ಡೀಕಯ್ಯ ಬಹುಜನ ಚಳುವಳಿ ಕಟ್ಟಿಬೆಳೆಸಿದ ನಾಯಕ: ರಾಜಶೇಖರಮೂರ್ತಿ
ಉಡುಪಿ: ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ಸಾವಣೋ(ಶ್ರಾವಣ) ಹುಣ್ಣಿಮೆಯ ಬುದ್ಧ ವಂದನೆ ಹಾಗೂ ಇತ್ತೀಚೆಗೆ ಅಗಲಿದ ಹಿರಿಯ ಬಹುಜನ ನಾಯಕ ಬೌದ್ಧ ಧಮ್ಮದ ಉಪಾಸಕ ಪಿ.ಡೀಕಯ್ಯರಿಗೆ ನುಡಿನಮನ ಕಾರ್ಯಕ್ರಮವನ್ನು ಶುಕ್ರವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ ಮಾತನಾಡಿ, ಕರ್ನಾಟಕ ದಲ್ಲಿ ಬಹುಜನ ಚಳುವಳಿಯನ್ನು ಕಟ್ಟಿ ಬೆಳೆಸಿದ ಕೆಲವೇ ನಾಯಕರಲ್ಲಿ ಡೀಕಯ್ಯ ರವರೂ ಪ್ರಮುಖರು. ನಾವೆಲ್ಲರೂ ಅವರ ಜ್ಞಾನದ ವಾರಸುದಾರಿಕೆ ಯನ್ನು ಪಡೆದು ಅಂಬೇಡ್ಕರ್ ಚಳುವಳಿಯನ್ನು ಕಟ್ಟಬೇಕಿದೆ ಎಂದು ಹೇಳಿದರು.
ಡೀಕಯ್ಯರ ಚಳುವಳಿಯ ಸಹವರ್ತಿ ಅಚ್ಚುತ ಸಂಪಿಗೆ ಮಾತನಾಡಿ, ಡೀಕಯ್ಯ ೧೯೮೦ರಲ್ಲಿ ನಾಗಪುರದಲ್ಲಿ ಬೌದ್ಧ ಧಮ್ಮ ದೀಕ್ಷೆಯನ್ನು ಪಡೆದು ಬೌದ್ಧ ದಮ್ಮ ಸ್ವೀಕರಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ತಲೆಮಾರಿನ ವರಾಗಿದ್ದರು. ಆ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಧಮ್ಮವನ್ನು ಪಸರಿಸಿದ ಕೀರ್ತಿ ಡೀಕಯ್ಯ ನವರಿಗೆ ಸಲ್ಲಬೇಕು. ಅಂಬೇಡ್ಕರ್ ಚಳುವಳಿಯನ್ನು ಬದ್ಧತೆಯಿಂದ ಕಟ್ಟಿ ಬೆಳೆಸಿದರು ಎಂದರು.
ಅಧ್ಯಕ್ಷತೆಯನ್ನು ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ರಾಘವೇಂದ್ರ ಜಿ. ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಣಿಪಾಲ ಮಾಹೆಯ ಸಹಾಯಕ ಪ್ರಾದ್ಯಾಪಕ ಪ್ರಭೋಧನ್ ಪೋಲ್ ಡೀಕಯ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಡೀಕಯ್ಯರ ಬಾಳ ಸಂಗಾತಿ ಅಮೃತ ಆತ್ರಾಡಿ, ವಕೀಲ ಮಂಜುನಾಥ ವಿ. ಡೀಕಯ್ಯ, ಸಂಬುದ್ಧ ಎಜುಕೇಷನಲ್ ಕಲ್ಚರಲ್ ಅಂಡ್ ಚಾರಿಟೇಬಲ್ ಟ್ರಸ್ಟ್ನ ಉಪಾಧ್ಯಕ್ಷ ಗೋಪಾಲಕೃಷ್ಣ, ಉಪಸ್ಥಿತರಿದ್ದರು.