ಉಡುಪಿ: ಗಲ್ಫ್ ಕರೆನ್ಸಿ ಕಡಿಮೆ ದರದಲ್ಲಿ ನೀಡುವುದಾಗಿ ವಂಚನೆ; ಅಪರಿಚಿತ ತಂಡದಿಂದ ಲಕ್ಷಾಂತರ ರೂ. ಸುಲಿಗೆ
ಕೋಟ, ಮಾ.25: ಗಲ್ಫ್ ದೇಶದ ಕರೆನ್ಸಿ ನೋಟು ಕಡಿಮೆ ದರದಲ್ಲಿ ನೀಡುವುದಾಗಿ ನಂಬಿಸಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರಲ್ಲಿದ್ದ ಲಕ್ಷಾಂತರ ರೂ. ಹಣವನ್ನು ಅಪರಿಚಿತರ ತಂಡ ಸುಲಿಗೆ ಮಾಡಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳದಲ್ಲಿ ಮಾ.7ರಂದು ಅಪರಿಚಿತ ವ್ಯಕ್ತಿಯೊಬ್ಬ ಟ್ಯಾಕ್ಸಿ ಚಾಲಕ ಮಂಗಳೂರು ಎಕ್ಕಾರು ಪೆರ್ಮುದೆಯ ಮುಹಮ್ಮದ್ ತೌಫೀಕ್ರನ್ನು ಭೇಟಿ ಯಾಗಿ ಗಲ್ಫ್ ದೇಶದ ಕರೆನ್ಸಿ ನೋಟು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿದ್ದನು. ಅದರಂತೆ ಸಾಲಿಗ್ರಾಮದಲ್ಲಿ ಮಾ.14ರಂದು ಮಧ್ಯಾಹ್ನ ಚೀಲದಲ್ಲಿ ದಿನಪತ್ರಿಕೆ ಹಾಗೂ ಸೋಪು ಇಟ್ಟು ಪ್ಯಾಕ್ ಮಾಡಿ ಬಟ್ಟೆಯಿಂದ ಗಟ್ಟಿಯಾಗಿ ಗಂಟು ಹಾಕಿ ತಂದ ಆರೋಪಿಗಳು, ಇದರಲ್ಲಿ 100 ದಿರಮ್ ಮೌಲ್ಯದ 900 ಕರೆನ್ಸಿ ನೋಟುಗಳಿವೆ ಎಂಬುದಾಗಿ ಮುಹಮ್ಮದ್ ತೌಫೀಕ್ ನಂಬಿಸಿದರು. ಅದರಂತೆ ತೌಫೀಕ್ ಆರೋಪಿಗಳು ನೀಡಿದ ಚೀಲಿದಲ್ಲಿದ್ದ ಸೊತ್ತನ್ನು ಪರಿಶೀಲಿಸುವಾಗ ಆರೋಪಿಗಳು ತೌಫೀಕ್ ಕೈಯಲ್ಲಿದ್ದ 6.5ಲಕ್ಷ ರೂ. ಹಣದ ಚೀಲವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಇದೇ ರೀತಿ ಕುಂದಾಪುರ ಕೋಡಿಯ ಅಹ್ಮದ್ ಶರ್ಫುದ್ದೀನ್ ಎಂಬವರನ್ನು ಕೂಡ ಅಪರಿಚಿತ ಆರೋಪಿಗಳು ನಂಬಿಸಿದ್ದರು. ಅದರಂತೆ ಶರ್ಫುದ್ದೀನ್ ಮಾ.19ರಂದು 1.5ಲಕ್ಷ ರೂ. ಹಣವನ್ನು ಹಿಡಿದುಕೊಂಡು ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಬಂದಿದ್ದು, ಅಲ್ಲಿಗೆ ಬೈಕಿನಲ್ಲಿ ಬಂದ ಆರೋಪಿ ಗಳು, ಪ್ಲಾಸ್ಟಿಕ್ ಚೀಲ ತೋರಿಸಿ, ಇದರಲ್ಲಿ 100 ದಿರಮ್ಸ್ ಮೌಲ್ಯದ 900 ನೋಟುಗಳಿವೆ ಎಂದು ಕೊಟ್ಟರು.
ಅದರಂತೆ ಶರ್ಫುದ್ದೀನ್ ಈ ಚೀಲವನ್ನು ಪರಿಶೀಲಿಸುವ ಮೊದಲೇ ಆರೋಪಿಗಳು ಇವರ ಕೈಯಲ್ಲಿದ್ದ ಹಣದ ಚೀಲವನ್ನು ಎಳೆದುಕೊಂಡು, ಬೈಕಿನಲ್ಲಿ ಪರಾರಿಯಾಗಿದ್ದಾರೆಂದು ದೂರಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.