ಸರಕಾರಿ ಯೋಜನೆ ಫಲಾನುಭವಿಗಳಿಗೆ ಹೆಚ್ಚೆಚ್ಚು ಸಾಲ ವಿತರಿಸಿ: ಬ್ಯಾಂಕ್ ಅಧಿಕಾರಿಗಳಿಗೆ ಉಡುಪಿ ಸಿಇಓ ಪ್ರಸನ್ನ ಸೂಚನೆ
ಉಡುಪಿ: ಜಿಲ್ಲೆಯ ಬ್ಯಾಂಕ್ ಶಾಖೆಗಳಿಗೆ ವಿವಿಧ ಸರಕಾರಿ ಯೋಜನೆಗಳ ಸಾಲ ಪಡೆಯಲು ಫಲಾನುಭವಿಗಳು ಸಲ್ಲಿಸುವ ಸಾಲದ ಅರ್ಜಿಗಳನ್ನು ಆದ್ಯತೆಯ ಮೇಲೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಂಜೂರು ಮಾಡುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಸೂಚನೆ ನೀಡಿದ್ದಾರೆ.
ಮಂಗಳವಾರ ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್ ಗಳ ಪರಿಶೀಲನಾ ಸಮಿತಿಯ ಸಭೆಯ (ಡಿಎಲ್ಆರ್) ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸರಕಾರಿ ಯೋಜನೆಗಳ ಫಲಾನುಭವಿಗಳ ಅರ್ಜಿಗಳನ್ನು ಬಲವಾದ ಕಾರಣವಿಲ್ಲದೇ ತಿರಸ್ಕರಿಸದಂತೆ, ಶೀಘ್ರವಾಗಿ ಅವುಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಿ ನಿಗದಿತ ಸಾಲ ವಿತರಿಸುವುದರಿಂದ ಇಲಾಖೆಗಳು ವಾರ್ಷಿಕ ಗುರಿಯನ್ನು ಮುಟ್ಟಲು ಸಹ ಸಹಾಯವಾಗುತ್ತದೆ ಎಂದವರು ಹೇಳಿದ್ದಾರೆ.
ಸಾಲ-ಠೇವಣಿ ಅನುಪಾತ ಹೆಚ್ಚಿಸಲು ಕರೆ: ರಾಜ್ಯದ ಅನುಪಾತಕ್ಕೆ ಹೋಲಿಸಿದರೆ, ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ ತೀರಾ ಕಡಿಮೆಯಾಗಿರುವುದಕ್ಕೆ ಕಳಕಳ ವ್ಯಕ್ತಪಡಿಸಿದ ಸಿಇಓ, ಇದನ್ನು ಉತ್ತಮ ಗೊಳಿಸಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ವಿತರಿಸುವ ಅಗತ್ಯವಿದೆ ಎಂದರು.
ಸರಕಾರದ ವಿವಿಧ ಯೋಜನೆಗಳಲ್ಲಿ ಸಾಲ ಪಡೆಯಲು ಬೇರೆ ಬೇರೆ ಇಲಾಖೆಗಳ ಮೂಲಕ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶೀಘ್ರದಲ್ಲಿ ಸಾಲ ವಿತರಿಸುವ ಮೂಲಕ ಈ ಪ್ರಮಾಣವನ್ನು ಸರಿದೂಗಿಸುವ ಜೊತೆಗೆ ಜಿಲ್ಲೆಯಲ್ಲಿ ಸರಕಾರಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಹಾಗೂ ಸಾರ್ವಜನಿಕರ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಲು ಸಾಧ್ಯವಾಗಲಿದೆ ಎಂದರು.
ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುವ ಶೈಕ್ಷಣಿಕ ಸಾಲ ಪ್ರಮಾಣ ಏನೇನೂ ಸಾಲದು. ಅದೇ ರೀತಿ ಮೀನು ಸಂಸ್ಕರಣ ಘಟಕ, ಗೇರುಬೀಜ ಸಂಸ್ಕರಣೆ, ಹೊಟೇಲ್ ಮತ್ತು ಸಾರಿಗೆ ಕ್ಷೇತ್ರಗಳಲ್ಲೂ ಸಾಲ ವಿತರಣೆಗೆ ಉತ್ತಮ ಅವಕಾಶಗಳಿವೆ ಎಂದರು.
ಕೃಷಿ ಮತ್ತು ತೋಟಗಾರಿಕಾ ವಲಯದಲ್ಲಿ ಕಿರು ಸಂಸ್ಕರಣಾ ಉದ್ಯಮ ಸ್ಥಾಪನೆಗೆ ಸಾಲ ಕೋರಿ ಸಲ್ಲಿಕೆಯಾಗುವ ಫಲಾನುಭವಿಗಳ ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತಿರಸ್ಕರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಾಂತ್ರಿಕ ಕಾರಣಗಳಿಗೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಂಡು ರೈತರಿಗೆ ಶೀಘ್ರವಾಗಿ ಸಾಲ ವಿತರಿಸಲು ಎಲ್ಲಾ ಬ್ಯಾಂಕ್ ಗಳು ಅಗತ್ಯಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಗ್ರಾಮಪಂಚಾಯತ್ ಗಳಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ವಿವೇಕಾನಂದ ಸಂಘಗಳನ್ನು ರಚಿಸಲು ಸರಕಾರದ ಆದೇಶವಿದ್ದು, ಕೆಲ ಬ್ಯಾಂಕ್ ಗಳಲ್ಲಿ ಕೆ.ವೈ.ಸಿ ಗೆ ದಾಖಲೆಗಳನ್ನು ನೀಡುವಂತೆ ಸ್ವ-ಸಹಾಯ ಸಂಘದ ಸದಸ್ಯರಿಗೆ ಸೂಚಿಸಲಾಗುತ್ತಿದೆ. ಇದಕ್ಕಾಗಿ ದಾಖಲೆಗಳನ್ನು ಪಡೆಯುವುದು ಅಗತ್ಯವಿಲ್ಲವೆಂದು ಈಗಾಗಲೇ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಹಿರಿಯ ಅಧಿಕಾರಿಗಳು ಈ ಬಗ್ಗೆ ಹಾಗೂ ಸರಕಾರದಿಂದ ಬರುವ ಸುತ್ತೋಲೆಗಳನ್ನು ಪಾಲಿಸುವ ಕುರಿತು ತಮ್ಮ ಬ್ಯಾಂಕ್ ಗಳ ಎಲ್ಲಾ ಶಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಿಇಓ ಸೂಚಿಸಿದರು.
ಆರ್ ಬಿ ಐ ನ ಬೆಂಗಳೂರು ವಲಯ ಅಧಿಕಾರಿ ಮುರಳಿಮೋಹನ್ ಪಾಠಕ್ ಮಾತನಾಡಿ, ಕರ್ನಾಟಕ ರಾಜ್ಯದ ಒಟ್ಟಾರೆ ಸಾಲ-ಠೇವಣಿ ಅನುಪಾತ ಶೇ.72.72 ಇದ್ದರೆ, ಉಡುಪಿ, ದಕ್ಷಿಣ ಕನ್ನಡಗಳಲ್ಲಿ ತೀರಾ ಕಳಪೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.4.54ರಷ್ಟು ಪ್ರಗತಿ ತೋರಿಸಿದರೂ ಉಡುಪಿ ಜಿಲ್ಲೆಯ ಸಿಡಿ ಅನುಪಾತ ಇನ್ನೂ ಶೇ.47.93 ಇದೆ. ಅದನ್ನು ಕನಿಷ್ಠ ಶೇ.60 ಕ್ಕೇರಿಸಬೇಕೆಂಬುದು ಆರ್ ಬಿ ಐ ಸೂಚನೆ ಎಂದರು.
ಯೂನಿಯನ್ ಬ್ಯಾಂಕಿನ ಆರ್ ಎಂ ಡಾ.ವಾಸಪ್ಪ ಮಾತನಾಡಿ, ಕರಾವಳಿಯಲ್ಲಿ ಅಧಿಕ ಸಂಖ್ಯೆಯಲ್ಲಿರುವುದು ಎನ್ಆರ್ ಐನ ಠೇವಣಿಯಾ ಗಿದ್ದು, ಅವರು ಹಣವನ್ನು ಠೇವಣಿಯಾಗಿರಿಸುವುದು ಮಾತ್ರ ಸಾಲ ಪಡೆಯು ವುದಿಲ್ಲ. ಹೀಗಾಗಿ ಬ್ಯಾಂಕ್ ಗಳು ಉತ್ತಮ ಪ್ರಗತಿಗಾಗಿ ಕೃಷಿ ಸಾಲ, ಶಿಕ್ಷಣ ಸಾಲ, ಮನೆ ಸಾಲ, ವಿವಿಧ ಉದ್ಯಮಿಗಳಿಗೆ ಸಾಲ ನೀಡಲು ಪ್ರಾಶಸ್ತ್ಯ ನೀಡಬೇಕು ಎಂದರು
ತ್ರೈಮಾಸಿಕ ವರದಿ: ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ವರದಿಯನ್ನು ಮಂಡಿಸಿದ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ಪ್ರಾದೇಶಿಕ ಮ್ಯಾನೇಜರ್ ಸಂಜೀವ ಕುಮಾರ್, ಜಿಲ್ಲೆಯಲ್ಲಿ ಕಳೆದ ಸಾಲಿಗೆ ಹೋಲಿಸಿದ್ದಲ್ಲಿ ಈ ಸಾಲಿನಲ್ಲಿ ಸಾಲ ನೀಡುವ ಪ್ರಮಾಣ ಶೇ.16.18ರಷ್ಟು ಹೆಚ್ಚಳವಾಗಿದ್ದು, ಎಲ್ಲಾ ಬ್ಯಾಂಕ್ ಗಳು ಮಾರ್ಚ್ ಅಂತ್ಯದ ವೇಳೆಗೆ ತಮ್ಮ ಗುರಿಯನ್ನು ಸಾಧಿಸುವಂತೆ ತಿಳಿಸಿದರು.
ಈ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ 1439.32 ಕೋಟಿರೂ., ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯಕ್ಕೆ 859.94 ಕೋಟಿರೂ., ಶಿಕ್ಷಣ ಸಾಲ 44.12 ಕೋಟಿ ರೂ., ವಸತಿ ಸಾಲ 185.47 ಕೋಟಿರೂ. ವಿತರಿಸಲಾಗಿದೆ.ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಲ್ಲಿ ಶೇ.190ರಷ್ಟು ಸಾಧನೆ ಮಾಡಿದ್ದು, 173 ಸಾಲದ ಗುರಿಗೆ 330 ಸಾಲ ವಿತರಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಬಾರ್ಡ್ ವತಿಯಿಂದ 2023-24ನೇ ಸಾಲಿನ ಸಾಲ ಯೋಜನೆಯ ಸಾಧ್ಯತಾ ವರದಿಯನ್ನು ಬಿಡುಗಡೆಗೊಳಿಸಲಾಯಿತು. ಇದರಂತೆ 2023-24ನೇ ಸಾಲಿನಲ್ಲಿ ಆದ್ಯತಾ ರಂಗಕ್ಕೆ ಒಟ್ಟು 10,689.27 ಕೋಟಿ ರೂ. ಸಾಲ ವಿತರಣೆಯ ಗುರಿ ಹೊಂದಲಾಗಿದೆ ಎಂದರು.
ಸಭೆಯಲ್ಲಿ ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್, ಆರ್ ಬಿ ಐ ನ ಮುರಳಿಮೋಹನ್ ಪಾಠಕ್, ನಬಾರ್ಡ್ ನ ಡಿಡಿಎಂ ಸಂಗೀತಾ ಕರ್ತಾ, ಯೂನಿಯನ್ ಬ್ಯಾಂಕ್ನ ಪ್ರಾದೇಶಿಕ ಮ್ಯಾನೇಜರ್ ಡಾ.ವಾಸಪ್ಪ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ.ಪಿಂಜಾರ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕ್ ಗಳ ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.