಪ್ರತಿಭೆಯ ಬಲ ಸಾಕು, ಮೀಸಲಾತಿಯ ಹಂಗು ಬೇಕಾಗಿಲ್ಲ' ಎಂದು ಯಾರೂ ನಿರಾಕರಿಸಲಿಲ್ಲ. ಶೇ.10 ಮೀಸಲಾತಿಯ ವಿರುದ್ಧ ಬೀದಿಗಿಳಿದು ಪ್ರತಿಭಟನೆಯನ್ನೂ ಮಾಡಲಿಲ್ಲ. ಸದ್ದಿಲ್ಲದೆ ಮೀಸಲಾತಿಯ ಸವಲತ್ತನ್ನು ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಆ ಮೀಸಲಾತಿಯ ವಿರುದ್ಧ ಸಮಾಜದೊಳಗಿರುವ ವ್ಯಾಪಕ ಆಕ್ರೋಶದ ಬಗ್ಗೆ ಅವರಿಗೆ ಆತಂಕವಿದೆ.
ಈ ಆರ್ಥಿಕ ಮೀಸಲಾತಿಯಿಂದಾಗಿ ತಮ್ಮ ಜಾತಿಗಳಿಗೆ ಅಂಟಿಕೊಳ್ಳುವ ಕಳಂಕದ ಬಗ್ಗೆಯೂ ಸಣ್ಣದೊಂದು ಹಿಂಜರಿಕೆಯಿದೆ. ಆದುದರಿಂದಲೇ, ಇದೀಗ ಆರ್ಥಿಕ ಮೀಸಲಾತಿಯೊಳಗೆ ಇತರ ಶೋಷಿತ ಸಮುದಾಯವನ್ನು ಸೇರಿಸಿದಂತೆ ಮಾಡಿಕೊಂಡು ಅದನ್ನು ಸಕ್ರಮಗೊಳಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಶೇ. 10 ಮೀಸಲಾತಿಯ ಬಗ್ಗೆ ಮೇಲ್ಜಾತಿ ಯನ್ನು ಪ್ರಶ್ನಿಸಿದರೆ ''ನಮಗೆ ಮಾತ್ರವಲ್ಲ, ಮುಸ್ಲಿಮರಿಗೂ ಇದೆ'' ಎಂದು ಸಮರ್ಥಿಸಿಕೊಳ್ಳಲು ವಾತಾವರಣ ಸೃಷ್ಟಿಸುತ್ತಿದ್ದಾರೆ. ಶೋಷಿತ ಸಮುದಾಯವನ್ನು ಈ ಮೀಸಲಾತಿಯೊಳಗೆ ಸೇರಿಸಿದಲ್ಲಿ, ಅವರು ಈ ಜಾತಿಯ ಜೊತೆಗೆ ಸ್ಪರ್ಧಿಸಿ ಅವುಗಳನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಕೂಡ ಅವರಿಗೆ ಚೆನ್ನಾಗಿ ಗೊತ್ತಿದೆ.
ಮುಸ್ಲಿಮರನ್ನು ಇಡಬ್ಲ್ಯುಎಸ್ಗೆ ಸೇರಿಸುವ ಮೂಲಕ, ಇರುವ ಸಂವಿಧಾನಬದ್ಧ ಮೀಸಲಾತಿಯಿಂದ ಮುಸ್ಲಿಮರನ್ನು ಹೊರಗಿಟ್ಟಂತಾಯಿತು. ಶೇ. 10 ಆರ್ಥಿಕ ಮೀಸಲಾತಿಗೆ ಶೋಷಿತ ಸಮುದಾಯದ ಇತರ ವರ್ಗವನ್ನೂ ಪಾಲುದಾರರು ಎಂದು ಬಿಂಬಿಸಿ, ಕಳಂಕದಿಂದ ಮೇಲ್ವರ್ಗವನ್ನು ರಕ್ಷಿಸಿದಂತೆಯೂ ಆಯಿತು. ಒಂದು ವೇಳೆ, ಶೇ.10 ಆರ್ಥಿಕ ಮೀಸಲಾತಿಯಲ್ಲಿ ಮುಸ್ಲಿಮರಿಗೆ ಪಾಲು ಸಿಕ್ಕಿದರೂ, ಅವರಿಗೆ ಅಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲದ ಕಾರಣ 'ಕೊಟ್ಟಂತೆ ಮಾಡಿ ಅವರಿಂದ ಅವರ ಹಕ್ಕುಗಳನ್ನು ಕಿತ್ತುಕೊಂಡಂತೆಯೂ' ಆಯಿತು. ಶೇ. 10 ಮೀಸಲಾತಿಯಲ್ಲಿ ಬ್ರಾಹ್ಮಣರು ಮತ್ತು ಮುಸ್ಲಿಮರು ಸ್ಪರ್ಧಿಸುವುದೆಂದರೆ ನರಿ ಮತ್ತು ಕರಡಿ ಕೃಷಿ ಮಾಡಿದ ಕತೆಯಂತಾಗುತ್ತದೆ. ಸರಕಾರದ 'ಉರಿ' ಮತ್ತು 'ನಂಜು' ಪಾತ್ರಗಳಾಧಾರಿತ ಅಡ್ಡಂಡ ನಾಟಕದ ಮುಂದುವರಿದ ಪ್ರದರ್ಶನವಾಗಿದೆ ಈ ಮೀಸಲಾತಿ ಬದಲಾವಣೆ.
ಏಕಕಾಲದಲ್ಲಿ ಮುಸ್ಲಿಮರನ್ನು ಬೇರೆ ಬೇರೆ ಸಮುದಾಯದ ವಿರುದ್ಧ್ದ ಎತ್ತಿ ಕಟ್ಟುವ ಅತ್ಯಂತ ನೀಚ ಪ್ರಯತ್ನಕ್ಕೆ ಅದು ಇಳಿದಿದೆ. ಮುಸ್ಲಿಮರ ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಹಂಚುವ ಮೂಲಕ, ಈ ಸಮುದಾಯದ ನಾಯಕರನ್ನು ಮುಸ್ಲಿಮರ ಜೊತೆಗೆ ಮುಖಾಮುಖಿಗೊಳಿಸುವ ಪ್ರಯತ್ನ ನಡೆಸಿದೆ. ಇದೇ ಸಂದರ್ಭದಲ್ಲಿ ಆರ್ಥಿಕ ಮೀಸಲಾತಿಗೆ ಮುಸ್ಲಿಮರನ್ನು ಸೇರ್ಪಡೆಗೊಳಿಸಿ, ಸಂವಿಧಾನ ಬಾಹಿರ ಆರ್ಥಿಕ ಮೀಸಲಾತಿಯ ವಿರುದ್ಧ ದ ಹೋರಾಟವನ್ನು ಮುಸ್ಲಿಮರ ವಿರುದ್ಧ ವೂ ತಿರುಗಿಸುವ ಪ್ರಯತ್ನ ನಡೆಸಿದೆ. ಶೇ. 10 ಮೀಸಲಾತಿಗೆ ಅರ್ಹರಾಗಿರುವ 'ಮೇಲ್ಜಾತಿಯ ಬಡವರು' ಎನ್ನುವುದೇ ಕೇಂದ್ರ ಸರಕಾರದ ವಿಶೇಷ ಸೃಷ್ಟಿ ಎನ್ನುವುದನ್ನೂ ಈ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು. ಬಡ ಮುಸ್ಲಿಮರಿಗೂ, ಮೇಲ್ಜಾತಿಯ ಬಡವರಿಗೂ ಬಹಳಷ್ಟು ವ್ಯತ್ಯಾಸವಿದೆ. ವರ್ಷಕ್ಕೆ ಎಂಟು ಲಕ್ಷ ರೂ. ಆದಾಯವಿರುವ ಅಂದರೆ ಮಾಸಿಕ ಸುಮಾರು 60,000 ರೂ. ಆದಾಯವುಳ್ಳ ಮೇಲ್ಜಾತಿಯ ಜನರು ಕೇಂದ್ರ ಸರಕಾರದ ಪ್ರಕಾರ ಬಡವರು. 5 ಎಕರೆ ಕೃಷಿ ಭೂಮಿಯಿದ್ದವರೂ ಇಲ್ಲಿ ಬಡವರಾಗಿದ್ದಾರೆ. ಈ ಬಡವರ ಜೊತೆಗೆ ಸ್ಲಮ್ನಲ್ಲಿ ಬದುಕುತ್ತಿರುವ, ಅಲೆಮಾರಿ ಉದ್ಯೋಗಗಳನ್ನು ಮಾಡುವ, ಕೂಲಿ ಕಾರ್ಮಿಕ ಕೆಲಸಗಳನ್ನು ನಿರ್ವಹಿಸುವ ಬಡ ಮುಸ್ಲಿಮರು ಸ್ಪರ್ಧಿಸಬೇಕು. ಇದೊಂದು ರೀತಿಯಲ್ಲಿ 'ಕೋತಿ ತುಪ್ಪ ತಿಂದು ಮೇಕೆಯ ಮೂತಿ'ಗೆ ಒರೆಸಿದಂತೆ.
2ಬಿ ಪ್ರವರ್ಗದಡಿ ಮುಸ್ಲಿಮರು ಮೀಸಲಾತಿ ಪಡೆಯುತ್ತಿರುವುದು ಧರ್ಮದ ಆಧಾರದಲ್ಲಿ ಅಲ್ಲ. ಅವರ ಸಾಮಾಜಿಕ ಸ್ಥಾನಮಾನಗಳ ಕುರಿತಂತೆ ವ್ಯಾಪಕ ಅಧ್ಯಯನ ನಡೆಸಿ, ವರದಿ ಪಡೆದ ಬಳಿಕ ಅವರನ್ನು ಈ ಮೀಸಲಾತಿಗೆ ಅರ್ಹರು ಎಂದು ಗುರುತಿಸಲಾಯಿತು. ಬರೇ ಯಾವುದೋ ಒಂದು ನಿರ್ದಿಷ್ಟ ಸಮಿತಿಯಲ್ಲ, ಹಲವು ಸಮಿತಿಗಳು ಸಾಮಾಜಿಕವಾಗಿ ಮುಸ್ಲಿಮರ ಚಿಂತಾಜನಕ ಸ್ಥಿತಿಯನ್ನು ಗುರುತಿಸಿವೆ. ಅದರ ಆಧಾರದಲ್ಲಿ ಒಬಿಸಿ, ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡಲಾಗಿದೆ. ಒಂದು ವೇಳೆ ಸರಕಾರ ಇವರನ್ನು ಹೊರಗಿಡುವ ಮಹತ್ವದ ನಿರ್ಧಾರವನ್ನು ಕೈಗೆತ್ತಿಕೊಳ್ಳಬೇಕಾದರೂ ಆ ಬಗ್ಗೆ ಅಧ್ಯಯನ ನಡೆಸಬೇಕು. ಬೊಮ್ಮಾಯಿಯವರ ತೀರ್ಮಾನ ಈ ಕಾರಣಕ್ಕೆ ಅಡ್ಡಂಡ ಕಾರ್ಯಪ್ಪ ಅವರ ನಾಟಕ ಉರಿ-ನಂಜು ಪಾತ್ರಕ್ಕಿಂತಲೂ ಕೀಳಭಿರುಚಿಯಿಂದ ಕೂಡಿದೆ.
ಮುಸ್ಲಿಮರು ಈ ನಾಡಿನ ಅಭಿವೃದ್ಧಿಯ ಭಾಗವಾಗಿದ್ದಾರೆ. ಅವರನ್ನು ಹಿಂದಕ್ಕೆ ಉಳಿಸಿ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕನಸನ್ನು ನನಸು ಮಾಡುವುದಕ್ಕೆ ಸಾಧ್ಯವಿಲ್ಲ. ಒಂದು ಸಮುದಾಯದ ಬದುಕುವ ಹಕ್ಕನ್ನು ಕಿತ್ತುಕೊಳ್ಳುವ ಮೂಲಕ ಇನ್ನೊಂದು ಧರ್ಮ ಅಥವಾ ಸಮುದಾಯವನ್ನು ಸಂತೋಷ ಪಡಿಸುತ್ತೇನೆ ಎಂದು ಹೊರಡುವುದು ಕೂಡ ಸರಕಾರದ ಅಲ್ಪತನವಾಗುತ್ತದೆ. ಇನ್ನೊಂದು ಸಮುದಾಯದ ಹಕ್ಕುಗಳನ್ನು ಕಿತ್ತುಕೊಂಡ ಕಾರಣಕ್ಕಾಗಿ, ಅವರನ್ನು ದಮನಿಸಿದ ಕಾರಣಕ್ಕಾಗಿ ಸಂತೋಷ ಪಡುವ ಯಾವ ಜಾತಿ ಧರ್ಮಗಳೂ ನಮ್ಮ ನಡುವೆ ಇಲ್ಲ. ಕೃಷಿ, ವ್ಯಾಪಾರ, ದುಡಿಮೆಗಳಲ್ಲಿ ಪರಸ್ಪರ ಒಬ್ಬರಿಗೊಬ್ಬರು ಕೈ ಚಾಚಿ, ನೆರವಾಗುತ್ತಾ ಬೆಳೆದ ಸಮುದಾಯಗಳು ನಮ್ಮವು. ಇನ್ನೊಂದು ಸಮುದಾಯದ ತಟ್ಟೆಯ ಅನ್ನ ಕಿತ್ತುಕೊಂಡು ತಮ್ಮನ್ನು ರೂಪಿಸಿಕೊಂಡ ಯಾವ ಜಾತಿ ಸಮುದಾಯಗಳೂ ನಮ್ಮ ನಡುವೆ ಇಲ್ಲ. ಇಲ್ಲಿ, ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ.
ಒಬ್ಬರ ಅಭಿವೃದ್ಧಿ ಇನ್ನೊಬ್ಬನ ಏಳಿಗೆಯೊಂದಿಗೆ ತಳಕು ಹಾಕಿಕೊಂಡಿವೆ. ಒಂದು ಸಮುದಾಯ ಏಕಾಏಕಿ ಹಿಂದೆ ಉಳಿಯತೊಡಗಿತು ಎಂದರೆ, ಅವರ ಜೊತೆ ಜೊತೆಗೆ ಆ ಸಮುದಾಯವನ್ನು ನೆಚ್ಚಿಕೊಂಡ ಇತರ ಸಮುದಾಯಗಳೂ ಹಿಂದೆ ಉಳಿಯಬೇಕಾಗುತ್ತವೆ. ಒಡಲೊಳಗಿನ ಕಿಚ್ಚು ಮೊದಲು ಒಡಲನ್ನೇ ಸುಡುತ್ತದೆ ಎನ್ನುವ ಬಸವ ತತ್ವವನ್ನು ಬೊಮ್ಮಾಯಿಯವರು ನೆನಪಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯಕ್ಕೆ ಉರಿನಂಜಿನ ಕಿಚ್ಚು ಹಚ್ಚಿದರೆ ಅಂತಿಮವಾಗಿ ಇಡೀ ನಾಡು ಅದರ ಕೇಡನ್ನು ಅನುಭವಿಸಬೇಕಾಗುತ್ತದೆ. ಈ ಅರಿವಿನ ಬೆಳಕಿನಲ್ಲಿ, ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.