ದೀಪಾವಳಿ ಹಬ್ಬದ ಹೂವಿನ ವ್ಯಾಪಾರಕ್ಕೂ ಸೂರ್ಯಗ್ರಹಣ ಎಫೆಕ್ಟ್!
ವ್ಯಾಪಾರ ಇಲ್ಲದೆ ಅಪಾರ ನಷ್ಟ: ಹೊರಜಿಲ್ಲೆಯ ವ್ಯಾಪಾರಿಗಳ ಅಲು
ಉಡುಪಿ, ಅ.25: ಸೂರ್ಯಗ್ರಹಣ ಪರಿಣಾಮವಾಗಿ ದೀಪಾವಳಿ ಹಬ್ಬ ವಾದರೂ ಜನ ಬೀದಿಗೆ ಇಳಿಯದ ಪರಿಣಾಮ ವ್ಯಾಪಾರಕ್ಕಾಗಿ ಹಣ ಹೂಡಿಕೆ ಮಾಡಿ ಉಡುಪಿಗೆ ಆಗಮಿಸಿದ ಹೊರ ಜಿಲ್ಲೆಯ ಹೂವು ವ್ಯಾಪಾರಿಗಳು ಅಪಾರ ನಷ್ಟ ಅನುಭವಿಸಿದ್ದಾರೆ.
ನಗರದ ರಥಬೀದಿ, ಚಿತ್ತರಂಜನ್ ಸರ್ಕಲ್ ಸಮೀಪ ರಸ್ತೆ, ಕೆ.ಎಂ.ಮಾರ್ಗ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಹಾಸನ ಸೇರಿದಂತೆ ವಿವಿಧ ಜಿಲ್ಲೆ ಗಳಿಂದ ಆಗಮಿಸಿದ ಹೂವಿನ ವ್ಯಾಪಾರಿಗಳು ಕಳೆದ ಮೂರು ದಿನಗಳಿಂದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಪ್ರತಿದಿನ ಹಣ ಹೂಡಿಕೆ ಮಾಡಿ ಉಡುಪಿಗೆ ಹೂವು ತರಿಸಿ ವ್ಯಾಪಾರ ನಡೆಸುತ್ತಿದ್ದಾರೆ.
ಹಬ್ಬದ ಆರಂಭದ ದಿನವಾದ ಎರಡು ದಿನ ಸಾದಾರಣ ವ್ಯಾಪಾರ ಇತ್ತು. ಆದರೆ ಇಂದು ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಜನ ಓಡಾಟ, ಖರೀದಿ ಕಡಿಮೆ ಆಗಿರುವುದರಿಂದ ಹೂವಿನ ವ್ಯಾಪಾರ ಕೂಡ ಇರಲಿಲ್ಲ. ಇದರಿಂದ ವ್ಯಾಪರದಲ್ಲಿ ಸಾವಿರಾರು ರೂ. ನಷ್ಟ ಉಂಟಾಗಿದೆ. ವ್ಯಾಪಾರ ಇಲ್ಲದೆ ಹೂವು ಗಳು ಬಾಡಿ ಹೋಗಿ ತ್ಯಾಜ್ಯವಾಗಿ ಎಸೆಯಲಾಗಿದೆ ಎಂದು ವ್ಯಾಪಾರಸ್ಥರರು ಅಳಲು ತೋಡಿಕೊಂಡರು.
‘ಬೆಂಗಳೂರಿನಿಂದ ಹೂವು ತಂದಿದ್ದೇವೆ. ಇಲ್ಲಿ ರವಿವಾರ, ಸೋಮವಾರ ಹಬ್ಬ ಆಗುತ್ತದೆ ಎಂದು ನಾವು ಭಾವಿಸಿ ದ್ದೇವೆ. ಈ ಎರಡು ದಿನ ಕೂಡ ವ್ಯಾಪಾರ ಆಗಿಲ್ಲ. ಮಂಗಳವಾರ ಆಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದೇವು. ಆದರೆ ಇವತ್ತು ಗ್ರಹಣದಿಂದ ಏನು ವ್ಯಾಪಾರ ಆಗಿಲ್ಲ. ವ್ಯಾಪಾರ ಇಲ್ಲದೆ ಹೂವು ಎಲ್ಲ ಹಾಳಾಗಿವೆ. ಒಳ್ಳೆಯ ಫ್ರೇಶ್ ಹೂವು ಸಿಗಲ್ಲ. ಫ್ರೆಶ್ ಹೂವು ಸಿಗದೆ ವ್ಯಾಪಾರ ಕಡಿಮೆ ಆಗಿದೆ. ನಾವು ಹೂವಿಗೆ ಹಾಕಿದ ಹಣ ವಾಪಾಸ್ಸು ಬಾರದೆ ನಷ್ಟವಾಗಿದೆ. ಅಲ್ಲದೆ ಇಲ್ಲಿ ತುಂಬಾ ಬಿಸಿಲು ಇರುವುದರಿಂದ ಹೂವುಗಳು ಹಾಳಾಗಿವೆ. 100 ರೂ. ಹೂವುಗಳನ್ನು ಇಂದು 50, 40 ರೂ. 30 ರೂ.ಗೆ ಮಾರಾಟ ಮಾಡುತ್ತಿದ್ದೇವೆ ಎಂದು ಹಾಸನದ ಹೂವಿನ ವ್ಯಾಪಾರಿ ಗಣೇಶ್ ತಿಳಿಸಿದರು.
"ಹಬ್ಬದ ಸಮಯ ನಾವು ಇಲ್ಲಿಗೆ ವ್ಯಾಪಾರಕ್ಕೆ ಬರುತ್ತೇವೆ. ಈ ಹಿಂದೆ ಎಲ್ಲ ಒಳ್ಳೆಯ ವ್ಯಾಪಾರ ಆಗುತ್ತಿತ್ತು. ಆದರೆ ಇವತ್ತು ವ್ಯಾಪಾರ ಇಲ್ಲದೆ ನಷ್ಟವಾಗಿದೆ. 30 ಸಾವಿರ ಬಂಡವಾಳ ಹಾಕಿದರೆ 20 ಸಾವಿರ ರೂ. ವ್ಯಾಪಾರ ಆಗಿದೆ. ಉಳಿದ 10 ಸಾವಿರ ರೂ. ನಷ್ಟವಾಗಿದೆ. ಸೂರ್ಯಗ್ರಹಣದಿಂದ ಇಂದು ಯಾವುದೇ ವ್ಯಾಪಾರ ಆಗಿಲ್ಲ. ತುಂಬಾ ಹೂವುಗಳು ಹಾಳಾಗಿವೆ. ಎಲ್ಲವನ್ನು ಕಸದ ಬುಟ್ಟಿಗೆ ಹಾಕಿದ್ದೇವೆ. ಸ್ವಲ್ಪ ಚೆನ್ನಾಗಿರುವುದನ್ನು ಒಟ್ಟು ಸೇರಿಸಿ ವ್ಯಾಪಾರ ಮಾಡುತ್ತಿದ್ದೇವೆ. ಅರ್ಧ ದರಕ್ಕೆ ಹೂವು ಮಾರಾಟ ಮಾಡುತ್ತಿದ್ದೇವೆ".
-ಮಂಜು, ಹಾಸನದ ಹೂವಿನ ವ್ಯಾಪಾರಿ