ಕುಂದಾಪುರ: ಅ.9ರಂದು ವಿದ್ಯಾಪೋಷಕ್ ವಿನಮ್ರ ಸಹಾಯಧನ-2022
1135 ವಿದ್ಯಾರ್ಥಿಗಳಿಗೆ ಒಟ್ಟು 89.85 ಲಕ್ಷ ರೂ.ವಿತರಣೆ
ಸಾಂದರ್ಭಿಕ ಚಿತ್ರ
ಉಡುಪಿ, ಅ.8: ಉಡುಪಿಯ ಯಕ್ಷಗಾನ ಕಲಾರಂಗದ ಅಂಗಸಂಸ್ಥೆಯಾದ ವಿದ್ಯಾಪೋಷಕ್, ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ 17 ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದ್ದು ಈ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭ ಅ.9ರಂದು ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್ನಲ್ಲಿ ಸಂಪನ್ನಗೊಳ್ಳಲ್ಲಿದೆ.
ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥರು ಬೆಳಗ್ಗೆ 10 ಕ್ಕೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ವಹಿಸಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬೈಂದೂರು ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ ಶುಭಾಸಂಸನೆಗೈಯಲಿದ್ದಾರೆ. ಡಾ.ನಿ.ಬೀ.ವಿಜಯ ಬಲ್ಲಾಳ್, ಶ್ರೀರಮಣ ಉಪಾಧ್ಯ ಹಾಗೂ ಕೃಷ್ಣಾನಂದ ಛಾತ್ರ ಉಪಸ್ಥಿತರಿರುವರು.
ಅಪರಾಹ್ನ 2:30ಕ್ಕೆ ನಾಡೋಜ ಡಾ.ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆಯುವ ವಿನಮ್ರ ಸಹಾಯ ವಿತರಣಾ ಸಮಾರಂಭದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಶಾಸಕ ಕೆ.ರಘುಪತಿ ಭಟ್ ಭಾಗವಹಿಸುವರು. ಮಂಗಳೂರಿನ ಪ್ರೇರಣಾ ಇನ್ಫೋಸಿಸ್ ಸಂಸ್ಥೆಯ ವಿಶ್ವಸ್ಥ ವಾಸುದೇವ ಕಾಮತ್ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ 1135 ವಿದ್ಯಾರ್ಥಿಗಳಿಗೆ ಒಟ್ಟು 89,85,500 ರೂ. ಸಹಾಯಧನ ವಿತರಣೆಯಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.