ಉಡುಪಿಯಲ್ಲಿ ಮಹಿಷಾಸುರನ ದಸರಾ ಹಬ್ಬದ ಆಚರಣೆಗೆ ಚಿಂತನೆ: ಜಯನ್ ಮಲ್ಪೆ
ಮಲ್ಪೆ, ಅ.4: ಮುಂದಿನ ವರ್ಷದಿಂದ, ಮಹಿಷ ಮಂಡಲದ ದೊರೆಯಾಗಿದ್ದ ಮಹಿಷಾಸುರನನ್ನು ವೈದಿಕರು ದುಷ್ಟನೆಂದು ಬಿಂಬಿಸಿರುವುದರ ವಿರುದ್ಧ ಉಡುಪಿಯಲ್ಲಿ ಅದ್ದೂರಿಯಾಗಿ ಮಹಿಷ ದಸರಾ ಹಬ್ಬ ಆಚರಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಸೋಮವಾರ ಮಲ್ಪೆಯ ಸರಸ್ವತಿ ಮಹಿಳಾ ಸಾಂಸ್ಕೃತಿಕ ಕಲಾ ತಂಡ ಏರ್ಪಡಿಸಿದ ನವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಹಿಷ ಮಂಡಲವನ್ನು ಆಳ್ವಿಕೆ ಮಾಡಿದ್ದು ತೋಡ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಷಾಸುರ. ಆದರೆ ಇದೇ ಮಹಿಷಾಸುರನನ್ನು ದುಷ್ಟ, ಕಾಮಾಂಧ, ಜನವಿರೋಧಿ ಎಂಬಂತೆ ಚಿತ್ರಿಸಿ, ಈತನ ಸಂಹಾರಕ್ಕಾಗಿಯೇ ಪಾರ್ವತಿಯು ಚಾಮುಂಡೇಶ್ವರಿಯ ಅವತಾರವೆತ್ತಿ ಬಂದು ಮಹಿಷಾಸುರ ನನ್ನು ಕೊಂದಿದ್ದು ಎನ್ನಲಾಗುತ್ತಿದೆ. ಇದು ಸಂಪೂರ್ಣ ಕಟ್ಟುಕತೆ ಎಂದು ಜಯನ್ ಮಲ್ಪೆ ಪ್ರತಿಪಾದಿಸಿದರು.
ಹಳೇ ಮೈಸೂರು ಭಾಗದಲ್ಲಿ ನಡೆಯುವ ಪಿತೃಪಕ್ಷ ಹಬ್ಬದಾಚರಣೆ ಜನಪದೀಯ ನೆಲೆಗಳ ಮೂಲಕವೇ ಮಹಿಷನನ್ನು ಕಂಡುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ಮಹಿಳಾ ಸಾಂಸ್ಕೃತಿಕ ಕಲಾತಂಡದ ಅಧ್ಯಕ್ಷೆ ಉಷಾ ಅಚ್ಚುತ್ತ ಮೆಂಡನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಾಸುದೇವ ಮಾಸ್ತರ್, ಸದಾನಂದ ಬಲರಾಮ ನಗರ, ಸುಧಾಕರ ಮೂಡಬೆಟ್ಟು ಮತ್ತು ಅಶ್ವಿನಿ ವಿಠಲ ಮಲ್ಪೆ ಉಪಸ್ಥಿತರಿದ್ದರು.
ಪೂರ್ಣಿಮ ಸ್ವಾಗತಿಸಿ, ಗೀತಾ ವಂದಿಸಿದರು. ಭವನ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.