ಉಡುಪಿ: ಪರಿಶಿಷ್ಟ ಜಾತಿ, ಪಂಗಡದವರಿಗೆ ಮಂಜೂರಾದ ಜಮೀನಿನಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಭೂಪರಿವರ್ತನೆಗೆ ಅವಕಾಶ
ಉಡುಪಿ: ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನಿ ನಲ್ಲಿ 10ಸೆಂಟ್ಸ್/ 4ಗುಂಟೆ ಜಮೀನಿನಲ್ಲಿ ಸ್ವಂತ ವಾಸದ ಉದ್ದೇಶಕ್ಕೆ ಭೂ ಪರಿವರ್ತನೆಗೆ ಷರತ್ತುಬದ್ದ ಮಂಜೂರಾತಿಯನ್ನು ಜಿಲ್ಲಾಧಿಕಾರಿಗಳ ಹಂತದಲ್ಲೇ ಆದೇಶ ಮಾಡಲು ಅವಕಾಶ ನೀಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರಿಗೆ ಮಂಜೂರಾದ ಜಮೀನಿನಲ್ಲಿ 10 ಸೆಂಟ್ಸ್/4ಗುಂಟೆ ಜಮೀನಿನಲ್ಲಿ ಸ್ವಂತ ವಾಸದ ಉದ್ದೇಶಕ್ಕೆ ಮನೆ ನಿರ್ಮಿಸಲು ಭೂ ಪರಿವರ್ತನೆ ಮಾಡಲು ಅಫಿದವತ್ ಆಧಾರದ ಭೂಪರಿವರ್ತನೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸುವಂತೆ ಹಲವು ಜಿಲ್ಲಾಧಿಕಾರಿಗಳಿಗೆ ಸಂಬಂಧಿತರಿಂದ ಅನೇಕ ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಈ ಅವಕಾಶ ಕಲ್ಪಿಸಲಾಗಿದೆ.
ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಪ.ಜಾ.ಮತ್ತು ಪ.ಪಂ. ದವರಿಗೆ ಮಂಜೂರಾದ ಜಮೀನಿನಲ್ಲಿ 10ಸೆಂಟ್ಸ್ನಲ್ಲಿ ಸ್ವಂತ ವಾಸದ ಉದ್ದೇಶಕ್ಕೆ ಭೂಪರಿವರ್ತನೆ ಮಾಡಲು ವಾರಸುದಾರರು ಅರ್ಜಿ ಸಲ್ಲಿಸಿದಲ್ಲಿ ಅಂಥ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಭೂಪರಿವರ್ತಿತ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡತಕ್ಕದ್ದಲ್ಲ ಎಂಬ ಷರತ್ತಿ ನೊಂದಿಗೆ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಭೂಪರಿವರ್ತನೆ ಆದೇಶ ಹೊರಡಿಸಲು ರಾಜ್ಯ ಭೂಮಾಪನ ಇಲಾಖೆಯ ಆಯುಕ್ತರು ಹಾಗೂ ಭೂಮಿ ಉಸ್ತುವಾರಿ ಕೋಶದ ಪದನಿಮಿತ್ತ ನಿರ್ದೇಶಕರು ಸರಕಾರದ ಸುತ್ತೋಲೆಯಲ್ಲಿ ಆದೇಶಿಸಿದ್ದಾರೆ.
ಇದಕ್ಕಾಗಿ ಅಫಿಡವಿತ್ ಭೂಪರಿವರ್ತನಾ ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಮಾರ್ಪಾಡು ಮಾಡಲಾಗಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.