ಹಲ್ಲಿ ಹೇಳುವ ಭಾರತದ ಹುಲ್ಲುಗಾವಲಿನ ಕಥೆ
ಮನುಷ್ಯ ಕೃಷಿ ಉದ್ದೇಶಕ್ಕಾಗಿ ಕಾಡನ್ನು ನಾಶಪಡಿಸಿದ ಕಾರಣ ಹುಲ್ಲುಗಾವಲು ಅಭಿವೃದ್ಧಿಪಡಿಸಲಾಗಿದೆ ಎನ್ನುವ ವಿಜ್ಞಾನಿಗಳ ಅಭಿಪ್ರಾಯ ಮತ್ತು ಹಲವು ಬಗೆಯ ಹವಾಮಾನ ಬದಲಾವಣೆಯಿಂದಾಗಿ ಹುಲ್ಲು ಬೆಳೆಯಿತು ಎಂಬ ಅಭಿಪ್ರಾಯದ ನಡುವೆ ಸದಾ ಚರ್ಚೆ ನಡೆಯುತ್ತಲೇ ಇದೆ.
ಭಾರತದಲ್ಲಿ ಹುಲ್ಲುಗಾವಲು ಯಾವಾಗ ಹಬ್ಬಿತು ಎನ್ನುವ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಅಥವಾ ಇದು ನೈಸರ್ಗಿಕವಾಗಿ ರೂಪುಗೊಂಡದ್ದೇ ಅಥವಾ ಮನುಷ್ಯ ಅಭಿವೃದ್ಧಿಪಡಿಸಿದ್ದೇ ಎನ್ನುವುದು ಕೂಡಾ ಸ್ಪಷ್ಟವಾಗಿಲ್ಲ. ಮನುಷ್ಯ ಕೃಷಿ ಉದ್ದೇಶಕ್ಕಾಗಿ ಕಾಡನ್ನು ನಾಶಪಡಿಸಿದ ಕಾರಣ ಹುಲ್ಲುಗಾವಲು ಅಭಿವೃದ್ಧಿ ಪಡಿಸಲಾಗಿದೆ ಎನ್ನುವ ವಿಜ್ಞಾನಿಗಳ ಅಭಿಪ್ರಾಯ ಮತ್ತು ಹಲವು ಬಗೆಯ ಹವಾಮಾನ ಬದಲಾವಣೆಯಿಂದಾಗಿ ಹುಲ್ಲು ಬೆಳೆಯಿತು ಎಂಬ ಅಭಿಪ್ರಾಯದ ನಡುವೆ ಸದಾ ಚರ್ಚೆ ನಡೆಯುತ್ತಲೇ ಇದೆ.
ಹುಲ್ಲುಗಾವಲು ರೂಪುಗೊಂಡ ಬಗ್ಗೆ ಅಧ್ಯಯನ ನಡೆಸುವ ಒಂದು ವಿಧಾನ ವೆಂದರೆ, ಪ್ರಾಣಿಗಳು ಹುಟ್ಟಿಕೊಂಡದ್ದು ಮತ್ತು ಹುಲ್ಲುಗಾವಲಿನ ನಡುವಿನ ಸಂಬಂಧದ ಬಗ್ಗೆ ದೃಷ್ಟಿ ಹರಿಸುವುದು. ಹುಲ್ಲುಗಾವಲಿನ ವಿಚಾರದಲ್ಲಿ ಪ್ರಾಣಿಗಳು ರೂಪುಗೊಂಡದ್ದು ಒಫಿಸೋಪ್ಸ್ ಎಂಬ ಹಲ್ಲಿಯ ವಂಶವಾಹಿಯಿಂದ, ಹುಲ್ಲು ಹುಟ್ಟಿಕೊಂಡದ್ದು ಹವಾಮಾನದ ಬದಲಾವಣೆಯ ಕಾರಣದಿಂದ ಎಂಬ ಅಭಿಪ್ರಾಯ ಹೊಂದಿರುವವರಿಗೆ, ಪ್ರಾಚೀನ ಕಾಲದಲ್ಲಿ ಹುಲ್ಲು, ಸಸ್ಯಶಾಸ್ತ್ರಜ್ಞರು ಸಹರಾ-ಅರೇಬಿಯನ್ ವಲಯ ಎಂದು ಗುರುತಿಸುವ ಭಾರತ ಹಾಗೂ ಇತರ ಒಣಭೂಮಿ ಪ್ರದೇಶಗಳಾದ ಟರ್ಕಿ, ಇರಾನ್, ಸೌದಿ ಅರೇಬಿಯಾ, ಲಿಬಿಯಾ, ಟ್ಯುನೇಶಿಯಾ ಹಾಗೂ ಈಜಿಪ್ಟ್ಗೆ ಸೀಮಿತ ಆಗಿತ್ತು.
ಹಲ್ಲಿ- ಹುಲ್ಲಿನ ಸಂಪರ್ಕ
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ ಸಂಶೋಧಕರು ಇತ್ತೀಚೆಗೆ ಹಲ್ಲಿಗಳು ಹೇಗೆ ರೂಪುಗೊಂಡವು ಮತ್ತು ಅವು ಭಾರತದ ಪರ್ಯಾಯ ದ್ವೀಪಕ್ಕೆ ಹೇಗೆ ಹರಡಿದವು ಎಂಬ ಬಗ್ಗೆ ಅಧ್ಯಯನ ನಡೆಸಿದರು.
ಒಫಿಸೋಪ್ಗಳು ಹುಲ್ಲುಗಾವಲಿಗಷ್ಟೇ ಸೀಮಿತವಾಗಿರುವುದರಿಂದ, ಹಲ್ಲಿಗಳು ರೂಪುಗೊಂಡ ಬಗೆಯನ್ನು ತಿಳಿದುಕೊಳ್ಳುವ ಮೂಲಕ ಸಂಶೋಧಕರು ಭಾರತದ ಹುಲ್ಲುಗಾವಲುಗಳ ಮೂಲಕ್ಕೆ ಸಂಬಂಧಿಸಿದಂತೆ ಎರಡು ಸಿದ್ಧಾಂತಗಳನ್ನು ಮುಂದಿಟ್ಟಿದ್ದಾರೆ, ಮೊದಲನೆ ಸಿದ್ಧಾಂತದ ಪ್ರಕಾರ, ವಿಶ್ವದ ಇತರೆಡೆಗಳಲ್ಲಿ ಹುಲ್ಲುಗಾವಲುಗಳು ರೂಪುಗೊಂಡ ಅವಧಿಯಲ್ಲೇ ಅಂದರೆ ನಾಲ್ಕರಿಂದ ಎಂಟು ದಶಲಕ್ಷ ವರ್ಷಗಳ ಹಿಂದೆ ಭಾರತದಲ್ಲೂ ರೂಪುಗೊಂಡಿವೆ. ಇದೇ ಅವಧಿಯಲ್ಲಿ ಹಲ್ಲಿ ಪ್ರಭೇದಗಳೂ ರೂಪುಗೊಂಡಿವೆ ಎಂದು ಅಂದಾಜು ಮಾಡಲಾಗಿದೆ. ಎರಡನೆ ಸಿದ್ಧಾಂತದ ಪ್ರಕಾರ, ಮಾನವ ಬೆಳೆ ಆರಂಭಿಸಿದ ಬಳಿಕ ಹುಲ್ಲುಗಾವಲು ವಿಸ್ತರಣೆಯಾಗಿದೆ ಎಂದಾದರೆ, 10 ಸಾವಿರದಿಂದ 20 ಸಾವಿರ ವರ್ಷಗಳ ಹಿಂದೆ ಅಭಿವೃದ್ಧಿಯಾಗಿದೆ. ಹಲ್ಲಿಗಳು ಈ ಪ್ರದೇಶಗಳಿಗೆ ಇತ್ತೀಚೆಗೆ ಹರಡಿವೆ ಎನ್ನುವುದು ಈ ವಾದ.
ಭಾರತದ ವಿವಿಧೆಡೆಗಳ 108 ಪ್ರದೇಶಗಳಿಂದ ಮಾದರಿಗಳನ್ನು ಸಂಗ್ರಹಿಸಿದ್ದು, ಥಾರ್ ಮರಭೂಮಿಯಿಂದ ಪಶ್ಚಿಮ ಘಟ್ಟದವರೆಗೆ, ಪೂರ್ವ ಹಾಗೂ ಪಶ್ಚಿಮ ಕರಾವಳಿಗಳಿಂದ ಹಾಗೂ ಕೇಂದ್ರ ಭಾರತದ ವಿವಿಧೆಡೆಗಳಿಂದ ಮಾದರಿ ಸಂಗ್ರಹಿಸಲಾಗಿದೆ. ‘‘125 ಪ್ರಭೇದಗಳಿಂದ ಡಿಎನ್ಎ ಸಂಗ್ರಹಿಸಿದ್ದು, ಇವುಗಳ ಸಾಮ್ಯತೆ ಮತ್ತು ಭಿನ್ನತೆಯನ್ನು ಪರೀಕ್ಷಿಸಿ, ಇವುಗಳು ರೂಪುಗೊಂಡ ಬಗ್ಗೆ ತಿಳಿದುಕೊಂಡಿದ್ದೇವೆ’’ ಎಂದು ಖ್ಯಾತ ಜೀವಶಾಸ್ತ್ರಜ್ಞ ಮತ್ತು ಅಧ್ಯಯನ ತಂಡದ ಮುಖ್ಯಸ್ಥ ಇಶಾನ್ ಅಗರ್ವಾಲ್ ಹೇಳುತ್ತಾರೆ.
ಎರಡು ಪ್ರಬೇದಗಳ ಡಿಎನ್ಎ ಭಿನ್ನತೆಗಳು ರೂಪುಗೊಂಡ ಅವಧಿಯ ಆಧಾರದಲ್ಲಿ ಅವು ಹೇಗೆ ಭಿನ್ನವಾಗಿವೆ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ. ಕಾಲಕ್ರಮೇಣ ಎಷ್ಟು ಪ್ರಮಾಣದಲ್ಲಿ ಪ್ರಭೇದಗಳು ಭಿನ್ನವಾಗಿವೆ ಎನ್ನುವುದನ್ನೂ ಅಧ್ಯಯನ ಮಾಡಲಾಗಿದೆ. ಇದು ಹವಾಮಾನ ಹಾಗೂ ವಾಸತಾಣಗಳ ಆಧಾರದಲ್ಲಿ ಭಿನ್ನವಾಗಿವೆ ಎನ್ನುವುದು ಅಗರ್ವಾಲ್ ಅವರ ವಿಶ್ಲೇಷಣೆ.
ಈ ಅಧ್ಯಯನದಲ್ಲಿ ಭಾರತದ ಹಲ್ಲಿ ಪ್ರಭೇದಗಳು ಮತ್ತು ಇದೇ ಪರಿಸ್ಥಿತಿ ಇರುವ ಸಹರಾ- ಅರೇಬಿಯನ್ ಪ್ರದೇಶದಲ್ಲಿ ಕಂಡುಬರುವ ಪ್ರಭೇದಗಳ ಸಂಬಂಧವನ್ನೂ ವಿಶ್ಲೇಷಿಸಲಾಗಿದೆ. ಸಂಶೋಧಕರ ಪ್ರಕಾರ, ಸಹರಾ- ಅರೇಬಿಯನ್ ಪ್ರದೇಶದಿಂದ ಸುಮಾರು 23 ದಶಲಕ್ಷದಿಂದ 28 ದಶಲಕ್ಷ ವರ್ಷಗಳ ಹಿಂದೆ ಭಾರತಕ್ಕೆ ಕೆಲ ಪ್ರಭೇದಗಳು ಹಬ್ಬಿವೆ. ಆ ಅವಧಿಯಲ್ಲೇ ಭಾರತದಲ್ಲಿ ಬಯಲು ಪ್ರದೇಶಗಳಿದ್ದವು ಎನ್ನುವುದಕ್ಕೆ ಇದು ಪುಷ್ಟಿ ನೀಡುತ್ತದೆ. ಭಾರತಕ್ಕೆ ಬಂದು 20 ದಶಲಕ್ಷ ವರ್ಷಗಳ ಹಿಂದೆ, ದೊಡ್ಡ ಹಾಗೂ ಚಿಕ್ಕ ದೇಹದ ಎರಡು ಗುಂಪುಗಳಾದವು. ಒಂದು 50 ಮಿಲಿಮೀಟರ್ ಇದ್ದರೆ ಇನ್ನೊಂದು ಗುಂಪಿನ ಹಲ್ಲಿಗಳು 45 ಮಿಲಿಮೀಟರ್ ಇದ್ದವು. ಕ್ಷೇತ್ರಗಳಿಂದ ಮತ್ತು ಮ್ಯೂಸಿಯಂಗಳಿಂದ ಸಂಗ್ರಹಿಸಿದ ಪ್ರಭೇದಗಳ ವಂಶವಾಹಿ ಅಧ್ಯಯನದಿಂದ ತಿಳಿದುಬರುವಂತೆ, ಸುಮಾರು 30 ಹಲ್ಲಿ ಪ್ರಭೇದಗಳು ಭಾರತದಲ್ಲಿವೆ. ಆದರೆ ಈ ಹಿಂದೆ ಕೇವಲ 5 ಮಾತ್ರ ವಿಜ್ಞಾನಕ್ಕೆ ತಿಳಿದಿತ್ತು.
ಈ ವೈವಿಧ್ಯಕ್ಕೆ ಬಹುಶಃ ಅವುಗಳು ಹರಡಿರುವ ಪ್ರದೇಶದಲ್ಲಿ ಏಕರೂಪದ ವಾಸತಾಣಗಳು ಇದ್ದುದು ಕಾರಣವಾಗಿರಬಹುದು ಎಂದು ಸರಿಸೃಪ ಅಧ್ಯಯನ ಕ್ಷೇತ್ರ ತಜ್ಞ ವರದ್ ಗಿರಿ ಹೇಳುತ್ತಾರೆ. ಈ ಹಲ್ಲಿಗಳು ತಮ್ಮ ದೇಹಪ್ರಕೃತಿಯನ್ನು ಬದಲಾಯಿಸಿಕೊಳ್ಳದೇ ಉಳಿದುಕೊಂಡಿರಬಹುದು ಎನ್ನುವುದು ಅವರ ಊಹೆ.
ಸುಮಾರು 50 ರಿಂದ 90 ಲಕ್ಷ ವರ್ಷಗಳ ಹಿಂದೆ ಸಣ್ಣ ದೇಹದ ಹಲ್ಲಿಗಳು ಕ್ಷಿಪ್ರವಾಗಿ ವಿಸ್ತರಿಸಲ್ಪಟ್ಟವು. ವಿಶ್ವಾದ್ಯಂತ ಹುಲ್ಲುಗಾವಲುಗಳು ವಿಸ್ತರಿಸಲ್ಪಟ್ಟ ಅವಧಿ ಅದು. ಇದೇ ಅವಧಿಯಲ್ಲಿ ಭಾರತೀಯ ಉಪಖಂಡ ಹಾಗೂ ಏಷ್ಯನ್ ಪ್ರದೇಶ ಕೂಡಾ ಬೇಸಾಯಕ್ಕೆ ಒಳಪಟ್ಟಿತು. ಇದು ಹೆಚ್ಚು ಒಣ ಕೃಷಿ ಭೂಮಿಯನ್ನು ಮುಕ್ತಗೊಳಿಸಿತು.
ಜತೆಗೆ ಹಲ್ಲಿಗಳಿಗೆ ವಾಸಕ್ಕೂ ವಿಸ್ತಾರವಾದ ಪ್ರದೇಶ ಸಿಕ್ಕಿತು. ಇದರಿಂದ ಹಲ್ಲಿಗಳು ಭಾರತದಲ್ಲಿ ಹುಲ್ಲುಗಾವಲುಗಳು ವಿಸ್ತರಣೆಯಾದ ಅವಧಿಗೆ ಮುನ್ನವೇ ಭಾರತದಲ್ಲಿ ಇದ್ದವು.
ಅಧ್ಯಯನ ದಿಂದ ಕಂಡುಬಂದ ಅಂಶಗಳ ಪ್ರಕಾರ, ರೂಪುಗೊಂಡ ಹಲವು ಪ್ರಭೇದಗಳ ಪ್ರಕಾರ, ದೊಡ್ಡ ದೇಹದ ಹಲ್ಲಿಗಳು ಮತ್ತೆ ಸಹರಾ- ಅರೇಬಿಯನ್ ಪ್ರದೇಶಕ್ಕೇ ವಾಪಸಾದವು. ಕ್ರಮೇಣ ಹೊಸ ಪ್ರಭೇದವಾಗಿ ಇದು ಬೆಳೆಯಿತು. ಇಂಥ ಜೈವಿಕ-ಭೌಗೋಳಿಕ ಚಲನೆ ಪತ್ತೆಯಾಗಿರುವುದು ಇದೇ ಮೊದಲು ಎಂದು ಅಗರ್ವಾಲ್ ಹೇಳುತ್ತಾರೆ.
ಹಲವು ಪ್ರಾಣಿಗಳು ಭಾರತದಿಂದ ಆಗ್ನೇಯ ಏಷ್ಯಾಕ್ಕೆ ಹೋದಂತೆ, ಈ ಮೊದಲು ಪಾಶ್ಚಿಮಾತ್ಯ ಕಡೆಗೆ ವಲಸೆ ಹೋದ ಪ್ರಕ್ರಿಯೆಯನ್ನು ಹಿಂದೆಂದೂ ದಾಖಲಿಸಿಲ್ಲ. ಬಹುಶಃ ಬಹುತೇಕ ಸಂಶೋಧನೆಗಳು ಅರಣ್ಯವಾಸಿ ಪ್ರಭೇದಗಳನ್ನು ಕೇಂದ್ರೀಕರಿಸಿ ಮತ್ತು ಒಣ ಕೃಷಿ ಭೂಮಿಯ ಪ್ರದೇಶಗಳ ಪ್ರಾಣಿಗಳ ಬಗ್ಗೆ ನಡೆದಿರುವುದು ಇದಕ್ಕೆ ಕಾರಣವಿರಬಹುದು. ಹುಲ್ಲುಗಾವಲುಗಳಲ್ಲಿ ಸಾಮಾನ್ಯವಾಗಿ ಪ್ರಾಣಿಗಳ ವೈವಿಧ್ಯತೆ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಅಧ್ಯಯನದಿಂದ ಕಂಡುಬಂದಂತೆ ಹುಲ್ಲುಗಾವಲು ಕೂಡಾ ಹಲವು ಜೀವಿಗಳ ವೈವಿಧ್ಯತೆಗಳನ್ನು ಬೆಂಬಲಿಸಿವೆ.
ಹುಲ್ಲುಗಾವಲುಗಳು ಭಾರತದಲ್ಲಿ ತೀರಾ ನಿರ್ಲಕ್ಷ್ಯಕ್ಕೆ ಒಳಗಾದ ಪರಿಸರ ವ್ಯವಸ್ಥೆ. ಭಾರತದ ಶೇ.40ರಷ್ಟು ನೈಸರ್ಗಿಕ ವಾಸತಾಣಗಳಲ್ಲಿ ಹುಲ್ಲುಗಾವಲುಗಳು ಇದ್ದರೂ, ಇದನ್ನು ಸಮರ್ಪಕವಾಗಿ ತಿಳಿದುಕೊಂಡಿಲ್ಲ ಅಥವಾ ಸೂಕ್ತವಾಗಿ ತಿಳಿದುಕೊಂಡಿಲ್ಲ. ಈ ಅಧ್ಯಯನವು ಹುಲ್ಲುಗಾವಲಿಗೆ ಅತ್ಯಂತ ಪ್ರಾಚೀನತೆ ಇದೆ ಎನ್ನುವುದನ್ನು ನಿರೂಪಿಸಿದೆ. ಜತೆಗೆ ಒಣ ಪ್ರದೇಶವನ್ನು ಸಂರಕ್ಷಿಸಿಕೊಂಡು ಹೋಗುವ ಅಗತ್ಯವನ್ನೂ ವಿವರಿಸಿದೆ.