ಮೇ 21, 22ರಂದು ಭಾರೀ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ
ಉಡುಪಿ : ಕರಾವಳಿಯ ಜಿಲ್ಲೆಗಳಲ್ಲಿ ಮೇ 21 ಮತ್ತು 22ರಂದು ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರಾವಳಿಯ ತೀರದಲ್ಲಿ ಗಂಟೆಗೆ 40ರಿಂದ 60 ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಮುಂದಿನ 24 ಗಂಟೆಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಾಳೆ 115ಮಿ.ಮೀಗೂ ಅಧಿಕ ಮಳೆ ಸುರಿಯುವ ಸಾದ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಮೇ 22ರಂದು 65 ಮಿ.ಮೀ. ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ನೀಡಲಾಗಿದೆ. ಮಳೆಯೊಂದಿಗೆ ಗುಡುಗು-ಸಿಡಿಲಿನಿಂದ ಕೂಡಿದ ಗಾಳಿಯೂ ಬೀಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ 83.9ಮಿ.ಮೀ ಮಳೆ: ಇಂದು ಬೆಳಗ್ಗೆ ೮:೩೦ಕ್ಕೆ ಮುಕ್ತಾಯ ಗೊಂಡಂತೆ ಹಿಂದಿನ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ೮೩.೯ಮಿ.ಮೀ. ಮಳೆ ಸುರಿದಿದೆ. ಬೈಂದೂರಿನಲ್ಲಿ ೧೩೦.೮ಮಿ.ಮೀ. ಮಳೆಯಾದರೆ ಬ್ರಹ್ಮಾವರದಲಿ ೮೫.೨, ಉಡುಪಿಯಲ್ಲಿ ೮೩.೭, ಕುಂದಾಪುರದಲ್ಲಿ ೮೩.೫, ಹೆಬ್ರಿಯಲ್ಲಿ ೭೬.೯, ಕಾರ್ಕಳದಲ್ಲಿ ೫೭.೯ ಹಾಗೂ ಕಾಪುವಿನಲ್ಲಿ ೫೭.೨ಮಿ.ಮೀ. ಮಳೆಯಾಗಿದೆ.
ಮನೆ ಹಾನಿಯ ನಾಲ್ಕು ಪ್ರಕರಣ: ದಿನದಲ್ಲಿ ಕುಂದಾಪುರ ತಾಲೂಕಿನಲ್ಲಿ ಮಳೆಯಿಂದ ಮನೆ ಹಾನಿಯ ಮೂರು ಪ್ರಕರಣಗಳು ವರದಿಯಾಗಿವೆ. ತಾಲೂಕಿನ ಶಂಕರನಾರಾಯಣ ಗ್ರಾಮದ ಶೇಖರ ಶೆಟ್ಟಿಗಾರ್ ಎಂಬವರ ಮನೆಗೆ ೩೦ಸಾವಿರ, ಕಟ್ಬೆಲ್ತೂರು ಗ್ರಾಮದ ಮುತ್ತು ಎಂಬವರ ಮನೆಗೆ ೨೫ ಸಾವಿರ, ವಡೇರಹೋಬಳಿ ಗ್ರಾಮದ ಸಣ್ಣಮ್ಮ ಅವರ ಮನೆಗೆ ೨೦ಸಾವಿರ ಹಾಗೂ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಚೆಲುವರಾಜ್ ಎಂಬವರ ವಾಸದಜ ಮನೆಗೆ ೨೦ಸಾವಿರ ರೂ.ಗಳ ನಷ್ಟ ಸಂಭವಿಸಿರುವ ಬಗ್ಗೆ ಮಾಹಿತಿ ಬಂದಿವೆ.