ಸಿಐಟಿಯು 15ನೆ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ನ.೧೫ರಿಂದ ೧೭ರವರೆಗೆ ಕುಂದಾಪುರದಲ್ಲಿ ನಡೆಯಲಿ ರುವ ದುಡಿಯುವ ವರ್ಗದ ಸಂಘಟನೆ ಸಿಐಟಿಯುನ ೧೫ನೆ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯ ಕ್ರಮ ಉಡುಪಿಯಲ್ಲಿರುವ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಡಬ್ಲ್ಯೂಎಫ್ಐ-ಸಿಐಟಿಯು)ದ ಕಚೇರಿಯಲ್ಲಿ ರವಿವಾರ ನಡೆಯಿತು.
ಲಾಂಛನ ಬಿಡುಗಡೆಗೊಳಿಸಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪ್ ಸಿಂಹ ಮಾತನಾಡಿ, ರಾಜ್ಯ, ಕೇಂದ್ರದ ಬಂಡವಾಳಶಾಹಿ ಪರ ಕಾನೂನು ತಿದ್ದುಪಡಿ, ಬೆಲೆ ಏರಿಕೆಯಿಂದ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳು, ಉಡುಪಿ ಜಿಲ್ಲೆಯ ಅಭಿವೃದ್ಧಿಯ ಕಡೆಗಣನೆಯ ಬಗ್ಗೆ ಈ ಮೂರು ದಿನಗಳ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಹೀಗೆ ಬಲಿಷ್ಠ ಹೋರಾಟ ಕಟ್ಟಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೬೦೦ ಮಂದಿ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಾರ್ಮಿಕರ ಐಕ್ಯತೆ ಹಾಗೂ ಜನರ ಸೌಹಾರ್ದತೆಯ ಘೋಷಣೆಯೊಂದಿಗೆ ಸಮ್ಮೇಳನ ನಡೆಸಲಾಗುತ್ತಿದೆ. ಕರಾವಳಿಯ ಸಾಂಸ್ಕೃತಿಕ ಹಿನ್ನೆಲೆ, ಸೌಹಾರ್ದತೆ ಗಟ್ಟಿಗೊಳಿ ಸುವಂತಹ ಸಂದೇಶವಿರುವ ಲಾಂಛನ ಪ್ರಚಾರ ಮಾಡುತ್ತಾ ರಾಜ್ಯ ಸಮ್ಮೇಳನ ಯಶಸ್ವಿಗೊಳಿಸಬೇಕಾಗಿದೆ ಎಂದು ಹೇಳಿದರು.
ಸಮ್ಮೇಳನದ ಗೌರವಾಧ್ಯಕ್ಷ ಕೆ.ಶಂಕರ್, ಖಜಾಂಚಿ ಎಚ್.ನರಸಿಂಹ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ ಮಾತನಾಡಿದರು. ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ, ಸ್ವಾಗತ ಸಮಿತಿ ಉಪಾಧ್ಯಕ್ಷ ಶೇಖರ ಬಂಗೇರ, ಸಿಐಟಿಯು ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕವಿರಾಜ್, ಶಶಿಧರ ಗೊಲ್ಲ ಉಪಸ್ಥಿತರಿದ್ದರು. ಪ್ರಚಾರ ಸಮಿತಿ ಸಂಚಾಲಕ ಚಂದ್ರಶೇಖರ ವಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.