-

ವಿದ್ಯಾವಂತ ಮತಿಘಾತ

ಸಮಾಜಘಾತುಕತನದ ಮೊಳಕೆ - ಮಗುತನ ಜತನ-7

-

► ಬೆಳೆಯುವ ಪೈರು ►ಅಧ್ಯಯನ ಮತ್ತು ಅರಿವು

ಈ ವರ್ಗದವರಿಗೆ ವಿದ್ಯಾಭ್ಯಾಸವಾಗಿರುತ್ತದೆ, ಆರ್ಥಿಕವಾಗಿ ಸಬಲರಾಗಿರುತ್ತಾರೆ. ಮನೆಯ ಜವಾಬ್ದಾರಿಗಳಿರುತ್ತವೆ. ಉನ್ನತ ಹುದ್ದೆಯೂ ಇರುತ್ತದೆ. ಸರಕಾರದ ಅಥವಾ ಇನ್ನಾವುದಾದರೂ ಸಾಮಾಜಿಕ ಸಂಸ್ಥೆಯ ಭಾಗವೂ ಆಗಿರುತ್ತಾರೆ. ತೆರಿಗೆದಾರರಾಗಿರುತ್ತಾರೆ. ಅವರೂ ಕೂಡಾ ದೊಂಬಿ ಗಲಭೆ ಮಾಡುವವರ ಹಿಂಸಾತ್ಮಕ ಮನಸ್ಥಿತಿ ಮತ್ತು ಅಸಹನೀಯ ಧೋರಣೆಗಳನ್ನು ಹೊಂದಿರುತ್ತಾರೆ. ಆದರೆ ಅವರು ನೇರವಾಗಿ ರಸ್ತೆಗೆ ಇಳಿಯುವುದಿಲ್ಲ. ಆದರೆ ಅಂತವು ಆಗಬೇಕೆಂದು ಬಯಸುತ್ತಾರೆ.

ಅವರಲ್ಲಿ ಕೆಲವರಿಗಂತೂ ನಾಗರಿಕ ದಂಗೆ, ದೊಂಬಿ, ದಾಳಿಗಳೂ ಕ್ರೀಡೆಗಳೇ, ಮನರಂಜನೆಗಳೇ. ಏಕೆಂದರೆ ಈ ಗಲಾಟೆ, ದೊಂಬಿ ಅವರಿಗೆ ಸೋಕದು. ಅವರು ಯಾವಾಗಲೂ ಸುರಕ್ಷಿತ. ಹಿಂದೆ ಕತ್ತಿಕಾಳಗವೇ ಮೊದಲಾಗಿ ಹೊಡೆದಾಟದ ರಕ್ತಸಿಕ್ತ ಕ್ರೀಡೆಗಳನ್ನು ಕ್ರೀಡಾಂಗಣದಲ್ಲಿಯೇ ‘‘ಭಲೇ ಭಲೇ’’ ಎಂದು ಗ್ಲ್ಯಾಡಿಯೇಟರ್‌ಗಳನ್ನು ಹುರಿದುಂಬಿಸುತ್ತಿದ್ದ ಪೂರ್ವಜರ ರಕ್ತದ ವಾಸನೆ ಇನ್ನೂ ಇವರಲ್ಲಿ ಜೀವಂತವಾಗಿದೆ.

ಮಕ್ಕಳು ಚಿಟ್ಟೆಯ ರೆಕ್ಕೆ ಕೀಳುವುದನ್ನು, ನಾಯಿಯ ಬಾಲಕ್ಕೆ ಸರ ಪಟಾಕಿಯನ್ನು ಕಟ್ಟುವುದನ್ನು, ಕತ್ತೆಯ ಬಾಲಕ್ಕೆ ಡಬ್ಬ ಕಟ್ಟಿ ಓಡಿಸುವುದನ್ನು, ಓತಿಕ್ಯಾತನ ಹಿಡಿದು ರಸ್ತೆಗೆಸೆದು ಅದರ ಮೇಲೆ ವಾಹನ ಹರಿಯುವುದು ನೋಡುವುದನ್ನು, ಇರುವೆಗಳನ್ನು ಹೊಸಕುವುದನ್ನು ಅಲ್ಲಲ್ಲಿ ನೋಡುತ್ತಿರುತ್ತೇವೆ. ಈ ಮಕ್ಕಳದು ಕ್ರೌರ್ಯಾಮೋದ ಅಥವಾ ಸ್ಯಾಡಿಸ್ಟ್ ಖುಶಿ ಎಂದು ಅನಿಸಲಿಲ್ಲವೇ? ಮಕ್ಕಳಿಗೆ ಗೊತ್ತಾಗುವುದಿಲ್ಲ, ಈಗ ಹಾಗೆ ಮಾಡುವುದು ಸಹಜ, ದೊಡ್ಡವರಾದ ಮೇಲೆ ಸರಿಹೋಗುತ್ತಾರೆ ಎಂದು ಎಂದೂ ಅಂದುಕೊಳ್ಳಬೇಡಿ.

ಈ ಮಕ್ಕಳು ದೊಡ್ಡವರಾದ ಮೇಲೆ ವಿದ್ಯಾವಂತರೂ, ಬುದ್ಧಿವಂತರೂ, ಅಧಿಕಾರಿಗಳೂ, ಜವಾಬ್ದಾರಿಯುತ ಸ್ಥಾನ, ಸಾಮಾಜಿಕ ಮಾನ್ಯತೆಗಳನ್ನು ಹೊಂದಿದ್ದರೂ ಸಾಮಾಜಿಕ ಅಸ್ವಾಸ್ಥ್ಯಕ್ಕೆ, ಕ್ರೌರ್ಯಕ್ಕೆ ತಮ್ಮ ಕಾಣ್ಕೆಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೀಡುತ್ತಿರುತ್ತಾರೆ. ಏಕೆಂದರೆ ಅವರ ಮನಸ್ಸಿನ ಆಳದಲ್ಲಿ ಅಜ್ಞಾತವಾಗಿ ಕೆಲಸ ಮಾಡುತ್ತಿರುವ ಅನೇಕ ವಿಷಯಗಳಿರುತ್ತವೆ. ಅಡಗಿರುವ ಕಾರಣಗಳ ಮೂಲಗಳನ್ನು ಹೀಗೇ ಎಂದು ನಿರ್ದಿಷ್ಟವಾಗಿ ಬೊಟ್ಟು ಮಾಡಿ ಹೇಳಲಾಗದಿದ್ದರೂ ಒಂದಷ್ಟು ಮೂಲಗಳನ್ನು ಗುರುತಿಸಬಹುದು. ಸಾಮಾನ್ಯವಾಗಿ ಇರಬಹುದಾದ ಮನೋಜ್ಞಾತ ಕಾರಣಗಳೆಂದರೆ;

1. ಸಾಂಪ್ರದಾಯಕವಾದಂತಹ (ಜಾತಿ/ಧರ್ಮದ) ವೈಷಮ್ಯದಿಂದ ಸೇಡಿನ ಭಾವವನ್ನು ಹೊಂದಿರುತ್ತಾರೆ.

2. ತಮಗಿರುವ ಆರ್ಥಿಕ ಸಬಲತೆಯಿಂದಾಗಿ, ಸಾಮಾಜಿಕ ಸ್ಥಾನಮಾನದ ಭದ್ರತೆಯಿಂದಾಗಿ, ರಾಜಕೀಯ ಮತ್ತು ವ್ಯವಸ್ಥೆಯಲ್ಲಿರುವವರ ಕೃಪೆ ಅಥವಾ ಸ್ಥಾನದಿಂದಾಗಿ ಭಯವಿರದವರಾಗಿರುತ್ತಾರೆ.

3.ಅಹಂಕಾರ, ಢಂಬಾಚಾರಗಳೂ ಕೂಡಾ ಕಂದಾಚಾರಗಳಂತೆ ಕುಟುಂಬಗಳಲ್ಲಿ ತಲೆಮಾರುಗಳಿಂದಲೇ ಬಂದಿರುತ್ತವೆ. ನಾವು, ನಮ್ಮ ಮನೆತನದವರು ಯಾರಿಗೂ ತಲೆ ಬಾಗಲ್ಲ. ನಾವಿರುವುದೇ ಆಳುವುದಕ್ಕೆ. ನಮ್ಮ ತಾತ ಮುತ್ತಾತಂದಿರು ಇಷ್ಟು ದರ್ಪದಿಂದ ಆಳುತ್ತಿದ್ದರು ಅಥವಾ ವರ್ತಿಸುತ್ತಿದ್ದರು; ಇಂತಹ ಧೋರಣೆಗಳು ಪ್ರತಿಷ್ಠೆಯ ಸಂಕೇತಗಳಾಗಿರುತ್ತವೆ. ಹಾಗಾಗಿ ಅವರಲ್ಲಿ ಇತರರನ್ನು ಸಮಾನವಾಗಿ ನೋಡುವುದು, ಸೌಹಾರ್ದದಿಂದ ಇರುವುದು, ಇತರರ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಇರುವುದೇ ಇಲ್ಲ. ಹಾಗೆ ಇತರರದನ್ನು ಒಪ್ಪಿಕೊಳ್ಳುವುದು ತಮ್ಮ ಘನತೆಗೆ ಚ್ಯುತಿ ಎಂಬಂತಹ ಮನೋಭಾವ ಇರುತ್ತದೆ. ಇನ್ನು ಔದಾರ್ಯವೆಂಬುದು ಅಥವಾ ಅಂತಃಕರುಣವೆಂಬುದು ಕೂಡಾ ಇರುವುದಿಲ್ಲ.

ಇವರು ಸಮಾಜಮುಖಿಯಾಗಿ ಚಿಂತನೆ ಮಾಡುವುದಿರಲಿ, ಹಾಗೆ ಮಾಡುವುದರಿಂದ ನಮಗೇನು ಲಾಭ ಎಂದು ಕೇಳುತ್ತಾರೆ. ನಮ್ಮದನ್ನು ನಾವು ನೋಡಿಕೊಂಡರಾಗದೇ ಎಂದು ಭಾವಿಸುತ್ತಾರೆ. (ಯಾರನ್ನಾದರೂ ಬೊಟ್ಟು ಮಾಡಿ ಅವರು ಹಾಗಿಲ್ಲ ಎನ್ನಬೇಡಿ. ಸಾಮಾನ್ಯವಾಗಿರುವುದಕ್ಕೆ ಅಪರೂಪವಾಗಿ ಅಪವಾದವಾಗಿರುವ ಉದಾಹರಣೆಗಳು ಇದ್ದೇ ಇರುತ್ತವೆ.)

4.ಬಾಲ್ಯದಲ್ಲಿಯೇ ಮೊಳಕೆಯೊಡೆದಿದ್ದ ಕ್ರೌರ್ಯಾಮೋದ (ಸ್ಯಾಡಿಸಂ) ಮನಸ್ಥಿತಿಯು ಗಮನಕ್ಕೆ ಮತ್ತು ಚಿಕಿತ್ಸೆಗೆ ಒಳಪಡದೇ ವಯಸ್ಕರಾದಾಗ ಸದೃಢವಾಗಿ ಬೆಳೆದಿರುತ್ತದೆ. ತಾವು ರಣಕ್ಕಿಳಿಯದೇ, ಇತರರನ್ನು ಗ್ಲಾಡಿಯೇಟರ್‌ಗಳನ್ನಾಗಿ ಮಾಡಿ ಕಣಕ್ಕಿಳಿಸುತ್ತಾರೆ. ಇಲ್ಲಿ ಸಮಾಜ ಘಾತುಕತನದಲ್ಲಿ ಎರಡು ವರ್ಗಗಳಿವೆ. ಒಂದು ಭೌತಿಕವಾಗಿ ನೇರ ಸಮಾಜದ ಮೇಲೆ ಬೆಂಕಿಯಂತೆ ಉರಿದಾಳಿ ಮಾಡುವುದು. ಮತ್ತೊಂದು ತಣ್ಣನೆ ತಮ್ಮ ಸ್ವಾರ್ಥದ ಹೊದಿಕೆಯಲ್ಲಿ ಬೆಚ್ಚಗಿದ್ದು ಮೊದಲನೆಯ ವರ್ಗದ ಸೃಷ್ಟಿಗೆ ಕಾರಣವಾಗುವುದು. ಇವರಲ್ಲಿ ಬಹುಪಾಲು ಅಪರಾಧಿಗಳಾಗಿ ಗುರುತಿಸಲ್ಪಡುವುದಿಲ್ಲ. ಆದರೆ, ಅಪರಾಧಿಗಳನ್ನು ರೂಪಿಸುವುದರಲ್ಲಿ ಬಹಳ ಗಂಭೀರವಾದ ಪ್ರೇರಣೆಗಳಾಗಿರುತ್ತಾರೆ. ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

ಬಾಲ ಬಾಸ್

ಕೊಂಚ ಸ್ಥಿತಿವಂತರ ಅಥವಾ ಅಧಿಕಾರಸ್ಥರ ಮಕ್ಕಳು ಬಾಸ್‌ಗಳಾಗಿದ್ದು ತಮಗೆ ಒಂದಷ್ಟು ಬಾಲಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವು ಸಲ ಕುಟುಂಬದ ಹಿನ್ನೆಲೆ ಏನೂ ಇಲ್ಲದಿದ್ದರೂ ಶಕ್ತಿವಂತ ಹುಡುಗರು ಬಾಸ್‌ಗಳಾಗಿ ವರ್ತಿಸುವುದುಂಟು. ಆದರೆ ಸಾಮಾನ್ಯವಾಗಿ ಕುಟುಂಬದ ಆರ್ಥಿಕ ಮತ್ತು ಅಧಿಕಾರದ ಹಿನ್ನೆಲೆ ಮಕ್ಕಳಲ್ಲಿ ಸಾಕಷ್ಟು ಕೆಲಸ ಮಾಡುತ್ತದೆ. ಶಾಲೆಗಳಲ್ಲಿ ಮತ್ತು ಮನೆಯ ಬಳಿಯ ಆಟದ ಮೈದಾನಗಳಲ್ಲಿ ಸ್ಥಿತಿವಂತ ಮಕ್ಕಳು ಸ್ಥಿತಿವಂತರಲ್ಲದ ಮಕ್ಕಳನ್ನು ಅಥವಾ ದೈಹಿಕವಾಗಿ ಅಥವಾ ಮಾನಸಿಕವಾಗಿ ಅಷ್ಟೇನೂ ಸಬಲರಲ್ಲದ ಗೆಳೆಯರನ್ನು ಬಾಲಗಳನ್ನಾಗಿ ನಡೆಸಿಕೊಳ್ಳುವ ರೀತಿಗಳನ್ನು ಪಾಲಕರೂ ಮತ್ತು ಶಿಕ್ಷಕರೂ ಗಮನಿಸಬೇಕು. ಆ ಮಕ್ಕಳೋ ತಮಗಿರುವ ಮೇಲರಿಮೆಯ ಕಾರಣದಿಂದ, ಮನೆಯಲ್ಲಿ ಅನುಸರಿಸಿರುವ ಮಾದರಿಯ ದೆಸೆಯಿಂದ ತಮ್ಮ ಬಾಲಗಳಿಗೆ ಕೆಲಸಗಳನ್ನು ಹೇಳುತ್ತಿರುತ್ತಾರೆ. ಅವರು ಗೆಳೆಯರೇ ಆಗಿದ್ದರೂ ಒಬ್ಬ ಇನ್ನೊಬ್ಬನ ಮೇಲೆ ಮೇಲಧಿಕಾರವನ್ನು ಪಡೆದಿರುತ್ತಾರೆ. ಕೆಲವು ಸಲ ತಿನಿಸು ಅಥವಾ ಬೇರೆ ವಸ್ತುಗಳನ್ನು ಕೊಡುವ ಕಾರಣವಿರಬಹುದು. ಕೆಲವು ಸಲ ಏನೂ ಇಲ್ಲದೆಯೇ ಅಧಿಕಾರ ಚಲಾಯಿಸುತ್ತಾರೆ.

ಆಡುವಾಗ ಚೆಂಡು ದೂರದಲ್ಲಿ ಬಿದ್ದರೆ ಬಾಲವನ್ನೇ ಕಳುಹಿಸುವುದು, ಕಾಂಪೌಂಡಿನ ಒಳಗೆ ಅಥವಾ ಸಜ್ಜೆ ಮೇಲೆ ಬಿದ್ದರೆ ಬಾಲವನ್ನೇ ಹತ್ತಿಸುವುದು. ಚೇಷ್ಟೆ ಅಥವಾ ತರಲೆ ಮಾಡುವಾಗ ಬಾಲವನ್ನು ಸಿಕ್ಕಿಸಿ ತಾನು ಮೆಲ್ಲನೆ ಜಾರಿಕೊಳ್ಳುವುದು. ಅಂಗಡಿಯಿಂದ ಅಥವಾ ಇನ್ನೆಲ್ಲಿಂದಾದರೂ ಏನಾದರೂ ತರಿಸಿಕೊಳ್ಳುವುದಿದ್ದರೆ ಬಾಲವನ್ನೇ ಓಡಿಸುವುದು. ಬಾಲಬಾಸ್‌ಗಳು ಎಷ್ಟೋ ವಿಷಯಗಳಲ್ಲಿ ತಾವು ಅಪರಾಧಿಗಳಾಗದೆಯೇ ತಮ್ಮ ಬಾಲಗಳನ್ನು ಅಪರಾಧಿಗಳನ್ನಾಗಿ ರೂಪಿಸುತ್ತಾರೆ. ಹೀಗೆ ಯಾವುದಾದರೂ ಪ್ರಕರಣದಲ್ಲಿ ಸಿಕ್ಕಿಕೊಂಡಾಗ ಬಾಲವನ್ನು ಕೇಳಿ, ‘‘ನೀನ್ಯಾಕೆ ಅವನು ಹೇಳಿದ ಹಾಗೆ ಕೇಳ್ತೀಯಾ?’’ ಎಂದು. ಪಾಪ ಬಾಲಗಳಲ್ಲಿ ಉತ್ತರವಿರುವುದಿಲ್ಲ. ಸುಮ್ಮನೆ ತಲೆ ತಗ್ಗಿಸಿ ನಿಂತುಕೊಳ್ಳುತ್ತವೆ. ಮತ್ತೆ ಬಾಸ್ ಹಿಂದೆ ಬಾಲಗಳಾಗಿ ಹೋಗುತ್ತವೆ. ಏಕೆಂದರೆ ಹಾಗೆ ಹೋಗುವುದು ಅವರಿಗೂ ರೂಢಿಯಾಗಿರುತ್ತದೆ. ಹಾಗೆ ಬಾಲಗಳನ್ನು ತಮ್ಮ ಹಿಂಬಾಲಕರನ್ನಾಗಿಸಿಕೊಳ್ಳುವುದು ಬಾಸ್‌ಗಳಿಗೂ ರೂಢಿಯಾಗಿಬಿಟ್ಟಿರುತ್ತದೆ. ಯಾವುದೇ ಮಗುವು ತಾನೇ ಎದ್ದು ಹೋಗಿ ತನ್ನ ವಸ್ತುವನ್ನು ತರಬಹುದಾಗಿದ್ದರೂ ಮತ್ತೊಂದು ಮಗುವಿಗೆ ಆ ಕೆಲಸವನ್ನು ಮಾಡಲು ಹೇಳುತ್ತದೆ ಎಂದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಇದು ಬರಿಯ ಸೋಮಾರಿತನದ ವಿಷಯ ಮಾತ್ರವೇ ಅಲ್ಲ. ತನ್ನ ಮೇಲರಿಮೆಯ ಅಹಂಕಾರದ ತೃಪ್ತಿಗೆ ಮನುಷ್ಯರನ್ನು ಬಳಕೆ ಮಾಡಿಕೊಳ್ಳುವುದು. ಇದು ಕ್ರಮೇಣ ತನ್ನ ಇತರ ಸಹಜೀವಿಗಳನ್ನು ದಾಸ್ಯಕ್ಕೆ ಒಳಪಡಿಸಿಕೊಳ್ಳುವ ಮುನ್ಸೂಚನೆ. ಬಾಲಬಾಸ್‌ಗಳು ಗ್ಲಾಡಿಯೇಟರ್‌ಗಳನ್ನು ರೂಪಿಸಿ ಭಲೇ ಭಲೇ ಎಂದು ರಕ್ತಸಿಕ್ತ ಕ್ರೀಡೆಗಳನ್ನು ಆನಂದಿಸುವವರು.

(ಮುಂದುವರಿಯುವುದು)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top