ಹಲ್ಲೆ, ಕೊಲೆ ಬೆದರಿಕೆ: ಚೇರ್ಕಾಡಿ ಗ್ರಾ.ಪಂ. ಸದಸ್ಯನ ವಿರುದ್ಧ ಪ್ರಕರಣ ದಾಖಲು
ಬ್ರಹ್ಮಾವರ: ಚೇರ್ಕಾಡಿ ಗ್ರಾಪಂನ ವಾಟರ್ ಮ್ಯಾನ್ಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಗ್ರಾಪಂ ಸದಸ್ಯನ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಟರ್ ಮ್ಯಾನ್ ಜಗದೀಶ್ ಆಚಾರಿ ಎಂಬವರು ಕನ್ನಾರುನಲ್ಲಿ ರಸ್ತೆ ಕಾಮಗಾರಿಯಿಂದ ನೀರಿನ ಪೈಪ್ ಒಡೆದಿದ್ದು ಇದೇ ವಿಚಾರವಾಗಿ ಚೇರ್ಕಾಡಿ ಗ್ರಾ.ಪಂ. ಸದಸ್ಯ ನವೀನ್ ಬಂಗೇರ ನ.12ರಂದು ಮಧ್ಯಾಹ್ನ ಜಗದೀಶ್ಗೆ ಕರೆ ಮಾಡಿ, ಬೆದರಿಕೆಯೊಡ್ಡಿದ್ದನು ಎಂದು ದೂರಲಾಗಿದೆ. ಅಲ್ಲದೆ ಸಂಜೆ ಪೇತ್ರಿ ಪೇಟೆಯಲ್ಲಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಕೆನ್ನೆಗೆ ಹೊಡೆದು ಕಾಲಿನಿಂದ ತುಳಿದಿರುವುದಾಗಿ ಆರೋಪಿಸಲಾಗಿದೆ. ಅದೇ ರೀತಿ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಜಗದೀಶ್ ಆಚಾರಿ ಚಿಕಿತ್ಸೆಗಾಗಿ ಬಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ.
Next Story