ಉಡುಪಿ: ತಲವಾರು ಪ್ರದರ್ಶನ, ಪ್ರಚೋದನಕಾರಿ ಭಾಷಣ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಸಿಪಿಎಂ ಒತ್ತಾಯ
ಉಡುಪಿ, ಅ.4: ಉಡುಪಿಯಲ್ಲಿ ನಡೆದ ದುರ್ಗಾ ದೌಡ್ ಸಂದರ್ಭದ ಮೆರವಣಿಗೆಯಲ್ಲಿ ತಲವಾರು, ಖಡ್ಗಗಳ ಪ್ರದರ್ಶನ ಹಾಗೂ ಸಭೆಯಲ್ಲಿ ಕೇಳಿಬಂದ ಪ್ರಚೋದನಕಾರಿ ಭಾಷಣದ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸಿಪಿಐ(ಎಂ) ಉಡುಪಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಅ.2ರಂದು ಉಡುಪಿಯಲ್ಲಿ ನಡೆದ ದುರ್ಗಾ ದೌಡ್ ಕಾರ್ಯಕ್ರಮದ ಸಂದರ್ಭದಲಿ ಖಡ್ಗವನ್ನು ಝಳಪಿಸುತ್ತಾ ಮೆರವಣಿಗೆ ನಡೆಸಿದ್ದು ಮಾತ್ರವಲ್ದೇ ಸಭೆಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದು, ಪತ್ರಿಕೆಗಳಲಿ ವರದಿಯಾಗಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಚಿವ ವಿ.ಸುನಿಲ್ಕುಮಾರ್ ಹಾಗೂ ಕೆಲವು ಶಾಸಕರೂ ಭಾಗವಹಿಸಿದ್ದು ಅವರ ಎದುರಿನಲ್ಲೇ ಇಂತಹ ಕಾರ್ಯಕ್ರಮಗಳು ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಜನರು ಇಂತಹ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳನ್ನು ತಿರಸ್ಕರಿಸಬೇಕು ಎಂದು ಸಿಪಿಎಂ ಮನವಿ ಮಾಡುತ್ತದೆ ಎಂದವರು ಹೇಳಿದ್ದಾರೆ.