ಸಾಸ್ತಾನ: ಕೋಡಿ ಹೊಸಬೇಂಗ್ರೆಯಲ್ಲಿ ಹೆಚ್ಚಿದ ಕಡಲ್ಕೊರೆತ
ಕುಂದಾಪುರ, ಆ.18: ಸಾಸ್ತಾನ ಸಮೀಪದ ಕೋಡಿ ಕನ್ಯಾಣ ಗ್ರಾ.ಪಂ. ವ್ಯಾಪ್ತಿಯ ಕೋಡಿ ಹೊಸಬೆಂಗ್ರೆ ಪ್ರದೇಶದಲ್ಲಿ ಕಡಲ್ಕೊರೆತ ಮತ್ತೆ ಹೆಚ್ಚಿದ್ದು, ಇಲ್ಲಿನ ಸಂಪರ್ಕ ರಸ್ತೆ ಹಾಗೂ ಮನೆ ಅಲೆಗಳ ಹೊಡೆತದಿಂದ ಅಪಾಯಕ್ಕೆ ಸಿಲುಕಿ ತೀರ ವಾಸಿಗಳು ಆತಂಕಕ್ಕೀಡಾಗಿದ್ದಾರೆ.
ಕಡಲ ತೀರದ ಒಂದು ಮನೆ ಕೊಚ್ಚಿಹೋಗುವ ಭೀತಿಯಿದ್ದು, ಈಗಾಗಲೇ ಹಲವು ತೆಂಗಿನ ಮರಗಳು ನೀರುಪಾಲಾಗಿದೆ. ಅಲ್ಲದೆ ಹಲವು ಮನೆಗಳು ಈ ಪ್ರದೇಶದಲ್ಲಿದ್ದು ಶಾಶ್ವತ ಪರಿಹಾರಕ್ಕೆ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.
ಈ ಭಾಗದಲ್ಲಿ ಕೆಲ ಸಮಯದಿಂದ ಕಡಲ್ಕೊರೆತ ಹೆಚ್ಚಿದ್ದು, ಕಳೆದ ವಾರ ಮೀನುಗಾರಿಕೆ ಸಚಿವ ಎಸ್. ಅಂಗಾರ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿ ತಾತ್ಕಾಲಿಕ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಸ್ಥಳೀಯರ ಪ್ರಕಾರ ಆ ಸಮಯದಲ್ಲೇ ಸಂಬಂದಪಟ್ಟವರು ಮುಂಜಾಗ್ರತೆ ವಹಿಸಿ ಕಾಮಗಾರಿ ಮಾಡಿಸಿದ್ದರೆ ಇಂತಹ ಸಮಸ್ಯೆ ಉದ್ಭವಿಸುತ್ತಿರಲಿಲ್ಲ.
ಕುಂದಾಪುರ ಶಾಸಕರ ಮುತುವರ್ಜಿಯಲ್ಲಿ ಸದ್ಯ ಸಮುದ್ರ ದಂಡೆಗೆ ಕಲ್ಲು ಅಳವಡಿಸಲು ಕ್ರಮ ಕೈಗೊಂಡಿದ್ದು ಇಂದು ಕೂಡ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.