ನಿಮಗೆ ವಿಪಕ್ಷವಿಲ್ಲದ ಪ್ರಜಾಪ್ರಭುತ್ವ ಹಾಗೂ ಸುದ್ದಿಗಳಿಲ್ಲದ, ಪ್ರಶ್ನೆಗಳನ್ನೇ ಕೇಳದ ನ್ಯೂಸ್ ಚಾನೆಲ್ ಗಳು ಬೇಕೇ?
-

ಸಾಮಾನ್ಯವಾಗಿ ಜೋ ದಿಕ್ತಾ ಹೈ ವಹೀ ಬಿಕ್ತಾ ಹೈ(ಯಾವುದು ಹೆಚ್ಚು ಕಾಣುತ್ತದೋ ಅದೇ ಮಾರಾಟವಾಗುತ್ತದೆ) ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ಅದೂ ಉಲ್ಟಾ ಆಗಿದೆ. ಯಾರನ್ನು ತೋರಿಸಬೇಕು ಎಂಬುದು ಮಾರುಕಟ್ಟೆಯ ವೃತ್ತಿಪರ ನಿಯಮಗಳ ಪ್ರಕಾರ ನಿರ್ಧಾರವಾಗುತ್ತಿಲ್ಲ. ಬದಲಾಗಿ ಯಾವುದೋ ಅಜ್ಞಾತ ನಿಯಮಗಳ ಅನುಸಾರ ಇದು ನಿರ್ಧಾರವಾಗುತ್ತಿದೆ. ಇದೇ ಅಜ್ಞಾತ ನಿಯಮಗಳನ್ನು ನಾವು ಸರಕಾರದ ಒತ್ತಡ ಎಂದು ಕರೆಯುತ್ತೇವೆ. ಹೀಗೆ ಪ್ರಜಾಪ್ರಭುತ್ವದಿಂದ ವಿಪಕ್ಷವನ್ನು ಮಾಯ ಮಾಡಿ ಕೇವಲ ಪ್ರಧಾನ ಮಂತ್ರಿಯನ್ನೇ ತೋರಿಸಿ ಪ್ರಜಾಪ್ರಭುತ್ವವಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ನಿಮಗೆ ವಿಪಕ್ಷವಿಲ್ಲದ ಪ್ರಜಾಪ್ರಭುತ್ವ ಹಾಗೂ ಸುದ್ದಿಗಳೇ ಇಲ್ಲದ, ಪ್ರಶ್ನೆಗಳನ್ನೇ ಕೇಳದ ನ್ಯೂಸ್ ಚಾನೆಲ್ ಬೇಕೇ ಎಂಬುದನ್ನು ನೀವೇ ನಿರ್ಧರಿಸಬೇಕು.
ಭಾರತ ಎಂತಹ ದೇಶ ಅಂದರೆ ಇಲ್ಲಿ ಒಂದೇ ವಿಷಯವನ್ನು ತೋರಿಸಲು ಡಝನ್ ಗಟ್ಟಲೆ ಚಾನೆಲ್ಗಳಿವೆ. ಒಂದೇ ನೇತಾ ಹಾಗೂ ಒಂದೇ ವಿಷಯವನ್ನು ಹೀಗೆ ಬೇರೆ ಬೇರೆ ರೀತಿಯಲ್ಲಿ ತೋರಿಸಲು ಇಷ್ಟೆಲ್ಲಾ ಚಾನೆಲ್ಗಳ ಅಗತ್ಯವೇ ಇಲ್ಲ. ಹಿಂದಿ,ಇಂಗ್ಲಿಷ್ ಮಾತ್ರವಲ್ಲ ಪ್ರಾದೇಶಿಕ ಚಾನೆಲ್ಗಳ ಅವಸ್ಥೆಯೂ ಇದೇ ಆಗಿದೆ. ಅಂದರೆ ನೀವು ಯಾವುದೇ ಭಾಷೆಯ ಯಾವುದೇ ಚಾನೆಲ್ ನೋಡಿದರೂ ಅಲ್ಲಿ ನಿಮಗೆ ಒಂದೇ ವಿಷಯದ ಕವರೇಜ್ ಕಾಣಲು ಸಿಗುತ್ತದೆ. ಇವೆಲ್ಲದರ ಮೂಲ ಒಂದೇ ಆಗಿರುತ್ತದೆ. ಅದು ಭಾರತೀಯ ಜನತಾ ಪಾರ್ಟಿ. ಅದೇ ಪಾರ್ಟಿಯ ವಿಚಾರಧಾರೆ ಹಾಗೂ ಅದರ ಸರ್ವೋಚ್ಚ ನಾಯಕರ ಗುಣ ಗಾನಗಳಲ್ಲೇ ಈ ಎಲ್ಲ ಚಾನೆಲ್ಗಳು ಹಗಲು ರಾತ್ರಿ ನಿರತವಾಗಿರುತ್ತವೆ. ಈ ಬಿಜೆಪಿ ಕಾರ್ಯ ಕರ್ತರಲ್ಲಿ ‘ನಮ್ಮ ಕೆಲಸವನ್ನೆಲ್ಲ ಈ ಚಾನೆಲ್ ಪತ್ರಕರ್ತರೇ ಮಾಡುತ್ತಿದ್ದಾರೆ. ನಾವೇನು ಪಕ್ಷದ ಕೆಲಸ ಮಾಡೋದು’ ಎಂಬ ಅಭದ್ರತೆಯ ಭಾವನೆ ಬೆಳೆದಿರಬಹುದು ಎಂದು ನನಗೆ ಒಮ್ಮೊಮ್ಮೆ ಅನಿಸುತ್ತದೆ. ಕಾರ್ಯಕರ್ತರು ಜಿಂದಾಬಾದ್ ಹೇಳುವ ಮೊದಲೇ ಗೋದಿ ಮೀಡಿಯಾದ ಈ ಆ್ಯಂಕರ್ಗಳು ‘ಪ್ರಧಾನಿ ಮೋದಿ ಜಿಂದಾಬಾದ್’ ಘೋಷಣೆ ಕೂಗಲು ಶುರು ಮಾಡುತ್ತಾರೆ.
ಒಂದು ರೀತಿಯಲ್ಲಿ ನೋಡಿದರೆ ಬಿಜೆಪಿಗೆ ಇಡೀ ದೇಶದಲ್ಲಿ ಇರುವ ಪಕ್ಷದ ಕಚೇರಿಗಳಿಗಿಂತ ‘ಹೆಚ್ಚು ಅದರ ಬೆಂಬಲಿಗರು’ ಎಂದು ಹಣೆಪಟ್ಟಿ ಪಡೆದುಕೊಂಡ ಚಾನೆಲ್ಗಳಿವೆ. ಈ ಚಾನೆಲ್ಗಳಲ್ಲೇ ಬಿಜೆಪಿ ಪಕ್ಷದ ಕೆಲಸ ಹಗಲು ರಾತ್ರಿಯೆನ್ನದೇ ನಡೆಯುತ್ತಲೇ ಇದೆ. ಹೀಗೇ ಮುಂದುವರಿದರೆ ಮುಂದೊಂದು ದಿನ ಭಾರತೀಯ ಜನತಾ ಪಾರ್ಟಿ ತನ್ನ ಹೆಸರು ಬದಲಾಯಿಸಿಕೊಂಡು ‘ಭಾರತೀಯ ಚಾನೆಲ್ ಪಾರ್ಟಿ’ ಎಂದು ಕರೆಸಿಕೊಳ್ಳುವ ದಿನ ಬರಬಹುದು.
ಈ ವರ್ಷ ಉತ್ತರ ಪ್ರದೇಶದಲ್ಲಿ ಚುನಾವಣೆಯಿತ್ತು. ಆಗ ಕರ್ನಾಟಕದಲ್ಲಿ ಹಿಜಾಬ್ ವಿವಾದವನ್ನು ಸೃಷ್ಟಿಸಲಾಯಿತು. ಕರ್ನಾಟಕದಲ್ಲಿ ಈ ವಿವಾದವನ್ನು ಅದೆಷ್ಟು ಬೆಳೆಸಲಾಯಿತು ಅಂದರೆ ಅದರ ಆಧಾರದಲ್ಲೇ ಹಿಂದಿ ಭಾಷೆಯ ಚಾನೆಲ್ಗಳು ಹಗಲು ರಾತ್ರಿ ಚರ್ಚೆ ಮಾಡಿ ಮಾಡಿ ಇಡೀ ಯುಪಿಯಲ್ಲಿ ಬಿಜೆಪಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾದವು. ಯುಪಿಯ ಚುನಾವಣಾ ಪ್ರಚಾರ ಸಭೆಗಳಲ್ಲಿ ರಾಜಕಾರಣಿಗಳು ಹಿಜಾಬ್ ಬಗ್ಗೆ ಹೇಳಿಕೆ ಕೊಡಲಾರಂ ಭಿಸಿದರು.
ಈ ಬಾರಿಯೂ ಅದೇ ಆಯಿತು. ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಹಾಗೂ ದಿಲ್ಲಿ ಪಾಲಿಕೆ ಚುನಾವಣೆ ಸಮೀಪಿಸುವಾಗ ಶ್ರದ್ಧಾ ಹಾಗೂ ಅಫ್ತಾಬ್ ಪೂನಾವಾಲಾ ಬಗ್ಗೆ ದೊಡ್ಡ ಚರ್ಚೆ ಶುರು ಮಾಡಲಾಯಿತು. ಬಿಜೆಪಿ ನಾಯಕರು ಅಫ್ತಾಬ್ ಬಗ್ಗೆ ಹೇಳಿಕೆ ಕೊಡಲು ಪ್ರಾರಂಭಿಸಿದರು. ಸುರಕ್ಷತೆ ಹಾಗೂ ಅಸುರಕ್ಷತೆಯ ರಾಜಕಾರಣದ ಆಟ ಆಡಿದರು. ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುವಾಗ ಮುಂಬೈಯಲ್ಲಿ ಸುಶಾಂತ್ ಸಿಂಗ್ ಅವರ ಆತ್ಮಹತ್ಯೆಗೆ ರಾಜಕೀಯ ರೂಪ ಕೊಡಲಾಗಿತ್ತು. ಟಿವಿ ಚಾನೆಲ್ಗಳಲ್ಲಿ ಈ ಬಗ್ಗೆ ನಕಲಿ ಚರ್ಚೆಗಳ ಸರಣಿಯೇ ನಡೆಯುತ್ತದೆ. ‘ಖಾನ್ ಗ್ಯಾಂಗ್’ ಎಂಬ ಕಲ್ಪನೆಯನ್ನು ಜನರಲ್ಲಿ ಮೂಡಿಸಲಾಗುತ್ತದೆ. ಆ ಗ್ಯಾಂಗ್ ಮೇಲೆ ಡಿಬೇಟ್ಗಳಲ್ಲಿ ದಾಳಿ ನಡೆಯುತ್ತದೆ. ನಟ ಸುಶಾಂತ್ ಸಿಂಗ್ ಆತ್ಮಹತ್ಯೆಯ ಬಗ್ಗೆ ಒಂದೆರಡು ದಿನ ಅಲ್ಲ ವಾರಗಟ್ಟಲೆ ಟಿವಿ ಚಾನೆಲ್ಗಳಲ್ಲಿ ಚರ್ಚೆ ನಡೆಯಿತು. ಆಗ ಎತ್ತಲಾದ ಎಲ್ಲ ಪ್ರಶ್ನೆಗಳು, ಮಾಡಲಾದ ಆರೋಪಗಳಲ್ಲಿ ಬಹುತೇಕ ಸುಳ್ಳು, ನಕಲಿ ಎಂಬುದು ಮತ್ತೆ ಬಯಲಾಯಿತು.
ಹೇಗೆ ಪ್ರತೀ ದೊಡ್ಡ ನಗರಗಳ ಪಕ್ಕದಲ್ಲಿ ಒಂದು ಸೆಟಲೈಟ್ ಟೌನ್ ನಿರ್ಮಾಣ ಮಾಡಲಾಗುತ್ತದೋ ಅದೇ ರೀತಿ ಈ ಗೋದಿ ಚಾನೆಲ್ಗಳಿಗೆ ಒಂದೊಂದು ಚರ್ಚೆಯ ವಿಷಯವನ್ನು ಸೃಷ್ಟಿಸಲಾಗುತ್ತದೆ. ಈ ಚರ್ಚೆಗಳ ಗದ್ದಲಗಳಿಂದ ಆ ಚಾನೆಲ್ ಎಂಬ ಮಹಾನಗರದ ವೀಕ್ಷಕರು ಪ್ರಭಾವಿತರಾಗಲಿ ಎಂಬುದು ಇದರ ಉದ್ದೇಶ. ಈ ಹಿಜಾಬ್, ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಹಾಗೂ ಅಫ್ತಾಬ್ ಪೂನಾವಾಲಾ ಅವರ ಇಶ್ಯೂಗಳನ್ನು ಸೆಟಲೈಟ್ ಇಶ್ಯೂ ಎಂದೂ ಕರೆಯಬಹುದು. ಚುನಾವಣೆ ನಡೆಯಲಿರುವ ರಾಜ್ಯದಲ್ಲೂ ಇಂತಹ ವಿವಾದ ಸೃಷ್ಟಿಸಬಹುದು. ಆದರೆ ಇಂತಹ ವಿಷಯಗಳ ಮೇಲೆಯೇ ಚುನಾವಣೆ ಎದುರಿಸುತ್ತಾರೆ, ಇವರಿಗೆ ಬೇರೆ ವಿಷಯವೇ ಇಲ್ಲ ಎಂಬ ದೂರು ಬರುತ್ತದೆ. ಚುನಾವಣಾ ಆಯೋಗವೂ ಧಾರ್ಮಿಕ ವಿವಾದಗಳ ಚರ್ಚೆಗೆ ತಡೆ ಹಾಕಬಹುದು. ಹಾಗಾಗಿ ಇಂತಹ ವಿವಾದಗಳನ್ನು ಸೆಟಲೈಟ್ ಟೌನ್ಗಳಲ್ಲಿ ಅಂದರೆ ಬೇರೆ ರಾಜ್ಯಗಳಲ್ಲಿ ಸೃಷ್ಟಿಸಿ ಬಳಿಕ ಅದನ್ನು ಹಿಂದಿ ಚಾನೆಲ್ಗಳ ಮೂಲಕ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಹರಡಲಾಗುತ್ತದೆ.
ಇದನ್ನು ವೀಕ್ಷಕರು ಹಾಗೂ ಮತದಾರರು ಅರ್ಥ ಮಾಡಿಕೊಳ್ಳುತ್ತಾರೆಯೇ ಇಲ್ಲವೇ ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ. ಏಕೆಂದರೆ ಬಹಳ ಬಾರಿ ವೀಕ್ಷಕರಿಗೆ ಇವುಗಳನ್ನೆಲ್ಲಾ ನೋಡಿ ಸಾಕಾಗಿದೆ ಎಂದು ನಮಗೆ ಅನಿಸುವಾಗಲೇ ಅದೇ ರೀತಿಯ ಇನ್ನೊಂದು ವಿವಾದ ಸೃಷ್ಟಿಯಾಗುತ್ತದೆ ಹಾಗೂ ಅದರ ಮೂಲಕ ಹಿಂದೂ Vs ಮುಸ್ಲಿಮ್ ಹೆಸರಿನಲ್ಲಿ ವಾತಾವರಣ ಮತ್ತೆ ಬಿಸಿಬಿಸಿಯಾಗುತ್ತದೆ. ಹಿಂದೂಗಳ ಸುರಕ್ಷತೆ ಹಾಗೂ ಅಸುರಕ್ಷತೆಯ ಚರ್ಚೆ ಜೋರಾಗುತ್ತದೆ ಹಾಗೂ ಹಿಂದೂ ರಕ್ಷಕರಾಗಿ ನರೇಂದ್ರ ಮೋದಿಯವರ ಹೆಸರು ಚಲಾವಣೆಗೆ ಬರುತ್ತದೆ. ಬಿಜೆಪಿಯ ಮತದಾರರು ಇದೇ ಕಾರಣಕ್ಕಾಗಿ ಪ್ರತಿ ಬಾರಿ ಆ ಪಕ್ಷಕ್ಕೆ ಮತ ಹಾಕುತ್ತಾರೆಯೇ? ಇತರ ಮುಖ್ಯ ವಿಷಯಗಳಿಗೆ ಅವರು ಯಾವುದೇ ಮಹತ್ವ ಕೊಡುವುದೇ ಇಲ್ಲವೇ? ಇದಕ್ಕೆ ಸಮಗ್ರವಾಗಿ ಅಧ್ಯಯನ ಮಾಡಿದ ಬಳಿಕವೇ ಸರಿಯಾದ ಉತ್ತರ ಕೊಡಬಹುದು. ಮಾಧ್ಯಮಗಳಲ್ಲಿ ಪ್ರಸಾರವಾಗುವ ಕೆಲವು ಮತದಾರರ ಹೇಳಿಕೆಗಳಿಂದ ಒಂದು ಅಂದಾಜು ಸಿಗುತ್ತದೆ. ಆದರೆ ಹೀಗೆ ಹೇಳಿಕೆ ಕೊಡುವವರು ಏನೇ ಪರಿಸ್ಥಿತಿ ಬಂದರೂ ಬಿಜೆಪಿಗೇ ಮತ ಹಾಕುವ ಕಟ್ಟಾ ಬೆಂಬಲಿಗರಾಗಿರಲೂ ಬಹುದು. ಹೀಗೆ ಏನೇ ಆದರೂ ಒಂದೇ ಪಕ್ಷಕ್ಕೆ ಮತ ಹಾಕುವ ಕಟ್ಟಾ ಬೆಂಬಲಿಗರು ಎಲ್ಲ ಪಕ್ಷಗಳಿಗೂ ಇರುತ್ತಾರೆ. ಬಿಜೆಪಿಗೆ ಅಂತಹ ಕಟ್ಟಾ ಬೆಂಬಲಿಗ ಮತದಾರರ ಸಂಖ್ಯೆ ಜಾಸ್ತಿ ಇರಬಹುದು. ಆದರೆ ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಹಿಂದೂ ಮುಸ್ಲಿಮ್ ಚರ್ಚೆ ಜನರ ಮೇಲೆ ಯಾವ ರೀತಿಯ ಮನೋ ವೈಜ್ಞಾನಿಕ ಹಾಗೂ ರಾಜಕೀಯ ಪರಿಣಾಮ ಬೀರಿದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿದೆ.
ಸಾಮಾನ್ಯವಾಗಿ ಈ ಹಿಂದೆ ಚುನಾವಣೆಗಳಲ್ಲಿ ಜನರು ಉದ್ಯೋಗ, ಬೆಲೆ ಏರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳು, ಕಾನೂನು ಸುವ್ಯವಸ್ಥೆ ಮತ್ತಿತರ ಸಾಂಪ್ರದಾಯಿಕ ವಿಷಯಗಳನ್ನು ಆಧರಿಸಿ ಸರಕಾರದ ನಿರ್ವಹಣೆಯನ್ನು ನೋಡುತ್ತಿದ್ದರು. ಸರಕಾರದಿಂದ ಉತ್ತರ ನಿರೀಕ್ಷಿಸುತ್ತಿದ್ದರು. ಈ ವಿಷಯಗಳಲ್ಲಿ ವಿಫಲವಾಗಿದ್ದಕ್ಕೆ ಹಲವು ಪಕ್ಷಗಳು ಅಧಿಕಾರ ಕಳೆದುಕೊಂಡಿವೆ. ಕಾನೂನು ಸುವ್ಯವಸ್ಥೆಯಂತೂ ಸರಕಾರದ ಉತ್ತರ ದಾಯಿತ್ವ ನಿರ್ಧರಿಸುವ ಅತ್ಯಂತ ಪ್ರಮುಖ ವಿಷಯವಾಗಿತ್ತು. ಈ ಎಲ್ಲ ಸಾಂಪ್ರದಾಯಿಕ ವಿಷಯಗಳು ಈಗ ಸತ್ತೇ ಹೋಗಿವೆ ಎಂದು ನಿರ್ಧರಿಸಿಬಿಡುವುದು ಸಾಧ್ಯವಿಲ್ಲ. ಆದರೆ ಕೆಲವು ಚುನಾವಣೆಗಳಲ್ಲಿ ಈ ವಿಷಯಗಳು ಬದಿಗೆ ಸರಿದಿರುವುದನ್ನು ಸೂಕ್ಷ್ಮವಾಗಿ ಗಮನಿಸುವುದು ಬಹಳ ಮುಖ್ಯ. ಗುಜರಾತ್ನ ಮೊರ್ಬಿಯಲ್ಲಿ ಸೇತುವೆ ಕುಸಿದುಬಿದ್ದು ೧೩೦ ಜನರು ಬಲಿಯಾದರು. ಸೇತುವೆ ರಿಪೇರಿಯ ಗುತ್ತಿಗೆ ಪಡೆದಿದ್ದ ಕಂಪೆನಿ ವಿರುದ್ಧ ಯಾವುದೇ ಕ್ರಮವಾಗಲಿಲ್ಲ. ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯವಾಗಿದ್ದರೆ ಇಂತಹ ಕಂಪೆನಿಗಳ ಕಚೇರಿ ಮೇಲೆ ಈ.ಡಿ., ಸಿಬಿಐ ದಾಳಿ ನಡೆಯುತ್ತಿತ್ತು. ವಿಪಕ್ಷಗಳು ಮೊರ್ಬಿ ವಿಷಯವನ್ನು ಸಾಕಷ್ಟು ಚರ್ಚಿಸಿದವು. ಆದರೆ ಚುನಾವಣಾ ಫಲಿತಾಂಶ ಬಂದಾಗ ಮೊರ್ಬಿಯಲ್ಲಿ ಬಿಜೆಪಿಗೆ ಭರ್ಜರಿ ಓಟು ಬಂದಿವೆ. ಹಾಗಾದರೆ ಮೊರ್ಬಿಯ ಜನರ ದೃಷ್ಟಿಯಲ್ಲಿ ಅಷ್ಟು ದೊಡ್ಡ ಪ್ರಕರಣಕ್ಕೆ ಯಾವುದೇ ಮಹತ್ವ ಇಲ್ಲದಾಯಿತೇ? ಇಷ್ಟೆಲ್ಲಾ ಜನರು ಪ್ರಾಣ ಕಳಕೊಂಡರೂ ಅಲ್ಲಿನ ಜನ ಯಾಕೆ ಸರಕಾರಕ್ಕೆ ಚುನಾವಣೆಯಲ್ಲಿ ಶಿಕ್ಷೆ ನೀಡಲಿಲ್ಲ? ಪ್ರಜಾಪ್ರಭುತ್ವದಲ್ಲಿ ಎರಡು ಸಂಸ್ಥೆಗಳು ಶಿಕ್ಷೆ ನೀಡುತ್ತವೆ. ಒಂದು, ಕಾನೂನಿನ ನ್ಯಾಯಾಲಯ, ಇನ್ನೊಂದು, ಜನತಾ ನ್ಯಾಯಾಲಯ. ಚುನಾವಣೆಯಲ್ಲಿ ಒಂದು ಪಕ್ಷ ಅಥವಾ ಅದರ ನಾಯಕನನ್ನು ಸೋಲಿಸುವ ಮೂಲಕ ಜನರು ಶಿಕ್ಷೆ ಕೊಡುತ್ತಾರೆ. ಅದೇ ಈವರೆಗೆ ಬಹುದೊಡ್ಡ ಶಿಕ್ಷೆಯಾಗಿತ್ತು.
ಮೊರ್ಬಿಯಲ್ಲಿ ಬಿಜೆಪಿಯ ಗೆಲುವು ಏನು ಹೇಳುತ್ತದೆ? ಕಾನೂನಾತ್ಮಕ ಸುರಕ್ಷತೆಯ ವಿಷಯ ಇನ್ನು ಮುಖ್ಯ ಅಲ್ಲ, ಕೇವಲ ಧರ್ಮದ ಸುರಕ್ಷತೆಯ ವಿಷಯವೇ ಎಲ್ಲಕ್ಕಿಂತ ದೊಡ್ಡದು ಎಂದು ಹೇಳುತ್ತಿದೆಯೇ? ಆಗ, ಬಹುಸಂಖ್ಯಾತ ಜನರಲ್ಲೇ ಏಕೆ ಅಸುರಕ್ಷತೆಯ ಭಾವನೆ ಬೆಳೆಯುತ್ತದೆ ಎಂಬ ಪ್ರಶ್ನೆ ಏಳುತ್ತದೆ. ಕಾನೂನಿನ ಮೂಲಕ ನಮಗೆ ಸುರಕ್ಷತೆ ಸಿಗುತ್ತದೆ ಎಂಬ ಭರವಸೆ ಅವರಿಗಿಲ್ಲವೇ? ಒಂದು ಧರ್ಮದ ರಕ್ಷಣೆಗೆ ಒಂದು ಪಕ್ಷವನ್ನು ಅವಲಂಬಿಸುವುದು ಅನಿವಾರ್ಯ ಎಂದಾದರೆ ಕಾನೂನು ಎಲ್ಲ ಧರ್ಮೀಯರಿಗೆ ಸುರಕ್ಷತೆ ಕೊಡುವಲ್ಲಿ ವಿಫಲವಾಗಿದೆ ಎಂದರ್ಥ. ಅದಕ್ಕೆ ಜವಾಬ್ದಾರಿ ಸರಕಾರ ಹಾಗೂ ಸರಕಾರ ನಡೆಸುವ ಪಕ್ಷವೇ ಹೊರಬೇಕಾಗುತ್ತದೆ. ಹಾಗಾದರೆ ಈಗ ಕಾನೂನು ಸುವ್ಯವಸ್ಥೆಯ ವಿಷಯದ ಸ್ಥಾನವನ್ನು ಧರ್ಮ ಸುವ್ಯವಸ್ಥೆಯ ವಿಷಯ ಆಕ್ರಮಿಸಿಕೊಂಡಿದೆಯೇ?
ಯುಪಿಯಲ್ಲಿ ಇದೇ ವರ್ಷ ಚುನಾವಣೆ ನಡೆಯಿತು. ಅಲ್ಲಿನ ಲಖಿಂಪುರ ಖೇರಿಯಲ್ಲಿ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಹತ್ಯೆ ಆರೋಪದಲ್ಲಿ ಬಂಧಿಸಲಾಯಿತು. ಅವರ ಜೀಪು ನಾಲ್ಕು ರೈತರನ್ನು ಬಲಿತೆಗೆದುಕೊಂಡಿತ್ತು. ಆ ಘಟನೆಯ ವೀಡಿಯೊ ಎಲ್ಲರೂ ನೋಡಿದ್ದರು. ಆದರೆ ಅಜಯ್ ಮಿಶ್ರಾ ಅವರನ್ನು ಪ್ರಧಾನಿ ವಜಾ ಕೂಡ ಮಾಡಲಿಲ್ಲ. ಕೋರ್ಟ್ನ ಹಲವು ಹೇಳಿಕೆಗಳಲ್ಲಿ ಮಂತ್ರಿಯ ಮಗನ ಮೇಲಿನ ವಿಚಾರಣೆಯಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತಿತ್ತು. ಆದರೂ ಮಂತ್ರಿ ಸ್ಥಾನ ಕಳೆದುಕೊಳ್ಳಲಿಲ್ಲ. ಅಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಲಖೀಮ್ಪುರ್ ಖೇರಿಯ ಎಲ್ಲ ಎಂಟು ಸೀಟುಗಳಲ್ಲಿ ಬಿಜೆಪಿಗೆ ಭರ್ಜರಿ ಜಯ ಸಿಕ್ಕಿತು. ಮೊರ್ಬಿ ಹಾಗೂ ಲಖಿಂಪುರಖೇರಿಗಳಲ್ಲಿ ಸಿಕ್ಕಿರುವ ಜಯವನ್ನು ಪ್ರತ್ಯೇಕವಾಗಿ ನೋಡಬೇಡವೇ? ಇದಕ್ಕಾಗಿ ಜನರನ್ನು ದೂರುವುದು ಬಹಳ ಸುಲಭ. ಆದರೆ ಈ ವಿಷಯದಲ್ಲಿ ಅಲ್ಲಿನ ಜನರು ಏನು ಯೋಚಿಸಿದರು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಉತ್ತರ ಚುನಾವಣೆಯ ನಂತರ ನಡೆಯುವ ವಿವರವಾದ ಸಮೀಕ್ಷೆಗಳಲ್ಲೇ ಸಿಗಬಹುದಷ್ಟೆ.
ನ್ಯೂಸ್ ಚಾನೆಲ್ಗಳು ಆರಂಭದ ವರ್ಷಗಳಲ್ಲಿ ರಾಜಕಾರಣಿಗಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದವು. ಹಲವು ನಾಯಕರು ಚಾನೆಲ್ಗಳ ಅಗತ್ಯಕ್ಕೆ ತಕ್ಕಂತೆ ತಮ್ಮನ್ನು ಬದಲಾಯಿಸಿಕೊಳ್ಳುತ್ತಿದ್ದರು. ಚಾನೆಲ್ಗಳಿಗೆ ಬೇಕಾದಂತೆಯೇ ರಾಜಕಾರಣಿಗಳು ಮಾತನಾಡಲು ಪ್ರಾರಂಭಿಸಿದರು. ಅದೇ ಮಾತುಗಳು ಬಳಿಕ ಚುನಾವಣೆಯ ಘೋಷಣೆಯಾಗಿ ಬದಲಾವಣೆಯಾಗುತ್ತಿದ್ದವು. ಈಗಿನದ್ದು ಬೇರೆಯೇ ಕಾಲ. ಈಗ ನ್ಯೂಸ್ ಚಾನೆಲ್ಗಳು ಜನರನ್ನು ಬದಲಾಯಿಸುತ್ತಿವೆ. ಎಲ್ಲ ರಾಜಕೀಯ ಪಕ್ಷಗಳನ್ನು ಮಾಯ ಮಾಡಿ ಒಂದೇ ಪಕ್ಷವನ್ನು ತೋರಿಸುತ್ತಿವೆ. ಪ್ರಧಾನಮಂತ್ರಿ ಮೋದಿ ೩ ಕಿಲೋಮೀಟರ್ ರೋಡ್ ಶೋ ನಡೆಸಿದರೆ ಚಾನೆಲ್ ಗಳಲ್ಲಿ ಗಂಟೆಗಟ್ಟಲೆ ಅದು ಪ್ರಸಾರವಾಗುತ್ತದೆ. ರಾಹುಲ್ ಗಾಂಧಿ ೩,೫೦೦ ಕಿ.ಮೀ. ಪಾದಯಾತ್ರೆ ನಡೆಸುತ್ತಿದ್ದರೂ ಚಾನೆಲ್ಗಳಲ್ಲಿ ಅದು ಪ್ರಸಾರವಾಗುವುದೇ ಇಲ್ಲ.
ಕನ್ನಡಕ್ಕೆ ಸುನೀಲ್.ಎಸ್
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.