ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಕಾರ್ಯಾಲಯ ಉದ್ಘಾಟನೆ
ಕಾರ್ಕಳ: ತುಳುನಾಡನ್ನು ರಾಜ್ಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಹಾಗು ಪ್ರವಾಸಿತಾಣವಾಗಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು. ಅವರು ಬೈಲೂರು ಪರಶುರಾಮ ಥೀಮ್ ಪಾರ್ಕ್ ಆವರಣದ ಬಳಿ ನಡೆದ ಪರಶುರಾಮ ಥೀಮ್ ಪಾರ್ಕ್ ನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ಕಾರ್ಕಳಕ್ಕೆ ಟೂರಿಸಂ ಸರ್ಕ್ಯೂಟ್ ನಿರ್ಮಾಣ ಮಾಡಲು ಪರಶುರಾಮ ಥಿಂಪಾರ್ಕ್ ಮುಕುಟಮಣಿಯಾಗಲಿದೆ. ಪರಶುರಾಮ ಕಂಚಿನ ಪ್ರತಿಮೆ ಈಗಾಗಲೇ ಆಗಮಿಸಿದ್ದು ಮೂರು ನಾಲ್ಕು ದಿನಗಳಲ್ಲಿ ಮೂರ್ತಿ ಜೋಡನೆ ಕಾರ್ಯ ನಡೆದು ಉದ್ಘಾಟನೆಗೆ ಸಜ್ಜುಗೊಳ್ಳಲಿದೆ. ಅ ಮೂಲಕ ಧಾರ್ಮಿಕ ಹಾಗು ಆದ್ಯಾತ್ಮಿಕ ಅನಾವರಣಗೊಳ್ಳಲಿದೆ ಎಂದರು .
ನಿಟ್ಟೆ ವಿದ್ಯಾಸಂಸ್ಥೆ ಅಧ್ಯಕ್ಷ ವಿನಯ್ ಹೆಗ್ಡೆ ಮಾತನಾಡಿ, ಕಳೆದ ಐವತ್ತು ವರ್ಷಗಳಿಂದ ಕಾರ್ಕಳ ಹಿಂದುಳಿದ ತಾಲೂಕಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಮೂಲಕ ಬದಲಾವಣೆಗೆ ವೇಗ ಸಿಗುತ್ತಿರುವುದು ಸಂತಸವಾಗುತ್ತಿದೆ. ತುಳುನಾಡಿನ ಜನರು ಪರಶುರಾಮನನ್ನು ದೇವರ ಸ್ಥಾನದಲ್ಲಿ ಪೂಜಿಸುತಿದ್ದಾರೆ ಎಂದರು.
ಧರ್ಮದರ್ಶಿ ಪುಂಡಲೀಕ ಮಾತನಾಡಿ, ನಮ್ಮ ದೈವ ದೇವರುಗಳ ಮೂಲಕ ಕಾರ್ಕಳ ಧಾರ್ಮಿಕವಾಗಿ ಶ್ರೀಮಂತವಾಗಿದೆ. ಪರಶುರಾಮ ಪಾರ್ಕ್ ನಿರ್ಮಾಣ ಮೂಲಕ ಪ್ರವಾಸಿಗರಿಗು ಹಾಗೂ ದಾರ್ಮಿಕತೆಗೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ವಿಶ್ರಾಂತ ಪ್ರಾಂಶುಪಾಲ ಶ್ರೀ ವರ್ಮ ಅಜ್ರಿ ಪ್ರಾಸ್ತಾವಿಕ ಮಾತನಾಡಿ, ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಇತಿಹಾಸ ನಿರ್ಮಾಣವಾಗಲಿದೆ ಎಂದರು.
ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್, ಕಾರ್ಕಳ ವೆಂಕಟರಮಣ ದೇವಸ್ಥಾನದ ಒಂದನೆ ಮೊಕ್ತೆಸರ ಜಯರಾಮ ಪ್ರಭು, ಅಡಪಾಡಿ ದೇವಾಲಯದ ಧರ್ಮದರ್ಶಿ ಪುಂಡಲಿಕ್, ಭಾಸ್ಕರ ಕೋಟ್ಯಾನ್, ಹಿರಿಯ ನ್ಯಾಯವಾದಿ ಎಂ.ಕೆ ವಿಜಯಕುಮಾರ್, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಉಡುಪಿ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಮಚಿಂದ್ರಾ, ಕಾರ್ಕಳ ತಾಲೂಕು ಕಾರ್ಯನಿರ್ವಹಣಾಧಿಕಾರಿ ಗುರುದತ್, ಹೆಬ್ರಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ , ಹೆಬ್ರಿ ತಹಶಿಲ್ದಾರ್ ಪುರಂದರ ಕೆ, , ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ ಪೂರ್ಣಿಮಾ, ಪಂಚ ಮೇಳದ ಯಕ್ಷಗಾನ ಅಧ್ಯಕ್ಷ ಕಿಶನ್ ಹೆಗ್ಡೆ, ಉದ್ಯಮಿ ಸುಧೀರ್ ಹೆಗ್ಡೆ, ನೀರೆ ಗ್ರಾಪಂ ಅಧ್ಯಕ್ಷೆ ಶಾಲಿನಿ , ಹಿರಿಯ ವೈದ್ಯ ದಿನೇಶ್ಚಂದ್ರ ಹೆಗ್ಡೆ , ಮಾರಿಗುಡಿ ಮೊಕ್ತೆಸರ ಕರುಣಾಕರ್ ಹೆಗ್ಡೆ , ಎರ್ಲಪಾಡಿ ಗ್ರಾ.ಪಂ ಪ್ರಮಿಳಾ ಪೂಜಾರಿ ,ಕೌಡೂರು ಗ್ರಾ.ಪಂ ಅಧ್ಯಕ್ಷ ಜಗದೀಶ್ ಪೂಜಾರಿ, ಕಾರ್ಕಳ ಎಎಸ್ಪಿ ವಿಜಯಪ್ರಸಾದ್ ಉಪಸ್ಥಿತರಿದ್ದರು. ಪ್ರಸನ್ನ ಶೆಟ್ಟಿ ಬೈಲೂರು ವಿರಚಿತ ಪರಶುರಾಮ ಸೃಷ್ಟಿಯ ಹಾಡನ್ನು ಬಿಡುಗಡೆ ಮಾಡಲಾಯಿತು. ಕಾರ್ಕಳ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಸ್ವಾಗತಿಸಿದರು. ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಜ.19. ರಂದು ನೇಷನ್ ಫಸ್ಟ್ ವತಿಯಿಂದ ಕಾರ್ಕಳ ಬಸ್ ನಿಲ್ದಾಣದಿಂದಪರಶುರಾಮ ಥೀಮ್ ಪಾರ್ಕ್ ವರೆಗೆ ಐತಿಹಾಸಿಕ ಪರಶುರಾಮ ದೌಡ್ ಓಟ ನಡೆಯಲಿದೆ, ಜ.24 ರಂದು ವಸ್ತು ಪ್ರದರ್ಶನ , ಆಹಾರ ಮೇಳ ಹಾಗೂ ಕಾರ್ಕಳ ಕುಕ್ಕುಂದೂರಿನಿಂದ ಬೈಲೂರು ಥಿಂ ಪಾರ್ಕ್ ವರೆಗೆ ದೀಪಾಲಂಕಾರ ಉದ್ಘಾಟನೆ ನಡೆಯಲಿದೆ
27 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಥೀಮ್ ಪಾರ್ಕ್ ಉದ್ಘಾಟಿಸಲಿದ್ದಾರೆ. 28 ರಂದು ಥೀಮ್ ಪಾರ್ಕ್ ನಲ್ಲಿ ಭಜನಾ ಮಂದಿರ ಉದ್ಘಾಟನೆ , 29 ರಂದು ಸಮಾರೋಪ ಸಮಾರಂಭದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ರಾಜ್ಯ ಸಚಿವ ಸಂಪುಟದ ಮಂತ್ರಿಗಳು, ಅವಿಭಜಿತ ದ.ಕ ಜಿಲ್ಲಾ ಶಾಸಕರು, ನಿರ್ದೇಶಕ ರಿಷಬ್ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.