-

ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?

ಯಾಸಿರ್ ಅರಫಾತ್ ಹೋರಾಟದಲ್ಲಿ ಮಿನುಗಿ ರಾಜಿಯಲ್ಲಿ ಮರೆಯಾದ ನಾಯಕ

-

ಭಾಗ- 15

 1948ರಲ್ಲಿ ಹಲವು ಬಲಿಷ್ಠ ಸಂಚುಕೋರರು ಸೇರಿ, ‘‘ಫೆಲೆಸ್ತೀನ್ ಭೂಮಿಯ ಮೇಲೆ ಇಸ್ರೇಲ್ ಎಂಬ ದೇಶವನ್ನು ಸ್ಥಾಪಿಸಲಾಗಿದೆ’’ ಎಂದು ಘೋಷಿಸಿದಾಗ, ಯಾಸಿರ್ ಅರಫಾತ್ ಇನ್ನೂ ಕೇವಲ 19 ರ ಹರೆಯದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಆದರೆ ಸಾಮಾಜಿಕ ಕಾರ್ಯಕರ್ತರಾಗಿ ಅವರಿಗೆ ಆಗಲೇ ಸುಮಾರು 10 ವರ್ಷಗಳ ಅನುಭವವಿತ್ತು!

‘‘ಇಸ್ರೇಲ್ ಸ್ಥಾಪಿತವಾಯಿತು’’ ಎಂದು ಘೋಷಿಸುವ ಕ್ರಿಯೆ ಹಠಾತ್ತನೆ ನಡೆದಿರಲಿಲ್ಲ. ಬಹಳಷ್ಟು ವರ್ಷಗಳ ಮುನ್ನವೇ ಅದಕ್ಕೆ ದೊಡ್ಡ ಪ್ರಮಾಣದ ಸಿದ್ಧತೆಗಳು ನಡೆದಿದ್ದವು. ಮುಂದೇನು ನಡೆಯಲಿದೆ ಎಂಬುದರ ಮುನ್ಸೂಚನೆಗಳು ಕೂಡಾ ಕಾಣಿಸಲಾರಂಭಿಸಿದ್ದವು. ಹಾಗೆಯೇ, ಅರಬ್ ವಲಯಗಳಲ್ಲಿ ಅದರ ವಿರುದ್ಧ ಕಠಿಣ ಪ್ರತಿರೋಧ ಕೂಡ ಬೆಳೆಯತೊಡಗಿತ್ತು. ಈ ಹಿನ್ನೆಲೆಯಲ್ಲಿ ತನ್ನ 8 ನೇ ವಯಸ್ಸಿನಲ್ಲಿ ಅರಫಾತ್, ತನ್ನ ಪ್ರದೇಶದ ಫೆಲೆಸ್ತೀನಿ ಹೋರಾಟಗಾರರ ಜೊತೆ ಬಾಲ ಸಂಗಾತಿಯಾಗಿ ಚಟುವಟಿಕೆಯಲ್ಲಿದ್ದರು. ಇಸ್ರೇಲ್ ಸರಕಾರದ ವಿರುದ್ಧ ಸಕ್ರಿಯರಾಗಿದ್ದ ಹೋರಾಟಗಾರರಿಗಾಗಿ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಜಾಲದಲ್ಲಿ ಬಾಲಕ ಅರಫಾತ್ ಸಕ್ರಿಯರಾಗಿದ್ದರು. ಫೆಲೆಸ್ತೀನ್ ವಿಮೋಚನೆಗೆ ಒಂದು ಸಂಘಟಿತ ಹೋರಾಟದ ಅಗತ್ಯವಿದೆ ಎಂಬುದನ್ನು ಮನಗಂಡು, ಕೈರೋ ವಿಶ್ವವಿದ್ಯಾನಿಲಯ ದಲ್ಲಿದ್ದಾಗಲೇ ಆ ನಿಟ್ಟಿನಲ್ಲಿ ಸಿದ್ಧತೆ ಆರಂಭಿಸಿದ್ದರು. 1952-1956ರನಡುವೆ ಅವರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ನಾಯಕರಾಗಿದ್ದರು.

 ಅರಫಾತ್ ತಮ್ಮ ತಾರುಣ್ಯದಲ್ಲೇ ಪೂರ್ಣಪ್ರಮಾಣದ ಹೋರಾಟದಲ್ಲಿ ಮುಳುಗಿದ್ದರು. 1956ರಲ್ಲಿ ಅವರು ‘ಅಲ್ ಫತಹ್’ ಎಂಬ ಭೂಗತ ಸಂಘಟನೆಯನ್ನು ಆರಂಭಿಸಿದರು. ಆವೇಳೆ ಈಜಿಪ್ಟ್, ಸಿರಿಯಾ ಮತ್ತು ಜೋರ್ಡನ್‌ಗಳಲ್ಲಿ ಅರಬ್ ಲೀಗ್ ಪ್ರಾಯೋಜಿತ ‘ಫೆಲೆಸ್ತೀನ್ ಲಿಬರೇಶನ್ ಆರ್ಗನೈಝೇಶನ್’ (PLO) ಸಕ್ರಿಯವಾಗಿತ್ತು. ಆದರೆ 1960 - 67ರ ನಡುವೆ ಅರಫಾತ್ ನೇತೃತ್ವದ ಭೂಗತ ತಂಡಗಳು ಇಸ್ರೇಲ್ ವಿರುದ್ಧ ನಡೆಸಿದ ಕಾರ್ಯಾಚರಣೆಗಳು ಹೆಚ್ಚು ಸುಯೋಜಿತ, ನಿಖರ ಹಾಗೂ ಪರಿಣಾಮಕಾರಿಯಾಗಿದ್ದವು. ಈ ತರದ ಗೆರಿಲ್ಲಾ ದಾಳಿಗಳ ಸರಣಿಯಿಂದಾಗಿ ಇಸ್ರೇಲ್ ಚಿಂತಿತವಾಗಿತ್ತು. ಅರಬ್ ಸಮಾಜಗಳಲ್ಲಿ ಅರಫಾತ್ ಮತ್ತವರ ‘ಅಲ್ ಫತಹ್’ ಜನಪ್ರಿಯವಾಗಲಾರಂಭಿಸಿತು.

 1967ರಲ್ಲಿ ಅರಬ್ ದೇಶಗಳ ವಿರುದ್ಧ ಇಸ್ರೇಲ್‌ನ ಭರ್ಜರಿ ಪರಾಕ್ರಮ ಆರಂಭವಾಯಿತು. ಇಸ್ರೇಲ್ ಪಡೆಗಳು, ನೆಲ, ಜಲ, ವಾಯು ಎನ್ನದೆ ಎಲ್ಲೆಂದರಲ್ಲಿ ವ್ಯಾಪಕ ವಿಧ್ವಂಸ ಆರಂಭಿಸಿದವು. ಮೊದಲ ದಿನವೇ ಅರಬ್ ದೇಶಗಳ ವಾಯುಪಡೆ ನಾಶವಾಗಿದ್ದರಿಂದ, ಪ್ರತಿರೋಧವೆಂಬುದು ನಾಮಮಾತ್ರಕ್ಕೂ ಇಲ್ಲವೆಂಬಂತಾಯಿತು. ಜನರು ನಂಬಿ ಕೂತಿದ್ದ, ಈಜಿಪ್ಟ್ - ಸಿರಿಯಾ ಸೇನೆಗಳ ಮತ್ತು ಪಿಎಲ್‌ಒ ಸಂಘಟನೆಯ ಇತಿಮಿತಿಗಳೆಲ್ಲ ಬಹಿರಂಗವಾದವು. ಆರು ದಿನಗಳಲ್ಲಿ ಸರ್ವನಾಶ ಮೆರೆದ ಇಸ್ರೇಲ್, ಅರಬ್ ದೇಶಗಳ ಕೈಯಿಂದ ಗಾಝಾ ಪಟ್ಟಿ, ಗೋಲಾನ್ ಬೆಟ್ಟ ಶ್ರೇಣಿ, ಪಶ್ಚಿಮ ಬ್ಯಾಂಕ್ ಮುಂತಾದ ಎಲ್ಲ ಆಯಕಟ್ಟಿನ ಪ್ರದೇಶಗಳನ್ನು ಕಿತ್ತುಕೊಂಡಿತ್ತು. ಈ ಮಧ್ಯೆ, ಅರಫಾತ್ ನೇತೃತ್ವದ ‘ಅಲ್ ಫತಹ್’ ಗೆರಿಲ್ಲಾ ಪಡೆಗಳ ಕೆಲವು ಸಾಹಸ ಕಾರ್ಯಾಚರಣೆಗಳು ಮಾತ್ರ ಜನರ ಗಮನ ಸೆಳೆದವು. ಈಜಿಪ್ಟ್ ಅಧ್ಯಕ್ಷ ಜಮಾಲ್ ಅಬ್ದುನ್ನಾಸಿರ್ ಈ ವೇಳೆ ಯಾಸಿರ್ ಅರಫಾತ್‌ರನ್ನು ‘ಫೆಲೆಸ್ತೀನಿಗಳ ನಾಯಕ’ ಎಂದು ಘೋಷಿಸಿದ್ದಾಗಿ ಸುದ್ದಿಯಾಯಿತು.

67ರ ಹೀನಾಯ ಸೋಲಿನ ಬಳಿಕ ನಡೆದ ಅರಬ್ ಲೀಗ್ ಪ್ರಮುಖರ ಸಭೆಯಲ್ಲಿ ಭಾಗವಹಿಸಲು, ಯಾಸಿರ್ ಅರಫಾತ್‌ರನ್ನು ಆಮಂತ್ರಿಸಲಾಯಿತು. ಅವರ ಸಾಧನೆಗಳನ್ನು ಗುರುತಿಸಲಾಯಿತು. 1968ರಲ್ಲಿ, ಅರಫಾತ್ ತಮ್ಮ ಫತಹ್ ಸಂಘಟನೆಯನ್ನು ಪಿಎಲ್‌ಒ ನಲ್ಲಿ ಲೀನಗೊಳಿಸಿದರು. ಪಿಎಲ್‌ಒ ನ ಕಾರ್ಯಕಾರಿ ಸಮಿತಿಯ 105 ಸ್ಥಾನಗಳ ಪೈಕಿ 33 ಸ್ಥಾನಗಳನ್ನು ಫತಹ್ ಸಂಘಟನೆಗೆ ನೀಡಿ ಉಳಿದ 57 ಸೀಟುಗಳನ್ನು ಇತರೆಲ್ಲ ಗೆರಿಲ್ಲಾ ಗುಂಪುಗಳ ನಡುವೆ ಹಂಚುವುದಾಗಿ ನಿರ್ಧರಿಸಲಾಯಿತು. ಹೀಗೆ ಏಕೈಕ ದೊಡ್ಡ ಪಕ್ಷದ ನಾಯಕರಾಗಿ ಬಿಟ್ಟ ಅರಫಾತ್ ಅವರೇ ಒಟ್ಟು ಪಿಎಲ್‌ಒ ನ ನೇತೃತ್ವ ವಹಿಸಬೇಕೆಂಬ ಬೇಡಿಕೆಯೂ ಬೆಳೆಯ ತೊಡಗಿತು. ಈಗಾಗಲೇ, ಜನರ ಮಧ್ಯೆ ಸಾಹಸಿ, ಪರಾಕ್ರಮಿ ಇಮೇಜ್‌ನೊಂದಿಗೆ ಸಾಕಷ್ಟು ಜನಪ್ರಿಯರಾಗಿದ್ದ ಅರಫಾತ್, ಅರಬ್ ಲೀಗ್‌ನಲ್ಲಿದ್ದ ಹಲವು ದೇಶಗಳ ಉನ್ನತ ಮಟ್ಟದ ಸಚಿವರು ಮತ್ತು ಆಡಳಿತಗಾರರ ಜೊತೆ ನಿಕಟ ಮೈತ್ರಿ ಬೆಳೆಸಿಕೊಂಡರು. ಬಹುಬೇಗನೆ ಅರಬ್ ಲೀಗ್ ಸಭೆಯಲ್ಲಿ, ಅರಫಾತ್‌ರನ್ನು ಪಿಎಲ್‌ಒ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಯಿತು. ಹೀಗೆ ಸಕಾಲದಲ್ಲಿ ನಡೆಸಿದ ಸಮರ್ಥ ಕಾರ್ಯ ನಿರ್ವಹಣೆ ಮತ್ತು ತೆರೆಮರೆಯ ಚದುರಂಗದಾಟಗಳ ಮೂಲಕ ಯಾಸಿರ್ ಅರಫಾತ್‌ರಿಗೆ ಅವರ ಬದುಕಿನಲ್ಲಿ ಹಠಾತ್ತನೆ ಒಂದು ದೊಡ್ಡ ಮುನ್ನಡೆ ಸಿಕ್ಕಿತು. ಅಜ್ಞಾತ ಗೆರಿಲ್ಲಾ ಸಂಘಟನೆಯೊಂದರ ನಾಯಕರಾಗಿದ್ದ ಅರಫಾತ್, ಅನೌಪಚಾರಿಕ ದೇಶವೊಂದರ ಔಪಚಾರಿಕ ಮುಖ್ಯಸ್ಥನೆನಿಸಲು ದಾರಿ ಸುಗಮವಾಯಿತು. ಫೆಲೆಸ್ತೀನ್‌ನ ಆಕ್ರಮಿತ ನಾಗರಿಕರಿಗೆಲ್ಲಾ, ಈ ಹಿಂದಿನ ಯಾವುದೇ ಫೆಲೆಸ್ತೀನ್ ಆಡಳಿತಕ್ಕಿಂತ ಹೆಚ್ಚು ಸ್ವಾಯತ್ತವಾಗಿದ್ದ, ಹೊಸ ಪಿಎಲ್‌ಒ ಮೂಲಕ ಒಂದು ಹೊಸ ಪ್ರಾತಿನಿಧ್ಯ ಮತ್ತು ಹೊಸ ಗುರುತು ಸಿಕ್ಕಂತಾಯಿತು.

ಇದರೊಂದಿಗೆ, ಯಾಸಿರ್ ಅರಫಾತ್ ಮಾರ್ಗದರ್ಶನದಲ್ಲಿ, ಪಿಎಲ್‌ಒ ಕಡೆಯಿಂದ ಇಸ್ರೇಲ್ ಮತ್ತದರ ಹಿತಾಸಕ್ತಿಗಳ ಮೇಲೆ, ವಿವಿಧ ಪ್ರಮಾಣ ಮತ್ತು ವಿವಿಧ ಸ್ವರೂಪದ ದಾಳಿಗಳ ಒಂದು ದೀರ್ಘ ಸರಣಿ ಆರಂಭವಾಯಿತು. ವಿಶೇಷವಾಗಿ 67ರ ದಾಳಿಯಲ್ಲಿ ತನ್ನ ದೊಡ್ಡ ಭೂಭಾಗವನ್ನು ಕಡೆದುಕೊಂಡಿದ್ದ ಜೋರ್ಡನ್, ಪಿಎಲ್‌ಒ ಗೆ ತನ್ನಲ್ಲಿ ಆಶ್ರಯ ನೀಡಿತು. ಪಿಎಲ್‌ಒ ಪಡೆಗಳು ಜೋರ್ಡನ್ ಸೇನೆಯ ನೆರವಿನೊಂದಿಗೆ, ಜೋರ್ಡನ್‌ನ ಕರಾಮಃ ನೆಲೆಯಿಂದ, ಇಸ್ರೇಲ್ ನೆಲೆಗಳ ಮೇಲೆ ದಾಳಿಗಳನ್ನು ನಡೆಸಲು ಆರಂಭಿಸಿದವು.

 ಇದರಿಂದ ರೋಸಿ ಹೋದ ಇಸ್ರೇಲ್, 1968ರಲ್ಲಿ ಇದರ ವಿರುದ್ಧ ದೊಡ್ಡ ಪ್ರಮಾಣದ ಪ್ರತಿಕ್ರಮ ಆರಂಭಿಸಿತು. ಇಸ್ರೇಲ್ ಪಡೆಗಳು ಜೋರ್ಡನ್‌ನಲ್ಲಿದ್ದ ಸೇನಾ ನೆಲೆಗಳನ್ನು ಗುರಿ ಮಾಡಿ ನಾಶಮಾಡಿತು. ಆದರೆ ಈ ಬಾರಿ ಇಸ್ರೇಲ್ ಪಾಲಿಗೆ ಕೆಲಸ ಅಷ್ಟೇನೂ ಸುಲಭವಾಗಿರಲಿಲ್ಲ. ಪ್ರಥಮ ಬಾರಿಗೆ ಫೆಲೆಸ್ತೀನ್ ಪಡೆಗಳ ಕಡೆಯಿಂದ ಆತ್ಮಾಹುತಿ ಬಾಂಬ್‌ಗಳ ಬಳಕೆಯಾಯಿತು. ಇಸ್ರೇಲ್‌ನ ಸುಸಜ್ಜಿತ ಪಡೆಗಳ ಮುಂದೆ ತಂದೊಡ್ಡಿದ ನಿರೀಕ್ಷೆಗೆ ಮೀರಿದ ಪ್ರತಿರೋಧ ಮತ್ತು ಶತ್ರು ಪಾಳಯಕ್ಕೆ ಮಾಡಿದ ಅಪಾರ ನಷ್ಟದಿಂದಾಗಿ ಅರಫಾತ್ ಮತ್ತವರ ಯುದ್ಧ ತಂತ್ರಗಳು ಜಗತ್ತಿನೆಲ್ಲೆಡೆ ಚರ್ಚಿತವಾದವು. ಅರಫಾತ್ ಈ ಯುದ್ಧದಲ್ಲಿ ಸ್ವತಃ ರಂಗದಲ್ಲಿದ್ದು ಹೋರಾಡಿದ್ದರೆಂಬ ವದಂತಿಗಳೂ ಇದ್ದವು. 1968 ಡಿಸೆಂಬರ್ 13ರ ‘ಟೈಮ್’ ಮ್ಯಾಗಝಿನ್ ಮುಖಪುಟದಲ್ಲಿ ಅರಫಾತ್ ಮುಖ ಕಂಗೊಳಿಸಿತು. ಅವರ ಸಾಹಸಗಾಥೆಗಳಿಗೆ ಭಾರೀ ಪ್ರಚಾರ ಸಿಕ್ಕಿತು. ಅರಫಾತ್ ಒಬ್ಬರೇ ಫೆಲೆಸ್ತೀನ್‌ನ ಮಹಾ ನಾಯಕ ಎಂದು ಜಗತ್ತು ನಂಬತೊಡಗಿತು. ಅರಬ್ ಜಗತ್ತಿನಲ್ಲಿ ಅವರಿಗೆ ಎಲ್ಲ ಬಗೆಯ ನೆರವು ಸಿಗತೊಡಗಿತು. ಅದೇ ವೇಳೆ ಜಗತ್ತಿನೆದುರು ಅವರನ್ನು ಭಾರೀ ಭಯೋತ್ಪಾದಕ ಎಂದು ಚಿತ್ರಿಸುವ ಶ್ರಮಗಳು ಕೂಡಾ ದೊಡ್ಡ ಪ್ರಮಾಣದಲ್ಲಿ ನಡೆದವು.

ಧರ್ಮದ ದೃಷ್ಟಿಯಿಂದ ಹೇಳುವುದಾದರೆ, ಅರಫಾತ್ ಬಹಳ ಸೀಮಿತ ಮಟ್ಟದಲ್ಲಿ ಧರ್ಮವನ್ನು ಆಚರಿಸಿದವರು, ತುಂಬಾ ಸೀಮಿತವಾಗಿ ಧರ್ಮವನ್ನು ಬಳಸಿದವರು ಮತ್ತು ತೀರಾ ಅಪರೂಪಕೆ್ಕ ಮಾತ್ರ ಧಾರ್ಮಿಕತೆ ನಟಿಸಿದವರು.

 ಆದ್ದರಿಂದ, ಅನುಕೂಲಕ್ಕೆ ತಕ್ಕಂತೆ ಧರ್ಮವನ್ನು ಧಾರಾಳ ಬಳಸಿ, ಆಬಳಿಕ ಅದನ್ನು ಬೀಸಿ ಒಗೆದು ಬಿಡುವ ಪಾಖಂಡಿಗಳಿಗೆ ಹೋಲಿಸಿದರೆ ಅರಫಾತ್ ಎಷ್ಟೋ ವಾಸಿ.

  1970 ಸೆಪ್ಟಂಬರ್‌ನಲ್ಲಿ ಪಿಎಲ್‌ಒ ಗೆ ಸೇರಿದ ಕೆಲವು ಗುಂಪುಗಳು ಜೋರ್ಡನ್ ನ ಅಮ್ಮಾನ್ ಸಮೀಪ ನಾಲ್ಕು ವಿಮಾನಗಳನ್ನು ಅಪಹರಿಸಿದವು. ಈ ಪೈಕಿ ಮೂರು ವಿಮಾನಗಳಿಂದ ಪ್ರಯಾಣಿಕರನ್ನು ಕೆಳಗಿಳಿಸಿ ಮಾಧ್ಯಮಗಳ ಮುಂದೆ ಅವುಗಳಿಗೆ ಕಿಚ್ಚು ಹಚ್ಚಲಾಯಿತು. ಪ್ರಸ್ತುತ ಘಟನೆಯ ವರದಿಗಳು ಮತ್ತು ಆಕುರಿತಾದ ಚಿತ್ರಗಳಿಗೆ ಪಶ್ಚಿಮದ ದೇಶಗಳಲ್ಲಿ ವಿಪರೀತ ಪ್ರಚಾರ ದೊರೆತು ಅರಫಾತ್‌ರ ಇಮೇಜು ಘಾಸಿಯಾಯಿತು. ಅರಬ್ ಸರಕಾರಗಳ ಕಡೆಯಿಂದಲೂ ಅರಫಾತ್ ಮೇಲೆ ಒತ್ತಡ ಬೀಳ ತೊಡಗಿತು. ಕೊನೆಗೆ ಅರಫಾತ್ ವಿಮಾನಾಪಹರಣವನ್ನು ಕುಕೃತ್ಯವೆಂದು ಖಂಡಿಸಿದರು. ಅತ್ತ ಅರಫಾತ್ ಸಹವಾಸ ಸಾಕೆಂದು ತೀರ್ಮಾನಿಸಿದ ಜೋರ್ಡನ್ ದೊರೆ ಕಿಂಗ್ ಹುಸೈನ್ ಜೋರ್ಡನ್‌ನಲ್ಲಿ ಮಾರ್ಷಲ್ ಲಾ ಘೋಷಿಸಿ, ತನ್ನ ನೆಲವನ್ನು ತೆರವುಗೊಳಿಸಲು ಅರಫಾತ್ ಪಡೆಗಳಿಗೆ ಆದೇಶಿಸಿದರು.

   ಆ ಬಳಿಕ ಕಿಂಗ್ ಹುಸೈನ್ ಮತ್ತು ಅರಫಾತ್ ಪಡೆಗಳ ನಡುವೆ ಘರ್ಷಣೆ ಆರಂಭವಾಯಿತು. ಅವರ ಮಧ್ಯೆ ತೇಪೆಗೆ ಈಜಿಪ್ಟ್ ಅಧ್ಯಕ್ಷ ನಾಸಿರ್ ಕೂಡ ಶ್ರಮಿಸಿದರು. ನಾಸಿರ್‌ರ ಮರಣದೊಂದಿಗೆ ಮತ್ತೆ ಘರ್ಷಣೆ ಉಲ್ಬಣಿಸಿದಾಗ ಅರಫಾತ್, ಕಿಂಗ್ ಹುಸೈನ್‌ರ ಪದಚ್ಯುತಿಗೆ ಕರೆ ನೀಡಿದರು. ಇದಕ್ಕೆ ಪ್ರತೀಕಾರವಾಗಿ ಕಿಂಗ್ ಹುಸೈನ್, 1971 ಜುಲೈಯಲ್ಲಿ, ಜೋರ್ಡನ್ ನ ಉತ್ತರಭಾಗದಲ್ಲಿರುವ ಎಲ್ಲ ಫೆಲೆಸ್ತೀನಿ ಯೋಧರನ್ನು ಹುಡುಕಿ ಹೊರದಬ್ಬಬೇಕೆಂಬ ಕಠೋರ ಆದೇಶ ಹೊರಡಿಸಿದರು. ಭೀಕರ ಹೋರಾಟದ ಬಳಿಕ ತನ್ನ ಸುಮಾರು 2,000 ನಿಷ್ಠಾವಂತ ಯೋಧರೊಂದಿಗೆ ಜೋರ್ಡನ್ ನಿಂದ ತಪ್ಪಿಸಿಕೊಂಡ ಅರಫಾತ್, ಅಲ್ಲಿಂದ ಸಿರಿಯಾ ಮಾರ್ಗವಾಗಿ ಲೆಬನಾನ್ ತಲುಪಿ ಹಿಂದಿನಿಂದಲೇ ಅಲ್ಲಿ ನೆಲೆಯೂರಿದ್ದ ತನ್ನ ಪಡೆಗಳನ್ನು ಸೇರಿಕೊಂಡರು. ಹೀಗೆ ಇಸ್ರೇಲ್ ವಿರೋಧಿ ಸರಕಾರಗಳು ಮತ್ತು ಭೂಗತ ಪಡೆಗಳು ಒಂದು ದೀರ್ಘ ಕಾಲವನ್ನು ಕೇವಲ ಪರಸ್ಪರರ ಸೊಂಟ ಮುರಿಯುವುದರಲ್ಲೇ ಕಳೆದವು. ಈ ಕಾರ್ಯವನ್ನು ಅವು ಸಾಕಷ್ಟು ಸಮರ್ಥವಾಗಿಯೇ ನಡೆಸಿದವು !!

 1971 ರ ಹೊತ್ತಿಗೆ ಆಗಲೇ ವಿವಿಧೆಡೆಯ ಹಲವು ಇಸ್ರೇಲ್ ವಿರೋಧಿ ಎಡಪಂಥೀಯ ಗುಂಪುಗಳು ಮತ್ತು ಪಿಎಲ್‌ಒ ನ ಹಲವು ಒಳಗುಂಪುಗಳು ಲೆಬನಾನ್‌ನಲ್ಲಿ ನೆಲೆ ಊರಿದ್ದವು. ಅಲ್ಲಿನ ಸ್ಥಳೀಯ ಸರಕಾರ ತುಂಬಾ ಅಸ್ಥಿರವಾಗಿದ್ದರಿಂದ, ಕ್ರಮೇಣ ಬಲಗೊಂಡ ಅರಫಾತ್ ಗುಂಪು ಅಲ್ಲಿ ತನ್ನ ಪ್ರಾಬಲ್ಯ ಮೆರೆಯತೊಡಗಿತು. ಲೆಬನಾನ್ ನೆಲದಿಂದ ಇಸ್ರೇಲ್ ನೆಲೆಗಳ ಮೇಲೆ ದಾಳಿಗಳ ಸರಣಿ ಆರಂಭವಾಯಿತು.

ಮುಂದಿನ ಎರಡು ದಶಕಗಳ ಅವಧಿಯು ಇಸ್ರೇಲ್ ಪಾಲಿಗೆ ನಿತ್ಯ ಕಿರುಕುಳದ ಅವಧಿಯಾಗಿತ್ತು. ಸಾವಿರ ಬಗೆಯ ಇತರ ಏರುಪೇರುಗಳಾದರೂ, ನೂರಾರು ಬೃಹತ್ ಕಾರ್ಯಾಚರಣೆಗಳನ್ನು ನಡೆಸಿದರೂ ಯಾಸಿರ್ ಅರಫಾತ್ ಪ್ರಾಯೋಜಿತ ದಾಳಿಗಳಿಂದ ಸಂಪೂರ್ಣ ಮುಕ್ತಿ ಪಡೆಯಲು ಇಸ್ರೇಲ್‌ಗೆ ಸಾಧ್ಯವಾಗಲಿಲ್ಲ. ಹಾಗೆಯೇ, ಕನಿಷ್ಠಪಕ್ಷ 90 ರ ದಶಕದ ಆರಂಭದ ತನಕ, ಇಸ್ರೇಲ್‌ಗೆದುರಾಗಿ ಅರಫಾತ್ ಎಂಬ ಒಬ್ಬ ವ್ಯಕ್ತಿ ಮತ್ತು ಆತನ ತಂಡವು ಕಟ್ಟಿ ಬೆಳೆಸಿದಷ್ಟು ಮಟ್ಟದ ಬಲಿಷ್ಠ ಪ್ರತಿರೋಧವನ್ನು ಕಟ್ಟಿ ಬೆಳೆಸಲು ಆ ಪ್ರಾಂತದ ದೊಡ್ಡ ದೊಡ್ಡ ದೇಶ ಅಥವಾ ಸರಕಾರಗಳಿಗೂ ಸಾಧ್ಯವಾಗಲಿಲ್ಲ.

ನಮ್ಮ ಮುಂದಿನ ಪೀಳಿಗೆಯವರು ಈ ಸೂರ್ಯನಡಿಯಲ್ಲಿ, ಶಾಂತಿಯಿಂದ ಬದುಕಬೇಕು. ಅವರಿಗೆ ಈ ಸ್ವತಂತ್ರ ಲೋಕದಲ್ಲಿ, ದಬ್ಬಾಳಿಕೆಯಿಂದ ದೂರ ಮತ್ತು ಭಯೋತ್ಪಾದನೆಯಿಂದ ಬಹಳ ದೂರ, ಮನುಷ್ಯರಾಗಿ, ಸ್ವತಂತ್ರರಾಗಿ ಬದುಕಲು ಸಾಧ್ಯವಾಗಬೇಕು. ನಾನು ನಿಮ್ಮಿಂದ ಅಪೇಕ್ಷಿಸುವುದು ಇಷ್ಟನ್ನು ಮಾತ್ರ. ನಾನು ನಿಮ್ಮಿಂದ ಚಂದ್ರನನ್ನೇನೂ ಅಪೇಕ್ಷಿಸುತ್ತಿಲ್ಲ.

- ಯಾಸಿರ್ ಅರಫಾತ್

ಫೆಲೆಸ್ತೀನಿಗಳ ಬಳಿ ಮಾತುಕತೆಯ ಹೊರತು ಬೇರೆ ದಾರಿಯೇ ಇಲ್ಲ ಎಂದು ಇಸ್ರೇಲಿಗಳು ತಿಳಿದಿದ್ದರೆ, ಅಲ್ಲಾಹನಾಣೆ, ಅದು ಅವರ ಘೋರ ತಪ್ಪು. ಜೆರುಸಲೇಮ್‌ನ ಎಲ್ಲ ಗೋಡೆಗಳು, ಮಸೀದಿಗಳು ಮತ್ತು ಚರ್ಚುಗಳ ಮೇಲೆ ತಮ್ಮ ಧ್ವಜ ಹಾರಿಸಲಿಕ್ಕಾಗಿ ಫೆಲೆಸ್ತೀನ್ ಜನತೆ ತಮ್ಮ ಕೊನೆಯ ಪುತ್ರ ಮತ್ತು ಪುತ್ರಿಯನ್ನು ಬಲಿ ಕೊಡಲು ಸಿದ್ಧರಾಗಿದ್ದಾರೆ.

- ಯಾಸಿರ್ ಅರಫಾತ್

(ಮುಂದುವರಿಯುವುದು)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top