ಉಡುಪಿ: ಇಂದ್ರಾಳಿ ಬಳಿ ಹೆದ್ದಾರಿ ದುರಸ್ತಿಗೆ ಒತ್ತಾಯಿಸಿ ಉರುಳು ಸೇವೆಯ ಮೂಲಕ ವಿನೂತನ ಪ್ರತಿಭಟನೆ
ಉಡುಪಿ, ಸೆ.13: ಮಲ್ಪೆ- ತೀರ್ಥಹಳ್ಳಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಇಂದ್ರಾಳಿ ರೈಲ್ವೆ ಸೇತುವೆ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅದನ್ನು ತಕ್ಷಣವೇ ದುರಸ್ಥಿಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಇಂದು ಇಂದ್ರಾಳಿಯ ರಸ್ತೆ ಗುಂಡಿಯಲ್ಲೇ ಉರುಳು ಸೇವೆ ನಡೆಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಉಡುಪಿ-ಮಣಿಪಾಲ ನಡುವಿನ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದು, ಇದರಿಂದ ಲಘು ಹಾಗೂ ಘನ ವಾಹನಗಳು ಸಂಚಾರಕ್ಕಾಗಿ ಪ್ರಯಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಸ್ಥಳ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಸಮಸ್ಯೆಯ ಕುರಿತು ಜನಪ್ರತಿನಿಧಿ ಗಳಾಗಲಿ ಅಧಿಕಾರಿಗಳಾಗಲಿ ಇದುವರೆಗೂ ಗಮನ ಹರಿಸಿಲ್ಲ. ಸಮಸ್ಯೆಗಳು ಉಲ್ಭಣಗೊಳ್ಳುತ್ತಿವೆ. ಹೀಗಾಗಿ ಸಮಸ್ಯೆಯ ಬಗ್ಗೆ ಜನರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಈ ವಿಶಿಷ್ಟ ಪ್ರತಿಭಟನೆ ಹಮ್ಮಿಕೊಂಡಿದ್ದಾಗಿ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ತಿಳಿಸಿದರು.
ಉದ್ದನೆಯ ಕೇಸರಿ ನಿಲುವಂಗಿ ಧರಿಸಿದ ನಿತ್ಯಾನಂದ ಒಳಕಾಡು ಹನುಮಾನ್ ಭಾವಚಿತ್ರಕ್ಕೆ ದೀಪ ಬೆಳಗಿ, ತೆಂಗಿನ ಕಾಯಿಯನ್ನು ರಸ್ತೆಗೆ ಒಡೆದು ಸುಮಾರು 15 ನಿಮಿಷಗಳ ಕಾಲ ಸುರಿಯುವ ಮಳೆಯನ್ನು ಲೆಕ್ಕಿಸದೇ ಇಂದ್ರಾಳಿ ಸೇತುವೆ ಮೇಲಿನ ರಸ್ತೆಯಲ್ಲಿ ಏಕಾಂಗಿಯಾಗಿ ಉರುಳು ಸೇವೆ ನಡೆಸಿದರು.
ತಮಟೆ ಸದ್ದಿನ ನಡುವೆ ನೀರು ತುಂಬಿದ್ದ ರಸ್ತೆಯ ಮೇಲಿನ ದೊಡ್ಡದೊಡ್ಡ ಹೊಂಡದಲ್ಲೂ ಅವರ ಉರುಳುಸೇವೆ ಮುಂದುವರಿಯಿತು. ನಗರದ ಅತ್ಯಂತ ವಾಹನ ದಟ್ಟನೆಯ ಪ್ರದೇಶ ಇದಾಗಿದ್ದು, ಉರುಳು ಸೇವೆ ನಡೆಯುವಾಗ ಪೊಲೀಸರು ಕೆಲ ಹೊತ್ತು ರಸ್ತೆ ಮೇಲಿನ ವಾಹನ ಸಂಚಾರವನ್ನು ತಡೆದು ನಿಲ್ಲಿಸಿದರು. ಇದರಿಂದ ಸುಮಾರು ಅರ್ಧಗಂಟೆ ಕಾಲ ಸಂಚಾರ ವ್ಯತ್ಯಯಗೊಂಡಿತು.
ಮೋದಿ, ಗಡ್ಕರಿ ಉಡುಪಿಗೂ ಬರಲಿ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತ್ಯಾನಂದ ಒಳಕಾಡು, ಪ್ರಧಾನಿ ಮೋದಿ ಬಂದಾಗ ರಸ್ತೆ ರಿಪೇರಿ ಯಾಗುತ್ತದೆ. ಇಲ್ಲಿಗೂ ಅವರು ಬರಲಿ. ಜನ ಈ ರಸ್ತೆಯಲ್ಲಿ ಸಾಯುತ್ತಿದ್ದಾರೆ. ಹಲವು ಅಪಘಾತಗಳು ನಿತ್ಯ ಸಂಭವಿಸುತ್ತಿದ್ದರೂ, ನಮ್ಮ ಜನಪ್ರತಿನಿಧಿಗಳಿಗೆ ಸಮಸ್ಯೆಯ ಗಂಭೀರತೆ ಅರ್ಥವಾಗುತ್ತಿಲ್ಲ. ಅವರ ಗಮನ ಸೆಳೆಯಲು ಉರುಳುಸೇವೆ ಪ್ರತಿಭಟನೆ ಹಮ್ಮಿಕೊಂಡಿದ್ದಾಗಿ ಹೇಳಿದರು.
ನಾಲ್ಕು ವರ್ಷಗಳಿಂದ ಟೆಂಡರ್ ಕರೆಯುತಿದ್ದಾರೆ. ಆದರೆ ಮುಂದೇನೂ ನಡೆಯುವುದಿಲ್ಲ. ಜನ ಮಾತ್ರ ಇಲ್ಲಿ ಸಾಯ್ತಿದ್ದಾರೆ. ಪ್ರಧಾನಿಯವರೇ... ಗಡ್ಕರಿ ಸಾಹೇಬರೇ ಇಲ್ಲಿಗೊಮ್ಮೆ ಬಂದು ನೋಡಿ... ನಮ್ಮ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಈ ಹೆದ್ದಾರಿಯಲ್ಲಿ ಓಡಾಡಿದರೂ ಜನರ ಸಮಸ್ಯೆಗೆ ಕಣ್ಣು ತೆರೆದು ನೋಡಿಲ್ಲ. ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳೂ ನಿಷ್ಕೃಿಯರಾಗಿದ್ದಾರೆ. ರಾತ್ರಿ ಈ ಭಾಗದಲ್ಲಿ ಬೀದಿ ದೀಪಗಳು ಇಲ್ಲ. ಒಟ್ಟಾರೆ ಇಲ್ಲಿ ಸಂಚರಿಸಲಾಗದಷ್ಟು ಪರಿಸ್ಥಿತಿ ಹದಗೆಟ್ಟಿದೆ ಎಂದು ಒಳಕಾಡು ಆಕ್ರೋಶ ವ್ಯಕ್ತಪಡಿಸಿದರು.
ಕುಂಟುತ್ತಾ, ತೆವಳುತ್ತಿದೆ ದುರಸ್ಥಿ ಕಾರ್ಯ
ಇಂದ್ರಾಳಿಯಲ್ಲಿ ಈ ರೈಲ್ವೆ ಸೇತುವೆಯ ಕಾಮಗಾರಿಗೆ ಪ್ರಾರಂಭದ ದಿನದಿಂದಲೂ ಹಲವು ಅಡೆತಡೆಗಳು ಎದುರಾಗುತ್ತಾ ಬರುತ್ತಿವೆ. 2018ರಿಂದ ಉಡುಪಿ-ಮಣಿಪಾಲ ಚತುಷ್ಪಥ ಕಾಮಗಾರಿ ನಡೆದರೂ, ಮಧ್ಯದ ಈ ಸೇತುವೆ ಕಾಮಗಾರಿ ಹಾಗೆಯೇ ಉಳಿದಿದೆ. ಈ ಕಾಮಗಾರಿ ನಡೆಸಬೇಕಾದವರು ರೈಲ್ವೆ ಇಲಾಖೆಯವರು.
ಕೋವಿಡ್ ಸಂದರ್ಭದಲ್ಲಿ ಆರಂಭವಾದ ಕಾಮಗಾರಿ ಸದ್ಯ ಅರ್ಧಕ್ಕೆ ನಿಂತಿದೆ. ಪ್ರಾರಂಭದಲ್ಲಿ ಸೇತುವೆಯ ವಿನ್ಯಾಸದ ಬಗ್ಗೆ ತಕರಾರು ಎದ್ದು ನಂತರ ಬಗೆಹರಿದಿತ್ತು. ಅನಂತರ ಹೆಚ್ಚಳವಾದ ಯೋಜನಾ ವೆಚ್ಚಕ್ಕೆ ಅಂಗೀಕಾರ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸದ್ಯಕ್ಕಂತೂ ಕಾಮಗಾರಿ ಪ್ರಾರಂಭಗೊಳ್ಳುವ ಲಕ್ಷಣಗಳಿಲ್ಲ. ಜಿಲ್ಲೆಯ ಸಂಸದರು, ಶಾಸಕರು ಈ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಂಡಂತೆ ಕಾಣುವುದಿಲ್ಲ. ಇದು ಜನರ ಹಾಗೂ ರಸ್ತೆ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ರಾಜ್ಯದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಉಡುಪಿಗೆ ಭೇಟಿ ಕೊಟ್ಟಾಗ, ಮಣಿಪಾಲಕ್ಕೂ ಅವರು ತೆರಳಲಿದ್ದ ಕಾರಣ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು. ಆದರೆ ಒಂದೆರಡು ದಿನಗಳಲ್ಲಿ ರಸ್ತೆ ಹಿಂದಿನ ಸ್ಥಿತಿಗೆ ಮರಳಿತ್ತು. ಹೀಗಾಗಿಯೇ ಪ್ರಧಾನಿಯವರು ಈ ರಸ್ತೆಯಲ್ಲಿ ಸಂಚರಿಸಿದರೆ, ರಸ್ತೆಯ ಸಮಸ್ಯೆಗೊಂದು ಮುಕ್ತಿ ಸಿಗಬಹುದು ಎಂಬ ನಿರೀಕ್ಷೆ ಜಿಲ್ಲೆಯ ಜನತೆಯದು.
ಸದ್ಯ ಇಂದು ನಿತ್ಯಾನಂದ ಒಳಕಾಡು ರಸ್ತೆಯಲ್ಲಿ ನಡೆಸಿರುವ ಉರುಳು ಸೇವೆಯ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇದರಿಂದಲಾದರೂ ಕಳೆದ 3-4 ವರ್ಷಗಳಿಂದ ಉಡುಪಿಯನ್ನು ಬಾಧಿಸುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವಂತಾಗಲಿ ಎಂದು ಜನತೆ ಹಾರೈಸುತಿದ್ದಾರೆ.
ಇದನ್ನೂ ಓದಿ: ಪುಂಡ ಪೋಕರಿಯಂತೆ ಮಾತಾಡಿದರೆ ಗೌರವ ಉಳಿಯುವುದಿಲ್ಲ: ಸಿ.ಟಿ ರವಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ