ಸಂಸ್ಕೃತವೂ ಸೇರಿ ಎಲ್ಲಾ ಭಾರತೀಯ ಭಾಷೆಗಳಲ್ಲಿ ಹೊಸ ಶಬ್ದಗಳ ನಿರ್ಮಾಣ ಇಂದಿನ ಅಗತ್ಯತೆ: ಡಾ. ವಿಶ್ವಾಸ್

ಉಡುಪಿ: ಭಾರತೀಯ ಭಾಷಾ ಸಮಿತಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ರಾಜೀವಗಾಂಧಿ ಪರಿಸರ ಶೃಂಗೇರಿ, ಸಂಸ್ಕೃತಭಾರತಿ, ವೈಜ್ಞಾನಿಕ ಪ್ರಾತಿವಿಧಿಕ ಶಬ್ದಾವಲಿ ಆಯೋಗ ಈ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ‘ಶಬ್ದಶಾಲಾ’ ಒಂದು ದಿನದ ಕಾರ್ಯಾಗಾರ (ಓರಿಯೆಂಟೇಶನ್ ಪ್ರೋಗ್ರಾಮ್) ಉಡುಪಿಯ ಎಸ್.ಎಂ.ಎಸ್.ಪಿ. ಸಂಸ್ಕೃತ ಮಹಾ ವಿದ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಭಾಷಾ ವಿದ್ವಾಂಸ ಡಾ. ಎಚ್.ಆರ್. ವಿಶ್ವಾಸ ಮಾತನಾಡಿ, ಭಾರತವು ಸ್ವತಂತ್ರವಾದ ಮೇಲೆ ರಾಷ್ಟ್ರಪತಿಗಳ ನಿರ್ದೇಶನದಂತೆ ಆಡಳಿತದಲ್ಲಿ ಬಳಸುವ ಆಂಗ್ಲ ಪದಗಳಿಗೆ ಪರ್ಯಾಯವಾಗಿ ಭಾರತೀಯ ಭಾಷೆಯ ಶಬ್ದಗಳನ್ನು ಕಂಡುಕೊಳ್ಳಲು ಸಿ.ಎಸ್.ಟಿ.ಟಿ. ಎಂಬ ಸಮಿತಿಯೊಂದು ಸ್ಥಾಪಿತವಾಯಿತು. ಆದರೆ ಆ ಸಮಿತಿ ಸೃಷ್ಟಿಸಿದ ಶಬ್ದಗಳು ಪುಸ್ತಕಗಳಲ್ಲೇ ಉಳಿದು ಜನರನ್ನು ತಲುಪಲಿಲ್ಲ ಎಂದರು.
ಈಗ ಭಾರತೀಯ ಭಾಷಾ ಸಮಿತಿಯು ಶಬ್ದಶಾಲಾ ಎಂಬ ಪರಿಕಲ್ಪನೆ ಯಡಿಯಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ಪಾರಿಭಾಷಿಕ ಶಬ್ದಗಳನ್ನು ಹಾಗೂ ಆಧುನಿಕ ಜಗತ್ತಿನ ಮೊಬೈಲ್, ಪ್ರೊಜೆಕ್ಟರ್, ಪೆನ್ಡ್ರೈವ್ ಮೊದಲಾದ ಉಪಕರಣಗಳಲ್ಲಿ ಬಳಸಲು ಸಂಸ್ಕೃತವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಶಬ್ದಗಳನ್ನು ಸೃಷ್ಟಿಮಾಡಲು ತೊಡಗಿದೆ. ಇದಕ್ಕೆ ವಿದ್ವಾಂಸರೆಲ್ಲರ ಸಹಕಾರ ಬೇಕು ಎಂದರು.
ಎಸ್ಎಂಎಸ್ಪಿಯ ಕಾರ್ಯದರ್ಶಿ ವಿದ್ವಾನ್ ಗೋಪಾಲಕೃಷ್ಣ ಜೋಯಿಸ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದು ಪ್ರಾದೇಶಿಕ ಭಾಷೆಗಳಲ್ಲಿ ಆಂಗ್ಲಭಾಷೆಯ ಪದಗಳ ಬಳಕೆ ವ್ಯಾಪಕವಾಗಿದೆ. ಇಂಥವುಗಳನ್ನು ತಡೆಯುವ ನಿಟ್ಟಿನಲ್ಲಿ ಈ ತೆರನಾದ ಉಪಕ್ರಮಗಳು ಹೆಚ್ಚು ಪ್ರಯೋಜನಕಾರಿ ಎಂದರು.
ಪ್ರಾಚಾರ್ಯ ಪ್ರೊ.ಸತ್ಯನಾರಾಯಣ ವೆಂಕಟರಾವ್ ಅಧ್ಯಕ್ಷತೆ ವಹಿಸಿದ್ದರು. ವಿಷಯ ಪರಿಣತರೂ ಕಾರ್ಯಕ್ರಮದ ಸಂಯೋಜಕರೂ ಆದ ಶೃಂಗೇರಿಯ ಡಾ.ಗಣೇಶ ಈಶ್ವರ ಭಟ್ಟ ಮತ್ತು ಡಾ. ಚಂದ್ರಶೇಖರ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲೆಯ ಹಲವಾರು ಸಂಸ್ಕೃತ ವಿದ್ವಾಂಸರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಸಹಸಂಯೋಜಕರಾದ ಪ್ರೊ.ಅಮೃತೇಶ ಆಚಾರ್ಯ ಡಿ. ಎಸ್. ಸ್ವಾಗತಿಸಿದರೆ, ಉಪನ್ಯಾಸಕ ಡಾ. ರಾಧಾಕೃಷ್ಣ ಬಿ ನಿರೂಪಿಸಿದರು. ನಿಕಿತಾ ಪೆಜತ್ತಾಯ ವಂದಿಸಿದರು.







