ಆರು ವರ್ಷಗಳಿಂದ ದಿಕ್ಕುತಪ್ಪಿ ಅಲೆಯುತ್ತಿರುವ ರಾಮಬಾಣ
- ಭಾರತೀಯರನ್ನು ಬಕ್ರಾ ಮಾಡಿದ ನೋಟ್ ಬ್ಯಾನ್ಗೆ ಆರನೇ ವಾರ್ಷಿಕೋತ್ಸವ. ಕೋವಿಡ್ ವೈಫಲ್ಯಕ್ಕೆ ಮೂರನೇ ವಾರ್ಷಿಕೋತ್ಸವ.
- 50 ದಿನ ಕಾಲಾವಕಾಶ ಕೊಡಿ. ಸಮಸ್ಯೆ ಬಗೆಹರಿಯದಿದ್ದರೆ ಜೀವಂತ ಸುಟ್ಟುಬಿಡಿ ಎಂದಿದ್ದರು.
- ಹೆಚ್ಚುತ್ತಿರುವ ನಿರುದ್ಯೋಗ, ಹಣದುಬ್ಬರ, ಬಡತನ, ಬೆಲೆ ಏರಿಕೆ ಬಗ್ಗೆ ಆರೆಸ್ಸೆಸ್ ಆತಂಕ.
- 40 ವರ್ಷಗಳಿಂದ ಆರೆಸ್ಸೆಸ್ ಬೈಠಕ್ಗಳಲ್ಲಿ ಕುಳಿತಿದ್ದವರೇ ದೇಶ-ರಾಜ್ಯ ಆಳುತ್ತಿದ್ದಾರೆ.
- ದತ್ತಾತ್ರೇಯ ಹೊಸಬಾಳೆಯವರು ಇದಕ್ಕೆಲ್ಲಾ ಯಾರನ್ನು ಹೊಣೆ ಮಾಡಬೇಕು?
- ನೋಟ್ ಬ್ಯಾನ್ ಹಿಂದಿನದಿನದವರೆಗೂ ಚಲಾವಣೆಯಲ್ಲಿದ್ದ ನಗದು ಪ್ರಮಾಣ 17.7 ಲಕ್ಷ ಕೋಟಿ.
- 500 ಮತ್ತು 1000 ಮುಖಬೆಲೆಯ 15 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ರದ್ದುಗೊಳಿಸಲಾಗಿತ್ತು.
- ಆ ಮೂಲಕ ಚಲಾವಣೆಯಲ್ಲಿದ್ದ ಶೇ.86.4ರಷ್ಟು ನಗದನ್ನು ವಾಪಸ್ ಪಡೆಯಲಾಗಿತ್ತು.
- ಆರು ವರ್ಷಗಳ ಬಳಿಕ ಚಲಾವಣೆಯಲ್ಲಿರುವ ನಗದು ಪ್ರಮಾಣ 30.88 ಲಕ್ಷ ಕೋಟಿ .
- ನೋಟು ರದ್ದತಿ ಸಂದರ್ಭಕ್ಕೆ ಹೋಲಿಸಿದರೆ ಶೇ.71.84 ರಷ್ಟು ಅಧಿಕ ನಗದು ಚಲಾವಣೆಯಲ್ಲಿದೆ ಎಂದು ಮೊನ್ನೆ ಆರ್ಬಿಐ ವರದಿ ನೀಡಿದೆ.
- ಅಂದರೆ ನಿಷೇಧಗೊಂಡ ನೋಟುಗಳಲ್ಲಿ ಶೇ.99 ರಷ್ಟು ನೋಟುಗಳು ವಾಪಸ್ಸಾಗಿದ್ದವು. 10 ಸಾವಿರ ಕೋಟಿ ರೂ.ಯಷ್ಟು ಮಾತ್ರ ನೋಟುಗಳು ವಾಪಸ್ಸಾಗಿಲ್ಲ ಎಂದು ಆರ್ಬಿಐ ಹಿಂದೆಯೇ ವರದಿ ನೀಡಿತ್ತು.
- ಇಷ್ಟು ಕೆಟ್ಟದಾಗಿ ನೋಟ್ ಬ್ಯಾನ್ ಮಕಾಡೆ ಮಲಗಿ ಬಿಟ್ಟಿತು. ಇದರ ಪರಿಣಾಮದಿಂದ ನೆಲಕಚ್ಚಿದ್ದ ಉತ್ಪಾದನಾ ವಲಯ ಮತ್ತು ಆರ್ಥಿಕತೆ ಮಾತ್ರ ಮೇಲೆದ್ದಿಲ್ಲ.
ಕಪ್ಪುಹಣ, ಭಯೋತ್ಪಾದನೆ, ನಕ್ಸಲಿಸಂ, ಖೋಟಾನೋಟು, ತೆರಿಗೆ ಕಳ್ಳತನ ಮತ್ತು ಆರ್ಥಿಕ ಅಸಮಾನತೆ ಹೋಗಲಾಡಿಸಲು ಪ್ರಧಾನಿ ಮೋದಿ ಅವರು ಬಿಟ್ಟ ನೋಟು ನಿಷೇಧದ ರಾಮಬಾಣಕ್ಕೆ ಈಗ ಆರನೇ ವಾರ್ಷಿಕೋತ್ಸವ. ಆರು ವರ್ಷಗಳಿಂದ ಈ ರಾಮಬಾಣ ದಿಕ್ಕು ದೆಸೆಯಿಲ್ಲದೆ ಅನಾಥವಾಗಿ ಅಲೆಯುತ್ತಲೇ ಇದೆ. ಇದುವರೆಗೂ ಗುರಿ ತಲುಪಿಲ್ಲ. 2016 ನವೆಂಬರ್ 8 ರಂದು ನೋಟು ನಿಷೇಧ ಘೋಷಿಸುವಾಗ ಮೋದಿ ಅವರು ಆಡಿದ ಮಾತುಗಳನ್ನು ಈಗ ಮೋದಿಯವರೇ ಮತ್ತೆ ಕೇಳಿದರೆ ಅವರೊಳಗೆ ಸಾಮಾಜಿಕ ಲಜ್ಜೆ ಜೀವಂತವಿದ್ದರೆ ಅವರು ಸಾರ್ವಜನಿಕವಾಗಿ ಮುಖ ತೋರಿಸಲು ನಾಚಿಕೆಪಡಬಹುದು.
ಮೋದಿಯವರ ಮಾತು ಪಕ್ಕಕ್ಕಿರಲಿ. ನೋಟು ನಿಷೇಧ ದೇಶದಲ್ಲಿ ಏನೆಲ್ಲಾ ಮಾಡಿ ಬಿಡುತ್ತದೆ ಎನ್ನುವ ಬಗ್ಗೆ, ದೇಶದ ಶ್ರೀಮಂತರೆಲ್ಲಾ ಸಾಲು ಸಾಲಾಗಿ ಜೈಲು ಸೇರುತ್ತಾರೆ ಎನ್ನುವ ಬಗ್ಗೆ ಪೋಣಿಸಿದ ಪದ ಪಾಂಡಿತ್ಯದ ಸರಮಾಲೆಗಳು, ಕಟ್ಟಿದ ಕತೆಗಳು ಒಂದಾ ಎರಡಾ? ಗೃಹಿಣಿಯರ ಸಾಸಿವೆ ಡಬ್ಬಿ, ಅಜ್ಜಿಯರ ಎಲೆಯಡಿಕೆ ಚೀಲದಲ್ಲಿದ್ದ ಚಿಲ್ಲರೆ ಹಣವನ್ನೂ ಬಿಡದಂತೆ ಗುಡಿಸಿ ಬ್ಯಾಂಕ್ಗಳಿಗೆ ತುಂಬಿಸಲಾಯಿತು. ಹಣದ ಹರಿವಿಲ್ಲದೆ ಜನ ಸಾಮಾನ್ಯರು ಪಟ್ಟ ಸಂಕಟಗಳಿಗೆ, ಆದ ಅನಾಹುತಗಳಿಗೆ, ಬ್ಯಾಂಕ್ಗಳ ಮುಂದೆ ನಿಂತ ಸಾಲಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟವರಿಗೆ ಲೆಕ್ಕವಿಲ್ಲ.
ವಿಶ್ವದ ಆರ್ಥಿಕ ತಜ್ಞರೆಲ್ಲಾ ನೋಟು ನಿಷೇಧವನ್ನು ಮೂರ್ಖತನದ ತೀರ್ಮಾನ, ಈ ಮೂರ್ಖತನದಿಂದ ಮತ್ತೆ ಚೇತರಿಸಿಕೊಳ್ಳಲು ಭಾರತದ ಆರ್ಥಿಕತೆಗೆ ಹತ್ತಾರು ವರ್ಷ ಬೇಕಾಬಹುದು ಎಂದು ವಿಶ್ಲೇಷಿಸಿದ್ದು, ಎಚ್ಚರಿಸಿದ್ದೆಲ್ಲಾ ಈ ಆರು ವರ್ಷಗಳಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಭಾರತದ ಆರ್ಥಿಕತೆ ಮೇಲೆ ನಡೆದ ನೋಟ್ ಬ್ಯಾನ್ ದಾಳಿಯ ತಕ್ಷಣದ ಭೀಕರ ಪರಿಣಾಮಗಳ ಬಳಿಕ ಪ್ರಧಾನಿ ಮೋದಿ ಅವರು ನವೆಂಬರ್ 13ರಂದು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ನನಗೆ 50 ದಿನ ಸಮಯಾವಕಾಶ ಕೊಡಿ.
ಈ 50 ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿದು ಅರ್ಥ ವ್ಯವಸ್ಥೆ ಯಥಾಸ್ಥಿತಿಗೆ ಬರದಿದ್ದರೆ, ಸಂಪೂರ್ಣ ಕಪ್ಪು ಹಣ ವಾಪಸ್ ಬರದೇ ಹೋದರೆ, ಭಾರತ ಭ್ರಷ್ಟಾಚಾರ ಮುಕ್ತ ಆಗದೇ ಹೋದರೆ ನನ್ನನ್ನು ಜೀವಂತ ಸುಟ್ಟು ಬಿಡಿ ಎಂದು ಪ್ರಧಾನಿ ಮೋದಿ ಅವರು ಆಡಿದ ಮನ್ ಕಿ ಬಾತ್ಗೂ ಈಗ ಆರನೇ ವರ್ಷದ ವಾರ್ಷಿಕೋತ್ಸವ. ಅವತ್ತಿಂದ ಈ ಆರು ವರ್ಷಗಳವರೆಗೆ ಮೂರ್ಖತನದ ತೀರ್ಮಾನವನ್ನೇ ಕೊಂಡಾಡಿದ ಪಂಡಿತರು, ವಿಶ್ಲೇಷಕರು, ಸಂಪಾದಕರುಗಳೆಲ್ಲಾ ಇನ್ನೂ ಬದುಕಿದ್ದಾರೆ. ಇವರ್ಯಾರಿಗೂ ತಮ್ಮ ಸುಳ್ಳುಗಳ ಬಗ್ಗೆ, ನಿರ್ಲಜ್ಜತನದ ಬಗ್ಗೆ ನಾಚಿಕೆ ಇಲ್ಲ. ಆ ಎಲ್ಲರ ನಿರ್ಲಜ್ಜತನಕ್ಕೂ ಈಗ ಆರನೇ ವಾರ್ಷಿಕೋತ್ಸವ.
ಪ್ರಧಾನಿ ಮೋದಿ ಅವರ ಗರ್ಭಗುಡಿಯಾಗಿರುವ ಆರೆಸ್ಸೆಸ್ ನಡೆಸಿದ ಸಮೀಕ್ಷೆಯಲ್ಲೂ ನೋಟು ನಿಷೇಧದ ಪರಿಣಾಮದಿಂದ ಉತ್ಪಾದನೆ ಮತ್ತು ಬೇಡಿಕೆ ಕುಸಿದಿದೆ ಎಂದು ಶೇ.70 ರಷ್ಟು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಾಲಕರು ಆತಂಕ ವ್ಯಕ್ತಪಡಿಸಿದ್ದರು. ಆರೆಸ್ಸೆಸ್ನ ಲಘು ಉದ್ಯೋಗ್ ಭಾರತಿ ದೇಶದ 400 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಆತಂಕ ಕೇಳಿ ಬಂದಿತ್ತು. ನೋಟು ನಿಷೇಧ ಮಾಡಿದ ಭೀಕರ ಅನಾಹುತಗಳಲ್ಲಿ ಈ ಸಮೀಕ್ಷೆಯಲ್ಲಿ ಕಂಡಿದ್ದು ಕೆಲವು ಮಾತ್ರ. ಆರು ವರ್ಷಗಳ ಹಿಂದೆ ಪಾತಾಳಕ್ಕೆ ಕುಸಿಯುತ್ತಾ ಹೋದ ದೇಶದ ಆರ್ಥಿಕತೆ ಈ ಹೊತ್ತಿಗೂ ಚೇತರಿಸಿಕೊಂಡಿಲ್ಲ.
ನೋಟ್ ಬ್ಯಾನ್ ಆರನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹೊತ್ತಲ್ಲೇ, ಸರಕಾರದ ಕೊರೋನ ವೈಫಲ್ಯಕ್ಕೆ 3ನೇ ವಾರ್ಷಿಕೋತ್ಸವ. ನೋಟು ನಿಷೇಧದ ಪಾಪ ಮತ್ತು ಪರಿಣಾಮಗಳನ್ನೆಲ್ಲಾ ಕೊರೋನ ತಲೆಗೆ ಕಟ್ಟಿ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಚಾರಿತ್ರವನ್ನು ಕಾಪಾಡುವುದರಲ್ಲಿ ಪ್ರಚಾರ ತಂತ್ರ ಯಶಸ್ವಿಯಾಗಿದೆ. ಆದರೆ, ಕೋವಿಡ್ ಸಂದರ್ಭವನ್ನೂ ನಿರ್ವಹಿಸುವಲ್ಲಿ ಕೇಂದ್ರ ಸರಕಾರ ವಿಫಲ ವಾಗಿದೆ ಎನ್ನುವುದನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು 2021ರ ಮೇ15 ರಂದು ನಡೆದ ಅಪರಿಮಿತ ಪಾಸಿಟಿವಿಟಿ ಕಾರ್ಯಾಗಾರದಲ್ಲಿ ವ್ಯಕ್ತಪಡಿಸಿದ್ದರು.
ಅಷ್ಟರಲ್ಲಾಗಲೇ ಭಾರತದ ಬೀದಿಗಳಲ್ಲಿ ಕೊರೋನ ಸೃಷ್ಟಿಸಿದ ಅನಾಹುತಗಳು ಅಪರಿಮಿತ ನೆಗೆಟಿವಿಟಿ ಸೃಷ್ಟಿಸಿತ್ತು. ಮಾಧ್ಯಮಗಳಲ್ಲಿ ದೇಶದ ಜನರ ಆತಂಕ, ನೋವು, ಸಂಕಟಗಳು ರಾರಾಜಿಸುತ್ತಿರುವುದು, ಅದರಲ್ಲೂ ಬಿಜೆಪಿ ಪೋಷಿತ ಸಂಪಾದಕರುಗಳೇ ಇರುವ ಮಾಧ್ಯಮ ಗಳಲ್ಲೂ ಕೋವಿಡ್ ಅನಾಹುತಗಳನ್ನು ಪ್ರಸಾರ ಮಾಡಲೇಬೇಕಾದ, ಬರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರು ಈ ಸಂದರ್ಭದಲ್ಲಿ ಒಂದು ಹೇಳಿಕೆ ನೀಡಿ, ಭಾರತ ವಿರೋಧಿ ವಿಚ್ಛಿದ್ರ ಕಾರಿ ಶಕ್ತಿಗಳು ದೇಶದಲ್ಲಿ ನಕಾರಾತ್ಮಕತೆಯನ್ನು ಸೃಷ್ಟಿಸುತ್ತಿವೆ, ಸರಕಾರದ ಬಗೆಗೆ ಅಪನಂಬಿಕೆಯನ್ನು ಹೆಚ್ಚಿಸುತ್ತಿವೆ ಎಂದು ಸರಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದರಾದರೂ ಬೀದಿಗಳಲ್ಲಿ, ಆಸ್ಪತ್ರೆ ಬಾಗಿಲುಗಳಲ್ಲೇ ಒದ್ದಾಡಿ ಜೀವ ಬಿಡುತ್ತಿದ್ದ ದೃಶ್ಯಗಳು, ಹೆಣ ಸುಡುವುದಕ್ಕೂ ಸರಿಯಾದ ವ್ಯವಸ್ಥೆ ಇಲ್ಲದಂತೆ ದೇಶದ ಆಡಳಿತ ವ್ಯವಸ್ಥೆಯೇ ಕುಸಿದು ಬಿದ್ದಿದ್ದರಿಂದ ಹೊಸಬಾಳೆ ಅವರ ಹೇಳಿಕೆಯಿಂದೇನು ಹೆಚ್ಚು ಲಾಭವಾಗಲಿಲ್ಲ.
ಸ್ವತಃ ಆರೆಸ್ಸೆಸ್ ಕಾರ್ಯಕರ್ತರು ಮತ್ತು ಕುಟುಂಬದವರೇ ಕೋವಿಡ್ ಸಂದರ್ಭದ ಸರಕಾರಗಳ ವೈಫಲ್ಯಕ್ಕೆ ಬಲಿ ಆಗಿದ್ದರು. ಆ ಸಂಕಟವನ್ನು ಸ್ವತಃ ಅನುಭವಿಸುತ್ತಿದ್ದರು. ಸಾಲದ್ದಕ್ಕೆ ಕೊರೋನದ ಸಂದರ್ಭದಲ್ಲೇ 2020ರ ಸೆಪ್ಟಂಬರ್ನಿಂದ 2021ರ ಎಪ್ರಿಲ್ವರೆಗೂ ಸ್ವತಃ ಪ್ರಧಾನಿಮೋದಿಯವರೇ ಆರು ಬಾರಿ ರಾಜ್ಯಗಳಿಗೆ ಕೊರೋನದ ಕಳಪೆ ನಿರ್ವಹಣೆಯ ಬಗ್ಗೆ ಎಚ್ಚರಿಸಿದ್ದರು. ಇದು, ಕೇಂದ್ರ ತನ್ನ ಹೊಣೆಗಾರಿಕೆ ಯನ್ನು ತನ್ನದೇ ಪಕ್ಷದ ಆಡಳಿತವಿರುವ ರಾಜ್ಯಗಳ ತಲೆಗೆ ಕಟ್ಟುವ ಹುನ್ನಾರವಾಗಿಯೂ ಕಂಡಿತ್ತು. ಈ ಕಾರಣದಿಂದಲೇ 2021ರ ಮೇ 4 ರಂದು ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳ 300 ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳಿಗೆ ಒಂದು ವರ್ಕಶಾಪ್ ನಡೆಸಿ ಕುಸಿಯುತ್ತಿರುವ ಪ್ರಧಾನಿ ಮತ್ತು ಸರಕಾರದ ಇಮೇಜನ್ನು ಮತ್ತೆ ಮರುಸೃಷ್ಟಿಸುವ ಬಗ್ಗೆ ಚರ್ಚೆ ನಡೆಸಿತ್ತು.
ಈ ಚರ್ಚೆಯ ಫಲಿತಾಂಶವಾಗಿ, ದೇಶದ ಜನರು ಸಾಯುತ್ತಿರುವ ಸ್ಟೋರಿ ಗಳಿಗೆ, ಪಡುತ್ತಿರುವ ಸಂಕಟಗಳ ಸ್ಟೋರಿಗಳಿಗೆ ಬದಲು ಪಾಸಿಟಿವ್ ಸ್ಟೋರಿಗಳನ್ನು ಸೃಷ್ಟಿಸುವ ತೀರ್ಮಾನಕ್ಕೆ ಬರಲಾಗಿತ್ತು. ಜತೆಗೆ ಮೋದಿಯವರ ಇಮೇಜನ್ನು ಎತ್ತರಿಸಲು ಕೆಲವೊಂದು ಸೂಚನೆಗಳನ್ನು ನೀಡಲಾಗಿರುವ ಬಗ್ಗೆ ವರದಿಗಳು ಬಂದವು. ಆ ವರದಿಗಳ ಪ್ರಕಾರ, ಜನ ಸಾಯುತ್ತಿರುವ ಸ್ಟೋರಿಗಳಿಗೆ ಬದಲಾಗಿ ಕೊರೋನದಿಂದ ಗುಣಮುಖರಾದವರ ಲೆಕ್ಕವನ್ನು ಮಾಧ್ಯಮ ಹೇಳಿಕೆಗಳ ಮೂಲಕ ನೀಡಬೇಕು. ಸತ್ತವರ ಬದಲಿಗೆ ಗುಣಮುಖರಾದವರ ಕುರಿತ ಸ್ಟೋರಿಗಳು ಹೆಚ್ಚೆಚ್ಚು ಮಾಧ್ಯಮಗಳಲ್ಲಿ ಕಾಣಿಸಿಕೊಂಡವು. ಕೇಂದ್ರ ಮತ್ತು ರಾಜ್ಯ ಸರಕಾರದ ನಾನಾ ಇಲಾಖೆಗಳ ಪತ್ರಿಕಾ ಹೇಳಿಕೆಗಳಲ್ಲಿ, ಪ್ರಧಾನಿ ಮೋದಿ ಅವರ ಕಾಳಜಿಯಿಂದ, ಪ್ರಧಾನಿ ಮೋದಿಯವರ ಸೂಚನೆಯಂತೆ, ಮೋದಿಯವರ ನಾಯಕತ್ವದಲ್ಲಿ ಎನ್ನುವ ಪದ ಪುಂಜಗಳು ಮತ್ತೆ ಮತ್ತೆ ಕಾಣಿಸಿಕೊಂಡವು. ಕೋವಿಡ್ ಬುಲೆಟಿನ್ಗಳಲ್ಲಿ ಮೃತಪಟ್ಟವರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಗಳು ಕಣ್ಣಿಗೆ ರಾಚತೊಡಗಿದವು.
2022ರ ಮೇ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿ ಭಾರತದಲ್ಲಿ ಕೊರೋನ ಕಾರಣ ಮತ್ತು ಪರಿಣಾಮದಿಂದ ಸತ್ತವರ ಪ್ರಮಾಣ 47 ಲಕ್ಷ (4.7 ಮಿಲಿಯನ್) ಎಂದು ಹೇಳಿದೆ. ಆದರೆ ಸರಕಾರದ ಅಧಿಕೃತ ವರದಿಗಳ ಪ್ರಕಾರ ಸತ್ತವರ ಸಂಖ್ಯೆ ನಾಲ್ಕು ಲಕ್ಷ 80 ಸಾವಿರ ಮಾತ್ರ. ಸರಕಾರ ಹೇಳಿದ ಲೆಕ್ಕಕ್ಕೂ, ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಲೆಕ್ಕಕ್ಕೂ ಹೋಲಿಸಿದರೆ ಸಾವಿನ ಪ್ರಮಾಣ ಹತ್ತು ಪಟ್ಟು ಹೆಚ್ಚು. ವಿಶ್ವ ಸಂಸ್ಥೆ ವರದಿಯನ್ನು ಕೇಂದ್ರ ಸರಕಾರ ತಳ್ಳಿ ಹಾಕಿದೆ. ಇರಲಿ...
ನೋಟ್ ಬ್ಯಾನ್ ಅನ್ನು ಸರ್ಜಿಕಲ್ ಸ್ಟ್ರೈಕ್ ಎಂದು ಭಯಂಕರವಾಗಿ ಸಮರ್ಥಿಸುತ್ತಿದ್ದ ಪತ್ರಕರ್ತರು, ಸಂಪಾದಕರುಗಳೇ ಮುಂದಿನ 2 ವರ್ಷ ಗಳಲ್ಲಿ ಇದೇ ನೋಟ್ ಬ್ಯಾನ್ ಪರಿಣಾಮದಿಂದ ಸಂಬಳ ಕಡಿತ, ಉದ್ಯೋಗ ನಷ್ಟವನ್ನು ಅನುಭವಿಸಿದರು. ನೋಟ್ ಬ್ಯಾನ್ ಕಾರಣದಿಂದ ಸ್ಥಗಿತಗೊಂಡ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಇವತ್ತಿಗೂ ಚೇತರಿಸಿಕೊಂಡಿಲ್ಲ. ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಕೊರಳು ಹಿಚುಕಲು ಶುರು ಮಾಡಿತು. ಇದಕ್ಕೆ ಕೊರೋನ ಸಂದರ್ಭವೂ ಸೇರಿಕೊಂಡಿದ್ದರ ಪರಿಣಾಮ ದೇಶದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಸಿಗುತ್ತಿಲ್ಲ.
ಈ ಹಣದುಬ್ಬರದ ಕಾರಣಕ್ಕೆ ಸಂಗ್ರಹವಾದ ಜಿಎಸ್ಟಿ ಪ್ರಮಾಣ ಹೆಚ್ಚಾಗಿದೆ. ಇದನ್ನೇ ತನ್ನ ಹೆಚ್ಚುಗಾರಿಕೆ-ಆರ್ಥಿಕತೆ ಚೇತರಿಸಿ ಕೊಂಡಿದೆ ಎಂದು ಬಿಂಬಿಸಲು ಸರಕಾರ ಯತ್ನಿಸುತ್ತಿದೆ. ಹಣದುಬ್ಬರದ ಜತೆಗೆ ಬೆಲೆ ಏರಿಕೆ, ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಡಾಲರ್ ಎದುರು ರೂಪಾಯಿಯ ಕುಸಿತಕ್ಕೆ ತಡೆ ಇಲ್ಲದಂತಾಗಿದೆ. ರೂಪಾಯಿ ಕುಸಿಯುತ್ತಿಲ್ಲ-ಡಾಲರ್ ಬೆಳೆಯುತ್ತಿದೆ ಎಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿಕೆ ನೀಡಿ ಅವರ ಪಾಂಡಿತ್ಯ ವನ್ನು ಪ್ರದರ್ಶಿಸಿ ನಗೆಪಾಟಲಿಗೆ ಈಡಾದರು.
ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಅಕ್ಟೋಬರ್ 3 ರಂದು ಹೆಚ್ಚುತ್ತಿರುವ ನಿರುದ್ಯೋಗ-ಬೆಲೆ ಏರಿಕೆ-ಹಣದುಬ್ಬರ ಆತಂಕಕಾರಿ ಯಾಗಿದೆ ಎಂದು ಪ್ರಾಮಾಣಿಕವಾಗಿ ಹೇಳಿಕೆ ನೀಡಿದರು. ಆದರೆ, ಇದೇ ಆರೆಸ್ಸೆಸ್ ಬೈಠಕ್ಗಳಲ್ಲಿ 40-50 ವರ್ಷಗಳಿಂದ ಪಾಠ ಕೇಳಿದವರೇ ಈಗ ರಾಜ್ಯ-ದೇಶವನ್ನು ಆಳುತ್ತಿದ್ದಾರೆ. ನೋಟ್ ಬ್ಯಾನ್ ಮತ್ತು ಕೋವಿಡ್ ಸಂದರ್ಭದಲ್ಲೂ ದೇಶ ಆಳುತ್ತಿದ್ದವರು ಇದೇ ಬೈಠಕ್ಗಳಲ್ಲಿ ರೂಪುಗೊಂಡವರೇ. ಇವರ ದರ್ಬಾರಿನಲ್ಲೇ ದೇಶಕ್ಕೆ ಈ ದುರ್ಗತಿ ಬಂದಿದೆ. ಬೈಠಕ್ಗಳಲ್ಲಿ ರಾಷ್ಟ್ರೀಯತೆಯ ಪಾಠ ಮಾಡಿದವರು-ಪಾಠ ಕೇಳಿಸಿಕೊಂಡವರ ಕಾಲದಲ್ಲೇ ರಾಷ್ಟ್ರದ ಆಸ್ತಿಗಳೆಲ್ಲಾ ಇಬ್ಬರು ಖಾಸಗಿ ಉದ್ಯಮಿಗಳ ಹೆಸರಿಗೆ ಖಾತೆ ಬದಲಾಗುತ್ತಿವೆ. ಹೀಗಿದ್ದಾಗ ದತ್ತಾತ್ರೇಯ ಹೊಸಬಾಳೆ ಅವರು ಇದಕ್ಕೆಲ್ಲಾ ಯಾರನ್ನು ಹೊಣೆ ಮಾಡಬೇಕು?
ಇಲ್ಲಿ ಸಾಮಾಜಿಕ ಲಜ್ಜೆ ಎನ್ನುವುದು ಸಂತೆಯಲ್ಲಿ ತಪ್ಪಿಸಿಕೊಂಡ ಮಗುವಿನಂತಾಗಿದೆ.