ಉಡುಪಿ: ವಿದ್ಯಾಪೋಷಕ್ ಸನಿವಾಸ ಶಿಬಿರ ಉದ್ಘಾಟನೆ
ಉಡುಪಿ, ಮಾ.20: ಯಕ್ಷಗಾನ ಕಲಾರಂಗ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಕಳೆದ 11 ವರ್ಷಗಳಿಂದ ಅಂಬಲಪಾಡಿ ದೇವಳದ ಆಶ್ರಯದಲ್ಲಿ ನಡೆಸಿಕೊಂಡು ಬಂದಿರುವ ಐದು ದಿನಗಳ ಸನಿವಾಸ ಶಿಬಿರ ದೇವಳದ ಭವಾನಿ ಮಂಟಪದಲ್ಲಿ ರವಿವಾರ ಪ್ರಾರಂಭಗೊಂಡಿತು.
ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಜ್ಯೋತಿ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಡಾ.ಎನ್.ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಅತಿಥಿಗಳಾಗಿ ಪ್ರೊ.ರಾಜಮೋಹನ್, ಶ್ರೀದೇವಿ ಅರುಣ್ ಕುಮಾರ್, ಹಿರಿಯಣ್ಣ ಕಿದಿಯೂರು ಭಾಗವಹಿಸಿದ್ದರು.
ಮೈಲೈಫ್ ಹುಬ್ಬಳ್ಳಿ ಇದರ ಸ್ಥಾಪಕ, ಶಿಬಿರದ ನಿರ್ದೇಶಕ ಪ್ರವೀಣ್ ಗುಡಿ ಹಾಗೂ ಸಂಸ್ಥೆ ಉಪಾಧ್ಯಕ್ಷ ಎಸ್.ವಿ.ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರೆ, ಅಶೋಕ್ ಎಂ. ವಂದಿಸಿದರು.
ಇದೇ ಸಂದರ್ಭದಲ್ಲಿ ಪುಷ್ಪರಾಜ್ ಶೆಟ್ಟಿ ದಂಪತಿಗಳನ್ನು ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ದೇವಾನಂದ ಉಪಾಧ್ಯರನ್ನು ಗೌರವಿಸಲಾಯಿತು. ಶಿಬಿರದಲ್ಲಿ 300 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಮಾರ್ಚ್ 23ರಂದು ಶಿಬಿರ ಸಮಾಪನಗೊಳ್ಳಲಿದೆ.