ಪೊಲೀಸರನ್ನು ಕಾಡುವ ಯುವಭುಜಗಳು
-

ಯಾವ ವಯೋಮಿತಿಯ ವರ್ಗ ನಿಮ್ಮನ್ನು ಕಾಡುವುದು ಎಂದು ಕೇಳಿದರೆ ಪೋಲಿಸರಿಂದ ತಡವಿಲ್ಲದಂತೆ ಬರುವ ಉತ್ತರ ‘‘ಯುವಕರು’’!ಬೆದೆಗೆ ಬಂದ ಬೆಕ್ಕನ್ನೇ ತಡೆದು ಕಟ್ಟಿಡಲಾಗದ ಅನುಭವ ಉಳ್ಳ ನಮಗೆ ಪೋಲಿಸರ ಬಾಧೆ ಅರ್ಥವಾಗದೇ?
ಹೌದೌದು, ಯಾವುದೇ ಗುಂಪು ಗಲಭೆಗಳೆದ್ದರೆ ಅದರಲ್ಲಿ ಬಹುಪಾಲು ಮಂದಿ ಯುವಕರೇ!! ಪಾರ್ಕಿನಲ್ಲಿ ಪ್ರೇಮಪ್ರಕರಣ, ಬಾರ್ನಲ್ಲಿ ಕಿರಿಕ್ ಪ್ರಕರಣ, ಕಾಲೇಜಿನಲ್ಲಿ ಪ್ರೀತ್ಸೆ ಪ್ರೀತ್ಸೇ ಹಗರಣ, ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್ ನಂತರ ಮರಣ, ಬಟ್ಟೆ ಹರಿದುಕೊಂಡು ಹೊಡೆದಾಡಿಕೊಳ್ಳಲಿರುವ ರಾಜಕೀಯ ಬಣ; ಹೀಗೆ ಯಾವುದರಲ್ಲೇ ಆದರೂ ಯುವಕರದು ಹೆಚ್ಚಿನ ಪ್ರಮಾಣ. ಹೊಗಳಿಕೆಯ ಹೊನ್ನ ಶೂಲದ ಚೈತನ್ಯ
ಏಕೆ ಹೀಗಾಯ್ತೋ ನಾನು ಕಾಣೆನು ಎಂದು ಕಣ್ಣರಳಿಸಿದ ನನಗೆ ಪೊಲೀಸ್ ಮಿತ್ರರು ಹೇಳಿದ್ದು ಏನೆಂದರೆ, ‘‘ಈ ಯುವಕರಿಗೆ ಉಬ್ಬಿಸಿದರೆ ಆಯಿತು. ಅವರ ಶಕ್ತಿ ಸಾಮರ್ಥ್ಯದ ಬಗ್ಗೆ ಹೊಗಳಿದರೆ, ಅದನ್ನು ಪ್ರದರ್ಶಿಸಲು ಇನ್ನಿಲ್ಲದ ಉತ್ಸಾಹ ತೋರುತ್ತಾರೆ. ಅದಕ್ಕೇ ರಾಜಕಾರಣಿಗಳು ಬಿಸ್ಕೆಟ್ಗಳನ್ನು ಹಾಕುತ್ತಾ ಅವರ ತಲೆ ಸವರುತ್ತಿರುವುದು. ಅವರ ಭುಜ ಭದ್ರವಾಗಿರುತ್ತದೆ ಎಂದೇ ಅನೇಕ ಬಂದೂಕುಗಳು ಅವುಗಳ ಮೇಲೆ ಇಡಲ್ಪಟ್ಟು ಕುದುರೆ ಹಾರಿಸಲಾಗುತ್ತದೆ. ಆಗ ವಿಚಾರಣೆಗೆ ಒಳಗಾಗುವುದೆಲ್ಲಾ ಬಂದೂಕು ಹಾರಿಸಿದವರಲ್ಲ, ಆದರೆ ಭುಜ ಕೊಟ್ಟವರು. ರಕ್ಷೆ ಸಿಗುವ ಭರವಸೆಯಿಂದ ಕಕ್ಷೆ ದಾಟಿದ್ದು ಶಿಕ್ಷೆ ಪಡೆಯುತ್ತಾರೆ’’!! ಹೌದಲ್ಲಾ, ಈಗಷ್ಟೇ ಬಲಿಯುತ್ತಿರುವ ಈ ಯುವಭುಜಗಳು ಬರಿಯ ರಾಜಕಾರಣಿಗಳಿಗೆ ಮಾತ್ರ ಬೇಕಾಗಿರುವುದಿಲ್ಲ. ಧಾರ್ಮಿಕ ಮೂಲಭೂತವಾದಿಗಳಿಗೆ, ಭೂಗತ ಪಾತಕಿಗಳಿಗೆ, ಬೆಳ್ಳಿಪರದೆಯ ಕಾಗದದ ಹುಲಿಗಳಿಗೆ, ಕಾಳಸಂತೆಯ ವಸ್ತುವಾಹಕರಿಗೆ; ಜೊತೆಗೆ ಇದೇ ಬಲಿಯುತ್ತಿರುವ ಭುಜಗಳು ಪ್ರಾಮಾಣಿಕ ಚಳವಳಿಗಳಿಗೆ, ಹೋರಾಟಗಳಿಗೆ, ಸಮಾಜದ ಭವಿಷ್ಯವ ಕಟ್ಟುವ ಕಾರಣಗಳಿಗೆ, ಮನೆಯನ್ನು ಕಟ್ಟಿಸಬೇಕಾಗಿರುವ ತಂದೆಗೆ, ಸೋದರಿಯರ ಮದುವೆಯ ಚಪ್ಪರಗಳಿಗೆ ಕೂಡ ನೆರವಾಗಬೇಕಿವೆ. ನಲವತ್ತರ ನಂತರ ರೌಡಿಶೀಟ್ ಓಪನ್ ಆಗುವುದು ಅದೆಷ್ಟು ಕಡಿಮೆಯೋ, ಇಪ್ಪತ್ತರಿಂದ ಇಪ್ಪತ್ತೈದರ ಒಳಗೆ ಓಪನ್ ಆಗುವ ರೌಡಿಶೀಟ್ಗಳು ಅತ್ಯಂತ ಹೆಚ್ಚು. ಇದರಲ್ಲೂ ಸಂಭ್ರಮಿಸುವ ಯುವಕರಿಗೆ ಅರವಳಿಕೆಯೆಂದರೆ ಹೊಗಳಿಕೆಯ ಹೊನ್ನ ಶೂಲದ ಚೈತನ್ಯ!! ನೀನು ಹಾಗೆ ಹೀಗೆ, ನೀನು ಅವನಿಗಿಂತ ಏನು ಕಮ್ಮಿ, ನೀನು ಮನಸ್ಸು ಮಾಡಿದರೆ ಎತ್ತೇ ಬಂದುಬಿಡ್ತೀಯಾ, ನೀನು ಈಗ ಈ ಒಂದು ಕೆಲಸ ಮಾಡೋ ಧೈರ್ಯ ಮಾಡಿದರೆ, ಮುಂದೆ ಲೈಫ್ ಲಾಂಗ್ ಸೆಟ್ಲ್ ಆಗಿಬಿಡ್ತೀಯಾ ಅಂತೆಲ್ಲಾ ಹೊಗಳಿಕೆಯ ಅರವಳಿಕೆಯನ್ನು ಪಡೆದು, ಯಾವ ಭಾವ, ಬಾವು, ನೋವುಗಳನ್ನೂ ಆಗುತ್ತಿದೆಯೆಂದೇ ತಿಳಿಯದ ಅಸೂಕ್ಷ್ಮರಾಗುತ್ತಾ ಮನೆಗೂ ಮಾರಿ, ಬೀದಿಗೂ ಮಾರಿಯಾಗಿ ಏಮಾರಿ ಬಿಕರಿಯಾಗುವ ಯುವಕರೇ ನಮೋ ಎಂದು ಕಣ್ಮುಚ್ಚಿಕೊಂಡು ಯಾವುದೇ ಬ್ರಿಗೇಡ್ಗಳಲ್ಲಿ ನುಗ್ಗುತ್ತಿರುವುದು, ಪ್ರಖರ ವಾಗ್ಮಿಗಳ ವಾಕ್ಸೆಳತಗಳ ಉರುಳಿಗೆ ಸಿಕ್ಕಿಬೀಳುವುದು. ಗುರಿಗಳೂ ಮತ್ತು ಬಕರಿಗಳೂ
ಹಾಳಾದ ಕಿಶೋರಾವಸ್ಥೆಯಲ್ಲಿ ಪುಟಿಯುವ ಚೈತನ್ಯದ ಚಿಲುಮೆಯನ್ನು ಅದು ಪುಟಿಯುವ ಮಟ್ಟಕ್ಕೆ ಏರ ಬಿಡದ ಪೋಷಕರು, ಶಿಕ್ಷಕರು ಜೊತೆಗೆ ಸಮಾಜದ ಇತರ ಸಂಸ್ಥೆಗಳು ಹುಲಿವೇಷಕ್ಕೆ ಹಗ್ಗ ಹಾಕಿರುತ್ತಾರೆ, ಗಾಳಿಪಟದ ಸೂತ್ರ ಹಿಡಿದಿರುತ್ತಾರೆ. ಅದುಮಿಟ್ಟುಕೊಂಡಿರುವ ಅದಮ್ಯ ಶಕ್ತಿಯನ್ನು ಅದೆಂದಿಗೆ ಉಡಾಯಿಸುವೆವೋ ಎಂದು ಅವಕಾಶಕ್ಕೆ ಕಾಯುತ್ತಿರುವ ಅಮಾಯಕರೇ ಹೊಗಳಿಕೆಯ ಹೊನ್ನ ಶೂಲದ ಗುರಿಗಳು ಮತ್ತು ಬಕರಿಗಳು.
ಡ್ರಾಗ್ ರೇಸ್ ಮತ್ತು ವ್ಹೀಲಿಂಗ್ಗಳಲ್ಲೂ ಅವರು ಸಾಹಸಿಗಳೇ. ಅದು ಇಂತಹ ಯೌವನದಲ್ಲಿ ಪುಟಿಯದಿದ್ದರೆ ಇನ್ನೇನು ಬಾಗಿರುವ ವೃದ್ಧನಲ್ಲಿ ಈ ಶಕ್ತಿ ಎದ್ದೀತೇ? ಡ್ರಾಗ್ ರೇಸಿನ ಸದ್ದುಗಳನ್ನು ಕೇಳಲಾಗದ ಅದೆಷ್ಟೋ ನಿರಾಶಾವಾದಿಗಳೇ ಪೊಲೀಸರಿಗೆ ಫೋನ್ ಮಾಡಿ ಸಿಕ್ಕಿ ಹಾಕಿಸುವುದು. ಕಲಂಗಳ ಉರುಳುಗಳಲ್ಲಿ
ಬರೀ ತೋಳ್ಬಲವೊಂದೇ ಎಚ್ಚೆತ್ತುಕೊಳ್ಳುವುದೇ? ಒಳಗಡೆ, ಕೆಳಗಡೆ ಗುಪ್ತವಾಗಿರುವ ಎಷ್ಟೋ ಬಲಗಳು ತಾವು ಶಕ್ತಿವಂತವಾಗಿದ್ದೇವೆಂದು ನಿರೂಪಿಸಬೇಕಾಗಿರುತ್ತದೆ. ಆ ಬಲ ಪ್ರದರ್ಶನವೋ ನೇರವಾಗಿ ಮಾಡಲಾಗದು, ಮಾಡದೇ ಇರಲಾಗದು. ಎಲ್ಲೆಲ್ಲೋ ಗಬ್ಬೆದ್ದು ಸೋರಿ ಪೊಲೀಸ್ಗಳಿಗೆ ಯು-ಟೀಸಿಂಗ್ಗಳ ಪ್ರಕರಣದಲ್ಲಿ ಬಂದು ಬೀಳುತ್ತಾರೆ.
‘‘ಥತ್, ಈ ಐಪಿಸಿ ಕಲಂಗಳ ಕಾಲಂಗಳಿಗೆ ಈ ಯೂತ್ಗಳು ತಾವಾಗೇ ಕಾಲು ಹಾಕಿಕೊಂಡು ಬರುವುದು’’ ಎಂದು ಪೊಲೀಸರು ಗೊಣಗಿದರೂ ನಾನದನ್ನು ಒಪ್ಪುವುದಿಲ್ಲ. ಸೂತ್ರ ಹಿಡಿದಿರುವವರು ಸೂತ್ರ ಬಿಟ್ಟವರಿಬ್ಬರೂ ಯೂತ್ ಹೆಂಚಿನ ತೂತುಗಳಿಗೆ ಕಾರಣವಾಗಿರುತ್ತಾರೆ. ಕೆರಳಿದ ಸಿಂಹ, ಸಾಹಸಸಿಂಹದಿಂದ ಹಿಡಿದು ರಾಜಾಹುಲಿಯವರೆಗೂ ಪುರುಷಸಿಂಹರ ಪೌರುಷವನ್ನು ಬಡಿದೆಬ್ಬಿಸುವ ನೆರಳಿನಾಟಗಳಿಗೆ ಮರುಳಾಗಿ ಅದೆಷ್ಟೋ ಯುವಜನರು ಕೊರಿಯಾಗ್ರಫಿಯೇ ಇಲ್ಲದೆ, ರೋಪ್ ಇಲ್ಲದೇ ರೋಪ್ ಹಾಕಿಕೊಂಡು, ಹುಕ್ ಇಲ್ಲದೇ ಸಿಕ್ಕಿಹಾಕಿಕೊಂಡು ಬಡಿದಾಡಿಕೊಂಡು 324ಗೆ ಬಂದರೆ ಇನ್ನೂ ಸ್ವಲ್ಪ ಸಂಖ್ಯೆಯಲ್ಲಿ ಹಿಂದಕ್ಕೆ ಹೋಗಿ, ಕಾರ್ಯಾಚರಣೆಯಲ್ಲಿ ಮುಂದೆ 307ರ ಪ್ರಕಾರ ಅರೆಗೊಲೆಗಳಿಗೆ ಕಾರಣವಾಗುತ್ತಾರೆ. ಹಣಕಾಸಿನ ವಿಷಯಗಳಲ್ಲಿ ಅಷ್ಟೇನೂ ಸ್ವತಂತ್ರವಾಗಿ ಗಳಿಸಲಾಗದ ಆ ಯುವಕರ ತಂಡಗಳಿಗೆ ತಂಡೋಪತಂಡವಾಗಿ ಉದ್ರೇಕಿಸುವ ವಾಂಚಿತಗಳಿಗೇನೂ ಈ ಲೋಕದಲ್ಲಿ ಕೊರತೆಯಿಲ್ಲ. 399 ಮತ್ತು 402ರ ಪ್ರಕಾರ ಹೊಂಚುಹಾಕಿ ಗಳಿಸುವ ಬದಲು ಗಾಣಕ್ಕೆ ಸಿಕ್ಕಿಕೊಳ್ಳುತ್ತಾರೆ. ಯಾವುದರ ಸ್ಪಷ್ಟತೆಯನ್ನೇ ಪಡೆಯದೆ ಯಾವುದೋ ಒಂದರ ಹಿಂದೆ ಬಿದ್ದು, 109ರ ಪ್ರಕಾರ ಅನುಮಾನಾಸ್ಪದ ಆಸಾಮಿಯಾಗುತ್ತಾರೆ. ಸರಿ, ಒಮ್ಮೆ ಹೀಗೊಂದು ಕೆಂಗಣ್ಣಿಗೆ ಬಿದ್ದು ಬಿಡುಗಡೆಯಾದ ಮೇಲೆ ಸುಮ್ಮನಿರುವನೇ? ಪದೇ ಪದೇ ಅವನೇ ಅನುಮಾನಕ್ಕೆ ಈಡಾಗಿ 110 ಆಗುತ್ತಾನೆ. ಅಷ್ಟೇಕೆ ಅವನೇ ಮುಂದೆ ತಾನಿಂತೇ ಎಂದು ತನ್ನ ಬಲಿಯುತ್ತಿರುವ ಭುಜವನ್ನು ಆ ಕೆಲಸಕ್ಕೆ ಫಿಕ್ಸ್ ಮಾಡಿಕೊಂಡಿರುತ್ತಾನೆ. ಅಪ್ಪಮಾಡಿದರೂ ಯುವಕನಾಗಿರುವ ಮಗ ಮನೆಯಲ್ಲಿ ಧೂಮಪಾನ ಮಾಡುವನೇ? ಬೀದಿಯಲ್ಲಿ, ಅದ್ಯಾವುದೇ ಮೂಲೆಯಲ್ಲಿ ಸೇದಲು ಹೋಗಿ ಕೊಟ್ಪಾಗೆ ಬಂದು ಬೀಳುವವರಲ್ಲಿ ಅತಿ ಹೆಚ್ಚಿನ ಮಂದಿ ಯುವಕರೇ! ಇನ್ನು ಡಿಡಿ ಕೇಸುಗಳಲ್ಲೂ ಅವರೇ ಮುಂದು.
ಒಟ್ಟಾರೆ ಅದಮ್ಯ ಬಲ ಪ್ರದರ್ಶನದ ಮೊದಲು ಪ್ರಜ್ಞೆಯಿಂದ ಒಮ್ಮೆ ಅದನ್ನು ಅವಲೋಕಿಸಿಕೊಂಡರೆ ಯುವಭುಜಗಳು ಬೇರಿನ್ನೇನೋ ಘನವಾದ ಜವಾಬ್ದಾರಿಗಳಿಗೆ ಹೆಗಲಾಗಬಹುದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.