ಮಲ್ಪೆ | ಪಡುಕೆರೆಯಲ್ಲಿ ಸಿಎಂ, ಡಿಸಿಎಂ ಫ್ಲೆಕ್ಸ್ಗೆ ಹಾನಿ: ಪ್ರಕರಣ ದಾಖಲು
ಮಲ್ಪೆ, ಮೇ 27: ಮಲ್ಪೆ ಪಡುಕೆರೆ ಸೇತುವೆಯ ಬಳಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶುಭ ಕೋರಿ ಹಾಕಲಾದ ಫ್ಲೆಕ್ಸ್ಗೆ ಕಿಡಿಗೇಡಿಗಳು ಹಾನಿ ಎಸಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಕಿದ್ದ ಫ್ಲೆಕ್ಸ್ನ್ನು ಮೇ 22ರಂದು ರಾತ್ರಿ ವೇಳೆ ಕಿಡಿಗೇಡಿಗಳು ಹರಿದು ಹಾನಿಗೊಳಿಸಿ ಪರಾರಿಯಾಗಿದ್ದರು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತ ಸುದರ್ಶನ್ ಸುವರ್ಣ ಮಲ್ಪೆ ಠಾಣೆಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೇ 24ರಂದು ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಲ್ಪೆ ಠಾಣೆಗೆ ದೂರು ಸಲ್ಲಿಸಿದ ನಿಯೋಗದಲ್ಲಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ನಾಯಕ ಕೃಷ್ಣ ಮೂರ್ತಿ ಆಚಾರ್ಯ, ಉಡುಪಿ ಎಸ್ಸಿ ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ, ಉಡುಪಿ ಬ್ಲಾಕ್ ಮೀನುಗಾರ ಘಟಕದ ಅಧ್ಯಕ್ಷ ಚರಣ್ ಬಂಗೇರ, ಶರತ್ ಶೆಟ್ಟಿ, ಪ್ರವೀಣ್ ಕೊಡವೂರು, ಗಣೇಶ್ ಕಲ್ಮಾಡಿ, ಮಧು ಕರ್, ಸಜ್ಜನ್ ಶೆಟ್ಟಿ, ಸುದರ್ಶನ್ ಸುವರ್ಣ, ಆನಂದ್ ಕಾಂಚನ್, ಜನಾರ್ದನ ಬಂಗೇರ, ರಮೇಶ್ ಸುವರ್ಣ, ತರುಣ್ ತಿಂಗಳಾಯ ಉಪಸ್ಥಿತರಿದ್ದರು.