ಧಾರ್ಮಿಕ, ಲೌಕಿಕ ವಿದ್ಯೆಗಳೊಂದಿಗೆ ಭಾಷೆಗಳಲ್ಲಿ ಉನ್ನತ ಪರಿಣಿತಿ ಪಡೆದರೆ ಸಮಾಜದ ಉದ್ಧಾರ ಸಾಧ್ಯ: ಕುಂಬೋಳ್ ತಂಙಳ್
ಉಡುಪಿ ; ಧಾರ್ಮಿಕ ಮತ್ತು ಲೌಕಿಕ ವಿದ್ಯೆಗಳೊಂದಿಗೆ ಭಾಷೆಗಳಲ್ಲಿ ಉನ್ನತ ಪರಿಣಿತಿ ಪಡೆದರೆ ಮಾತ್ರ ಸಮಾಜದ ಉದ್ಧಾರ ಸಾಧ್ಯ. ಅದರಿಂದ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾಜವನ್ನು ಸತ್ಯದಾರಿಗೆ ತರಲು ಸಾಧ್ಯವಾಗಬಹುದು. ಈಗಿನ ಆಧುನಿಕ ಕಾಲದಲ್ಲಿ ಅದು ಅತೀ ಅಗತ್ಯವಾಗಿದೆ. ಮೂಳೂರಿನ ಮರ್ಕಝ್ ತಅಲೀಮಿಲ್ ಇಹ್ಸಾನಿನಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಇಹ್ಸಾನ್ ಎಜು ಪ್ಲಾನೆಟ್ ಇದನ್ನೆ ಮಾಡುತ್ತಿದ್ದು ಪ್ರಥಮವಾಗಿ ಸಂಸ್ಥೆಯಿಂದ ಪ್ರಚಲಿತ ಅಗತ್ಯವಿರುವ ಎಲ್ಲಾ ಭಾಷೆಗಳಲ್ಲಿ ಪರಿಣಿತಿ ಹೊಂದಿದ ಧಾರ್ಮಿಕ ಹಾಗೂ ಲೌಕಿಕ ಪದವಿಯನ್ನು ಪಡೆದ 11 ವಿದ್ಯಾರ್ಥಿಗಳನ್ನು ನಾವು ಸಮುದಾಯಕ್ಕೆ ಅರ್ಪಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಅಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ಹೇಳಿದರು.
ಅವರು ಸಂಸ್ಥೆಯ ಅಧೀನದಲ್ಲಿರುವ ನವೀಕರಿಸಿದ ಮಸೀದಿಯ ಉದ್ಘಾಟಿಸಿದ ನಂತರ ನಡೆದ ಸಂಸ್ಥೆಯ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸುಲೈಮಾನ್ ಸಅದಿ ಅಲ್ ಅಫ್ಳ್ಲಿ ವಾಳಾಡ್ ರವರಿಂದ ರಂಝಾನ್ ಸಿದ್ಧತೆಗಳು ಎಂಬ ವಿಷಯದಲ್ಲಿ ಮತ್ತು ಅಬ್ದುಲ್ ಜಲೀಲ್ ಸಖಾಫಿ ಚೆರುಶ್ಯೋಲಯವರಿಂದ ಮಖ್ಬರಗಳ ಅಚಾರ ಮತ್ತು ಅನಾಚಾರಗಳ ಎಂಬ ವಿಷಯದ ಕುರಿತು ನಡೆದ ತರಗತಿಗಳಿಗೆ ಹಾಗೂ ಜಲಾಲಿಯಾದ ಮಜ್ಲಿಸಿಗೆ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಅಸ್ಸಯ್ಯಿದ್ ಕೆ ಎಸ್ ಅಹ್ಮದ್ ಮುಖ್ತಾರ್ ತಂಙಳ್ ನೇತೃತ್ವ ವಹಿಸಿದರು.
ದಅವಾ ವಿಭಾಗದ ಇಹ್ಸಾನಿ ಪದವಿ ಹಾಗೂ ಎಂ ಕಾಂ ಪದವಿ ಪೂರ್ತಿಗೊಳಿಸಿದ 11 ವಿದ್ಯಾರ್ಥಿಗಳು ಪ್ರಚಲಿತ ವಿಷಯಗಳಲ್ಲಿ 11 ಪ್ರಬಂಧ ಮಂಡನೆ ಹಾಗೂ ರಾತ್ರಿ ಶಾದುಲಿ ಮಜ್ಲಿಸ್ ನಡೆಯಿತು.
ತಂಙಳ್ರವರ ನೇತೃತ್ವದಲ್ಲಿ ಡಿಕೆಎಸ್ಸಿಯ ಊರಿನಲ್ಲಿರುವ ಕಾರ್ಯಕರ್ತರು ಹಾಗೂ ಮರ್ಕಝಿನ ಪ್ರತಿನಿಧಿ ಗಳೊಂದಿಗೆ ಪ್ರವಾಸಿ ಸಂಗಮ ನಡೆಯಿತು. ಶಹಾದಾ: ಕಾನ್ಫರೆನ್ಸ್ ಹಾಗೂ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮಗಳ ಸಮಾಪನ ಸಮಾರಂಭವನ್ನು ಉಡುಪಿ ಜಿಲ್ಲಾ ನಾಯಿಬ್ ಖಾಝಿ ಅಬ್ದುಲ್ ರಹಿಮಾನ್ ಮದನಿ ಉದ್ಘಾಟಿಸಿ, ಸಂಸ್ಥೆಯ ಜನರಲ್ ಮ್ಯಾನೇಜರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ದಅವಾ ವಿಭಾಗದ ಪ್ರಾಂಶುಪಾಲರಾದ ಸ್ವಾಬಿರ್ ಸಅದಿ ಎಂ ಎ, ಬೆಳ್ಳಿ ಹಬ್ಬ ಸಮಿತಿಯ ಚಯರ್ಮಾನ್ ಕೆ ಎಚ್ ರಫೀಖ್ ಸಾಂಧರ್ಬಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ನಾಸಿರ್ ಲಕ್ಕಿ ಸ್ಟಾರ್ ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ಎ ಮೊಯ್ದಿನ್ ಬಾವ, ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ, ಕೆಂದ್ರ ಸಮಿತಿಯ ಸದಸ್ಯರಾದ ಅಬ್ದುಲ್ ಅಝೀಝ್ ಅತೂರು, ಯುಎಈ ರಾಷ್ಟ್ರೀಯ ಸಮಿತಿಯ ಇಬ್ರಾಹಿಂ ಹಾಜಿ ಕಿನ್ಯ, ಮುಹಮ್ಮದ್ ಇಕ್ಬಾಲ್ ಕನ್ನಂಗಾರ್, ಹಾಜಿ ಅಬೂಸ್ವಾಲಿ ಮರ್ಕಝ್ ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಕಿನ್ಯ, ಹಾಜಿ ಬದ್ರುದ್ದೀನ್ ಬಜ್ಪೆ, ಕೋಶಾಧಿಕಾರಿ ಹಾಜಿ ಅಬ್ದುಲ್ ಹಮೀದ್ ಸುಳ್ಯ, ಕಾರ್ಯದರ್ಶಿಗಳಾದ ಕೆಕೆಎಮ್ ಸಖಾಫಿ, ಇಸ್ಮಾಯಿಲ್ ಶಾಫಿ ವಿಟ್ಲ, ಡಿಕೆಎಸ್ಸಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಶಂಸುದ್ದೀನ್ ಬಳ್ಕುಂಜೆ, ಮೂಳೂರು ಜುಮಾ ಮಸೀದಿ ಅಧ್ಯಕ್ಷ ಮುರಾದ್ ಅಲಿ ಹಾಗೂ ಡಿಕೆಎಸ್ಸಿ ಕಾರ್ಯಕರ್ತರೂ ಮರ್ಕಝ್ ಆಡಳಿತ ಸಮಿತಿಯ ಸದಸ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ವಂದಿಸಿದರು.