ಪಿಎಫ್ಐ ಚಟುವಟಿಕೆಗೆ ಅಕ್ರಮ ಹಣ ನೀಡುವ ವಕ್ಫ್ ಬೋರ್ಡ್ ರದ್ದುಗೊಳಿಸಿ: ಯಶ್ಪಾಲ್ ಸುವರ್ಣ
ಯಶ್ಪಾಲ್ ಸುವರ್ಣ
ಉಡುಪಿ, ಸೆ.28: 'ವಕ್ಫ್ ಅಕ್ರಮದ ಹಣ ಪಿಎಫ್ಐ ಸಂಘಟನೆಯ ಕಾರ್ಯಕರ್ತರ ದೇಶದ್ರೋಹಿ ಚಟವಟಿಕೆಗಳಿಗಾಗಿ ಬಳಕೆಯಾಗುತ್ತಿದ್ದು, ಕೂಡಲೇ ಸರಕಾರ ವಕ್ಫ್ ಬೋರ್ಡ್ ರದ್ದುಗೊಳಿಸಿ ಆಸ್ತಿಯನ್ನು ಸರಕಾರ ವಶ ಪಡಿಸಬೇಕು' ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಲವ್ ಜೆಹಾದ್, ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸಿ ಮುಸ್ಲಿಮ್ ರಾಷ್ಟ್ರಗಳ ಮೂಲಕ ಹಣ ಸಂಗ್ರಹಿಸುವ ಜಾಲವನ್ನು ಎನ್ಐಎ ತನಿಖೆ ಮೂಲಕ ಬಯಲಿ ಗೆಳೆದಿದೆ. ಗಡಿಯಾಚೆಗಿನ ಉಗ್ರರಿಗಿಂತ ದೇಶದೊಳಗಿನ ಇಂತಹ ಸಂಘಟನೆಗಳೇ ದೇಶದ ಆಂತರಿಕ ಭದ್ರತೆಗೆ ದೊಡ್ಡ ಸವಾಲು ಎಂದು ದೂರಿದರು. ಕರಾವಳಿ ಜಿಲ್ಲೆಯಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತರ ಕೇಸ್ ಬಗ್ಗೆ ತನಿಖೆ ನಡೆಸಿ ಈ ಸಂಘಟನೆಗಳ ಕಾರ್ಯಕರ್ತರ ಪಾತ್ರ ಶೀಘ್ರ ಬಯಲಾಗಲಿದೆ. ಈ ಎಲ್ಲಾ ಬೆಳವಣಿಗೆಯ ಬಗ್ಗೆ ದಿವ್ಯ ಮೌನ ತಾಳಿರುವ ಕಾಂಗ್ರೆಸ್ ನಾಯಕರ ನಡೆ ಅನುಮಾನ ಸೃಷ್ಟಿಸಿದೆ. ಈ ರಾಷ್ಟ್ರವಿರೋಧಿ ಸಂಘಟನೆಗಳಿಗೆ ಪರೋಕ್ಷ ಬೆಂಬಲ ಸೂಚಿಸಿದಂತಿದೆ' ಎಂದು ಅವರು ಆರೋಪಿಸಿದರು.
ಈ ಕಾರ್ಯಕರ್ತರ ಹಿಂದೆ ತೆರೆಮರೆಯಲ್ಲಿ ಸಹಕಾರ ನೀಡುವ ಸಮಾಜದಲ್ಲಿ ಗಣ್ಯರ ಸೋಗಿನಲ್ಲಿ ಓಡಾಡುತ್ತಿರುವ ಬಗ್ಗೆಯೂ ತನಿಖೆ ನಡೆಯಬೇಕು. ಬೇರೆ ಬೇರೆ ಹೆಸರಿನಿಂದ ನಾಯಿಕೊಡೆಯಂತೆ ಸೃಷ್ಟಿಯಾಗುವ ಈ ಮತೀಯ ಸಂಘಟನೆಯನ್ನು ನಿಷೇಧಕ್ಕೆ ಕೇಂದ್ರ ಸರ್ಕಾರದಿಂದ ಗಂಭೀರ ಚಿಂತನೆ ನಡೆದಿದೆ ಎಂದು ಅವರು ಹೇಳಿದರು.