ಮಲಬಾರ್ ಕ್ರಾಂತಿವೀರ ಸುಲ್ತಾನ್ ವಾರಿಯಂ ಕುನ್ನನ್
ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಬ್ರಿಟಿಷರ ಯಾವುದೇ ಬೆದರಿಕೆಗಳಿಗೆ ಕುಗ್ಗದೆ ಹೋರಾಡಿದ ವಾರಿಯಂ ಕುನ್ನನ್ರಂತಹ ವಿಶೇಷ ಸೇನಾನಿಗಳನ್ನು ದೇಶ ಮರೆಯಬಾರದು. ಇಂತಹ ವೀರರ ಅಮರನಾಮಗಳನ್ನು ಇತಿಹಾಸದ ಪುಟಗಳಿಂದ ಆಳಿಸಿ ಹಾಕಲು ಹಪ ಹಪಿಸುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ದೇಶ ಭಕ್ತರು ಧ್ವನಿ ಎತ್ತಬೇಕಾಗಿದೆ.
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತಿರುಚಲು ಹಲವು ದಿಕ್ಕುಗಳಿಂದ ಕೆಲ ಮತಾಂಧ ಶಕ್ತಿಗಳ ಅವಿರತ ಪ್ರಯತ್ನಗಳು ಏಗ್ಗಿಲ್ಲದೆ ಸಾಗಿವೆ. ಇದರ ಫಲವಾಗಿ ಜಾತಿ, ಭೇದವಿಲ್ಲದೆ ದೇಶಕ್ಕಾಗಿ ಸಂಘಟಿತ ಹೋರಾಟ ನಡೆಸಿದ ಹಲವು ಹೋರಾಟಗಾರರ ಹೆಸರುಗಳು ಇತಿಹಾಸದ ಪುಟಗಳಿಂದ ನಿರ್ನಾಮವಾಗುತ್ತಿದೆ. ಕಳೆದ ಸೆಪ್ಟಂಬರ್ ತಿಂಗಳಲ್ಲಿ INDIAN COUNCIL OF HISTORICAL RESEARCH ಇದರ ಪುಸ್ತಕ ವಿಮರ್ಶಕ ತಂಡವು 1921ರಲ್ಲಿ ನಡೆದ ಮಲಬಾರ್ ಕ್ರಾಂತಿಯಲ್ಲಿ ಹುತಾತ್ಮರಾದ 387 ಸೇನಾನಿಗಳು ಸ್ವಾತಂತ್ರ್ಯ ಹೋರಾಟಗಾರರಲ್ಲ. ಆದುದರಿಂದ ಪ್ರಧಾನಿಯವರು ಬಿಡುಗಡೆ ಮಾಡಿದ DICTIONARY OF MARTYRS: INDIA’S FREEDOM STRUGGLE 1857-1947 ಎಂಬ ಪುಸ್ತಕದಿಂದ ಇವರ ಹೆಸರುಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿದೆ. ಈ ವರದಿಯಲ್ಲಿ ಸೂರ್ಯ ಅಸ್ತಮಿಸದ ಬಿಳಿಯರ ಸಾಮ್ರಾಜ್ಯವೇ ‘ಭಯೋತ್ಪಾದಕ’ ಎಂದು ಕರೆದ ಸುಲ್ತಾನ್ ವಾರಿಯರ್ ಕುನ್ನನ್ ರನ್ನು ‘ದೇಶದ್ರೋಹಿ’ ಎಂದು ವಿಮರ್ಶಿಸಲಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ 10 ಅಗಸ್ಟ್ 1922ರಲ್ಲಿ ಪ್ರಕಟಿಸಿದ ಫ್ರೆಂಚ್ ಮಾಸಿಕವಾದ ‘SCIENCE ET VOYAGES’ನಿಂದ ಕೇರಳ ಮೂಲದ ಮುಹಮ್ಮದ್ ರಮೀಸ್ರವರು ಕಂಡುಹಿಡಿದ ವಾರಿಯಂ ಕುನ್ನನ್ರವರ ಭಾವಚಿತ್ರ ಹಾಗೂ ಅವರೇ ಬರೆದ ‘ಸುಲ್ತಾನ್ ವಾರಿಯಂ ಕುನ್ನನ್’ ಎಂಬ ಪುಸ್ತಕವೂ ದೇಶದಗಲಕ್ಕೂ ಸಂಚಲನ ಮೂಡಿಸಿದೆ.
ವಾರಿಯಂ ಕುನ್ನನ್ರ ಜೀವನ ಚರಿತ್ರೆಗೆ ಪ್ರವೇಶಿಸ ಬೇಕಾದರೆ ಅಂದಿನ ಕೇರಳ ಸಮುದಾಯ ಮತ್ತು ಮಲಬಾರಿನ ಪರಿಸರವನ್ನೂ ಅಲ್ಪವಾದರೂ ತಿಳಿದಿರಬೇಕಾಗಿದೆ.
ಕ್ರಿ.ಪೂ. 500 ಮತ್ತು 1000 ಇಸವಿಯ ನಡುವೆ ಕೇರಳ ಮಣ್ಣಿಗೆ ಕಾಲಿಟ್ಟ ಆರ್ಯರು ಮಲಬಾರಿನ ಮಣ್ಣಿನಲ್ಲಿ ಜಾತೀಯತೆಯ ಬೀಜವನ್ನು ಬಿತ್ತಿದ್ದರು. ಸಾವಿರ ವರ್ಷಕಾಲದ ನಂತರ ಬಂದ ಬಿಳಿಯರು ಭಾರತಾದ್ಯಂತ ‘ವಿಭಜಿಸಿ ಆಳು’ ಎಂಬ ಯೋಜನೆಯ ಮೂಲಕ ಭಾರತವನ್ನು ಬ್ರಿಟಿಷರ ಅಧೀನಗೊಳಿಸಿಕೊಂಡವರು. ಈ ಕಾರಣದಿಂದಾಗಿ ಮಲಬಾರಿನಲ್ಲಿ ಗೇಣಿದಾರ ಮತ್ತು ಜಮೀನ್ದಾರರ ನಡುವಿನ ಅಂತರ ಸರ್ವೇ ಸಾಮಾನ್ಯವಾಗಿತ್ತು. 1921ರಲ್ಲಿ ಜಮೀನ್ದಾರರ ವಿರುದ್ಧ ನಡೆಸಿದ ಹೋರಾಟವನ್ನು ಬ್ರಿಟಿಷರು ಧರ್ಮಗಳ ನಡುವೆ ವರ್ಗೀಕರಿಸಲು ನಡೆಸಿದ ಪ್ರಯತ್ನಗಳು ಸಫಲವಾದುದರಿಂದ ಈ ಹೋರಾಟವನ್ನು ಹಿಂದೂ-ಮುಸ್ಲಿಂ ಗಲಭೆಯಾಗಿ ಚಿತ್ರೀಕರಿಸಲಾಯಿತು. ಆದರೆ, ಮಲಬಾರ್ ಕ್ರಾಂತಿಯು ಹಿಂದೂ-ಮುಸ್ಲಿಮರು ಒಗ್ಗೂಡಿ ಬಿಳಿಯರ ವಿರುದ್ಧ ನಡೆಸಿದ ಹೋರಾಟವೆನ್ನುವುದು ವಾಸ್ತವ ಸತ್ಯಾಂಶ. ಈ ಹೋರಾಟದ ಚುಕ್ಕಾಣಿ ಹಿಡಿದ ಪ್ರಧಾನ ನಾಯಕ ಸುಲ್ತಾನ್ ವಾರಿಯಂ ಕುನ್ನನ್.
1857ರಲ್ಲಿ ಪ್ರಸ್ತುತ ಮಂಜೇರಿಯಿಂದ 5 ಮೈಲು ದೂರವಿರುವ ನೆಲ್ಲಿಕುತ್ತ್ ಎಂಬ ಸ್ಥಳದಲ್ಲಿ ಚಿಕ್ಕಪರಂಬನ್ ಕುಟುಂಬದ ಮೊಯ್ದಿನ್ ಕುಟ್ಟಿ ಹಾಜಿ ಮತ್ತು ಕುಞಾಯಿಷಾ ಹಾಜಮ್ಮ ದಂಪತಿಯ ಸುಪುತ್ರನಾಗಿ ವಾರಿಯಂ ಕುನ್ನನ್ ಜನಿಸುತ್ತಾರೆ.
ಬಾಲ್ಯದಲ್ಲೇ ಅತಿ ಚುರುಕಾಗಿದ್ದ ವಾರಿಯಂ ಸ್ವದೇಶದಲ್ಲೇ ಪವಿತ್ರ ಕುರ್ಆನ್ ಕಲಿಯುತ್ತಾರೆ. ಇದಲ್ಲದೆ ಈಜು, ಪಡಪ್ಪಾಟ್ ಮುಂತಾದ ಕಲೆಗಳಲ್ಲಿ ನಿಪುಣನಾಗುತ್ತಾರೆ. ಬ್ರಿಟಿಷ್ ಸರಕಾರದ ವಿರುದ್ಧ ಹೋರಾಟ ನಡೆಸಿದ ಕಾರಣಕ್ಕಾಗಿ ವಾರಿಯಂ ಕುನ್ನನ್ರವರ ತಂದೆಯನ್ನು ಗಡಿಪಾರು ಮಾಡಲಾಯಿತು. ಈ ಘಟನೆಯೂ ವಾರಿಯರ್ ಕುನ್ನನ್ರ ಬ್ರಿಟಿಷ್ ವಿರೋಧಿ ಭಾವನೆಯನ್ನು ತಾರಕ್ಕೇರಿಸುತ್ತದೆ. ‘‘ತಂದೆಯ ಗಡಿಪಾರು ಇವರ ದೃಢನಿರ್ಧಾರಕ್ಕೆ ಅಡ್ಡಿಯಾ ಗಲಿಲ್ಲ’’ ಎಂದು ಮುಹಮ್ಮದ್ ರಮೀಸ್ರವರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ. ಈ ಬಳಿಕ ಕೋಝಿಕ್ಕೋಡ್ ಪಾಲಕ್ಕಾಡ್ ಭಾಗಗಳಲ್ಲಿ ಉನ್ನತ ರೀತಿಯ ವ್ಯಾಪಾರ ವಹಿವಾಟು ನಡೆಸುತ್ತ ವಾರಿಯಂನವರು ಜೀವನ ನಿರ್ವಹಿಸುತ್ತಾರೆ. ಆ ಕಾಲಘಟ್ಟದಲ್ಲಿ ವಾರಿಯಂರವರು ಮಲಬಾರ್ ಪ್ರಾಂತದ ಧನಿಕ ವ್ಯಕ್ತಿಗಳಲ್ಲೊಬ್ಬರಾಗಿದ್ದರು. ಇವರಲ್ಲಿ ಹಲವಾರು ಎತ್ತಿನಗಾಡಿಗಳಿದ್ದವು ಎಂದು ಚರಿತ್ರೆಗಾರ ಎ.ಕೆ. ಕೋಡೂರ್ ತನ್ನ ‘ಆಂಗ್ಲೋ ಮಾಪ್ಪಿಳ ಯುದ್ಧಂ 1921’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
► ಪ್ರಥಮ ಸಮರ
1896ರಲ್ಲಿ ಮಂಜೇರಿ ಭಾಗದಲ್ಲಿ ಕೃಷಿಕರ ಜಮೀನನ್ನು ಜಪ್ತಿ ಮಾಡಲು ಬಿಳಿಯರ ಸೈನ ಸಜ್ಜಾಗುತ್ತದೆ. ಈ ಕಾರಣದಿಂದಾಗಿ ಮಂಜೇರಿಯಲ್ಲಿ ನಡೆದ ಕೃಷಿಕರ ಸಮರದಲ್ಲಿ ವಾರಿಯಂ ಕುನ್ನನ್ ರವರು ಪಾಲ್ಗೊಳ್ಳುತ್ತಾರೆ. ಇದಾಗಿತ್ತು ಸುಲ್ತಾನರ ಸಮರ ಜೀವನದ ಪ್ರಥಮ ಹೆಜ್ಜೆ. ಆನಂತರ 1899ರ ತನಕ ಇವರು ಮಲಬಾರ್ ಪ್ರಾಂತದಲ್ಲೇ ಜೀವನಸಾಗಿಸುತ್ತಾರೆ. ಆನಂತರ ವಾರಿಯಂ ಕುನ್ನನ್ರವರು ಯಾವ ಸಮರದಲ್ಲಿ ಪಾಲ್ಗೊಳ್ಳಲಿಲ್ಲದಿದ್ದರೂ ಬ್ರಿಟಿಷ್ ಸರಕಾರ ವಾರಿಯಂರಿಗೆ ಭಯಪಡುತ್ತಿದ್ದರು ಎಂಬುವುದಕ್ಕೆ (‘‘HISTORY OF MALABAR REBELLION 1921’’)ಎಂಬ ಪುಸ್ತಕದಲ್ಲಿ ಆರ್.ಎಚ್. ಹಿಚ್ಕೋಕ್ನ ‘ಸಿಂಹಸ್ವಪ್ನ’ ಎಂಬ ಹೇಳಿಕೆಯೇ ಸಾಕ್ಷಿ. 1899ರಲ್ಲಿ ವಾರಿಯಂ ಕುನ್ನನ್ ಮುಂಬೈಗೆ ಪಲಾಯನ ಮಾಡುತ್ತಾರೆ. ಕೆಲಕಾಲ ಮುಂಬೈಯಲ್ಲಿ ವ್ಯವಹಾರ ನಡೆಸಿದ ಬಳಿಕ ಸೌದಿ ಅರೇಬಿಯಾದ ಪವಿತ್ರ ಮಕ್ಕಾದತ್ತ ಯಾತ್ರೆ ಕೈಗೊಳ್ಳುತ್ತಾರೆ. 1900ರಲ್ಲಿ ಮಕ್ಕಾ ತಲುಪಿದ ಇವರು 1905ರ ತನಕ ಅಲ್ಲೇ ಕಾಲ ಕಳೆದರು. ಈ ಕಾಲಾವಧಿಯಲ್ಲಿ ಇವರು ಯುದ್ಧ ತಂತ್ರಗಳನ್ನು ಪರಿಶೀಲಿಸುತ್ತಿದ್ದರು ಎಂಬ ಹೇಳಿಕೆಗಳಿವೆ.
1905ರಲ್ಲಿ ಸ್ವದೇಶಕ್ಕೆ ಹಿಂದಿರುಗಿದ ಸುಲ್ತಾನರ 1914ವರೆಗಿನ ಜೀವನಮಾರ್ಗ ಶಾಂತವಾಗಿತ್ತು. ಪ್ರತ್ಯೇಕವಾಗಿ ಗುರುತಿಸಬಲ್ಲ ಯಾವ ಕದನದಲ್ಲೂ ವಾರಿಯಂರವರು ಭಾಗಿಯಾಗಲಿಲ್ಲ. ಹೀಗಾಗಿಯೇ ಬ್ರಿಟಿಷರು ವಾರಿಯಂರನ್ನು ಅಲಕ್ಷಿಸಿದರು. ಆದರೇ ಇದೇ ಸದವಕಾಶವನ್ನು ಉಪಯೋಗಿಸಿದ ವಾರಿಯಂ ಕುನ್ನನ್ ಬ್ರಿಟಿಷ್ ಸೇನೆಯ ವಿರುದ್ಧ ಹೋರಾಟ ನಡೆಸಲು ಮಲಬಾರಿನಿಂದಲೇ ಬೃಹತ್ ಸೇನೆಯನ್ನು ಸಿದ್ಧಪಡಿಸುವುದರಲ್ಲಿ ಶಕ್ತರಾದರು. ಸರಾಸರಿ 75,000 ಹೋರಾಟಗಾರರನ್ನು ಒಳಗೊಂಡ ಸೇನೆಯನ್ನು ಮಲಬಾರ್ ಪ್ರಾಂತದ ವಿವಿಧ ದಿಕ್ಕುಗಳಲ್ಲಿ ಸ್ಥಾಪನೆ ಮಾಡಿದ ವಾರಿಯಂ ಕುನ್ನನ್ ‘ಮಲಬಾರಿನ ಸಿಂಹ’ ಎಂದೇ ಹೆಸರುವಾಸಿಯಾದರು. ಮಾಪ್ಪಿಳ (ಮುಸ್ಲಿಂ)ರಿಗೆ ಮಾತ್ರವಲ್ಲ ಇತರ ಸಮುದಾಯದ ಜನರು ಕೂಡ ಇವರನ್ನು ತಮ್ಮ ನಾಯಕನನ್ನಾಗಿ ಅಂಗೀಕರಿಸಿದ್ದರು.
1920ರಲ್ಲಿ ಮಲಬಾರಿನ ಮಣ್ಣಿಗೆ ಖಿಲಾಫತ್ ಚಳವಳಿ ಕಾಲಿಟ್ಟ ಬಳಿಕ ಮಾಪ್ಪಿಳ ಮುಸ್ಲಿಮರ ಶಕ್ತಿಯೂ ಇನ್ನಷ್ಟು ಹೆಚ್ಚುತ್ತದೆ. ಅಲಿ ಮುಸ್ಲಿಯಾರ್ರಂತಹ ಪಂಡಿತರು ಖಿಲಾಫತ್ ಚಳವಳಿಯನ್ನು ಗಟ್ಟಿಗೊಳಿಸಲು ಸಹಾಯಕರಾಗುತ್ತಾರೆ. ಇಂತಹ ಸದವಕಾಶವನ್ನು ಸೂಕ್ತ ಸಮಯದಲ್ಲಿ ಉಪಯೋಗಿಸಿ ವಾರಿಯಂ ಕುನ್ನನ್ ಯುದ್ಧ್ದತಂತ್ರವನ್ನು ರೂಪಿಸುತ್ತಾರೆ.
► ಆಡಳಿತ
1920ರ ಆನಂತರ ವಾರಿಯಂ ಕುನ್ನನ್ರವರು ನಿರಂತರವಾಗಿ ಸಮರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. 1920ರ ಆಗಸ್ಟ್ 21 ರಿಂದ 24ವರೆಗೆ ಘೋರ ಯುದ್ಧ ನಡೆಯಿತು. ಪೊನ್ನಾನಿ, ಎರನಾಡು, ವಳ್ಳುವನಾಡ್, ಕೋಝಿಕ್ಕೋಡ್ ಮುಂತಾದ ತಾಲೂಕಿನ 200 ಗ್ರಾಮಗಳನ್ನು ವಾರಿಯಂ ಕುನ್ನನ್ ತಮ್ಮ ಅಧೀನಕ್ಕೊಳಪಡಿಸಿಕೊಳ್ಳುತ್ತಾರೆ.
‘‘ವಾರಿಯಂ ಕುನ್ನನ್ ಪಶ್ಚಿಮ ಎರನಾಡ್ ಮತ್ತು ವಳ್ಳುವನಾಡಲ್ಲಿ ಸ್ವತಂತ್ರ ಖಿಲಾಫತ್ ಪ್ರಾಂತ ಸ್ಥಾಪಿಸಿದ ಮಹಾನ್ನಾಯಕನಾಗಿದ್ದಾನೆ’’ ಎಂದು ಅಮೆರಿಕನ್ ದಿನ ಪತ್ರಿಕೆಯಾದ ‘ದಿ ನ್ಯೂಯಾರ್ಕ್ ಹೆರಾಲ್ಡ್ಸ್’ನಲ್ಲಿ ವರದಿಯಾಗಿತ್ತು. ವಾರಿಯಂ ಕುನ್ನನ್ರ ಅಧಿಕಾರ ಸಮಯದಲ್ಲಿ ಮಲಬಾರ್ ಅಲ್ಪವಾದರೂ ಶಾಂತಿಯುತವಾಗಿತ್ತು. ಅಂದು ಬ್ರಿಟಿಷ್ ಸೈನಿಕರು ಧೈರ್ಯವಾಗಿ ನಡೆಯಲು ಹಿಂಜರಿಯುತ್ತಿದ್ದರು. ಈ ಕಾಲಾವಧಿಯಲ್ಲಿ ಮಲಬಾರ್ ಪ್ರಾಂತಕ್ಕೆ ಪ್ರವೇಶಿಸಲು ಪಾಸ್ಪೋರ್ಟ್ ಜಾರಿಗೆ ಬಂತು ಮತ್ತು ವ್ಯಾಪಾರ ವಹಿವಾಟುಗಳಿಗಾಗಿ ನಾಣ್ಯಗಳನ್ನು ಅಚ್ಚುಗೊಳಿಸಲಾಯಿತು.
1920ರ ಉತ್ತರಾರ್ಧದ ನಂತರ ಖಿಲಾಫತ್ ಸಂಘದ ಶಕ್ತಿಯೂ ಕುಗ್ಗತೊಡಗುತ್ತದೆ. ಆ ಕಾಲ ಘಟ್ಟದಲ್ಲಿದ್ದ ಅಲಿ ಮುಸ್ಲಿಯಾರ್ ಮತ್ತು ಇವರ ಶಿಷ್ಯರನ್ನು ಆರ್.ಎಚ್. ಹಿಚ್ಕೋಕ್ನ ಸೈನ್ಯ ಬಂಧಿಸುತ್ತದೆೆ. ಆನಂತರ ವಾರಿಯಂ ಕುನ್ನನ್ರವರು ರೂಪಿಸಿದ ಯುದ್ಧ ತಂತ್ರಗಳು ಯಾವುದೋ ಬೇಹುಗಾರನ ಮೂಲಕ ಬ್ರಿಟಿಷ್ ಸರಕಾರದ ಬೆಳಕಿಗೆ ಬರುತ್ತದೆ. ಇದೇ ಕಾರಣದಿಂದಾಗಿ ವಾರಿಯಂರ ಸೈನ್ಯ ನಡೆಸಿದ ಹಲವು ಯುದ್ಧಗಳು ವಿಫಲಗೊಳ್ಳುತ್ತವೆ.
ಕೊನೆಯ ದಿನಗಳಲ್ಲಿ ಸದಾ ಯುದ್ಧ ನಡೆಸಲು ಸಾಧ್ಯವಾಗದ ಕಾರಣ ಅರಣ್ಯ ಪ್ರದೇಶಗಳಲ್ಲಿ ನಡೆಸುವ ಗೆರಿಲ್ಲಾ ಯುದ್ಧ ತಂತ್ರಗಳನ್ನೂ ರೂಪಿಸಿ ಮುಂದುವರಿದ ಮಾಪ್ಪಿಳ ಸೇನೆಯು ಕೆಲವು ಸಂದರ್ಭದಲ್ಲಿ ಎಡವಿಬಿದ್ದವು. ಈ ಬೇಹುಗಾರರ ವಂಚನೆಯನ್ನು ಅರಿತ ವಾರಿಯಂ ಕುನ್ನನ್ ಸೇನೆಯನ್ನು ಚದುರಿಸಿದರು. ಸೈನಿಕರು ಮುಂದಿನ ನಿಲುವನ್ನು ಸ್ವಇಚ್ಛೆಯಿಂದ ನಿರ್ವಹಿಸಬಹುದೆಂದು ಸಲಹೆ ನೀಡುತ್ತಾರೆ.
ಆದರೆ ರೋಗಿ ಬಯಸಿದ್ದೂ ಹಾಲು, ವೈದ್ಯ ಹೇಳಿದ್ದೂ ಹಾಲು ಎಂಬ ಮಾತು ಇಲ್ಲಿ ನಿಜವಾಗಿಯೂ ಸಾಬೀತಾಯಿತು. ಮಾಪ್ಪಿಳ ಸೈನಿಕರ ಮನವೊಲಿಸಿ ಸಮರದಿಂದ ಹಿಮ್ಮುಖವಾಗಿಸುವುದು ಮತ್ತು ಸಮರನಿರತ ನಾಯಕರನ್ನು ಸೆರೆ ಹಿಡಿಯುವುದಾಗಿತ್ತು ಆರ್.ಎಚ್. ಹಿಚ್ಕೋಕ್ನ ತಂತ್ರ. ಯಾರಾದರೂ ಸ್ವ ಇಚ್ಛೆಯಿಂದ ಶರಣಾದರೆ ಪವಿತ್ರ ಮಕ್ಕಾಕ್ಕೆ ಕಳುಹಿಸಿತ್ತೇವೆ ಎಂದು ಮಾತು ಕೊಡಲಾಯಿತು. ಈ ವಾಗ್ದಾನ ತಿಳಿದು ಮನಬದಲಿಸಿ ಹಲವಾರು ಗಣ್ಯ ನಾಯಕರು ಶರಣಾಗುತ್ತಾರೆ. ಇವರಲ್ಲಿ ಆಮಕುಂಡನ್ ಮಮ್ಮದ್ ಮತ್ತು ಚಂಬ್ರಶೇರಿ ತಂಙಳರವರಿದ್ದರು. ಶರಣಾದ ನಾಯಕರನ್ನು ಪವಿತ್ರ ಮಕ್ಕಾಕ್ಕೆ ಕಳುಹಿಸುವ ಬದಲು ಮೋಸಮಾಡಿ ಗಲ್ಲಿಗೇರಿಸಲಾಯಿತು.
► ವಂಚನೆ
ಸೈನ್ಯವನ್ನು ಕೈಬಿಟ್ಟ ಬಳಿಕವೂ ವಾರಿಯಂ ಕುನ್ನನ್ರವರು ಹೋರಾಟದಿಂದ ಒಂದು ಹೆಜ್ಜೆಯೂ ಹಿಂದೆ ಸರಿಯದೆ ತನ್ನೊಡನಿದ್ದ 80 ಹೋರಾಟಗಾರರ ಜೊತೆ ಕಲ್ಲಿಮೂಲೆಯ ಒಂದು ಕಡೆ ತಂಗಿದ್ದರು.
ಅಚ್ಚುತೋಡಿ ಮೊಯ್ದಿನ್ ಹಾಜಿಯವರ ಪ್ರಭಾವದಿಂದ ಸುಲ್ತಾನರ ಮನವೊಲಿಸಲು ನಡೆಸಿದ ಬ್ರಿಟಿಷರ ಪ್ರಯತ್ನ ವಿಫಲಗೊಳ್ಳುತ್ತದೆ.
ಕ್ರಮೇಣ ವಾರಿಯಂರ ಆಪ್ತನಾಗಿದ್ದ ಉನ್ನಾಲಿ ಮುಸ್ಲಿಯಾರ್ರನ್ನು ಬಳಸಿ ಕಲ್ಲಿಮೂಲೆಯ ಕ್ಯಾಂಪಿನಿಂದ ವಾರಿಯಂ ಕುನ್ನನ್ರನ್ನು ಹಿಚ್ಕೋಕ್ನ ಜನರು ಬಂಧಿಸುತ್ತಾರೆ.
ಬಂಧನಕ್ಕೊಳಗಾದ ಸುಲ್ತಾನರನ್ನು ಜನವರಿ 5ರಂದು ರಾತ್ರಿ ಕಾಳಿ ಗಾವಿನಲ್ಲಿ ತಂಗಿಸಿದ್ದರು. ಅಂದು ರಾತ್ರಿ ಬ್ರಿಟಿಷರು ವಾರಿಯಂರ ಮೇಲೆ ಹಲ್ಲೆ ನಡೆಸಿದರು. ಆನಂತರ ವಿಚಾರಣೆಗೊಳಪಡಿಸಿ ಜನವರಿ 20ರಂದು ಬೆಳಿಗ್ಗೆ 10 ಗಂಟೆ ಮಲಪ್ಪುರಂ ಮಂಜೇರಿಯಲ್ಲಿ ಗುಂಡುಹಾರಿಸಲು ಮೂರು ಫಯರಿಂಗ್ ಸ್ಕ್ವಾಡ್ ಸಜ್ಜಾಗಿತ್ತು. ಫೈರಿಂಗ್ ಸ್ಕ್ವಾಡ್ನ ಮುಂದೆ ನಿಂತು ವಾರಿಯಂ ಕುನ್ನನ್ ಹೇಳಿದ ಮಾತುಗಳು ಎಲ್ಲಾ ದೇಶಪ್ರೇಮಿಗಳನ್ನು ರೋಮಾಂಚಗೊಳಿಸೀತು.
‘‘ನಾನು ಸಾವಿಗೆ ಹೆದರುವುದಿಲ್ಲ. ನನ್ನ ಕೈ, ಕಣ್ಣುಗಳನ್ನು ಕಟ್ಟಬಾರದು. ನಿಮ್ಮ ಗುಂಡು ನನ್ನ ಎದೆಗೆ ತಗಲಬೇಕು’’ ಎಂದು ಆರ್.ಎಚ್. ಹಿಚ್ಕೋಕ್ನೊಡನೆ ಮನವಿ ಮಾಡುತ್ತಾರೆ. ಕೆಲವೇ ಹೊತ್ತಿನಲ್ಲಿ ಮೂರು ಗುಂಡು ವಾರಿಯಂ ಕುನ್ನನ್ರ ಎದೆ ಸೀಳಿ ಅವರ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಇದೂ ಸಾಕಾಗದೆ ಅವರ ಮೃತದೇಹವನ್ನು ಬೆಂಕಿಗಾಹುತಿ ಮಾಡಿದ ನಂತರ ಬೂದಿಯನ್ನು ಕೂಡ ವಿವಿಧ ದಿಕ್ಕುಗಳಿಗೆ ಬ್ರಿಟಿಷರು ಎಸೆಯುತ್ತಾರೆ. ವಾರಿಯನ್ ಕುನ್ನನ್ರ ಸಣ್ಣ ಸುಳಿವೂ ಮುಂಬರುವ ತಲೆಮಾರುಗಳಿಗೆ ತಲುಪಬಾರದೆಂಬ ಉದ್ದೇಶದೊಂದಿಗೆ ಇವರ ಭಾವಚಿತ್ರ ಮುಂತಾದ ಎಲ್ಲಾ ದಾಖಲೆಗಳನ್ನು ನಾಶಗೊಳಿಸುತ್ತಾರೆ. ವಾರಿಯಂ ಕುನ್ನನ್ರ ಹತ್ಯೆಯ ನಂತರ ಜನವರಿ 24, 1922ರಲ್ಲಿ ಇಂಗ್ಲಿಷ್ ದಿನ ಪತ್ರಿಕೆಯಾದ THE GUARDIAN “A MAN WHO WOULD BE KING” ಎಂದೇ ವಿಶ್ಲೇಷಿಸಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಬ್ರಿಟಿಷರ ಯಾವುದೇ ಬೆದರಿಕೆಗಳಿಗೆ ಕುಗ್ಗದೆ ಶಕ್ತವಾಗಿ ಹೋರಾಡಿದ ವಾರಿಯಂ ಕುನ್ನನ್ರಂತಹ ವಿಶೇಷ ಸೇನಾನಿಗಳನ್ನು ದೇಶ ಮರೆಯಬಾರದು. ಇಂತಹ ವೀರರ ಅಮರನಾಮಗಳನ್ನು ಇತಿಹಾಸ ಪುಟಗಳಿಂದ ಆಳಿಸಿ ಹಾಕಲು ಹಪ ಹಪಿಸುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ದೇಶ ಭಕ್ತರು ಧ್ವನಿ ಎತ್ತಬೇಕಾಗಿದೆ.