ರಂಗಭೂಮಿಯಿಂದ ಸೌಹಾರ್ದ ಸಮಾಜ ಸೃಷ್ಟಿ: ನಿತೀಶ್ ಕೋಟ್ಯಾನ್
ಉಡುಪಿ, ನ.28: ರಂಗಭೂಮಿಯ ಅಂತರ್ಯವನ್ನು ಶ್ರದ್ದೆಯಿಂದ ಅರಿತಾಗ ಇಂದಿನ ಅತ್ಯಗತ್ಯವಾದ ಸೌಹಾರ್ದ ಸಮಾಜದ ಸೃಷ್ಟಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಯುವ ಮನಸ್ಸುಗಳು ಸಕ್ರೀಯವಾಗಿ ಕಲಾಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಯುವ ರಂಗ ನಿರ್ದೇಶಕ ನಿತೀಶ್ ಕೋಟ್ಯಾನ್ ಬಂಟ್ವಾಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸುಮನಸಾ ಕೊಡವೂರು ಹಮ್ಮಿಕೊಂಡಿರುವ ರಂಗ ಶಿಬಿರ ನಟನಾವೀನ್ಯದ ನಿರ್ದೇಶಕರಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕಲಾಸಕ್ತರಿಗಾಗಿ ಕಲಾವಿದರಿಂದಲೇ ಸೃಷ್ಟಿಗೊಳ್ಳುವ ಕಲಾ ಪ್ರಕಾರಗಳು ಸಿದ್ಧ ಬದ್ಧವಾದ ಸಮಷ್ಟಿ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತದೆ. ಸಾಮಾಜಿಕ ಉನ್ನತಿಯಲ್ಲಿ ರಂಗಭೂಮಿಯ ಸಹಯೋಗ ಅತ್ಯಮೂಲ್ಯವಾದುದು. ಪ್ರಸ್ತುತ ರಂಗ ಭೂಮಿಯ ಬೆಳವಣಿಗೆಯಲ್ಲಿ ನಾವು ಸಕಾರಾತ್ಮಕವಾದವುಗಳನ್ನು ಮಾತ್ರ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ರಂಗಶಿಬಿರಗಳು ಅನುಭವದಜೊತೆಗೆ ಪ್ರತಿಭೆಯನ್ನು ವಿಕಸಿಸುತ್ತದೆ ಎಂದರು.
ನಿರ್ದೇಶಕ ದಿವಾಕರ್ ಕಟೀಲ್, ಅಕ್ಷತ್ ಅಮೀನ್ ಸಂಪನ್ಮೂಲ ವ್ಯಕ್ತಿಗಳಾಗಿ ದ್ದರು. ಈ ಸಂದರ್ಭದಲ್ಲಿ ಸುಮನ ಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಉಪಸ್ಥಿತರಿದ್ದರು. 10 ದಿನಗಳ ರಂಗ ಶಿಬಿರದಲ್ಲಿ 30 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.