ವಕ್ವಾಡಿಯಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಚಾಲನೆ
ಕುಂದಾಪುರ, ಆ.8: ವಕ್ವಾಡಿ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಮತ್ತು ಹಸ್ತಚಿತ್ತ ಫೌಂಡೇಶನ್ ವಕ್ವಾಡಿ ಇವರ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ.ವಿ.ಕೆ.ಐತಾಳ್ ಸ್ಮರಣಾರ್ಥ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಚಾಲನೆ ಆ.7ರಂದು ವಕ್ವಾಡಿ ವಿಲೇಜ್ ಹೊಟೇಲಿನ ಕನಕ ಸಭಾಂಗಣದಲ್ಲಿ ನೀಡಲಾಯಿತು.
ಕಾರ್ಯಕ್ರಮವನ್ನು ದುಬೈ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ ವಕ್ವಾಡಿ ರಾಷ್ಟ್ರಧ್ವಜದ ಮಹತ್ವ ವಿವರಿಸಿ ದಿ.ವಿ.ಐತಾಳರ ದೇಶಪ್ರೇಮದ ಬಗ್ಗೆ ಸ್ಮರಿಸಿದರು. ವೇದಿಕೆಯಲ್ಲಿ ಹಸ್ತಚಿತ್ತ ಫೌಂಡೇಶನ್ ಕಾರ್ಯದರ್ಶಿ ಶಂಕರ ಮೂರ್ತಿ ಮಂಜ, ವಿ.ಕೆ.ಐತಾಳ್ ಕುಟುಂಬಿಕರಾದ ಲೀಲಾವತಿ ಐತಾಳ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರಾಗಿದ್ದ ದಿ. ವಿ. ಕೆ. ಐತಾಳ್ ಅವರ ಮಕ್ಕಳಾದ ಗಿರೀಶ್ ಐತಾಳ್, ಮಹೇಶ್ ಐತಾಳ್, ವಾಣಿ ಐತಾಳ್ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಕಾಳಾವರ ಗ್ರಾ.ಪಂ. ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಮಾಜಿ ಸದಸ್ಯ ಸತೀಶ್ ಪೂಜಾರಿ ವಕ್ವಾಡಿ ಮಾತನಾಡಿದರು. ನಾಗರತ್ನಾ ಹೇರ್ಳೆ ನಿರೂಪಿಸಿ, ಅಕ್ಷತಾ ಗಿರೀಶ್ ಐತಾಳ್ ವಂದಿಸಿದರು.