ವಿದ್ಯಾರ್ಥಿವೇತನ, ಫೆಲೋಶಿಪ್ ಸ್ಥಗಿತ: ಅಸಹಿಷ್ಣುತೆಯ ಮತ್ತೊಂದು ರೂಪ
ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ತುಳಿದು ಆಳಬೇಕೆಂಬ ಬಿಜೆಪಿ ಅಜೆಂಡಾ ನಿಧಾನಕ್ಕೆ ಕಾರ್ಯಗತವಾಗುತ್ತಿದೆ. ಬಿಜೆಪಿಯವರು ‘ಸಬ್ ಕಾ ವಿಕಾಸ್’ ಎಂದರೆ, ಅದು ದಲಿತರು, ಹಿಂದುಳಿದವರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ದಮನ ಎಂದು ಭಾವಿಸಿದಂತಿದೆ.
ವಾರದ ಹಿಂದಷ್ಟೇ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ರದ್ದು ಮಾಡಿದ್ದ ಕೇಂದ್ರ ಸರಕಾರ, ಈಗ ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಮೌಲಾನಾ ಆಝಾದ್ ಫೆಲೋಶಿಪ್ ಅನ್ನು ಕೂಡ ಇದೇ ಶೈಕ್ಷಣಿಕ ವರ್ಷದಿಂದ ಸ್ಥಗಿತಗೊಳಿಸಿದೆ. ಈ ದೇಶದ ಶಿಕ್ಷಣ ವ್ಯವಸ್ಥೆಗೆ ಅಡಿಗಲ್ಲು ಹಾಕಿಕೊಟ್ಟ ಮಹನೀಯನ ಹೆಸರಿನಲ್ಲಿರುವ ನೆರವಿನ ಯೋಜನೆಗೆ ಕಡೆಗೂ ಕಲ್ಲು ಬಿದ್ದಿದೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಮೌಲಾನಾ ಆಝಾದ್ ನ್ಯಾಷನಲ್ ಫೆಲೋಶಿಪ್ ಯೋಜನೆ ಉನ್ನತ ಮಟ್ಟದ ಅಧ್ಯಯನದಲ್ಲಿ ತೊಡಗುವ ಅಲ್ಪಸಂಖ್ಯಾತ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಭರವಸೆಯಂತಿತ್ತು.
ಅದೀಗ ಇಲ್ಲವಾಗುತ್ತಿದೆ. ಈ ಮೊದಲೂ ಇದು ತಡವಾಗಿಯೇ ವಿದ್ಯಾರ್ಥಿಗಳ ಕೈಸೇರುತ್ತಿತ್ತು. ಫೆಲೋಶಿಪ್ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಎಷ್ಟೋ ತಿಂಗಳುಗಳ ಬಳಿಕ ಅದನ್ನು ಪಡೆಯುವ ಸ್ಥಿತಿಯಿತ್ತು. ಆಗಲೇ, ಇದರ ಕಥೆ ಮುಗಿಯಿತಾ ಎಂಬ ಅನುಮಾನವನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಿತ್ತು. ಅದೀಗ ನಿಜವೇ ಆಗಿಬಿಟ್ಟಿದೆ. ಅತ್ತ ಇತರ ಹಿಂದುಳಿದ ವರ್ಗಕ್ಕೂ ಒಳಪಡದ ಸಾವಿರಾರು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಾಲಿಗೆ ಉನ್ನತ ಅಧ್ಯಯನದ ಹಾದಿಯನ್ನೇ ಮುಚ್ಚುವಷ್ಟು ಕಠಿಣವಾದ ತೀರ್ಮಾನ ಇದಾಗಿದೆ.
ಸಾಚಾರ್ ಸಮಿತಿ ಶಿಫಾರಸುಗಳ ಅನುಷ್ಠಾನದ ಭಾಗವಾಗಿ ಯುಪಿಎ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ರಾಜಿಂದರ್ ಸಾಚಾರ್ರಂತಹ ದೊಡ್ಡವರ ನೋಟ ಮತ್ತು ಗ್ರಹಿಕೆಯ ಫಲವಾಗಿ ಬಂದ ಮೌಲಿಕ ಯೋಜನೆ ಈಗಿನ ಸರಕಾರಕ್ಕೆ ಸ್ಥಗಿತಗೊಳಿಸುವ ಯೋಜನೆಯಾಗಿ ಕಾಣುತ್ತಿರುವುದೇ ಅದೇನನ್ನು ಯೋಚಿಸುತ್ತಿದೆ ಎಂಬುದರ ಸೂಚನೆಯೂ ಹೌದು.
ಮಾನವ ಹಕ್ಕು ಹೋರಾಟಗಾರರಾಗಿದ್ದ ನ್ಯಾ. ರಾಜಿಂದರ್ ಸಾಚಾರ್ ದೇಶ ವಿಭಜನೆ ಕಾಲದಲ್ಲಿ ಈಗಿನ ಪಾಕಿಸ್ತಾನ ಭಾಗದಲ್ಲಿನ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಸ್ವತಃ ಕಂಡವರಾಗಿದ್ದರು. ಸಮುದಾಯವೊಂದು ಅಲ್ಪಸಂಖ್ಯಾತವಾಗಿದ್ದಾಗಿನ ತಲ್ಲಣಗಳು, ದಿಗಿಲುಗಳು ಎಂಥವಿರುತ್ತವೆ ಎಂದು ಅರಿತ ಅವರು ಆ ಅನುಭವದಲ್ಲಿಯೇ ಭಾರತದೊಳಗಿನ ಅಲ್ಪಸಂಖ್ಯಾತರ ಕ್ಷೇಮವನ್ನು ಚಿಂತಿಸಿದವರಾಗಿದ್ದರು. ಈ ದಿಸೆಯಲ್ಲಿ ಅವರು ಮಾಡಿದ ಕೆಲಸಗಳು ಎಂದಿಗೂ ಆದರ್ಶವೇ. ಅವರ ನೇತೃತ್ವದಲ್ಲಿ ಸಿದ್ಧವಾಗಿದ್ದ ಸಾಚಾರ್ ವರದಿ ಅಂಥ ಚಾರಿತ್ರಿಕ ಆಯಾಮವುಳ್ಳದ್ದಾಗಿತ್ತು ಮಾತ್ರವಲ್ಲ, ದೇಶದ ಅಲ್ಪಸಂಖ್ಯಾತರ ಪರವಾದ ಕಾಳಜಿ ಮತ್ತು ಕಳಕಳಿಯನ್ನು ಅದು ವ್ಯಕ್ತಗೊಳಿಸಿತ್ತು.
ಮುಸ್ಲಿಮ್ ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗೆಗಿನ ಆ ಅಧ್ಯಯನ ವರದಿಯಲ್ಲಿ, ಮುಸ್ಲಿಮರ ಸಂದರ್ಭದ ಕಟು ವಾಸ್ತವಗಳ ಚಿತ್ರಣವಿತ್ತು. 2001ರ ಜನಗಣತಿಯ ವಿವರಗಳಿಂದ ಮೊದಲಾಗಿ ಎಲ್ಲ ಅಧಿಕೃತ ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ಅವೆಲ್ಲವುಗಳ ಆಧಾರದಲ್ಲಿ ಸಿದ್ಧಪಡಿಸಲಾಗಿದ್ದ ವರದಿ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಸ್ಲಿಮರ ತೀರಾ ದುಸ್ಥಿತಿಯ ಬಗ್ಗೆ ಉಲ್ಲೇಖಿಸಿತ್ತು. ಜಾಗತೀಕರಣದ ನಂತರ ಪಾರಂಪರಿಕ ಉದ್ಯೋಗಾವಕಾಶಗಳಿಂದ ಆ ಸಮುದಾಯ ವಂಚಿತವಾಗಿರುವುದನ್ನೂ ವರದಿ ಹೇಳಿತ್ತು.
ದುರಂತವೆಂದರೆ 2006ರಲ್ಲಿ ಸಲ್ಲಿಕೆಯಾದ ಸಾಚಾರ್ ವರದಿಯ ಜಾರಿಗೆ ಮಾತ್ರ ಸರಕಾರಗಳು ಇಚ್ಛಾಶಕ್ತಿ ತೋರಿಸಲೇ ಇಲ್ಲ. ಸಾಚಾರ್ ವರದಿಯನ್ನು ಬಿಜೆಪಿ ಅನುಷ್ಠಾನಗೊಳಿಸಲಾರದಾದರೂ, ಯುಪಿಎ ಸರಕಾರ ಕೈಗೊಂಡ ಅನುಷ್ಠಾನ ಕ್ರಮಗಳೂ ಲೋಪದಿಂದ ಕೂಡಿವೆ ಎಂದು ಹತ್ತು ವರ್ಷಗಳ ಹಿಂದೆಯೇ ಸ್ವತಃ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣಕ್ಕೆ ಸಂಬಂಧಿಸಿದ ಸ್ಥಾಯಿ ಸಮಿತಿಯೇ ಹೇಳಿತ್ತು. ಅದರ ನಡುವೆಯೂ ಮೌಲಾನಾ ಆಝಾದ್ ಪ್ರತಿಷ್ಠಾನದ ಅಡಿ ಬರುವ ಹಣಕಾಸು ನೆರವು ಹಾಗೂ ಶಿಷ್ಯವೇತನಗಳು ಮಾತ್ರವೇ ಸೂಕ್ತ ರೀತಿಯಲ್ಲಿ ಜಾರಿಯಾಗಿವೆ ಎಂಬುದನ್ನು ಕೂಡ ಸ್ಥಾಯಿ ಸಮಿತಿ ಮನಗಂಡಿತ್ತು. ಆ ಯೋಜನೆಯೂ ಈಗ ನಿಲ್ಲುತ್ತಿದೆ.
ಯೋಜನೆಯನ್ನು ನಿಲ್ಲಿಸಲು ಕೇಂದ್ರ ಈಗ ಮುಂದೆ ಮಾಡಿರುವ ನೆಪವೇನೆಂದರೆ, ಈಗಾಗಲೇ ವಿವಿಧ ಯೋಜನೆಗಳಡಿಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನೆರವು ಪಡೆಯಲು ಅವಕಾಶವಿದೆ ಎಂಬುದು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನೂ ಹೀಗೆಯೇ ಸಮರ್ಥಿಸಿಕೊಳ್ಳಲಾಗಿತ್ತು. ಆ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿರುವಂತೆ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ತುಳಿದು ಆಳಬೇಕೆಂಬ ಬಿಜೆಪಿ ಅಜೆಂಡಾ ನಿಧಾನಕ್ಕೆ ಕಾರ್ಯಗತವಾಗುತ್ತಿದೆ. ಬಿಜೆಪಿಯವರು ‘ಸಬ್ ಕಾ ವಿಕಾಸ್’ ಎಂದರೆ, ಅದು ದಲಿತರು, ಹಿಂದುಳಿದವರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ದಮನ ಎಂದು ಭಾವಿಸಿದಂತಿದೆ.
ಶಿಕ್ಷಣದಿಂದ ವಂಚಿತರಾಗುತ್ತಿರುವ ದಮನಿತರ ಮಕ್ಕಳು ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿದ್ದ ಯೋಜನೆಗಳನ್ನೆಲ್ಲ ಹೀಗೆ ಸ್ಥಗಿತಗೊಳಿಸಲಾಗುತ್ತಿರುವುದು ದಲಿತ, ಆದಿವಾಸಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿರೋಧಿ, ಸಂವಿಧಾನ ದ್ರೋಹಿ ಕೃತ್ಯ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಕಾರ್ಪೊರೇಟ್ ವಂಚಕರ ಸಹಸ್ರಾರು ಕೋಟಿ ರೂ. ಸಾಲದ ಹಣವನ್ನು ಕ್ಷಣಮಾತ್ರದಲ್ಲಿ ಮಾಫಿ ಮಾಡುವ ಮೋದಿ ಸರಕಾರ ಅತ್ಯಂತ ಸಣ್ಣ ಪ್ರಮಾಣದ ವಿದ್ಯಾರ್ಥಿವೇತನ ಸ್ಥಗಿತಗೊಳಿಸಿರುವುದರ ಹಿಂದೆ ಮನುಸ್ಮತಿ ಪ್ರೇರಿತ ತಾರತಮ್ಯ ಸಿದ್ಧಾಂತವನ್ನು ಜಾರಿ ಮಾಡುವ ಮನಃಸ್ಥಿತಿ ಕೆಲಸ ಮಾಡುತ್ತಿದೆ ಎಂದು ಸಿದ್ದರಾಮಯ್ಯನವರು ಹೇಳಿರುವುದರಲ್ಲಿ ಸತ್ಯ ಇದೆ.
ಅಸ್ಸಾಮಿನಲ್ಲಿ ನೂರಾರು ವರ್ಷಗಳ ಹಿಂದೆ ಆಗಿಹೋಗಿದ್ದ ಲಚಿತ್ ಬರ್ಫುಕನ್ ಚರಿತ್ರೆಯನ್ನು ಎತ್ತಿಕೊಂಡು ಹಿಂದೂ ಯೋಧ ಎಂದು ಬಿಂಬಿಸಿ ಮುಸ್ಲಿಮ್ ಸಮುದಾಯದ ವಿರುದ್ಧ ಜನರನ್ನು ಎತ್ತಿಕಟ್ಟುವ ಉತ್ಸವ ಮಾಡಲು ಜನರ ಕೋಟಿಗಟ್ಟಲೆ ತೆರಿಗೆ ಹಣ ಖರ್ಚು ಮಾಡುವ ಸರಕಾರಕ್ಕೆ, ದಮನಿತ ಸಮುದಾಯಗಳಿಗಾಗಿ ಸ್ವತಃ ಏನೂ ಮಾಡುವ ಇಚ್ಛೆ ಇಲ್ಲದಿದ್ದರೂ, ಹಿಂದಿನಿಂದ ಜಾರಿಯಲ್ಲಿರುವುದನ್ನಾದರೂ ಉಳಿಸುವ ಕರ್ತವ್ಯದೃಷ್ಟಿಯಾದರೂ ಇರಬೇಕಿತ್ತು. ಆದರೆ, ಅದಕ್ಕೆ ಅವಾವುವೂ ಬೇಡವಾಗಿವೆ. ಚರಿತ್ರೆಯನ್ನು ತನಗೆ ಬೇಕಾದಂತೆ ವಿರೂಪಗೊಳಿಸುತ್ತ ಅಟ್ಟಹಾಸಗೈಯುವ ಭಂಡತನವು, ಎಲ್ಲರೂ ನಿರಾಳತೆಯಿಂದ ಒಟ್ಟಿಗಿರುವ ವರ್ತಮಾನವನ್ನು ಸಹನೆಯ ಕಣ್ಣಿಂದ ನೋಡಲಾರದು.