ಜಾತಿ ಮುಳ್ಳಲ್ಲಿ ನಲುಗಿದ ಕಪ್ಪುಗುಲಾಬಿ-ರೋಸಿ
-

ಡೇನಿಯಲ್ ಕೈಯಲ್ಲಿ ರಾಜಮ್ಮ ರೋಸಿಯಾದರು. ಶೂಟಿಂಗ್ ಸಂದರ್ಭದಲ್ಲಿ ಅವಳ ಊಟವನ್ನು ಅವಳೇ ತಂದು ಪ್ರತ್ಯೇಕವಾಗಿ ಉಣ್ಣಬೇಕಾಗಿತ್ತು. ನಟಿಸಿದ ಬಳಿಕ, ಸಂಜೆ ಕೂಲಿಕೆಲಸಕ್ಕೆ ತೆರಳಬೇಕಾಗಿತ್ತು. ಈಕೆಯ ಪಾಲಿಗೆ ನಟಿಸುವುದರ ಜೊತೆಗೆ ಸಿನೆಮಾದಲ್ಲಿ ಇನ್ನೊಂದು ರೋಮಾಂಚನ ತರುವ ವಿಷಯವಿತ್ತು. ಆಕೆ ಚಿತ್ರದಲ್ಲಿ ನಟಿಸಲಿರುವುದು ಮೇಲ್ಜಾತಿಯ ನಾಯರ್ ಹೆಣ್ಣು ಸರೋಜಾಳ ಪಾತ್ರ. ಆದರೆ ಅದೇ ಪಾತ್ರ ತನ್ನ ಬದುಕಿಗೆ ಕುತ್ತಾಗುತ್ತದೆ ಎಂದು ಅವಳು ಭಾವಿಸಿರಲಿಲ್ಲ.
ಇಂದು ಮಲಯಾಳಂ ಚಿತ್ರಗಳಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಆಸ್ಕರ್ ಪ್ರಶಸ್ತಿ ಮಲಯಾಳಂ ಪ್ರತಿಭೆಗಳನ್ನು ಅರಸಿ ಕೊಂಡು ಬಂದಿದೆ. ಆದರೆ ಈ ಮಲಯಾಳಂ ಚಿತ್ರೋದ್ಯಮವೆನ್ನುವುದು ನಾವು ಗ್ರಹಿಸಿದಷ್ಟು ಸುಲಭ ದಾರಿಯನ್ನು ಹಾದು ಬಂದಿಲ್ಲ. ಅದು ಬೆಂಕಿಯಲ್ಲಿ ಅರಳಿದ ಹೂವು.
ಕೇರಳದಲ್ಲಿ ಮಲಯಾಳಂ ಚಿತ್ರೋದ್ಯಮ ಕುಡಿಯೊಡೆದದ್ದು ಜೆ.ಸಿ. ಡೇನಿಯಲ್ ಮಡಿಲಿನಲ್ಲಿ. ಈತ ಮಲಯಾಳಂನ ಮೊತ್ತ ಮೊದಲ ಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ನಟ. ಈತ ಮಲಯಾಳಂಗೆ ಕೊಟ್ಟಿರುವುದು ಒಂದೇ ಒಂದು ಚಿತ್ರ. ಅದರ ಹೆಸರು ‘ವಿಗಡ ಕುಮಾರನ್’. ಇದೊಂದು ಮೂಕಿ ಚಿತ್ರ. ಈ ಚಿತ್ರ ಹೊರ ಬಂದ ಬಳಿಕ ಡೇನಿಯಲ್ ಬದುಕು ಕೂಡ ಒಂದು ಮೂಕ ಚಿತ್ರವಾಯಿತು. ಈ ಚಿತ್ರದ ಬಿಡುಗಡೆಗಾಗಿ ಅವರು ನಡೆಸಿದ ಹೋರಾಟ, ಒಂದೇ ಒಂದು ಕಾಪಿ ಇಟ್ಟುಕೊಂಡು ಅದನ್ನು ಜನರೆಡೆಗೆ ತಲುಪಿಸಲು ಅವರು ನಡೆಸಿದ ಪ್ರಯತ್ನ, ಪಟ್ಟಭದ್ರ ಹಿತಾಸಕ್ತಿಗಳಿಂದ ಎದುರಾದ ವಿರೋಧ ಇವೆಲ್ಲವೂ ಬಳಿಕ, ‘ಸೆಲ್ಯುಲಾಯ್ಡಿ’ ಎನ್ನುವ ಇನ್ನೊಂದು ಚಿತ್ರದ ಹುಟ್ಟಿಗೆ ಕಾರಣವಾಯಿತು. ದುಃಖದ ಸಂಗತಿಯೆಂದರೆ, ಮೊತ್ತ ಮೊದಲ ಮಲಯಾಳಂ ಚಿತ್ರ ಮಾಡಿ ಬಿಕಾರಿಯಾದ ಡೇನಿಯಲ್ರನ್ನು ಮಲಯಾಳಂನ ಮೊತ್ತ ಮೊದಲ ನಿರ್ದೇಶಕ, ನಿರ್ಮಾಪಕ, ನಟ ಎಂದು ಗುರುತಿಸುವುದಕ್ಕೂ ಕೇರಳ ಸರಕಾರ ಹಿಂಜರಿಯುತ್ತದೆ. ಅದಕ್ಕೆ ಕುಂಟು ನೆಪಗಳನ್ನು ಒಡ್ಡುತ್ತದೆ. ಜೀವನದಲ್ಲಿ ಸೋತು ಸುಣ್ಣವಾದ ಡೇನಿಯಲ್ ತಮಿಳುನಾಡಿನಲ್ಲಿ ಅಜ್ಞಾತವಾಗಿ ಬದುಕುತ್ತಿರುತ್ತಾರೆ. ಆತ ತಮಿಳ, ಕ್ರಿಶ್ಚಿಯನ್ ಎಂಬ ಕಾರಣ ಒಡ್ಡಿ, ಸರಕಾರ ಮನವಿಯನ್ನು ತಿರಸ್ಕರಿಸುತ್ತದೆ. ವೃದ್ಧಾಪ್ಯ ಕಾಲದಲ್ಲಿ ಪಿಂಚಣಿಗಾಗಿ ಕೇರಳ ಸರಕಾರದೆಡೆಗೆ ಬೊಗಸೆಯೊಡ್ಡಿದಾಗಲೂ ಸರಕಾರ ಕೈ ಚೆಲ್ಲಿತು. ನಿಮ್ಮ ವ್ಯಾಪ್ತಿ ನಮಗೆ ಬರುವುದಿಲ್ಲ. ನೀವು ತಮಿಳುನಾಡು ಸರಕಾರದೊಂದಿಗೆ ಕೇಳಿ ಎಂದಿತು. 1975ರಲ್ಲಿ ಡೇನಿಯಲ್ ಮೃತಪಟ್ಟರು. ಇದಾದ ಹಲವು ವರ್ಷದ ಬಳಿಕ ಸರಕಾರ ವಿಗಡಕುಮಾರನ್ ಚಿತ್ರ ಮಲಯಾಳಂನ ಮೊತ್ತ ಮೊದಲ ಚಿತ್ರವೆಂದು ಒಪ್ಪಿಕೊಂಡಿತು. ಜೊತೆಗೆ ಡೇನಿಯಲ್ರನ್ನು ‘ಕೇರಳ ಚಿತ್ರರಂಗದ ಪಿತಾಮಹ’ ಎಂದು ಘೋಷಿಸಿತು.
ನಾನು ಹೇಳಲು ಹೊರಟಿರುವುದು ಡೇನಿಯಲ್ ಕತೆಯನ್ನಲ್ಲ. ಈ ಡೇನಿಯಲ್ ಚಿತ್ರದಲ್ಲಿ ನಟಿಸಿದ ಮೊತ್ತ ಮೊದಲ ಮಲಯಾಳಂ ನಟಿ ರೋಸಿಯ ಕುರಿತಂತೆ. ನಿರ್ದೇಶಕ ಡೇನಿಯಲ್ ಅವರ ‘ವಿಗಡ ಕುಮಾರನ್’ ಚಿತ್ರದ ನಾಯಕಿಯಾಗಿ ನಟಿಸಿ, ಬಳಿಕ ಇದ್ದಕ್ಕಿದ್ದಂತೆಯೇ ಕಣ್ಮರೆಯಾದ ರೋಸಿ ಮಲಯಾಳಂ ಚಿತ್ರರಂಗದ ಮುಖಕ್ಕೆ ಒಡ್ಡಿದ ಒಡೆದ ಕನ್ನಡಿ. ಅವರ ಬದುಕನ್ನು ಮುಟ್ಟ ಹೋದರೆ ನಮ್ಮ ಕೈತುಂಬಾ ಗಾಯಗಳು. ಸುಮಾರು 1928ರ ಕಾಲಘಟ್ಟದಲ್ಲಿ ತನ್ನೆಲ್ಲ ಜಮೀನನ್ನು ಮಾರಿ, ವಿಗಡ ಕುಮಾರನ್ ಚಿತ್ರವನ್ನು ಮಾಡಲು ಹೊರಡುತ್ತಾರೆ ಡೇನಿಯಲ್. ಆಗ ಅವರಿಗೆ ಎದುರಾದ ಅತಿ ದೊಡ್ಡ ಸಮಸ್ಯೆಯೆಂದರೆ ನಟಿಯದು. ನಾಟಕ, ಚಿತ್ರದಲ್ಲಿ ನಟಿಸುವವರ ಕುರಿತಂತೆ ಅತ್ಯಂತ ಕೀಳುಭಾವನೆ ಹೊಂದಿದ ಕಾಲಘಟ್ಟವದು. ಕೇರಳ ದಲ್ಲಂತೂ ಮೇಲ್ವರ್ಣೀಯರ ದಬ್ಬಾಳಿಕೆ ಉತ್ತುಂಗದಲ್ಲಿದ್ದ ಸಂದರ್ಭ. ನಟಿಗಾಗಿ ಹಲವು ತಿಂಗಳುಗಳ ಕಾಲ ಹುಡುಕಾಡಿದ ಅವರಿಗೆ ಪರಿಚಯವಾದುದು ರಾಜಮ್ಮ ಎನ್ನುವ ಪುಲೆಯ(ದಲಿತ) ಹುಡುಗಿ. ಅಂದಿನ ಕಾಲದಲ್ಲಿ ಕೇರಳದಲ್ಲಿ ಪುಲೆಯ ಅಂದರೆ ಹೊಲೆಯ. ಕೂಲಿ ಕೆಲಸ ಮಾಡುತ್ತಾ ಬದುಕು ನಡೆಸುವ ಈ ದಲಿತ ಹುಡುಗಿಗೆ ನಾಟಕದಲ್ಲಿ ನಟಿಸುವ ಚಟವಿತ್ತು. ಒಂದೆರಡು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಳು. ಈಕೆಯ ತಂದೆ ಕೂಲಿಕೆಲಸ ಮಾಡುತ್ತಾ ಜೀವನ ಮಾಡುತ್ತಿದ್ದರು. ಇನ್ನೊಬ್ಬ ದೊಡ್ಡಪ್ಪಒಂದು ಆಸ್ಪತ್ರೆಯಲ್ಲಿ ಶೌಚಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರನ್ನು ಒಲಿಸಿದ ಡೇನಿಯಲ್, ರಾಜಮ್ಮನನ್ನು ಕೇರಳದ ಮೊತ್ತ ಮೊದಲ ನಟಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಡೇನಿಯಲ್ ಕೈಯಲ್ಲಿ ರಾಜಮ್ಮ ರೋಸಿಯಾದರು. ಶೂಟಿಂಗ್ ಸಂದರ್ಭದಲ್ಲಿ ಅವಳ ಊಟವನ್ನು ಅವಳೇ ತಂದು ಪ್ರತ್ಯೇಕವಾಗಿ ಉಣ್ಣಬೇಕಾಗಿತ್ತು. ನಟಿಸಿದ ಬಳಿಕ, ಸಂಜೆ ಕೂಲಿಕೆಲಸಕ್ಕೆ ತೆರಳಬೇಕಾಗಿತ್ತು. ಈಕೆಯ ಪಾಲಿಗೆ ನಟಿಸುವುದರ ಜೊತೆಗೆ ಸಿನೆಮಾದಲ್ಲಿ ಇನ್ನೊಂದು ರೋಮಾಂಚನ ತರುವ ವಿಷಯವಿತ್ತು. ಆಕೆ ಚಿತ್ರದಲ್ಲಿ ನಟಿಸಲಿರುವುದು ಮೇಲ್ಜಾತಿಯ ನಾಯರ್ ಹೆಣ್ಣು ಸರೋಜಾಳ ಪಾತ್ರ. ಆದರೆ ಅದೇ ಪಾತ್ರ ತನ್ನ ಬದುಕಿಗೆ ಕುತ್ತಾಗುತ್ತದೆ ಎಂದು ಅವಳು ಭಾವಿಸಿರಲಿಲ್ಲ.
ಎಲ್ಲ ಸಂಕಷ್ಟಗಳ ನಡುವೆ ಮೊತ್ತ ಮೊದಲ ಮಲಯಾಳಂ ಮೂಕಿ ಚಿತ್ರ ಬಿಡುಗಡೆಗೆ ಸಿದ್ಧವಾಯಿತು. ದೀಪ ಹಚ್ಚುವ ಕೆಲಸಕ್ಕೆ ಹಿರಿಯ ಬ್ರಾಹ್ಮಣರೊಬ್ಬರನ್ನು ಕರೆಸಲಾಗಿತ್ತು. ತನ್ನ ಮೊತ್ತ ಮೊದಲ ಚಿತ್ರವನ್ನು ನೋಡಲು ರೋಸಿ ಸಂಭ್ರಮ ದಿಂದ ಸಿದ್ಧರಾಗಿ ಬಂದಿದ್ದರು. ಆದರೆ, ಕಾರ್ಯಕ್ರಮ ಉದ್ಘಾಟಿಸುವ ಹಿರಿಯರು ರೋಸಿಯನ್ನು ನೋಡಿ ಬಿಟ್ಟರು. ಆಕೆ ದಲಿತ ಹೆಣ್ಣು ಎನ್ನುವುದು ಅವರಿಗೆ ಗೊತ್ತಿತ್ತು. ಡೇನಿಯಲ್ರನ್ನು ಕರೆಸಿದವರೇ ‘‘ತಕ್ಷಣ ಆಕೆಯನ್ನು ಹೊರಗೆ ಕಳುಹಿಸಿ. ಅವಳು ಇಲ್ಲಿದ್ದರೆ ನಾನು ದೀಪಬೆಳಗಿಸುವುದಿಲ್ಲ’’ ಎಂದು ಬಿಟ್ಟರು. ಡೇನಿಯಲ್ ತಬ್ಬಿಬ್ಬಾದರು. ಸಾಲಸೋಲ ಮಾಡಿ ತಯಾರಿಸಿದ ಮೊತ್ತ ಮೊದಲ ಚಿತ್ರ. ಹೇಗಾದರೂ ಬಿಡುಗಡೆಯಾದರೆ ಸಾಕು ಎಂಬ ಸ್ಥಿತಿಯಲ್ಲಿ ಅವರಿದ್ದರು. ತಾನು ನಟಿಸಿದ ಚಿತ್ರವನ್ನು ನೋಡಲು ಹಂಬಲಿಸಿದ್ದ ರೋಸಿಯನ್ನು ಬಲವಂತವಾಗಿ ಹೊರ ಹಾಕಲಾಯಿತು. ಕೊನೆಗೂ ಹಿರಿಯರು ದೀಪ ಬೆಳಗಿಸಿದರು. ಉದ್ಘಾಟನೆಗೊಂಡು ಚಿತ್ರ ಆರಂಭವಾಯಿತು. ಮೂಕಿ ಚಿತ್ರವಾದುದರಿಂದ, ಡೇನಿಯಲ್ ಅವರೇ ಸಂದರ್ಭಗಳನ್ನು ವಿವರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ರೋಸಿ ಪಾತ್ರ ಪ್ರವೇಶವಾಯಿತು. ರೋಸಿ ನಟಿಸಿರುವುದು ಮೇಲ್ವರ್ಣದ ನಾಯರ್ ಪಾತ್ರದಲ್ಲಿ ಎನ್ನುವುದು ದೀಪಬೆಳಗಿಸಿದ ಹಿರಿಯರಿಗೆ ತಿಳಿದದ್ದೇ ಕೆಂಡಾಮಂಡಲವಾದರು. ದಲಿತ ಹೆಣ್ಣು ಮೇಲ್ಜಾತಿಯವರ ಪಾತ್ರ ನಿರ್ವಹಿಸುವುದೇ? ಚಿತ್ರ ನಿಲ್ಲಿಸಿ ಎಂದು ಅಬ್ಬರಿಸಿದರು. ಅವರೊಂದಿಗಿದ್ದ ಬೆಂಬಲಿಗರು ಗದ್ದಲವೆಬ್ಬಿಸಿದರು. ಅನಿವಾರ್ಯವಾಗಿ ಡೇನಿಯಲ್ ಪ್ರದರ್ಶನವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಹಿರಿಯರು ಅಲ್ಲಿಂದ ಎದ್ದು ಹೊರ ನಡೆದರು.
ಇಷ್ಟರಲ್ಲೇ ದಲಿತ ಹೆಣ್ಣು ನಾಯರ್ ಪಾತ್ರವನ್ನು ನಿರ್ವಹಿಸಿರುವುದು ಬೆಂಕಿಯಂತೆ ಹರಡತೊಡಗಿತು. ರೋಸಿಯ ತಂದೆಗೆ ಬೆದರಿಕೆ ಹಾಕಲಾಯಿತು. ಪುಂಡು ಪೋಕರಿಗಳು ಆಕೆಯ ಮನೆಗೆ ಕಲ್ಲು ತೂರಾಟ ನಡೆಸುವುದು ಸಾಮಾನ್ಯವಾಯಿತು. ಮಾರನೆ ದಿನ ಮತ್ತೆ ಚಿತ್ರ ಪ್ರದರ್ಶಿಸಲು ಡೇನಿಯಲ್ ಹೊರಟರು. ಚಿತ್ರ ಪ್ರದರ್ಶನವೂ ಆಯಿತು. ಆದರೆ ಅಂದೇ ರಾತ್ರಿ ಮೇಲ್ವರ್ಣೀಯರ ಒಂದು ತಂಡ ರೋಸಿಯ ಮನೆಗೆ ಬೆಂಕಿ ಹಚ್ಚಿತ್ತು. ಆಕೆಯನ್ನು ಜೀವಂತ ದಹಿಸುವುದು ಅವರ ಉದ್ದೇಶವಾಗಿತ್ತು. ಆದರೆ ಆ ಕಾಳ ಕತ್ತಲೆಯಲ್ಲಿ ತನ್ನ ಇಬ್ಬರು ತಂಗಿಯರು ಹಾಗೂ ತಮ್ಮನ ಜೊತೆಗೆ ರೋಸಿ ಪರಾರಿಯಾದರು. ಮಲಯಾಳಂ ಚಿತ್ರರಂಗದ ರೋಸಿ ಅಲ್ಲಿಗೆ ಮುಗಿದು ಹೋದರು. ಈ ಬಳಿಕ ಆಕೆಯನ್ನು ಮಲಯಾಳಂ ಚಿತ್ರರಂಗ ಸಂಪೂರ್ಣ ಮರೆತೇ ಬಿಟ್ಟಿತು.
ಆದರೆ ಅಂದು ಕಾಳಕತ್ತಲೆಯಲ್ಲಿ ತನ್ನ ಸೋದರಿಯರೊಂದಿಗೆ ಪರಾರಿಯಾದ ರೋಸಿ, ಹೆದ್ದಾರಿಗೆ ಬಂದರು. ಆ ದಾರಿಯಲ್ಲಿ ಬಂದ ಒಂದು ಲಾರಿಗೆ ಕೈ ತೋರಿಸಿದರು. ಅವರನ್ನು ಲಾರಿಗೆ ಹತ್ತಿ ಕುಳ್ಳಿರಿಸಿದ ಲಾರಿ ಡ್ರೈವರ್ ಕೇಶವನ್ ಪಿಳ್ಳೈ ಅವರ ಬದುಕಿನ ಉದ್ದಕ್ಕೂ ಆಸರೆಯಾದರು. ರೋಸಿಯ ಕತೆ ಕೇಳಿ ಕೇಶವನ್ ಪಿಳ್ಳೈ ಆಕೆಯನ್ನು ವರಿಸಿದರು. ತಮಿಳುನಾಡಿನಲ್ಲಿ ಯಾವ ಸದ್ದುಗದ್ದಲವೂ ಇಲ್ಲದ ಒಂದು ಮೂಕಿ ಚಿತ್ರದಂತೆ ತನ್ನ ಬದುಕನ್ನು ಮುಗಿಸಿದರು ರೋಸಿ. ಪದ್ಮಾ, ನಾಗಪ್ಪನ್ ಇಬ್ಬರು ಮಕ್ಕಳು ತನ್ನ ತಾಯಿಯ ಬದುಕಿಗೆ ಸಾಕ್ಷಿಯಾಗಿ ತಮಿಳುನಾಡಿನಲ್ಲಿ ಬೆಳೆಯುತ್ತಿದ್ದಾರೆ. ವಿಷಾದನೀಯ ಸಂಗತಿಯೆಂದರೆ, ಡೇನಿಯಲ್ರನ್ನು ಮಾನ್ಯ ಮಾಡಿದ ಕೇರಳ ಸರಕಾರ ರೋಸಿಯನ್ನು ಕೊನೆಯವರೆಗೂ ಒಪ್ಪಿಕೊಳ್ಳಲೇ ಇಲ್ಲ.
ಮಲಯಾಳಂ ಚಿತ್ರರಂಗದ ಮೊತ್ತ ಮೊದಲ ಕಲಾವಿದೆ ಎನ್ನುವ ಗೌರವವನ್ನು ನೀಡಲು ಅದು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಆದರೆ ಮಲಯಾಳಂನ ಖ್ಯಾತ ನಿರ್ದೇಶಕ ಕಮಲ್ ಅವರು ಡೇನಿಯಲ್ ಬದುಕನ್ನು ಆಧರಿಸಿ ನಿರ್ದೇಶಿಸಿದ ‘ಸೆಲ್ಯುಲಾಯ್ಡಾ’ ತಂಡದ ಕೆಲಸದಿಂದಾಗಿ ಅದೂ ಸಾಧ್ಯವಾಯಿತು. ಮಲಯಾಳಂ ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ರೋಸಿಯ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ನೀಡಲು ಸರಕಾರ ಬಳಿಕ ಮುಂದಾಯಿತು. ಚಿತ್ರದಲ್ಲಿ ನಟಿಸಿದ ಸುಮಾರು 90 ವರ್ಷಗಳ ಬಳಿಕ ಕೇರಳ ಸರಕಾರ ರೋಸಿಯನ್ನು ಪ್ರಪ್ರಥಮ ಮಲಯಾಳಂ ನಟಿ ಎನ್ನುವುದನ್ನು ಮಾನ್ಯ ಮಾಡಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.