ಸ್ವಾತಂತ್ರ್ಯ ಹೋರಾಟಗಾರ ಕೆ.ಎಲ್.ಶರ್ಮಾ ಸಂಸ್ಮರಣೆ, ನಾಮಪಲಕ ಅನಾವರಣ
ಶಿರ್ವ, ಆ.13: ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಹಸ್ತಚಿತ್ತ ಫೌಂಡೇ ಶನ್ ವಕ್ವಾಡಿ, ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹಾಗೂ ಕಾಪು ತಾಲೂಕು ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಎಂಎಸ್ಆರ್ಎಸ್ ಕಾಲೇಜು ಶಿರ್ವ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಂಟಕಲ್ಲು ಕೆ.ಲಕ್ಷ್ಮೀನಾರಾಯಣ ಶರ್ಮಾರವರ ಮನೆಯಲ್ಲಿ ಸಂಸ್ಮರಣೆ ಮತ್ತು ನಾಮಫಲಕ ಅನಾವರಣ ಕಾರ್ಯಕ್ರಮ ಶನಿವಾರ ಜರಗಿತು.
ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್ ರಾಷ್ಟ್ರಧ್ವಜ ಅರಳಿಸಿ, ಪುಪ್ಪಾರ್ಚನೆ ಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ತಾಮ್ರಪ್ರಶಸ್ತಿ ಪುರಸ್ಕೃತ ಕೆ.ಎಲ್.ಶರ್ಮಾ ಮನೆಗೆ ಅಳವಡಿಸಿದ ನಾಮಫಲಕ ಅನಾವರಣಗೊಳಿಸಿದರು.
ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಶರ್ಮಾರ ಭಾವಚಿತ್ರಕ್ಕೆ ಪುಪ್ಪಾಂಜಲಿ ಸಮರ್ಪಿಸಿ ನುಡಿನಮನ ಸಲ್ಲಿಸಿದರು. ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೆ.ಎಲ್.ಶರ್ಮಾರವರ ಪುತ್ರ, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಗರ ಕೊಡುಗೆಯ ಬಗ್ಗೆ ಎನ್ಎಸ್ಎಸ್ ವಿದ್ಯಾರ್ಥಿ ದಿಶಾಂತ್ ಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಉಪನ್ಯಾಸಕ, ಎನ್ಎಸ್ಎಸ್ ಆಧಿಕಾರಿ ಮುರುಗೇಶ್ ಟಿ. ವಹಿಸಿದ್ದರು. ಸಂಘಟಕ ಪ್ರದೀಪ್ ಬಸ್ರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಪತಿ ಆಚಾರ್ಯ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ವಂದಿಸಿದರು.