ಉಡುಪಿ: ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್ಶಿಪ್ಗೆ ಚಾಲನೆ
ಉಡುಪಿ, ಮೇ 8: ಉಡುಪಿ ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ ಆಸೋಸಿಯೇಶನ್ ವತಿಯಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿ ರುವ ಎರಡು ದಿನಗಳ ಕರ್ನಾಟಕ ರಾಜ್ಯ ಹಿರಿಯರ ಮತ್ತು 20 ವಯೋಮಿತಿಯ ಪುರುಷ ಹಾಗೂ ಮಹಿಳೆಯರ ಅಥ್ಲೆಟಿಕ್ ಚಾಂಪಿಯನ್ಶಿಪ್ಗೆ ರವಿವಾರ ಚಾಲನೆ ನೀಡಲಾಯಿತು.
ಕ್ರೀಡಾಕೂಟವನ್ನು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ್ ಬಲ್ಲಾಳ್ ಉದ್ಘಾಟಿಸಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಮಾತನಾಡಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ಕಕ್ಕುಂಜೆ, ಕರ್ನಾಟಕ ಅಥ್ಲೇಟಿಕ್ ಅಸೋಸಿಯೇಶನ್ ಕಾರ್ಯದರ್ಶಿ ರಾಜವೇಲು, ಕರ್ನಾಟಕ ರಾಜ್ಯ ಕ್ರೀಡಾಕೂಟ ಸಂಘಟನಾ ಸಮಿತಿಯ ಕಾರ್ಯದರ್ಶಿ ಮಹೇಶ್ ಠಾಕೂರ್, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿ ಯೇಷನ್ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಗೌರವ ಸಲಹೆಗಾರರಾದ ಅಶೋಕ್ ಅಡ್ಯಂತಾಯ, ಕಾರ್ಯದರ್ಶಿ ದಿನೇಶ್ ಕುಮಾರ್, ಕೋಶಾಧಿಕಾರಿ ದೀಪಕ್ ರಾಮ್ ಬಾಯಾರಿ ಮೊದಲಾದವರು ಉಪಸ್ಥಿತರಿದ್ದರು.
ಹೊಸ ಕೂಟ ದಾಖಲೆ
ಕ್ರೀಡಾಕೂಟದ ತ್ರಿಪಲ್ ಜಂಪ್ ವಿಭಾಗದಲ್ಲಿ ಉಡುಪಿಯ ಅಖಿಲೇಶ್ 15.40 ಮೀಟರ್ ಸಾಧನೆಯೊಂದಿಗೆ ರಾಜ್ಯಮಟ್ಟದ ಹೊಸ ಕೂಟ ದಾಖಲೆ ನಿರ್ಮಿಸಿದ್ದಾರೆ.ಈ ಕ್ರೀಡಾಕೂಟದಲ್ಲಿ ಸುಮಾರು 750 ಮಂದಿ ಕ್ರೀಡಾಪಟುಗಳು, 75 ಜನ ಅಧಿಕಾರಿಗಳು, 50 ಮಂದಿ ಸ್ವಯಂ ಸೇವಕರು ಪಾಲ್ಗೊಂಡಿದ್ದು, ಒಟ್ಟು 80 ಸ್ಪರ್ಧೆಗಳಲ್ಲಿ 30ಕ್ಕೂ ಅಧಿಕ ಸ್ಪರ್ಧೆಗಳು ನಡೆದವು.