ಹೊಸ ನೋಟುಗಳು ಬಂದ ಉದ್ದೇಶ ಈಡೇರಿಸಿವೆಯೇ?
1,000ದ ಬದಲು 2,000 ರೂ. ಮುಖಬೆಲೆಯ ನೋಟು ಬಂದರೂ ಕುಣಿಯುತ್ತಲೇ ಇದೆ ಕಪ್ಪುಹಣ!
ನೋಟ್ಬ್ಯಾನ್ ಸಂದರ್ಭದಲ್ಲಿ 1,000 ರೂ. ಮುಖಬೆಲೆಯ ನೋಟ್ ಇದ್ದಾಗ ಅದನ್ನು ರದ್ದುಪಡಿಸಿ 2,000 ರೂ. ಮುಖಬೆಲೆಯ ನೋಟು ಜಾರಿಗೆ ತಂದದ್ದರ ಹಿಂದಿನ ತರ್ಕವೇನೆಂದೇ ಅರ್ಥವಾಗುತ್ತಿಲ್ಲ ಎಂದು ಹಿರಿಯ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ. ಸುದೀರ್ಘ ಕಾಲ ಬಿಹಾರದ ವಿತ್ತ ಸಚಿವರಾಗಿ, ದೇಶದಲ್ಲಿ ಜಿಎಸ್ಟಿ ಜಾರಿಗೆ ರಚಿಸಲಾದ ವಿತ್ತ ಸಚಿವರ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇರುವ ಹಿರಿಯ ನಾಯಕ ಎತ್ತಿರುವ ಈ ಪ್ರಶ್ನೆಗೆ ನರೇಂದ್ರ ಮೋದಿ ಸರಕಾರದ ಬಳಿ ಉತ್ತರವಿದೆಯೇ?
ಆರು ವರ್ಷಗಳ ಹಿಂದೆ ನೋಟ್ ಬ್ಯಾನ್ ಮಾಡಿ ದೇಶದ ಜನಸಾಮಾನ್ಯರನ್ನು ಕಂಗೆಡಿಸಿದ್ದ ಕೇಂದ್ರ ಸರಕಾರ ಹೊಸದಾಗಿ ತಂದಿದ್ದ 2000 ರೂ. ಮುಖಬೆಲೆಯ ನೋಟು ಕೂಡ ಮಾಯವಾಗಲಿದೆಯೆ? ಮಾದಕ ವಸ್ತು, ಮನಿ ಲಾಂಡ್ರಿಂಗ್ನಂತಹ ಅಕ್ರಮದಲ್ಲಿ ಇದು ವ್ಯಾಪಕವಾಗಿ ಬಳಕೆಯಾಗುತ್ತಿದೆಯೇ? ಹಿರಿಯ ಬಿಜೆಪಿ ಸಂಸದರೇ ಈ ಮಾತು ಹೇಳುವ ಮೂಲಕ, ದೇಶದಲ್ಲಿ ಹೊಸದೊಂದು ಚರ್ಚೆ ಪ್ರಾರಂಭವಾಗಿದೆ.
ಸೋಮವಾರ ರಾಜ್ಯಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಒಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಮೂರು ವರ್ಷಗಳ ಮೊದಲೇ ರಿಸರ್ವ್ ಬ್ಯಾಂಕ್ 2,000 ರೂ. ಮುಖಬೆಲೆಯ ನೋಟುಗಳ ಮುದ್ರಣ ನಿಲ್ಲಿಸಿದೆ. ಆದರೆ, ಎಲ್ಲೂ ಇದರ ಸುಳಿವೇ ಇಲ್ಲ. ಜನಸಾಮಾನ್ಯರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಸರಕಾರ ಈ ಬಗ್ಗೆ ಜನರಿಗೆ ಸ್ಪಷ್ಟನೆ ಕೊಡಬೇಕು ಎಂದು ಸುಶೀಲ್ ಕುಮಾರ್ ಮೋದಿ ಸಂಸತ್ತಿನಲ್ಲಿ ಡಿಮ್ಯಾಂಡ್ ಮಾಡಿದ್ದಾರೆ. ಮಾತ್ರವಲ್ಲ, ಈ ನೋಟ್ಗಳನ್ನು ಕೂಡಲೇ ಬ್ಯಾನ್ ಮಾಡುವಂತೆಯೂ ಅವರು ಒತ್ತಾಯಿಸಿದ್ದಾರೆ.
ದೇಶದಲ್ಲಿ ಡ್ರಗ್ಸ್ ಜಾಲ, ಕಪ್ಪುಹಣ, ಹವಾಲಾದಂಥ ಅಕ್ರಮಗಳಲ್ಲಿ 2,000 ರೂ. ಮುಖಬೆಲೆಯ ನೋಟು ಬಳಕೆ ಬಗ್ಗೆ ಮಾಹಿತಿಗಳಿವೆ. ದೇಶದ ಎಟಿಎಂಗಳಲ್ಲಿ ಈ ನೋಟು ಕಾಣಿಸುತ್ತಲೇ ಇಲ್ಲ. ಅವು ಚಲಾವಣೆಯಲ್ಲಿಯೇ ಇಲ್ಲ ಎಂಬ ವದಂತಿಗಳೂ ಹರಡಿವೆ ಎಂದು ಆರೋಪಿಸಿರುವ ಸುಶೀಲ್ ಕುಮಾರ್ ಮೋದಿ, ದೇಶದ ಜನತೆಗೆ ಇದರ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕಿಂತಲೂ ಮುಖ್ಯವಾಗಿ, ನೋಟ್ಬ್ಯಾನ್ ಸಂದರ್ಭದಲ್ಲಿ 1,000 ರೂ. ಮುಖಬೆಲೆಯ ನೋಟ್ ಇದ್ದಾಗ ಅದನ್ನು ರದ್ದುಪಡಿಸಿ 2,000 ರೂ. ಮುಖಬೆಲೆಯ ನೋಟು ಜಾರಿಗೆ ತಂದದ್ದರ ಹಿಂದಿನ ತರ್ಕವೇನೆಂದೇ ಅರ್ಥವಾಗುತ್ತಿಲ್ಲ ಎಂದೂ ಈ ಹಿರಿಯ ಬಿಜೆಪಿ ಸಂಸದ ಹೇಳಿದ್ದಾರೆ. ಸುದೀರ್ಘ ಕಾಲ ಬಿಹಾರದ ವಿತ್ತ ಸಚಿವರಾಗಿ, ದೇಶದಲ್ಲಿ ಜಿಎಸ್ಟಿ ಜಾರಿಗೆ ರಚಿಸಲಾದ ವಿತ್ತ ಸಚಿವರ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇರುವ ಹಿರಿಯ ನಾಯಕ ಎತ್ತಿರುವ ಈ ಪ್ರಶ್ನೆಗೆ ನರೇಂದ್ರ ಮೋದಿ ಸರಕಾರದ ಬಳಿ ಉತ್ತರವಿದೆಯೇ?
2016 ನವೆಂಬರ್ 8ರ ಮಧ್ಯರಾತ್ರಿ ನೋಟ್ಬ್ಯಾನ್ ಬಗ್ಗೆ ಏಕಾಏಕಿ ಘೋಷಣೆ ಮಾಡಿ ಬೆಚ್ಚಿಬೀಳಿಸಿದ್ದ ಸರಕಾರ, ತಾನೇನೋ ಬಹುದೊಡ್ಡ ಆರ್ಥಿಕ ಕ್ರಾಂತಿಯನ್ನೇ ಮಾಡಹೊರಟಿರುವ ಪೋಸು ಕೊಟ್ಟಿತ್ತು. ದೊಡ್ಡ ಮುಖಬೆಲೆಯ ನೋಟುಗಳಾದ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ತೆಗೆದುಕೊಂಡು, ಕಪ್ಪುಹಣ, ಭಯೋತ್ಪಾದನೆ, ನಕಲಿ ನೋಟು ಹಾವಳಿ ಮೊದಲಾದ ಅಕ್ರಮ ತಡೆಯುವುದಾಗಿ ಹೇಳಿತ್ತು. ಇದೊಂದು ಮೋದಿ ಸರಕಾರದ ಮಾಸ್ಟರ್ ಸ್ಟ್ರೋಕ್ ಎಂದೇ ಭಟ್ಟಂಗಿ ಟಿವಿ ಚಾನೆಲ್ಗಳು ಹಾಡಿ ಹೊಗಳಿದ್ದವು. ಆದರೆ, ಅಚ್ಚರಿಯೆಂದರೆ ಹಳೆಯ 500ರ ಮುಖಬೆಲೆಯ ನೋಟನ್ನು ಬ್ಯಾನ್ ಮಾಡಿದ್ದ ಕೇಂದ್ರ ಹೊಸ 500ರ ಮುಖಬೆಲೆಯ ನೋಟನ್ನು ಚಲಾವಣೆಗೆ ತಂದಿತ್ತು. ಹಾಗೆಯೇ 1,000ರೂ. ಮುಖಬೆಲೆಯ ನೋಟುಗಳ ಬದಲಿಗೆ 2,000 ರೂ. ಮುಖಬೆಲೆಯ ನೋಟನ್ನು ಚಲಾವಣೆಗೆ ತಂದಿತ್ತು. ನರೇಂದ್ರ ಮೋದಿ ಅವರ ಇದೇ ಕ್ರಮವನ್ನು ಸುಶೀಲ್ ಕುಮಾರ್ ಮೋದಿ ಈಗ ಪ್ರಶ್ನಿಸಿರುವುದು.
ನೋಟ್ ಬ್ಯಾನ್ ಹೊತ್ತಿನಲ್ಲಿ ಅವೆರಡೂ ನೋಟುಗಳ ಚಲಾವಣೆಯಲ್ಲಿ 2010-11ರಿಂದ 2015-16ರ ಅವಧಿಯಲ್ಲಿ ಭಾರೀ ಏರಿಕೆಯಾಗಿದೆ. 500ರ ಮುಖಬೆಲೆಯ ನೋಟುಗಳ ಚಲಾವಣೆಯಲ್ಲಿ ಶೇ.76.4 ಹಾಗೂ 1,000 ರೂ. ಮುಖಬೆಲೆಯ ನೋಟುಗಳಲ್ಲಿ ಶೇ.109ರಷ್ಟು ಏರಿಕೆಯಾಗಿದೆ ಎಂಬ ಮಾಹಿತಿ ಕೊಡಲಾಗಿತ್ತು. ಅವನ್ನು ಕಾನೂನುಬದ್ಧವಾಗಿ ಹಿಂದೆಗೆದುಕೊಳ್ಳುವ ಮೂಲಕ ಆರ್ಥಿಕ ಅಕ್ರಮ ಮಟ್ಟಹಾಕುವ ಮಾತನ್ನು ಸರಕಾರ ಆಡಿತ್ತು. ದಿಢೀರನೆ ನೋಟ್ ಬ್ಯಾನ್ ಆದ ಬಳಿಕ ದೇಶಾದ್ಯಂತ ಜನಸಾಮಾನ್ಯರು ಅನುಭವಿಸಿದ ಪರದಾಟ ಇವತ್ತಿಗೂ ಮರೆತಿಲ್ಲ. ಅದು ದೇಶದ ಒಟ್ಟು ಆರ್ಥಿಕತೆಯ ಮೇಲೆ, ಬಡ, ಮಧ್ಯಮ ವರ್ಗಗಳ ಜನರ ಮೇಲೆ ಮಾಡಿದ ಪ್ರಹಾರದ ಪರಿಣಾಮ ಇವತ್ತಿಗೂ ನಾವು ನೋಡುತ್ತಿದ್ದೇವೆ. ಹಾಗೆ ಜನಸಾಮಾನ್ಯರನ್ನು ಕೆಟ್ಟ ಪರಿಸ್ಥಿತಿಗೆ ತಳ್ಳಿದ್ದ ನೋಟ್ಬ್ಯಾನ್ನಿಂದ ಆಮೇಲೆ ಆದದ್ದೇನೂ ಇಲ್ಲ. ನರೇಂದ್ರ ಮೋದಿ ಸರಕಾರ ಹೇಳಿದ ಹಾಗೆ ಕಪ್ಪುಹಣ ನಿರ್ಮೂಲನೆ ಆಗದೆ ಶೇ. 99ಕ್ಕೂ ಹೆಚ್ಚು ಹಳೆ ನೋಟುಗಳು ವಾಪಸ್ ಬ್ಯಾಂಕ್ಗಳಿಗೆ ಬಂದು ತಲುಪಿದವು. ಹಾಗಿರುವಾಗಲೇ ಇದೇ ಸರಕಾರವೇ ತಂದಿದ್ದ 2,000 ರೂ. ಮುಖಬೆಲೆಯ ನೋಟು ಕೂಡ ಹಲವು ಗುಮಾನಿಗಳನ್ನು ಹುಟ್ಟುಹಾಕಿದೆ ಮತ್ತದನ್ನು ಸ್ವತಃ ಬಿಜೆಪಿ ಸಂಸದರೇ ಬಹಿರಂಗವಾಗಿ ಹೇಳುತ್ತಿದ್ದು, ಜನರಿಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿರುವುದು ಈಗ ಮಹತ್ವದ ಬೆಳವಣಿಗೆ.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸುಶೀಲ್ ಕುಮಾರ್ ಮೋದಿ, ಜನರು 2,000 ರೂ. ಮುಖಬೆಲೆಯ ನೋಟುಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅವುಗಳನ್ನು ಭಯೋತ್ಪಾದನೆ ನಿಧಿ, ಮಾದಕವಸ್ತು ಕಳ್ಳಸಾಗಣೆ ಮತ್ತು ಕಪ್ಪುಹಣವನ್ನು ಸಂಗ್ರಹಿಸಲು ಬಳಸಿದ್ದಾರೆ ಎಂಬ ಮಾಹಿತಿಯಿದೆ ಎಂದಿದ್ದಾರೆ. ಡ್ರಗ್ಸ್ ಜಾಲ, ಹಣ ಅಕ್ರಮ ವರ್ಗಾವಣೆಯಲ್ಲಿ 2,000ರೂ. ಮುಖಬೆಲೆಯ ನೋಟುಗಳೇ ಹೆಚ್ಚಾಗಿ ದುರ್ಬಳಕೆಯಾಗುತ್ತಿವೆ. ಕಪ್ಪುಹಣ, ಮನಿ ಲಾಂಡ್ರಿಂಗ್ ವಿರುದ್ಧ ಕಾರ್ಯಾಚರಣೆ ಮತ್ತಷ್ಟು ತೀವ್ರವಾಗಬೇಕಾದಲ್ಲಿ ಹಂತಹಂತವಾಗಿ 2 ಸಾವಿರ ರೂ. ಮುಖಬೆಲೆಯ ನೋಟನ್ನು ಕೇಂದ್ರ ಸರಕಾರವು ಮಾರುಕಟ್ಟೆಯಿಂದ ವಾಪಸ್ ಪಡೆಯಬೇಕು. ತಮ್ಮ ಬಳಿ ಸದ್ಯ ಇರುವ 2,000 ರೂ. ಮುಖಬೆಲೆ ನೋಟುಗಳನ್ನು ಬ್ಯಾಂಕ್ಗಳಿಗೆ ಹಿಂದಿರುಗಿಸಲು ಜನರಿಗೆ ಮುಂದಿನ ಎರಡು ವರ್ಷಗಳ ಸಮಯಾವಕಾಶ ಕೊಡಬೇಕು ಎಂದು ಸುಶೀಲ್ ಕುಮಾರ್ ಮೋದಿ ಒತ್ತಾಯಿಸಿದ್ದಾರೆ. ಈಗಾಗಲೇ ದೇಶದ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿನ ಎಟಿಎಂಗಳಿಂದ 2,000 ರೂ. ಮುಖಬೆಲೆಯ ನೋಟುಗಳು ಮಾಯವಾಗಿವೆ. ಅವುಗಳನ್ನು ಎಟಿಎಂಗೆ ಭರ್ತಿ ಮಾಡಲಾಗುತ್ತಿಲ್ಲ. ಇದರ ಜತೆಗೆ 2,000 ರೂ. ಮುಖಬೆಲೆಯ ನೋಟು ರದ್ದಾಗುವ ವದಂತಿ ಕೂಡ ಹರಡಿದೆ. ಈ ಹಿಂದೆ ಮಾಡಿದ ಹಾಗೆ ಆಗಬಾರದು. ಬದಲಿಗೆ ಜನರಿಗೆ ಮುಂದಿನ 2 ವರ್ಷಗಳವರೆಗೆ ಕಾಲಾವಕಾಶ ಕೊಡಬೇಕು. ತಮ್ಮಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಅವರು ಬ್ಯಾಂಕ್ನಲ್ಲಿ ಠೇವಣಿ ಇರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮೂರು ವರ್ಷಗಳ ಮುನ್ನವೇ ಆರ್ಬಿಐ 2,000 ರೂ. ಮುಖಬೆಲೆಯ ನೋಟುಗಳ ಮುದ್ರಣ ನಿಲ್ಲ್ಲಿಸಿದೆ. ನೋಟು ಅಮಾನ್ಯೀಕರಣದ ವೇಳೆ 1,000 ಹಾಗೂ 500 ರೂ. ಮುಖಬೆಲೆಯ ನೋಟುಗಳ ಮೌಲ್ಯ ಸರಿದೂಗಿಸಲು ಮಾತ್ರವೇ 2,000 ರೂ. ಮುಖಬೆಲೆಯ ನೋಟನ್ನು ಚಾಲ್ತಿಗೆ ತರಲಾಗಿತ್ತು. ಈಗ ಈ ಗರಿಷ್ಠ ಮುಖಬೆಲೆಯ ನೋಟು ದುರ್ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಪಸ್ ಪಡೆಯುವುದು ಅಗತ್ಯವಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
100ಕ್ಕಿಂತ ಹೆಚ್ಚಿನ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಹೊಂದಿಲ್ಲದ ಅಮೆರಿಕ, ಚೀನಾ ಮತ್ತು ಜರ್ಮನಿಯಂತಹ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳ ಉದಾಹರಣೆಯನ್ನು ಕೊಟ್ಟಿರುವ ಸುಶೀಲ್ ಕುಮಾರ್ ಮೋದಿ, ಕೇಂದ್ರ ಸರಕಾರವು 2,000 ರೂ. ಮುಖಬೆಲೆಯ ನೋಟುಗಳನ್ನು ಹಂತ ಹಂತವಾಗಿ ನಿಷೇಧಿಸುವ ಬಗ್ಗೆ ಯೋಚಿಸಬೇಕು ಮತ್ತು ಜನರಿಗೆ ಅವುಗಳನ್ನು ಬದಲಾಯಿಸಲು ಸಮಯ ಸಿಗಬೇಕು ಎಂದಿದ್ದಾರೆ.
ಸುಶೀಲ್ ಕುಮಾರ್ ಮೋದಿ ಹೇಳಿಕೆ ಸಂಚಲನ ಸೃಷ್ಟಿಸುವ ಸುಳಿವಿನ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವಾಲಯ ಕೂಡ ಹೊಸದಾಗಿ 2,000 ರೂ. ಮುಖಬೆಲೆಯ ನೋಟುಗಳ ಮುದ್ರಣ ನಡೆಯುತ್ತಿಲ್ಲ ಎಂಬ ವಿಚಾರವನ್ನು ಒಪ್ಪಿಕೊಂಡಿದೆ. 2018-19ರಿಂದ ಯಾವುದೇ ಹೊಸ 2,000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿಲ್ಲ ಎಂದು ಸರಕಾರ, ಸುಶೀಲ್ ಕುಮಾರ್ ಹೇಳಿಕೆ ಬೆನ್ನಲ್ಲೇ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದೆ. ಸರಕಾರ ನೀಡಿರುವ ಮಾಹಿತಿ ಪ್ರಕಾರ, ಚಲಾವಣೆಯಲ್ಲಿರುವ ಒಟ್ಟು ನೋಟುಗಳಲ್ಲಿ 2,000 ರೂ. ಮುಖಬೆಲೆಯ ನೋಟುಗಳ ಪಾಲು 2020ರಲ್ಲಿ ಶೇ. 22.65 ಇದ್ದದ್ದು ಮಾರ್ಚ್ 2022ರ ವೇಳೆಗೆ ಶೇ. 13.8ಕ್ಕೆ ಇಳಿದಿದೆ. 500 ರೂ. ಮುಖಬೆಲೆಯ ನೋಟುಗಳ ಪಾಲು 2020 ಮತ್ತು 2022ರ ಅವಧಿಯಲ್ಲಿ ಶೇ. 29.7ರಿಂದ ಶೇ. 73.3ಕ್ಕೆ ಏರಿದೆ. ಡಿಜಿಟಲ್ ವಹಿವಾಟು ಹೆಚ್ಚಳ ಕೂಡ ಕರೆನ್ಸಿ ಬಳಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ
ಸಾರ್ವಜನಿಕ ವಹಿವಾಟಿನ ಬೇಡಿಕೆಯನ್ನು ಸುಲಭಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆ ಸಮಾಲೋಚಿಸಿ ನಿರ್ದಿಷ್ಟ ಮುಖಬೆಲೆಯ ನೋಟುಗಳ ಮುದ್ರಣವನ್ನು ಸರಕಾರ ನಿರ್ಧರಿಸುತ್ತದೆ. 2018-19ರಿಂದ 2,000 ರೂ. ಮುಖಬೆಲೆಯ ನೋಟುಗಳ ಮುದ್ರಣಕ್ಕಾಗಿ ಪ್ರೆಸ್ಗಳಿಗೆ ಯಾವುದೇ ಹೊಸ ಇಂಡೆಂಟ್ ಹಾಕಲಾಗಿಲ್ಲ. ಇದಲ್ಲದೆ, ನೋಟುಗಳು ಹಳತಾದ ಬಳಿಕ ಅಥವಾ ವಿರೂಪಗೊಂಡ ಬಳಿಕ ಚಲಾವಣೆಯಿಂದ ಹೊರಗುಳಿಯುತ್ತವೆ ಎಂದು ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ.
ಆರ್ಬಿಐನ ಅಂಕಿಅಂಶಗಳ ಪ್ರಕಾರ, ಮಾರ್ಚ್ 31, 2022ರ ಹೊತ್ತಿಗೆ 2,000 ರೂ. ಮುಖಬೆಲೆಯ 21,420 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು ಎಂಬ ಮಾಹಿತಿಯನ್ನೂ ಅವರು ಕೊಟ್ಟಿದ್ದಾರೆ.
ಆದರೆ ಈ 2,000 ರೂ. ಮುಖಬೆಲೆಯ ನೋಟು ಹಲವು ಅವಾಂತರಗಳನ್ನು ಸೃಷ್ಟಿಸಿರುವ ವಿಚಾರವನ್ನು ಸರಕಾರ ಬಾಯ್ಬಿಟ್ಟು ಹೇಳಲಾರದ ಸ್ಥಿತಿಯಲ್ಲಿದ್ದಾಗ ಆಡಳಿತ ಪಕ್ಷದ ಹಿರಿಯ ಸಂಸದರ ಬಾಯಿಂದಲೇ ಆ ಮಾತು ಬಂದಿದೆಯೆಂಬುದಂತೂ ನಿಜ. ನೋಟ್ಬ್ಯಾನ್ ಮಾಡುವಾಗ ಹೇಳಿಕೊಂಡ ಯಾವುದನ್ನೂ ಮಾಡಲಾಗದ ಸರಕಾರಕ್ಕೆ, ತಾನೇ ಚಲಾವಣೆಗೆ ತಂದ ನೋಟು ಮತ್ತದೇ ಹಳೆಯ ಆರ್ಥಿಕ ಅಕ್ರಮಗಳಿಗೆ ಸುಲಭ ದಾರಿ ಮಾಡಿ ಕೊಟ್ಟಿರುವುದನ್ನು ಅರಗಿಸಿಕೊಳ್ಳಲು ಆಗಲಿಕ್ಕಿಲ್ಲ. ನೋಟ್ ಬ್ಯಾನ್ನಿಂದಾಗಿ ಕಪ್ಪು ಹಣ ಹೋಗಲಿಲ್ಲ, ಸ್ವಿಸ್ ಬ್ಯಾಂಕ್ನಲ್ಲಿದ್ದ ಕಪ್ಪುಹಣ ತರಲೂ ಆಗಲಿಲ್ಲ. ಭ್ರಷ್ಟಾಚಾರವಾದರೂ ನಿಂತಿತೇ ಎಂದರೆ ಅದೂ ನಿಲ್ಲಲಿಲ್ಲ. ಖೋಟಾ ನೋಟು ಇಲ್ಲವಾಯಿತೇ ಎಂದರೆ ಅದೂ ಇಲ್ಲ. ಹೊಸ ಸರಣಿಯ ನೋಟುಗಳ ಖೋಟಾ ನೋಟುಗಳು ಚಲಾವಣೆಗೆ ಬಂದ ನಂತರ ಖೋಟಾ ನೋಟುಗಳು ಹಿಂದಿಗಿಂತಲೂ ಈಗ ಹೆಚ್ಚಾಗಿದೆ ಎಂದು ಆರ್ಬಿಐ ಅಂಕಿ ಅಂಶ ತೋರಿಸಿವೆ. 2021-22ರಲ್ಲಿ ಖೋಟಾ ನೋಟುಗಳ ಪ್ರಮಾಣದಲ್ಲಿ 2020-21ಕ್ಕಿಂತ ಶೇ. 10.7 ಹೆಚ್ಚಳವಾಗಿದೆ. 500 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳಲ್ಲಿ ಶೇ. 102 ಹೆಚ್ಚಳವಾಗಿದ್ದರೆ 2,000 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳಲ್ಲಿ ಶೇ. 55 ಹೆಚ್ಚಳವಾಗಿದೆ. ಅಂದರೆ ಈಗಲೂ ನಕಲಿ ನೋಟುಗಳ ಚಲಾವಣೆ ಮುಂದುವರಿದಿದೆ. ಸರಕಾರ ಹೇಳಿದ್ದಷ್ಟು ನಗದು ರಹಿತ ಆರ್ಥಿಕತೆ ಕೂಡ ಹೆಚ್ಚಿಲ್ಲ. ಬದಲಾಗಿ ನೋಟುಗಳ ಚಲಾವಣೆ ಪ್ರಮಾಣವೇ ಹೆಚ್ಚಿದೆ.
ನೋಟ್ ಬ್ಯಾನ್ನಿಂದಾಗಿ ಏನೇನೆಲ್ಲ ಆಗುತ್ತೆ ಅಂತ ನರೇಂದ್ರ ಮೋದಿ ಸರಕಾರ ಹೇಳಿತ್ತೋ ಅದ್ಯಾವುದೂ ಆಗದೆ, ನೋಟ್ ಬ್ಯಾನ್ ಬಹುಕಾಲ ಜನಸಾಮಾನ್ಯರ ಜೀವ ಹಿಂಡಿತು. ಹೊಸ ಕ್ರಮವೆಂದು ಜಾರಿಗೆ ತಂದ 2,000 ರೂ. ಮುಖಬೆಲೆಯ ನೋಟು ಕೂಡ ದೊಡ್ಡ ಸಮಸ್ಯೆಗೆ ಕಾರಣವಾಗಿ ಆಡಳಿತ ಪಕ್ಷದ ಸದಸ್ಯರೇ ಅದನ್ನು ಬ್ಯಾನ್ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಹಿಂದೆ ಇಂತಹದೇ ವದಂತಿ ಹರಡಿದ್ದಾಗ ಇಲ್ಲವೆಂದಿದ್ದ ಸರಕಾರ, ಜನರೆದುರು ಮುಕ್ತವಾಗಿ ಈ ಬಗ್ಗೆ ಮಾತಾಡದೆ ನಿಗೂಢವಾಗಿರುವುದೇ ದೊಡ್ಡ ಸಮಸ್ಯೆ.