ಉಡುಪಿ | ಸರಣಿ ಅಪಘಾತ; ಲಾರಿ ಪಲ್ಟಿ, 2 ಕಾರುಗಳು ಜಖಂ
ಉಡುಪಿ, ಡಿ.5: ಭತ್ತದ ಮೂಟೆ ಹೊತ್ತು ಸಾಗುತ್ತಿದ್ದ ಲಾರಿಯೊಂದು ಚಾಲಕ ನಿಯಂತ್ರಣ ತಪ್ಪಿ ಎರಗಿದ ಪರಿಣಾಮ ಎರಡು ಕಾರುಗಳು ಜಖಂಗೊಂಡ ಘಟನೆ ರವಿವಾರ ತಡರಾತ್ರಿ ಕೆಳಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಉಡುಪಿ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಭತ್ತದ ಮೂಟೆ ಹೊತ್ತ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಎರಡು ಟೂರಿಸ್ಟ್ ಕಾರುಗಳ ಮೇಲೆ ಎರಗಿತು. ಇದರ ಪರಿಣಾಮ ಒಂದು ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಭತ್ತದ ಮೂಟೆ ಲಾರಿಯಿಂದ ಬೇರ್ಪಟ್ಟು ರಸ್ತೆಯೆಲ್ಲ ಚೆಲ್ಲಾಪಿಳ್ಳಿಯಾಗಿದೆ ಎಂದು ತಿಳಿದು ಬಂದಿದೆ.
ಸ್ಥಳೀಯರ ಆಕ್ರೋಶ: ಉಡುಪಿಯಿಂದ ಪರ್ಕಳದ ಕಡೆ ಸಂಚರಿಸುವ ಹೊರ ಜಿಲ್ಲೆ ಹಾಗೂ ರಾಜ್ಯಗಳ ವಾಹನ ಚಾಲಕರಿಗೆ ಕೆಳ ಪರ್ಕಳದಲ್ಲಿ ರಸ್ತೆ ಗೊಂದಲ ಉಂಟಾಗುತ್ತಿದೆ. ಹೊಸ ಕಾಮಗಾರಿ ನಡೆಯುವ ರಸ್ತೆಯಲ್ಲಿ ಕಳೆದ 15 ದಿನಗಳಿಂದ ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಇಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ ಮತ್ತು ಇಲ್ಲಿದ್ದ ರಕ್ಷಣಾ ಬ್ಯಾರಿಕೇಡ್ಗಳನ್ನು ತೆಗೆಯಲಾಗಿದೆ. ಸೂಕ್ತ ಬೆಳಕಿನ ವ್ಯವಸ್ಥೆಯು ಇಲ್ಲ. ವಾಹನ ಚಾಲಕರು ಹಳೆ ರಸ್ತೆಯಲ್ಲಿ ಸಂಚರಿಸುವುದೇ ಹೊಸ ರಸ್ತೆಯಲ್ಲಿ ಸಂಚರಿಸುವುದೇ ಎಂಬ ಗೊಂದಲ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಹೊಸ ರಸ್ತೆಯಲ್ಲಿ ವಾಹನ ಸಂಚಾರದಿಂದ ಧೂಳು ಏಳುತ್ತವೆ ಎಂದು ಸ್ಥಳೀಯರು ರವಿವಾರ ಮಣೆಪಾಲ ಠಾಣೆಗೆ ದೂರು ನೀಡಿದ್ದಾರೆ. ಹೊಸ ರಸ್ತೆಯ ಕಾಮಗಾರಿಯೇ ನಡೆಸುತ್ತಿರುವಾಗಲೇ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿರುವುದೇ ಇಲ್ಲಿನ ಸಮಸ್ಯೆಗಳಿಗೆ ಕಾರಣ. ಕೆಳಪರ್ಕದ ಹಳೆ ರಸ್ತೆಗೆ ಸಂಪರ್ಕಿಸುವ ಎರಡು ರಸ್ತೆಗಳು ಸಂಪೂರ್ಣ ಹಾಳಾಗಿದೆ. ಹೀಗಾಗಿ ಇಲ್ಲಿ ಹಳೆ ರಸ್ತೆ ಯಾವುದು ಹೊಸ ರಸ್ತೆ ಯಾವುದು ಗೊತ್ತಾಗುವುದಿಲ್ಲ. ಶಾಸಕರು 15 ದಿನದೊಳಗೆ ಕಾಂಕ್ರೀಟ್ ರಸ್ತೆಯನ್ನು ಹಳೆ ರಸ್ತೆ ಸಂಪರ್ಕಿಸುವಂತೆ ಮಾಡಿ ಕೊಡು ವುದಾಗಿ ಭರವಸೆ ನೀಡಿ ಆರು ತಿಂಗಳೇ ಕಳೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.