ಕರಾವಳಿ ಪ್ರವಾಸೋದ್ಯಮಕ್ಕೆ ಇಂಬು ನೀಡಲು ಮಾಸ್ಟರ್ ಪ್ಲಾನ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೈಲೂರು (ಕಾರ್ಕಳ): ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಇವುಗಳಿಗೆ ಇಂಬು ನೀಡಲು ಮಾಸ್ಟರ್ ಪ್ಲಾನ್ನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಇಲ್ಲಿನ ಆರ್ಥಿಕತೆಗೆ ಉತ್ತೇಜನ ನೀಡಲು ಯೋಜನೆಗಳನ್ನು ರೂಪಿಸಲಿದ್ದೇವೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾಡಳಿತದ ವತಿಯಿಂದ ಕಾರ್ಕಳ ತಾಲೂಕು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಲಾದ ಪರಶುರಾಮ ಥೀಂ ಪಾರ್ಕ್ನಲ್ಲಿ ಪರಶುರಾಮನ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು.
ಕರಾವಳಿ ಭಾಗದಲ್ಲಿ ದೇವಾಲಯ ಟೂರಿಸಂ, ಕರಾವಳಿ ಟೂರಿಸಂ, ಸಾಂಸ್ಕೃತಿಕ ಟೂರಿಸಂನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಇದಕ್ಕಾಗಿ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿ ಕರಾವಳಿ ಭಾಗದ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ನೀಡಲು ಅವಕಾಶಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಬದುಕು ಕಟ್ಟಿಕೊಡುವ ಗುರಿ: ಈಗಾಗಲೇ ಪ್ರವಾಸೋದ್ಯಮಕ್ಕೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಈ ಭಾಗದ ಜನರು ಪರಿಶ್ರಮ ಜೀವಿಗಳು. ಇವರ ಬದುಕು ಹಸನಾಗಲು ಪ್ರವಾಸೋದ್ಯಮದ ಜೊತೆಗೆ ಕೈಗಾರಿಕೋದ್ಯಮದ ಅಗತ್ಯವೂ ಇದೆ. ಇದಕ್ಕೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಬಂದರು, ಸಾರಿಗೆ ವ್ಯವಸ್ಥೆ, ರಸ್ತೆ ಸಂಪರ್ಕ ಮುಂತಾದವುಳನ್ನು ಒದಗಿಸಿದಾಗ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಈಗಾಗಲೇ ಕರಾವಳಿಯಲ್ಲಿ ಸುಮಾರು ಒಂದೂವರೆ ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಲು ಕಂಪೆನಿಗಳು ಮುಂದೆ ಬಂದಿವೆ. ನವೀಕರಿಸಬಹುದಾದ ಇಂಧನ, ಹೈಡ್ರೋಜನ್, ಅಮೋನಿಯಾ ಉತ್ಪಾದನೆಗೆ ಹೂಡಿಕೆ ಮಾಡಲು ಜನ ಮುಂದಾಗಿದ್ದಾರೆ. ದೂರದೃಷ್ಟಿಯೊಂದಿಗೆ ಕೆಲಸ ಮಾಡಿ ಇದನ್ನು ಆದಷ್ಟು ಶೀಘ್ರವಾಗಿ ನನಸು ಮಾಡಿದರೆ, ಇಲ್ಲಿನ ಜನರ ಬದುಕು ಸಂಪೂರ್ಣವಾಗಿ ಬದಲಾಗುತ್ತದೆ. ಅಷ್ಟು ವಿಪುಲ ಅವಕಾಶ ಇಲ್ಲಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ಯಾಕೇಜ್ ಅಲ್ಲ ಬದುಕು: ಕರಾವಳಿಗೆ ಸಣ್ಣಪುಟ್ಟ ಪ್ಯಾಕೇಜ್ ನೀಡಿದರೆ ಬದುಕು ಬದಲಾಗುವುದಿಲ್ಲ. ನಮ್ಮ ಬಂದರುಗಳ ಸಾಮರ್ಥ್ಯ ಹೆಚ್ಚಾಗಬೇಕು, ಹೂಡಿಕೆ ಹೆಚ್ಚಾದರೆ, ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆಗಳು ನಡೆದು ಅಭಿವೃದ್ದಿಯಾಗುತ್ತದೆ. ಜನರಿಗೆ ಬದುಕು ಕಟ್ಟಿಕೊಡುವುದು ನಮ್ಮ ಸರ್ಕಾರದ ಗುರಿ. ಪ್ಯಾಕೇಜ್ ಕೊಡುವುದಲ್ಲ ಎಂದು ಬಸವರಾಜ ಬೊಮ್ಮಾಯಿ ನುಡಿದರು.
ಪರಶುರಾಮನ ಪುತ್ಥಳಿ ಸ್ಥಾಪನೆಯ ನಂತರ ತುಳುನಾಡು ಬಂಗಾರದ ನಾಡಾಗಲಿದೆ ಎಂದು ಭವಿಷ್ಯ ನುಡಿದ ಅವರು ಇದು ಕರ್ನಾಟಕಕ್ಕೆ, ವಿಶೇಷವಾಗಿ ಕರಾವಳಿಗೆ ಐತಿಹಾಸಿಕ ದಿನ. ಪರಶುರಾಮನ ಥೀಮ್ ಪಾರ್ಕ್ ಹಾಗೂ ಅತ್ಯಂತ ಎತ್ತರದ ಸ್ಥಾನದಲ್ಲಿ ಪರಶುರಾಮನ ಮೂರ್ತಿ ಸ್ಥಾಪನೆಯಾಗಿರುವುದು ಇತಿಹಾಸ ಸೃಷಿಸಿದೆ ಎಂದರು.
ತುಳುನಾಡಿನ ಸೃಷ್ಟಿಕರ್ತ ಎಂದು ಪುರಾಣದಲ್ಲಿ ಹೇಳಲಾಗಿರುವ ಪರಶುರಾಮ ಸೃಷ್ಟಿಕರ್ತನ ಪ್ರಮುಖ ಅಂಗ. ಕರ್ಣನ ವ್ಯಕ್ತಿತ್ವದಂತೆಯೇ ಪರಶುರಾಮನ ವ್ಯಕ್ತಿತ್ವವೂ ಹೌದು. ಆತ ವೀರ, ಶೂರ, ಶಿವನಿಂದ ವರ ಪಡೆದು, ಅಗಾಧ ಶಕ್ತಿ ಹೊಂದಿದ್ದ. ತಾಯಿಯ ಅತ್ಯಂತ ಪ್ರೀತಿಯ ಮಗನಾದರೂ ತಂದೆಯ ಆಜ್ಞೆಯಂತೆ ತಾಯಿಯ ಶಿರಚ್ಛೇಧ ಮಾಡುತ್ತಾನೆ. ಇಡೀ ಭೂಮಂಡಲದಲ್ಲಿ ತನಗೇ ಒಂದು ಸ್ಥಳ ಬೇಕೆಂದು ಕೊಡಲಿ ಎಸೆದ ಸಂಪೂರ್ಣ ಕರಾವಳಿ ಪ್ರದೇಶವನ್ನು ದಾಟಿ ಸಮುದ್ರಕ್ಕೆ ಬಿದ್ದು ಈ ಪ್ರದೇಶ ಸೃಷ್ಟಿಯಾಗಿದೆ ಎಂದು ಪುರಾಣ ಹೇಳುತ್ತದೆ. ಹೀಗಾಗಿ ಕರಾವಳಿಗೆ ಸೇರಿದ ವರು ಪರಶುರಾಮನನ್ನು ನೆನೆಯಬೇಕು ಎಂದರು.
ಪರಶುರಾಮನ ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ ಎಂದ ಮುಖ್ಯಮಂತ್ರಿಗಳು, ತಾಯಿ ರೇಣುಕಾದೇವಿಯನ್ನು ಪ್ರತಿದಿನ ಪೂಜಿಸುತ್ತೇನೆ. ಸವದತ್ತಿಯಲ್ಲಿ ಪರಶುರಾಮ ದೇವಾಲಯವನ್ನು ದೊಡ್ಡ ಪ್ರಮಾನದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಇಲ್ಲಿನ ಪರಶುರಾಮ ಥೀಮ್ ಪಾರ್ಕ್ ಟೂರಿಸಂ ಕೇಂದ್ರ ಜೊತೆಗೆ ಪುಣ್ಯಭೂಮಿ ಕೂಡಾ ಆಗಲಿದೆ ಎಂದರು.
ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಲಾಲಾಜಿ ಮೆಂಡನ್, ಕೆ.ರಘುಪತಿ ಭಟ್, ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಪಂ ಸಿಇಓ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ ಮಚ್ಚೀಂದ್ರ, ಗೇರು ಅಭಿವೃದ್ಧಿ ನಿಗದ ಬಿ.ಮಣಿರಾಜ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ತಿಮ್ಮಪ್ಪ ಶೆಟ್ಟಿ ಚಣಿಲ, ಮೈಸೂರು ಇಲೆಕ್ಟ್ರಿಕಲ್ಸ್ನ ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.