ಪೂರ್ಣಪ್ರಜ್ಞ ಸಂಸ್ಥೆ: ಸಂಸ್ಥಾಪಕರ ದಿನಾಚರಣೆ
ಉಡುಪಿ, ಜು.೭: ಅಧ್ಯಯನಶೀಲರಿಗೆ ಗುರಿ ಇದ್ದಾಗ ಮುಂದಿನ ಮಾರ್ಗ ಸ್ಪಷ್ಟವಾಗುತ್ತದೆ. ಅಂತಹ ಗುರಿಯನ್ನು ನಿರೂಪಿಸಲು ಆದರ್ಶ ಚಿಂತಕರ ಅಗತ್ಯ ವಿದೆ. ಅದಮಾರು ಮಠ ಶಿಕ್ಷಣ ಮಂಡಳಿಯ ಮೂಲಕ ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಶ್ರೀವಿಬುಧೇಶತೀರ್ಥ ಶ್ರೀಪಾದರು ಅಂತಹ ಗುರಿಗಳನ್ನು ತೋರಿಸಿದ ಗುರುವಾಗಿದ್ದರು ಎಂದು ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಮಂಡಳಿ ಬೆಂಗಳೂರು-ಉಡುಪಿ ಇದರ ಅಧ್ಯಕ್ಷರಾಗಿರುವ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಅಡಿಟೋರಿಯಂನಲ್ಲಿ ಗುರುವಾರ ನಡೆದ ’ಸಂಸ್ಥಾಪಕರ ದಿನ’ದ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಅದಮಾರುಶ್ರೀಗಳು ಆಶೀರ್ವಚನ ನೀಡಿ ಮಾತನಾಡುತಿದ್ದರು.
ಶ್ರೀವಿಬುಧೇಶತೀರ್ಥರು ತರ್ಕ, ವೇದಾಂತ, ಮೀಮಾಂಸೆಯ ಅಧ್ಯಾತ್ಮಿಕ ಪ್ರಪಂಚದ ಜ್ಞಾನಿ ಮಾತ್ರವಲ್ಲ, ಭೌತ ಪ್ರಪಂಚದ ವೈಜ್ಞಾನಿಕ ಬೆಳವಣಿಗೆಯಲ್ಲಿ ಸದಾ ಆಸಕ್ತರು. ವಿಜ್ಞಾನಿಗಳ-ಚಿಂತಕರ ಜೊತೆ ಅವರ ಶೈಕ್ಷಣಿಕ ಸಂಬಂಧ ಶಾಶ್ವತ ವಾಗಿ ಇರುವಂಥದ್ದು ಎಂದು ಶ್ರೀಗಳು ಉಲ್ಲೇಖಿಸಿದರು.
‘ವಿಸ್ತರಣಾ ಕಾರ್ಯಕ್ರಮ’ದ ಅಂಗವಾಗಿ ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಆಗಮಿಸಿದ ಜವಹರಲಾಲ್ ನೆಹರು ಪ್ರಚಲಿತ ವಿಜ್ಞಾನ ಸಂಶೋಧನಾ ಕೇಂದ್ರ ಬೆಂಗಳೂರು ಇಲ್ಲಿನ ಡೀನ್ ಪ್ರೊ. ವಿದ್ಯಾಧಿರಾಜ ಎನ್.ಎಸ್, ಅದೇ ಸಂಸ್ಥೆಯ ವಿನಾಯಕ್ ಕೆ. ಪಟ್ಟರ್, ಅಲ್ಲಿ ಸಂಶೋಧನಾರ್ಥಿಯಾಗಿರುವ ಪಿಪಿಸಿ ಹಳೆ ವಿದ್ಯಾರ್ಥಿನಿ ಧೀಮಹಿ ಮತ್ತು ಪೂರ್ಣಪ್ರಜ್ಞ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ್ ಜಿ.ಎಸ್, ಡಾ.ಶಶಿಕಿರಣ್ ಉಮಾಕಾಂತ್, ಸಿಎ ಪ್ರಶಾಂತ್ ಹೊಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಪಿಸಿ ಪ್ರಾಂಶುಪಾಲ್ ಡಾ.ರಾಘವೇಂದ್ರ ಎ ಸ್ವಾಗತಿಸಿ ಪಿಐಎಂ ನಿರ್ದೇಶಕ ಡಾ.ಭರತ್ ವಿ. ವಂದಿಸಿದರು. ಪ್ರಾಧ್ಯಾಪಕಿ ಡಾ. ಭಾರತಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.
ಆಡಳಿತಾಧಿಕಾರಿ ಡಾ.ಎ.ಪಿ ಭಟ್ ಸಂಯೋಜಿಸಿದ ಕಾರ್ಯಕ್ರಮದಲ್ಲಿ ೨೦೨೧-೨೨ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪೂರ್ಣಪ್ರಜ್ಞ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಭವ್ಯಾ ನಾಯಕ್ ಹಾಗು ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಸುಹಾಸ್ ಶೆಣೈ, ನೀತಾ ಕೆ ರಾವ್, ಮೋಹನ್ ಎಸ್ಆರ್, ವೃದ್ಧಿ ಶೆಟ್ಟಿ, ಗಜಾನನ ನಾಯಕ್, ವೈಷ್ಣವಿ ಎಸ್, ಸ್ವಾತಿ ಆರ್ ಕಿಣಿ, ನಂದನ್ ಉಪಾಧ್ಯ ಮತ್ತು ಪಿಪಿಸಿಯ ಸಾಧಕ ವಿದ್ಯಾರ್ಥಿಗಳಾದ ಅಖಿಲಾ, ವೈಷ್ಣವಿ ಸರಳಾಯ, ಶ್ರೀಲಕ್ಷ್ಮಿ ರಾವ್, ಸುರಭಿ, ನಿಕ್ಷಿತಾ, ಭೂಮಿಕಾ ಉಡುಪ, ಶಹಜಹಾನ್ ಇಕ್ಬಾಲ್, ಸಮೃದ್ಧಿ ಇವರನ್ನು ಗೌರವಿಸಲಾಯಿತು.